ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಹುಬ್ಬಳ್ಳಿ, ಗದಗ ಬೈಪಾಸ್ ಮೂಲಕ ಗೋಲಗುಂಬಜ್ ಎಕ್ಸ್‌ಪ್ರೆಸ್ ರೈಲು ಸಂಚಾರಕ್ಕೆ ರೈಲ್ವೆ ಮಂಡಳಿ ಒಪ್ಪಿಗೆ

MB Patil: ಮೈಸೂರು- ಫಂಡರಾಪುರ ನಡುವೆ ಸಂಚರಿಸುವ ಗೋಲಗುಂಬಜ್ ಎಕ್ಸಪ್ರೆಸ್ ರೈಲನ್ನು ಹುಬ್ಬಳ್ಳಿ ಮತ್ತು ಗದಗ ಬೈಪಾಸ್‌ಗಳ ಮೂಲಕ ಓಡಿಸಲು ರೈಲ್ವೆ ಮಂಡಳಿ ಶುಕ್ರವಾರ ಒಪ್ಪಿಗೆ ನೀಡಿದ್ದು, ಇದರಿಂದ ವಿಜಯಪುರ, ಬಾಗಲಕೋಟೆ ಭಾಗದ ಜನರ ಬಹು ದಿನಗಳ ಬೇಡಿಕೆಗೆ ಮನ್ನಣೆ ಸಿಕ್ಕಂತಾಗಿದೆ ಎಂದು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ ಹರ್ಷ ವ್ಯಕ್ತಪಡಿಸಿದ್ದಾರೆ.

ಹುಬ್ಬಳ್ಳಿ- ಗೋಲಗುಂಬಜ್ ಎಕ್ಸ್‌ಪ್ರೆಸ್ ರೈಲು ಸಂಚಾರಕ್ಕೆ ಒಪ್ಪಿಗೆ

ಸಾಂದರ್ಭಿಕ ಚಿತ್ರ -

Profile
Siddalinga Swamy Jun 20, 2026 3:15 PM

ಬೆಂಗಳೂರು, ಜೂ.20: ಮೈಸೂರು- ಫಂಡರಾಪುರ ನಡುವೆ ಸಂಚರಿಸುವ ಗೋಲಗುಂಬಜ್ ಎಕ್ಸಪ್ರೆಸ್ ರೈಲನ್ನು ಹುಬ್ಬಳ್ಳಿ ಮತ್ತು ಗದಗ ಬೈಪಾಸ್‌ಗಳ ಮೂಲಕ ಓಡಿಸಲು ರೈಲ್ವೆ ಮಂಡಳಿ ಶುಕ್ರವಾರ ಒಪ್ಪಿಗೆ ನೀಡಿದ್ದು, ಇದರಿಂದ ವಿಜಯಪುರ, ಬಾಗಲಕೋಟೆ ಭಾಗದ ಜನರ ಬಹು ದಿನಗಳ ಬೇಡಿಕೆಗೆ ಮನ್ನಣೆ ಸಿಕ್ಕಂತಾಗಿದೆ ಎಂದು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ (MB Patil) ಹರ್ಷ ವ್ಯಕ್ತಪಡಿಸಿದ್ದಾರೆ.

ವಿಜಯಪುರ ಕಡೆಗೆ ಚಲಿಸುವ ರೈಲುಗಳನ್ನು ಹುಬ್ಬಳ್ಳಿ ಮತ್ತು ಗದಗ ಬೈಪಾಸ್ ಮೂಲಕವೇ ಓಡಿಸಬೇಕೆಂದು ಹಲವು ಬಾರಿ ಪತ್ರ ಬರೆದು ಕೋರಿಕೆ ಸಲ್ಲಿಸಲಾಗಿತ್ತು. ಅದಕ್ಕೆ ರೈಲ್ವೆ ಮಂಡಳಿ, ಸಕಾರಾತ್ಮಕವಾಗಿ ಸ್ಪಂದಿಸಿದ್ದು ಹೆಚ್ವಿನ ಅನುಕೂಲ ಆಗಲಿದೆ. ಇದಕ್ಕಾಗಿ ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ಮತ್ತು ವಿ. ಸೋಮಣ್ಣ ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಇದರಿಂದ ಎರಡೂ ನಗರಗಳ ನಡುವಿನ ಪ್ರಯಾಣ ಅವಧಿ ಸುಮಾರು 55 ನಿಮಿಷ ಕಡಿಮೆ ಆಗಲಿದೆ ಎಂದು ಹೇಳಿದ್ದಾರೆ. ಇದರ ಜತೆಗೆ ಸದ್ಯ ವಿಜಯಪುರ- ಬೆಂಗಳೂರು ‌ನಡುವೆ ವಾರದಲ್ಲಿ ಎರಡು ದಿನ ಸಂಚರಿಸುತ್ತಿರುವ ವಿಶೇಷ ರೈಲನ್ನು ಕೂಡ ಕಾಯಂ‌ ಮಾಡಬೇಕು ಎಂದು ಸಚಿವ ಎಂ.ಬಿ. ಪಾಟೀಲ ಒತ್ತಾಯಿಸಿದ್ದಾರೆ.

ಬೈಪಾಸ್ ಮಾರ್ಗದಲ್ಲಿ ರೈಲು ಸಂಚರಿಸಲು ಶುರುವಾದ ಮೇಲೆ ಗೋಲಗುಂಬಜ್ ಎಕ್ಸಪ್ರೆಸ್ ಇನ್ನು ಮುಂದೆ ಹುಬ್ಬಳ್ಳಿ ಮತ್ತು ಗದಗದಲ್ಲಿ ಊರೊಳಕ್ಕೆ ಹೋಗುವುದಿಲ್ಲ. ಆದರೆ, ಅಲ್ಲಿಯ ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗದಂತೆ ಹುಬ್ಬಳ್ಳಿ ದಕ್ಷಿಣ ಮತ್ತು ಗದಗ ಬೈಪಾಸ್ ನಿಲ್ದಾಣಗಳಲ್ಲಿ ರೈಲು ನಿಲುಗಡೆ ಇರಲಿದೆ. ಹಾಗೆಯೇ, ರಾಜ್ಯ ಸರ್ಕಾರದ ಕೋರಿಕೆಯಂತೆ ಮೈಸೂರು-ಫಂಡರಾಪುರ ನಡುವೆ ಮತ್ತೊಂದು ರೈಲು ಸೇವೆಯನ್ನು ಆದಷ್ಟು ಶೀಘ್ರವೇ ಪ್ರಾರಂಭಿಸಬೇಕು ಎಂದು ಅವರು ಕೋರಿದ್ದಾರೆ.

ಹುಬ್ಭಳ್ಳಿ ಮತ್ತು ಗದಗದಲ್ಲಿ ಊರೊಳಕ್ಕೆ ರೈಲುಗಳು ಹೋಗುವುದರಿಂದ ವಿಜಯಪುರ, ಬಾಗಲಕೋಟೆ ಮುಂತಾದ ಜಿಲ್ಲೆಗಳ ಜನರಿಗೆ ಪ್ರಯಾಣಕ್ಕೆ ಹೆಚ್ವು ಕಾಲ ಹಿಡಿಸುತ್ತದೆ. ಆದ್ದರಿಂದ ಇಲ್ಲಿ ಬೈಪಾಸ್ ಮೂಲಕವೇ ಓಡಿಸಬೇಕೆಂದು ಕೇಂದ್ರ ಸರ್ಕಾರದ ಗಮನವನ್ನು ನಿರಂತರವಾಗಿ ಸೆಳೆಯಲಾಗುತ್ತಿತ್ತು. ಈ ಸಂಬಂಧ ಪತ್ರ ವ್ಯವಹಾರ, ಅನುಸರಣಾ ಸಭೆಗಳು ಒಂದೇ ಸಮನೆ ನಡೆಯುತ್ತಿತ್ತು. ತಮ್ಮ ಬೇಡಿಕೆಗೆ ವೈಷ್ಣವ್ ಮತ್ತು ಸೋಮಣ್ಣ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಸಚಿವ ಎಂ.ಬಿ. ಪಾಟೀಲ ಹರ್ಷಿಸಿದ್ದಾರೆ.

ದ್ವಿಚಕ್ರ ವಾಹನ ಸವಾರರಿಗೆ ಗುಡ್ ನ್ಯೂಸ್: ಭಾರತದಲ್ಲೇ ಶುರುವಾಗಲಿದೆ 'ಬೈಕ್ ಎಬಿಎಸ್‌' ಉತ್ಪಾದನೆ

ವೇಳಾಪಟ್ಟಿ ಬದಲು

ಮೈಸೂರು-ಫಂಡರಾಪುರ ನಡುವೆ ಸಂಚರಿಸುವ ಗೋಲಗುಂಬಜ್ ಎಕ್ಸ್‌ಪ್ರೆಸ್ ಬೈಪಾಸ್ ಮಾರ್ಗಗಳಲ್ಲಿ ಓಡಲು ಆರಂಭಿಸಿದ ಬಳಿಕ ಮೈಸೂರಿನಿಂದ ಮಧ್ಯಾಹ್ನ 3.50ಕ್ಕೆ ಹೊರಟು ಮರುದಿನ ಬೆಳಗ್ಗೆ 10.05ಕ್ಕೆ ಫಂಡರಾಪುರವನ್ನು ತಲುಪಲಿದೆ. ಹಾಗೆಯೇ ಫಂಡರಾಪುರದಿಂದ ಮಧ್ಯಾಹ್ನ 1.15ಕ್ಕೆ ಹೊರಟು ಮರುದಿನ ಬೆಳಗ್ಗೆ 11.30ಕ್ಕೆ ಮೈಸೂರನ್ನು ತಲುಪಲಿದೆ. ಮೊದಲಿಗೆ ಹೋಲಿಸಿದರೆ ಪ್ರಯಾಣದಲ್ಲಿ 55 ನಿಮಿಷ ಉಳಿತಾಯವಾಗಲಿದೆ ಎಂದು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ ತಿಳಿಸಿದ್ದಾರೆ.