R T Vittalmurthy Column: ಅಷ್ಟಕ್ಕೂ, ದಿಲ್ಲಿಯಲ್ಲಿ ಸಿದ್ದು ಗುದ್ದಿದ್ದು ಯಾರಿಗೆ ?
“ನೋಡ್ರೀ. ನಾನು ಡಿ.ಜಿ.ಸಾಗರ್, ದಿನೇಶ್ ಅಮಿನ್ ಮಟ್ಟು ಮತ್ತು ರಮೇಶ್ ಬಾಬು ಅವರ ಹೆಸರು ಗಳನ್ನು ಅಂತಿಮಗೊಳಿಸುವಾಗ ಅವರನ್ನು ಕರೆಸಿ ಮಾತನಾಡಿದ್ದೇನೆ. ಎಮ್ಮೆಲ್ಸಿಗಳಾಗಲು ರೆಡಿ ಇರಿ ಅಂತ ಹೇಳಿದ್ದೇನೆ. ಈಗ ಈ ಹೆಸರುಗಳಲ್ಲಿ ಒಂದು ಹೆಸರನ್ನು ತೆಗೆದು ಹಾಕಿದರೂ ನನಗೆ ಅವಮಾನ ವಾಗುತ್ತದೆ. ಪಟ್ಟಿಗೆ ಅನುಮತಿ ಕೊಟ್ಟ ಖರ್ಗೆಯವರಿಗೆ ಅವಮಾನವಾಗುತ್ತದೆ" ಎಂದಿದ್ದಾರೆ.


ಮೂರ್ತಿಪೂಜೆ
ಕಳೆದ ವಾರ ದಿಲ್ಲಿಗೆ ಹೋದ ಸಿಎಂ ಸಿದ್ದರಾಮಯ್ಯ ಫುಲ್ ಗರಂ ಆಗಿದ್ದರು. ತಾವಿಡುವ ಹೆಜ್ಜೆಗಳಿಗೆ ವರಿಷ್ಠರು ಪದೇ ಪದೆ ಅಡ್ಡಗಾಲು ಹಾಕುತ್ತಿದ್ದಾರೆ ಎಂಬುದೇ ಅವರ ಸಿಟ್ಟಿಗೆ ಕಾರಣ. ಅಂದ ಹಾಗೆ, 2013ರಲ್ಲಿ ಅವರು ಮುಖ್ಯಮಂತ್ರಿಯಾದಾಗ ದಿಲ್ಲಿ ನಾಯಕರು ಅವರ ಗೋಜಿಗೇ ಬರುತ್ತಿರಲಿಲ್ಲ. ಇದೇ ರೀತಿ, ಇಲ್ಲಿ ಕೆಪಿಸಿಸಿ ಅಧ್ಯಕ್ಷರಾದವರೂ ಅವರಿಗೆ ಕಿರಿಕಿರಿ ಮಾಡುತ್ತಿರಲಿಲ್ಲ. ಕಾರಣ? ಅವತ್ತು ಎಐಸಿಸಿ ಅಧ್ಯಕ್ಷರಾಗಿದ್ದ ಸೋನಿಯಾ ಗಾಂಧಿ ಅವರಿಗೆ ಕರ್ನಾಟಕದ ರಾಜಕಾರಣವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವ ಅನಿವಾರ್ಯತೆ ಇರಲಿಲ್ಲ. ರಾಷ್ಟ್ರಮಟ್ಟದಲ್ಲಿ ಪಕ್ಷದ ಹಿತ ರಕ್ಷಿಸಲು ಕರ್ನಾಟಕದಿಂದ ಅವರೇನು ಬಯಸುತ್ತಿದ್ದರೋ, ಅದಕ್ಕೆ ಕೊರತೆಯಾಗದಂತೆ ಸಿದ್ದರಾಮಯ್ಯ ನೋಡಿಕೊಳ್ಳುತ್ತಿದ್ದರು.
ಇದೇ ರೀತಿ, ಕರ್ನಾಟಕದಲ್ಲಿ ಪಕ್ಷದ ಅಧ್ಯಕ್ಷರಾಗಿದ್ದ ಡಾ.ಜಿ.ಪರಮೇಶ್ವರ್ ತಪ್ಪಿಯೂ ಸಿದ್ದರಾಮಯ್ಯ ಅವರ ದಾರಿಗೆ ಅಡ್ಡಿ ಮಾಡುತ್ತಿರಲಿಲ್ಲ. ಅಂದ ಹಾಗೆ, ಪರಮೇಶ್ವರ್ ಅವರಿಗೆ ಅವತ್ತು ಸಿಎಂ ಆಗುವ ಅವಕಾಶ ಕೈ ತಪ್ಪಿ ಹೋಗಿದ್ದಕ್ಕೆ ನೋವೇನೋ ಇತ್ತು. ವಿಧಾನಸಭಾ ಚುನಾವಣೆಯಲ್ಲಿ ಸ್ವಪಕ್ಷೀಯರೇ ‘ಗ್ಯಾಂಗ್ ಅಪ್’ ಆಗಿ ತಮ್ಮನ್ನು ಸೋಲಿಸಿದರು ಎಂಬ ಸಿಟ್ಟಿತ್ತು. ಆದರೆ ಇಂಥ ಸಿಟ್ಟನ್ನು ಬಹಿರಂಗವಾಗಿ ತೋಡಿಕೊಳ್ಳದ ಪರಮೇಶ್ವರ್, ತೀರಾ ಕಿರಿಕಿರಿಯಾದಾಗ ದಿಲ್ಲಿಗೆ ಹೋಗುತ್ತಿದ್ದರು.
ಸೋನಿಯಾ ಗಾಂಧಿಯವರನ್ನೋ, ಇತರ ನಾಯಕರನ್ನೋ ಭೇಟಿಯಾಗಿ ತಮ್ಮ ಸೋಲಿಗೆ ಏನು ಕಾರಣ ಅಂತ ವಿವರಿಸಿ ಸಮಾಧಾನ ಪಟ್ಟುಕೊಳ್ಳುತ್ತಿದ್ದರು. ಇಂಥ ಸಂದರ್ಭದ ಮೇಡಂ ಸೋನಿಯಾ ಗಾಂಧಿ ಅವರು ಪರಮೇಶ್ವರ್ ಅವರನ್ನು ಸಮಾಧಾನಿಸಿ, “ನೀವು ಡಿಸಿಎಂ ಆಗುವಂತೆ ನೋಡಿಕೊಳ್ಳುತ್ತೇನೆ" ಅಂತ ಸಮಾಧಾನಿಸಿದ್ದರಂತೆ.
ಇದನ್ನೂ ಓದಿ: R T Vittalmurthy Column: ಗಡ್ಕರಿ-ಸಿಂಗ್, ಬಿಜೆಪಿಯ ಹೊಸ ವಿಂಗ್
ಆದರೆ ಸೋನಿಯಾ ಗಾಂಧಿ ಹೀಗೆ ಸಮಾಧಾನಿಸಿದರೂ ಅವತ್ತು ರಾಜ್ಯ ಕಾಂಗ್ರೆಸ್ ಉಸ್ತುವಾರಿಗೆ ಅಂತ ಬಂದ ದಿಗ್ವಿಜಯ್ ಸಿಂಗ್ ಅವರು ಕೆಲವು ದಿನ ಪರಮೇಶ್ವರ್ ಜತೆ ತಾರಮ್ಮಯ್ಯ ಆಡಿದರು. ಆದರೆ ಅಂತಿಮವಾಗಿ ಸಿಎಂ ಸಿದ್ದರಾಮಯ್ಯ ಅವರಿಗಿರುವ ಪವರ್ ನೋಡಿ ಅವರ ಕ್ಯಾಂಪಿನಲ್ಲೇ ಸೆಟ್ಲಾದರು.
ಅಷ್ಟೇ ಅಲ್ಲ, ಪರಮೇಶ್ವರ್ ಅವರನ್ನು ಡಿಸಿಎಂ ಮಾಡಿದರೆ ಸಿದ್ದರಾಮಯ್ಯ ಅವರೆದುರು ಮತ್ತೊಂದು ಪವರ್ ಸೆಂಟರ್ ಮೇಲೆದ್ದು ನಿಲ್ಲಲು ಅವಕಾಶ ಮಾಡಿಕೊಟ್ಟಂತಾಗುತ್ತದೆ ಅಂತ ಮೇಡಂಗೆ ರಿಪೋರ್ಟು ಕೊಟ್ಟು ಪರಮೇಶ್ವರ್ ತಣ್ಣಗಾಗುವಂತೆ ಮಾಡಿದರು. ಅರ್ಥಾತ್, ಅವತ್ತು ಎಐಸಿಸಿ ಮಟ್ಟದಗಲೀ, ಕೆಪಿಸಿಸಿ ಮಟ್ಟದಗಲೀ ಸಿದ್ದರಾಮಯ್ಯ ಅವರ ವಿರುದ್ಧ ಪವರ್ ಸೆಂಟರುಗಳು ತಲೆ ಎತ್ತಲಿಲ್ಲ.

ಆದರೆ 2023ರಲ್ಲಿ ಮುಖ್ಯಮಂತ್ರಿಯಾದ ನಂತರ ಸಿದ್ದರಾಮಯ್ಯ ಅವರ ಆಡಳಿತ ‘ಸಿಂಗಲ್ ವಿಂಡೋ ಏಜೆನ್ಸಿ’ ಅಗಿ ಉಳಿದಿಲ್ಲ. ಯಾಕೆಂದರೆ ಕೆಪಿಸಿಸಿ ಅಧ್ಯಕ್ಷರಾಗಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ, ಎಐಸಿಸಿ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕರ್ನಾಟಕದ ರಾಜಕಾರಣದ ಮೇಲೆ ಬಿಗಿ ಹಿಡಿತ ಬೇಕು. ಈ ಪೈಕಿ ಡಿ.ಕೆ.ಶಿವಕುಮಾರ್ ಅವರು ನವೆಂಬರ್ ಹೊತ್ತಿಗೆ ಮುಖ್ಯಮಂತ್ರಿ ಹುದ್ದೆಗೇರುವ ತವಕದಲ್ಲಿದ್ದರೆ, ತಾವು ಎಐಸಿಸಿ ಅಧ್ಯಕ್ಷ ರಾಗಿರುವಾಗ ಕರ್ನಾಟಕದಲ್ಲಿರುವ ಕಾಂಗ್ರೆಸ್ ಕೋಟೆ ಮಗುಚಿ ಬೀಳಬಾರದು ಎಂಬ ಪೊಸೆಸಿವ್ನೆಸ್ ಖರ್ಗೆ ಅವರಿಗಿದೆ.
ಅಷ್ಟೇ ಅಲ್ಲ, ಪರಿಸ್ಥಿತಿ ಬಿಗಡಾಯಿಸುವ ಲಕ್ಷಣ ಕಂಡರೆ ತಾವೇ ಸಿಎಂ ಆಗಿ ಕುಳಿತುಕೊಳ್ಳುವ ಮನಸ್ಸೂ ಇದೆ. ಹೀಗಾಗಿ ಸಿದ್ದರಾಮಯ್ಯ ಇಡುವ ಪ್ರತಿ ಹೆಜ್ಜೆಗಳ ಮೇಲೆ ಡಿಕೆಶಿ, ಖರ್ಗೆ ಹದ್ದು ಗಣ್ಣಿಟ್ಟಿದ್ದಾರೆ. ಹಾಗೆಯೇ ಈ ಹೆಜ್ಜೆಗಳಲ್ಲಿ ಸ್ವಲ್ಪ ವ್ಯತ್ಯಾಸ ಕಂಡರೂ ಡಿಕೆಶಿ ನೇರವಾಗಿ ದಿಲ್ಲಿಗೆ ದೂರೊಯ್ಯುತ್ತಾರೆ.
ಖರ್ಗೆ ಇದಕ್ಕೆ ಮದ್ದು ಕೊಡಲು ಮುಂದಾಗುತ್ತಾರೆ. ಈ ಹಿಂದೆ ಸಿದ್ದು ಆಪ್ತರು ನಡೆಸಲುದ್ದೇಶಿಸಿದ್ದ ದಲಿತ ಸಮಾವೇಶಕ್ಕೆ ಬ್ರೇಕ್ ಬಿದ್ದಿದ್ದರಿಂದ ಹಿಡಿದು ಸಿದ್ದರಾಮಯ್ಯ ಅವರ ಮಹತ್ವಾಕಾಂಕ್ಷೆಯ ಜಾತಿಗಣತಿಗೆ ಬ್ರೇಕ್ ಬೀಳುವ ತನಕ ಹಲವು ಎಪಿಸೋಡುಗಳ ಹಿಂದೆ ನಡೆದಿದ್ದು ಇದೇ ಕತೆ. ಆದರೆ ಇತ್ತೀಚಿನ ತನಕ ಇದೆಲ್ಲವನ್ನೂ ಸಹಿಸಿಕೊಂಡಿದ್ದ ಸಿದ್ದರಾಮಯ್ಯ ಅವರು ಮೊನ್ನೆ ಎಮ್ಮೆಲ್ಸಿ ಪಟ್ಟಿಗೆ ಬ್ರೇಕ್ ಬಿದ್ದಾಗ ಮಾತ್ರ ಕುದ್ದು ಹೋಗಿದ್ದಾರೆ.
ಪಟ್ಟಿಗೆ ಬ್ರೇಕ್ ಬಿದ್ದಿದ್ದೇಕೆ?
ಅಂದ ಹಾಗೆ, ಸಿದ್ದರಾಮಯ್ಯ ಅವರು ವಿಧಾನ ಪರಿಷತ್ತಿನ ನಾಲ್ಕು ನಾಮನಿರ್ದೇಶಿತ ಸ್ಥಾನಗಳಿಗೆ ಡಿ.ಜಿ.ಸಾಗರ್, ದಿನೇಶ್ ಅಮಿನ್ ಮಟ್ಟು, ರಮೇಶ್ ಬಾಬು ಮತ್ತು ಆರತಿ ಕೃಷ್ಣ ಅವರ ಹೆಸರುಗಳನ್ನು ಅಂತಿಮಗೊಳಿಸಿದ್ದರಲ್ಲ? ಈ ಹೆಸರುಗಳಿದ್ದ ಪಟ್ಟಿಯನ್ನು ದಿಲ್ಲಿಗೆ ಕಳುಹಿಸಿ ಒಪ್ಪಿಗೆ ನೀಡುವಂತೆ ಅವರು ವರಿಷ್ಠರನ್ನು ಕೋರಿದ್ದರು. ಕುತೂಹಲದ ಸಂಗತಿ ಎಂದರೆ ಈ ಹೆಸರುಗಳನ್ನು ಪರಿಶೀಲಿಸಿದ ಕಾಂಗ್ರೆಸ್ ಹೈಕಮಾಂಡ್ ಯಾವ ತಕರಾರೂ ಮಾಡದೆ ಒಪ್ಪಿಗೆ ಸೂಚಿಸಿತ್ತು.

ಸ್ವತಃ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರೇ ಸಹಿ ಹಾಕಿದ ಒಪ್ಪಿಗೆ ಪತ್ರವೂ ಸಿದ್ದು ಕೈಗೆ ತಲುಪಿತ್ತು. ಯಾವಾಗ ಪತ್ರ ತಮ್ಮ ಕೈ ತಲುಪಿತೋ, ಸಿದ್ದರಾಮಯ್ಯ ಅವರು ಈ ಹೆಸರುಗಳನ್ನು ಅನುಮೋದಿಸುವಂತೆ ರಾಜ್ಯಪಾಲರಿಗೆ ಶಿಫಾರಸು ಮಾಡಿದ್ದಾರೆ.
ಆದರೆ ರಾಜ್ಯಪಾಲರಿಗೆ ಪಟ್ಟಿ ರವಾನೆಯಾದ ಕೆಲವೇ ಹೊತ್ತಿನಲ್ಲಿ ದಿಲ್ಲಿಯಿಂದ ಫೋನು ಮಾಡಿದ ರಣದೀಪ್ ಸಿಂಗ್ ಸುರ್ಜೇವಾಲ, “ಎಮ್ಮೆಲ್ಸಿಗಳ ಪಟ್ಟಿಯನ್ನು ತಡೆ ಹಿಡಿಯಿರಿ. ಯಾಕೆಂದರೆ ಎರಡು ಹೆಸರುಗಳ ಬಗ್ಗೆ ಇನ್ನೂ ಚರ್ಚಿಸುವುದಿದೆ" ಅಂತ ಮೆಸೇಜು ಕೊಟ್ಟರು. ಯಾವಾಗ ಅವರು ಈ ಮೆಸೇಜು ಕೊಟ್ಟರೋ, ಸಿದ್ದರಾಮಯ್ಯ ಅವರ ಮೈ ಉರಿದುಹೋಯಿತು.
ಹಾಗಂತಲೇ, “ಅಲ್ರೀ, ಈ ನಾಲ್ಕು ಹೆಸರುಗಳಿದ್ದ ಪಟ್ಟಿಯನ್ನು ನಾನು ನಿಮಗೆ ಕಳಿಸಿ ಕೊಟ್ಟಿದ್ದಾಯಿತು. ಅದಕ್ಕೆ ಒಪ್ಪಿಗೆ ಸೂಚಿಸಿ ಸ್ವತಃ ಎಐಸಿಸಿ ಅಧ್ಯಕ್ಷರೇ ಪತ್ರ ಕಳಿಸಿದ್ದಾಯಿತು. ಈಗ ಪಟ್ಟಿ ರಾಜ್ಯಪಾಲರ ಒಪ್ಪಿಗೆಗೆ ಹೋಗಿರುವಾಗ ಇದೇನು ತಕರಾರು" ಅಂತ ಸಿದ್ದರಾಮಯ್ಯ ಗುಡುಗಿದ್ದಾರೆ. ಅವತ್ತು ಸಿದ್ದರಾಮಯ್ಯ ಅವರ ಅಸಮಾಧಾನವನ್ನು ಅರ್ಥ ಮಾಡಿಕೊಂಡ ಸುರ್ಜೇವಾಲ ತಕ್ಷಣ ವಿವರಗಳಿಗೆ ಇಳಿಯದೆ, “ಇದು ಮೇಡಂ ಸೂಚನೆ. ನಿಮಗೆ ತಿಳಿಸಿದ್ದೇನೆ. ಇನ್ನೂ ಬೇಕೆಂದರೆ ನೀವು ದಿಲ್ಲಿಗೆ ಬಂದು ಮಾತನಾಡಬಹುದು" ಎಂದಿದ್ದಾರೆ.
ಇದಾದ ನಂತರ ದಿಲ್ಲಿಗೆ ಹೋದ ಸಿದ್ದರಾಮಯ್ಯ ಅವರು ಮಲ್ಲಿಕಾರ್ಜುನ ಖರ್ಗೆ, ಸುರ್ಜೇವಾಲ ಮತ್ತು ಕೆ.ಸಿ.ವೇಣುಗೋಪಾಲ್ ಅವರ ಮುಂದೆ ನೇರವಾಗಿಯೇ ತಮ್ಮ ಆಕ್ರೋಶ ಹೊರಹಾಕಿದ್ದಾರೆ. “ನೋಡ್ರೀ. ನಾನು ಡಿ.ಜಿ.ಸಾಗರ್, ದಿನೇಶ್ ಅಮಿನ್ ಮಟ್ಟು ಮತ್ತು ರಮೇಶ್ ಬಾಬು ಅವರ ಹೆಸರುಗಳನ್ನು ಅಂತಿಮಗೊಳಿಸುವಾಗ ಅವರನ್ನು ಕರೆಸಿ ಮಾತನಾಡಿದ್ದೇನೆ. ಎಮ್ಮೆಲ್ಸಿಗಳಾಗಲು ರೆಡಿ ಇರಿ ಅಂತ ಹೇಳಿದ್ದೇನೆ. ಈಗ ಈ ಹೆಸರುಗಳಲ್ಲಿ ಒಂದು ಹೆಸರನ್ನು ತೆಗೆದು ಹಾಕಿದರೂ ನನಗೆ ಅವಮಾನವಾಗುತ್ತದೆ. ಪಟ್ಟಿಗೆ ಅನುಮತಿ ಕೊಟ್ಟ ಖರ್ಗೆಯವರಿಗೆ ಅವಮಾನವಾಗುತ್ತದೆ" ಎಂದಿದ್ದಾರೆ. ಆಗೆಲ್ಲ ಮಾತನಾಡಿದ ಸುರ್ಜೇವಾಲ ಅವರು, “ಹಾಗಲ್ಲ ಸಿದ್ರಾಮಯ್ಯಾಜೀ, ಈಗ ಪಟ್ಟಿಯಲ್ಲಿರುವ ದಿನೇಶ್ ಅಮಿನ್ ಮಟ್ಟು ಅವರು ನಮ್ಮ ನಾಯಕಿ ಇಂದಿರಾ ಗಾಂಧಿಯವರನ್ನು ಟೀಕಿಸಿ ಬರೆದಿದ್ದಾರೆ ಅಂತ ಕಂಪ್ಲೇಂಟಿದೆ.
ಇದೇ ರೀತಿ ರಮೇಶ್ ಬಾಬು ಅವರು ಇತ್ತೀಚೆಗಷ್ಟೇ ಕಾಂಗ್ರೆಸ್ಸಿಗೆ ಬಂದವರು. ಹೀಗಾಗಿ ಪಕ್ಷಕ್ಕಾಗಿ ದುಡಿದ ಸೀನಿಯರ್ಗಳಿಗೆ ಚಾನ್ಸು ಕೊಡಿ ಎಂಬ ಅಭಿಪ್ರಾಯ ವ್ಯಕ್ತವಾಗಿದೆ" ಎಂದಿದ್ದಾರೆ. ಆದರೆ ಅದಕ್ಕೆ ಸೊಪ್ಪು ಹಾಕದ ಸಿದ್ದರಾಮಯ್ಯ, “ಪತ್ರಕರ್ತರಾಗಿದ್ದಾಗ ದಿನೇಶ್ ಅಮೀನ್ ಮಟ್ಟು ಏನು ಬರೆದಿದ್ದರೋ?ಅದೀಗ ಮುಖ್ಯ ವಿಷಯವಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಹಾಗೇನಾದರೂ ಅವರು ಬರೆದಿದ್ದರೆ ಅದನ್ನವರು ಕಾಂಗ್ರೆಸ್ ಕಾರ್ಯಕರ್ತರಾಗಿ ಬರೆದಿಲ್ಲ.
ಇನ್ನು ಕಳೆದ ಕೆಲ ವರ್ಷಗಳಿಂದ ಕೋಮುವಾದಿಗಳ ವಿರುದ್ಧ ನಾವು ನಡೆಸುತ್ತಿರುವ ಹೋರಾಟಕ್ಕೆ ಅವರು ಭುಜ ನೀಡಿದ್ದಾರೆ. ಹೀಗಾಗಿ ವಿಧಾನ ಪರಿಷತ್ತಿನಲ್ಲಿ ಅವರ ಸೇವೆ ನಮ್ಮ ಪಕ್ಷಕ್ಕೆ ಅಗತ್ಯವಿದೆ. ಇನ್ನು ರಮೇಶ್ ಬಾಬು ಕೂಡ ಇಂಥ ಹೋರಾಟಗಳಲ್ಲಿ ಪರಿಣಾಮಕಾರಿಯಾಗಿ ಪಾಲ್ಗೊಳ್ಳು ತ್ತಿದ್ದಾರೆ. ಹೀಗಾಗಿ ಅವರ ನೇಮಕಾತಿಯಿಂದ ಪಕ್ಷಕ್ಕೆ ಬಲ ಬರಲಿದೆ" ಅಂತ ವಿವರಿಸಿದ್ದಾರೆ.
ಕಾಂಗ್ರೆಸ್ ಮೂಲಗಳ ಪ್ರಕಾರ, ಹೀಗೆ ಎಮ್ಮೆಲ್ಸಿ ಪಟ್ಟಿಗೆ ದಿಲ್ಲಿ ವರಿಷ್ಠರು ಬ್ರೇಕ್ ಹಾಕಲು ಡಿಕೆಶಿ ಕಾರಣ ಎಂಬುದು ಸಿದ್ದರಾಮಯ್ಯ ಅವರ ಅನುಮಾನ. ಹೀಗಾಗಿ ಕನಲಿರುವ ಅವರು ಡಿಕೆಶಿ ವಿರುದ್ಧ ಮುಗಿಬೀಳಲು ನಿರ್ಧರಿಸಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಸ್ಥಾನದಿಂದ ಡಿಕೆಶಿ ಅವರನ್ನು ಕೆಳಗಿಳಿಸಿ ಅರಣ್ಯ ಸಚಿವ ಈಶ್ವರ ಖಂಡ್ರೆ ಇಲ್ಲವೇ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರನ್ನು ನೇಮಕ ಮಾಡಿ ಅಂತ ದಿಲ್ಲಿ ನಾಯಕರಿಗೆ ಅವರು ಹೇಳಿ ಬಂದಿರುವುದೇ ಇದಕ್ಕೆ ಸಾಕ್ಷಿ.
ಯಾವಾಗ ಸಿದ್ದರಾಮಯ್ಯ ಟಫ್ ಆಗಿದ್ದಾರೆ ಅಂತ ಅರ್ಥವಾಯಿತೋ, ಅಗ ಖರ್ಗೆ, ಸುರ್ಜೇವಾಲಾ, ಕೆ.ಸಿ.ವೇಣುಗೋಪಾಲ್ ಅವರೆಲ್ಲ, “ರಾಹುಲ್ ಗಾಂಧಿ ವಿದೇಶ ಪ್ರವಾಸದಲ್ಲಿದ್ದಾರೆ. ಅವರು ಬಂದ ಕೂಡಲೇ ನೀವು ಹೇಳಿದ ವಿಷಯವನ್ನು ಅವರ ಗಮನಕ್ಕೆ ತರುತ್ತೇವೆ" ಅಂತ ಭರವಸೆ ನೀಡಿ ಕೈ ತೊಳೆದುಕೊಂಡಿದ್ದಾರೆ.
ಸುರ್ಜೇವಾಲ ಏಕೆ ಬರುತ್ತಿದ್ದಾರೆ?
ಯಾವಾಗ ಈ ಎಲ್ಲ ಬೆಳವಣಿಗೆಗಳು ನಡೆದವೋ, ಇವು ಸಹಜವಾಗಿಯೇ ಸಿದ್ದು ಆಪ್ತರು ಕೆರಳುವಂತೆ ಮಾಡಿವೆ. ಹೀಗಾಗಿಯೇ ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರು, “ಪಕ್ಷದಲ್ಲಿ ಪವರ್ ಸೆಂಟರುಗಳು ಹೆಚ್ಚಾಗಿರುವುದರಿಂದ ಸಿದ್ದರಾಮಯ್ಯ ಅವರು ಈ ಹಿಂದಿನಂತಿಲ್ಲ. ಆದರೆ ಪರಿಸ್ಥಿತಿ ಹೀಗೆಯೇ ಇರುವುದಿಲ್ಲ. ಸೆಪ್ಟೆಂಬರ್ ಹೊತ್ತಿಗೆ ಕ್ರಾಂತಿ ಖಚಿತ" ಅಂತ ಗುಡುಗಿದ್ದಾರೆ.
ಹಾಗೆಯೇ, ಸಿಎಂ ಸಿದ್ದರಾಮಯ್ಯ ಕೂಡಾ ದಿನದಿಂದ ದಿನಕ್ಕೆ ಡಿಕೆಶಿ ವಿಷಯದಲ್ಲಿ ಬಿಗುವಾಗುತ್ತಾ ನಡೆದಿದ್ದಾರೆ. ಅರ್ಥಾತ್, ಅಧಿಕಾರ ಹಂಚಿಕೆಯ ವಿಷಯದಲ್ಲಿ ಡಿಕೆಶಿ ಹೇಗೆ ಫರ್ಮ್ ಆಗಿದ್ದಾರೊ, ಹಾಗೆಯೇ ಸಿಎಂ ಹುದ್ದೆ ಬಿಟ್ಟುಕೊಡಬಾರದು ಎಂಬ ವಿಷಯದಲ್ಲಿ ಸಿದ್ದು ಕೂಡಾ ಅಷ್ಟೇ ಫರ್ಮ್ ಆಗಿದ್ದಾರೆ. ಹೀಗಾಗಿ ಸೆಪ್ಟೆಂಬರ್ ಹೊತ್ತಿಗಲ್ಲವಾದರೂ ನವೆಂಬರ್ ಹೊತ್ತಿಗೆ ಕೈ ಪಾಳಯದಲ್ಲಿ ಕ್ರಾಂತಿ ನಿಶ್ಚಿತ.
ಇದನ್ನು ಊಹಿಸಿರುವ ಕಾರಣದಿಂದಲೇ ಈ ವಾರ ಕರ್ನಾಟಕಕ್ಕೆ ಬರಲು ಸಜ್ಜಾಗಿರುವ ರಣದೀಪ್ ಸಿಂಗ್ ಸುರ್ಜೇವಾಲ ಅವರು ಕರ್ನಾಟಕದಲ್ಲಿ ಪಕ್ಷವನ್ನು ಬಲ ಪಡಿಸಲು ಬೋರ್ಡು-ಕಾರ್ಪೋರೇಷನ್ಗಳ ನೇಮಕಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸೋಣ ಎಂದಿದ್ದಾರಂತೆ. ಬಾಕಿ ಉಳಿದಿರುವ ಬೋರ್ಡು-ಕಾರ್ಪೋರೇಷನ್ನುಗಳಿಗೆ ಅಧ್ಯಕ್ಷ ಹುದ್ದೆಗೆ ಮಾತ್ರವಲ್ಲದೆ ಸದಸ್ಯರನ್ನು ನೇಮಕ ಮಾಡಿದರೆ ಮತ್ತು ಎಲ್ಲ ಹಂತಗಳ ನೇಮಕಾತಿಯನ್ನು ಕ್ಲಿಯರ್ ಮಾಡಿದರೆ ನಾಲ್ಕು ಸಾವಿರ ಮಂದಿ ಕಾರ್ಯಕರ್ತರಿಗೆ ಬಲ ನೀಡಿದಂತಾಗುತ್ತದೆ ಎಂಬುದು ಸುರ್ಜೇವಾಲಾ ಮಾತು.
ಆದರೆ ಮೊದಲ ಕಂತಿನ ಬೋರ್ಡು-ಕಾರ್ಪೊರೇಷನ್ಗಳ ನೇಮಕಾತಿ ವಿಷಯದಲ್ಲಿ ಸುರ್ಜೇವಾಲಾ ಅವರ ಕೈಚಳಕವನ್ನು ಕಂಡಿರುವ ಸಿದ್ಧರಾಮಯ್ಯ ಆಪ್ತ ಸಚಿವರ ಪಡೆ ಉಲ್ಟಾ ಹೊಡೆಯಲು ಸಜ್ಜಾಗಿದೆ. ಅರ್ಥಾತ್, ಬೋರ್ಡು- ಕಾರ್ಪೊರೇಷನ್ನುಗಳ ನೇಮಕಾತಿ ವಿಷಯದಲ್ಲಿ ನಮ್ಮ ಅಭಿಪ್ರಾಯ ಪಡೆಯದೆ ಮುಂದುವರಿಯುವಂತಿಲ್ಲ ಎಂಬುದು ಅದರ ವಾದ. ಮೂಲಗಳ ಪ್ರಕಾರ, ಸುರ್ಜೇವಾಲಾ ಅವರ ಕೈಚಳಕ ಕೆಲಸ ಮಾಡಿದರೆ, ಕಂಡ ಕಂಡವರನ್ನೆಲ್ಲ ಬೋರ್ಡು-ಕಾರ್ಪೊರೇಷನ್ನುಗಳಿಗೆ ತಂದು ಹಾಕಲು ಮುಂದಾದರೆ ವರಿಷ್ಠರಿಗೆ ಪತ್ರಮುಖೇನ ದೂರು ನೀಡುವುದು ಈ ಸಚಿವರ ಲೆಕ್ಕಾಚಾರ.
ಲಾಸ್ಟ್ ಸಿಪ್: ಅಂದ ಹಾಗೆ, ಕೈ ಪಾಳಯದಲ್ಲಿ ಕೇಳಿಬರುತ್ತಿರುವ ಕ್ರಾಂತಿಯ ಮಾತು ಪ್ರತಿಪಕ್ಷ ಬಿಜೆಪಿಗೆ ಸಮಾಧಾನ ತಂದಿದೆ. ಯಾಕೆಂದರೆ ಇಂಥ ಕ್ರಾಂತಿಗೆ ಅಧಿಕಾರ ಹಸ್ತಾಂತರದ ಮಾತೇ ಮೂಲವಾಗುವುದರಿಂದ ಏನೇ ಆದರೂ ಲಾಭ ತಮಗೇ ಎಂಬುದು ಬಿಜೆಪಿ ನಾಯಕರ ಲೆಕ್ಕಾಚಾರ. ಸಿದ್ದರಾಮಯ್ಯ ಸಿಎಂ ಹುದ್ದೆಯನ್ನು ಡಿಕೆಶಿಗೆ ಬಿಟ್ಟುಕೊಟ್ಟರೂ ಮುಂದಿನ ವರ್ಷ ಏಪ್ರಿಲ್-ಮೇ ತಿಂಗಳಲ್ಲಿ ವಿಧಾನಸಭೆಗೆ ಮಧ್ಯಂತರ ಚುನಾವಣೆ ಖಚಿತ. ಒಂದು ವೇಳೆ ಅಧಿಕಾರ ಹಸ್ತಾಂತರ ಪ್ರಕ್ರಿಯೆ ನಡೆಯದಿದ್ದರೂ ಕೈ ಪಾಳಯ ತಲ್ಲಣಗೊಳ್ಳುವುದು ನಿಶ್ಚಿತ. ಹೀಗಾಗಿ ಏನೇ ಆದರೂ ಲಾಭ ತಮಗೇ ಎಂಬುದು ಅವರ ಯೋಚನೆ. ಪಕ್ಷದ ಅಂತಃಕಲಹಕ್ಕೆ ಬ್ರೇಕ್ ಹಾಕಲು ಬಿಜೆಪಿ ಹೈಕಮಾಂಡ್ ತರಾತುರಿ ತೋರಿಸುತ್ತಿರುವುದು ಇದೇ ಕಾರಣಕ್ಕಾಗಿ ಎಂಬುದು ಅವರ ನಂಬಿಕೆ.