ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Dr Vijay Darda Column: ಭಾರತದ ಹೀರೋ ಆದ ಅಸಾದುದ್ದೀನ್‌ ಒವೈಸಿ !

ಪಾಕಿಸ್ತಾನದ ಸೋಷಿಯಲ್ ಮೀಡಿಯಾಗಳು ನಿರಂತರವಾಗಿ ಒವೈಸಿ ಮೇಲೆ ವಾಗ್ದಾಳಿ ನಡೆಸುತ್ತಿವೆ. ಆದರೆ ಅದರಿಂದ ಏನೂ ಪ್ರಯೋಜನವಿಲ್ಲ. ಇಡೀ ಭಾರತವೀಗ ಒವೈಸಿ ಹಿಂದೆ ನಿಂತಿದೆ. ಒವೈಸಿಯ ಕಾರಣದಿಂದ ಇಂದು ಸೌದಿ, ಕುವೈತ್, ಬಹ್ರೇನ್, ಅಲ್ಜೀರಿಯಾದಂಥ ದೇಶಗಳು ಕೂಡ ಪಾಕಿಸ್ತಾನ ವನ್ನು ‘ಸ್ಟುಪಿಡ್’, ‘ಜೋಕರ್’ ಎಂದು ಕರೆಯುವಂತಾಗಿದೆ.ಸ

ಭಾರತದ ಹೀರೋ ಆದ ಅಸಾದುದ್ದೀನ್‌ ಒವೈಸಿ !

ಸಂಗತ

‘ಆಪರೇಷನ್ ಸಿಂದೂರ್’ ಬಳಿಕ ಪಾಕಿಸ್ತಾನದ ನಿಜವಾದ ಮುಖವನ್ನು ಜಾಗತಿಕ ವೇದಿಕೆಯಲ್ಲಿ ಬಯಲು ಮಾಡಲು ಭಾರತದಿಂದ ವಿವಿಧ ದೇಶಗಳಿಗೆ ತೆರಳಿದ್ದ ಏಳು ನಿಯೋಗಗಳು ಅದ್ಭುತವಾಗಿ ಕೆಲಸ ಮಾಡಿವೆ. ಅಮೆರಿಕ ಮತ್ತು ಇನ್ನಿತರ ದೇಶಗಳಲ್ಲಿ ಪಾಕಿಸ್ತಾನದ ಹಕೀಕತ್ತೇನು ಎಂಬುದನ್ನು ಶಶಿ ತರೂರ್ ಸರಿಯಾಗಿ ಬಿಚ್ಚಿಡಲಿ ಎಂದೇ ಎಲ್ಲಾ ಭಾರತೀಯರೂ ಕಾತುರದಿಂದ ಕಾಯುತ್ತಿದ್ದರು. ಅವರು ಆ ಕೆಲಸವನ್ನು ಬಹಳ ಪರಿಣಾಮಕಾರಿಯಾಗಿ ಮಾಡಿದ್ದಾರೆ. ತರೂರ್ ಅವರ ಮಾತು ಮತ್ತು ರಾಜತಾಂತ್ರಿಕ ಜಾಣ್ಮೆ ಎಷ್ಟು ಪರಿಣಾಮಕಾರಿಯಾಗಿತ್ತು ಅಂದರೆ, ಅವರ ಭೇಟಿಯ ಬಳಿಕ ಕೊಲಂಬಿಯಾ ದೇಶ ತನ್ನ ನಿಲುವನ್ನೇ ಬದಲಿಸಿಕೊಂಡಿದೆ. ಭಾರತೀಯ ಸೇನೆ ನಡೆಸಿದ ಕಾರ್ಯಾ ಚರಣೆಯಲ್ಲಿ ಪಾಕಿಸ್ತಾನೀಯರು ಮೃತಪಟ್ಟಿದ್ದಕ್ಕೆ ಈ ಹಿಂದೆ ಕೊಲಂಬಿಯಾ ಸಂತಾಪ ವ್ಯಕ್ತಪಡಿಸಿ ತಾನು ಪಾಕ್ ಜತೆ ನಿಲ್ಲುವುದಾಗಿ ಹೇಳಿತ್ತು.

ಈಗ ತರೂರ್ ಭೇಟಿಯ ಬಳಿಕ ಅದು ಮಗ್ಗುಲು ಬದಲಿಸಿ ಭಾರತದ ಜತೆಗೆ ನಿಂತಿದೆ. ಇಡೀ ಭಾರತ ಶಶಿ ತರೂರ್ ಅವರ ಫ್ಯಾನ್ ಆಗಿಬಿಟ್ಟಿದೆ ಎಂಬುದರಲ್ಲಿ ಯಾವ ಅನುಮಾನವೂ ಇಲ್ಲ! ಆದರೆ, ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ ಪಕ್ಷದ ಬ್ಯಾರಿಸ್ಟರ್ ಅಸಾದುದ್ದೀನ್ ಒವೈಸಿಯವರು ಇಸ್ಲಾಮಿಕ್ ರಾಷ್ಟ್ರಗಳಿಗೆ ತೆರಳಿ ಭಾರತದ ಕಾರ್ಯಾಚರಣೆಯನ್ನು ಸಮರ್ಥಿಸಿಕೊಂಡ ಪರಿ ಇದೆಯಲ್ಲ, ಅದರಿಂದಾಗಿ ಅವರಿಂದು ಭಾರತದ ಹೀರೋ ಆಗಿಬಿಟಿದ್ದಾರೆ. ಭಾರತದಲ್ಲಿ ದ್ವೇಷವನ್ನು ಬಿತ್ತುವ ಪಾಕಿಸ್ತಾನದ ಕುತಂತ್ರಿ ಬುದ್ಧಿಯನ್ನು ಅವರು ಇಸ್ಲಾಮಿಕ್ ದೇಶಗಳ ನಾಯಕರ ಎದುರು ಬಹಳ ಚೆನ್ನಾಗಿ ತೆರೆದಿಟ್ಟಿದ್ದಾರೆ.

ಹಾಗೆ ನೋಡಿದರೆ, ಒವೈಸಿಯವರು ಪಾಕಿಸ್ತಾನದ ವಿರುದ್ಧ ವಾಗ್ದಾಳಿ ನಡೆಸುತ್ತಿರುವುದು ಇದೇನೂ ಮೊದಲಲ್ಲ. ಪರ್ವೇಜ್ ಮುಷರಫ್ ಆ ದೇಶದ ಸರ್ವಾಧಿಕಾರಿ ಅಧ್ಯಕ್ಷರಾಗಿದ್ದ ವೇಳೆ ನಮ್ಮ ನಿಯೋಗವೊಂದು ಪಾಕಿಸ್ತಾನಕ್ಕೆ ಹೋಗಿತ್ತು. ಆ ನಿಯೋಗದಲ್ಲಿ ನಾನು, ‘ಪಂಜಾಬ್ ಕೇಸರಿ’ ಪತ್ರಿಕೆಯ ವ್ಯವಸ್ಥಾಪಕ ನಿರ್ದೇಶಕ ಅಶ್ವಿನಿ ಚೋಪ್ರಾ ‘ಮಿನ್ನಾ’ ಹಾಗೂ ಒವೈಸಿ ಇದ್ದೆವು. ಅಶ್ವಿನಿ ಹಾಗೂ ನಾನು ಪಾಕಿಸ್ತಾನಕ್ಕೆ ಅವರದೇ ನೆಲದಲ್ಲಿ ನಿಂತು ಚೆನ್ನಾಗಿ ಬುದ್ಧಿ ಹೇಳಿದ್ದೆವು. ‌

ಇದನ್ನೂ ಓದಿ: Dr Vijay Darda Column: ತರೂರ್‌ ಬಗ್ಗೆ ಕಾಂಗ್ರೆಸ್‌ಗೇಕೆ ಇಷ್ಟೊಂದು ಚಿಂತೆ ?

ಆದರೆ, ಒವೈಸಿ ಇನ್ನೂ ಒಂದು ಹೆಜ್ಜೆ ಮುಂದೆಹೋಗಿ, ಬಹಳ ಉಗ್ರವಾಗಿಯೇ ಪಾಕಿಸ್ತಾನವನ್ನು ತರಾಟೆಗೆ ತೆಗೆದುಕೊಂಡಿದ್ದರು. ಅವರು ಪಾಕಿಸ್ತಾನಿ ಸರಕಾರಕ್ಕೆ ಲೆಫ್ಟ್‌-ರೈಟು ತೆಗೆದುಕೊಂಡಿದ್ದ ಪರಿಯನ್ನು ನೋಡಿ ನಾವೇ ಬೆರಗಾಗಿದ್ದೆವು! ಆವತ್ತು ಒವೈಸಿ ಆಡಿದ ಮಾತುಗಳು ನನಗೆ ಇನ್ನೂ ನೆನಪಿವೆ. “ಭಾರತದಲ್ಲಿರುವ ಮುಸ್ಲಿಮರ ಯೋಗಕ್ಷೇಮದ ಬಗ್ಗೆ ಪಾಕಿಸ್ತಾನ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ!" ಎಂದು ಬಹಳ ಕಠೋರವಾಗಿ ಒವೈಸಿ ಹೇಳಿದ್ದರು.

ಆದರೆ ಈ ಬಾರಿ ಸೌದಿ ಅರೇಬಿಯಾ, ಕುವೈತ್, ಬಹ್ರೇನ್, ಅಲ್ಜೀರಿಯಾ ದೇಶಗಳಲ್ಲಿ ಅವರು ನಿಖರವಾದ ಅಂಕಿ-ಅಂಶ ಮತ್ತು ಘಟನೆಗಳನ್ನು ಮುಂದಿಟ್ಟು ಪಾಕಿಸ್ತಾನವನ್ನು ತರಾಟೆ ತೆಗೆದು ಕೊಂಡಿದ್ದಾರೆ. ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀ- ಮತ್ತು ಸೇನಾಪಡೆ ಮುಖ್ಯಸ್ಥ ಜನರಲ್ ಆಸಿ- ಮುನೀರ್‌ರನ್ನು ಅವರು ಮೂರ್ಖರು ಮತ್ತು ಜೋಕರ್‌ಗಳೆಂದು ಕರೆದಿದ್ದಾರೆ.

ಕುವೈತ್‌ನ ನಾಯಕರಿಗೆ ಒವೈಸಿ ಪಾಕಿಸ್ತಾನದ ಸೇನಾಪಡೆ ಮುಖ್ಯಸ್ಥ ಜನರಲ್ ಮುನೀರ್‌ಗೆ ಸಂಬಂಧಿಸಿದ ಒಂದು ಘಟನೆಯನ್ನು ವಿವರಿಸುವ ಮೂಲಕ ಮುನೀರ್ ಎಂಥಾ ಕಳ್ಳ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಮುನೀರ್‌ಗೆ ಫೀಲ್ಡ್ ಮಾರ್ಷಲ್ ಪದವಿಗೆ ಬಡ್ತಿ ನೀಡಿದ ಬಳಿಕ ಪಾಕಿಸ್ತಾನ ದಲ್ಲಿ ಔತಣಕೂಟ ಏರ್ಪಾಟಾಗಿತ್ತು. ಅಲ್ಲಿ ಪ್ರಧಾನಿ ಶೆಹಬಾಜ್ ಷರೀಫ್‌ ಗೆ ಮುನೀರ್ ಒಂದು ಫೋಟೋವನ್ನು ಉಡುಗೊರೆಯಾಗಿ ನೀಡಿದ್ದರು.

ಭಾರತದ ಮೇಲೆ ಪಾಕಿಸ್ತಾನದ ಸೇನೆ ನಡೆಸಿದ ದಾಳಿಯ ಫೋಟೋ ಅದು ಎಂದು ಮುನೀರ್ ಹೇಳಿದ್ದರು. ಅದರಲ್ಲಿ ಅನೇಕ ರಾಕೆಟ್ ಲಾಂಚರ್‌ಗಳು ಏಕಕಾಲಕ್ಕೆ ಕ್ಷಿಪಣಿಗಳನ್ನು ಉಡಾಯಿಸು ತ್ತಿರುವ ದೃಶ್ಯವಿತ್ತು. ಒವೈಸಿ ಈ ಫೋಟೋದ ಅಸಲಿಯತ್ತನ್ನು ಕುವೈತ್ ಗೆ ತಿಳಿಸಿಕೊಟ್ಟರು. ವಾಸ್ತವ ವಾಗಿ ಅದು ಭಾರತದ ಮೇಲೆ ಪಾಕಿಸ್ತಾನ ನಡೆಸಿದ ದಾಳಿಯ ಚಿತ್ರವೇ ಅಲ್ಲ. ಅದು 2019ರಲ್ಲಿ ಚೀನಾದ ಸೇನೆ ನಡೆಸಿದ ಯುದ್ಧ ತಾಲೀಮಿನ ಚಿತ್ರ!

ಚೀನಾದ ಸೇನಾಪಡೆ ಪಿಎಲ್ ಎಯ (ಪೀಪಲ್ಸ್ ಲಿಬರೇಶನ್ ಆರ್ಮಿ) ಅಧಿಕೃತ ವೆಬ್ ಸೈಟಿನಲ್ಲೇ ಆ ಫೋಟೋ ಲಭ್ಯವಿದೆ. ಈ ಘಟನೆಯ ಹಿನ್ನೆಲೆಯಲ್ಲಿ ಪಾಕಿಸ್ತಾನವನ್ನು ನಿವಾಳಿಸಿ ಎಸೆದ ಒವೈಸಿ, “ಏನನ್ನಾದರೂ ಕಾಪಿ ಮಾಡುವುದಕ್ಕಾದರೂ ನಿಮ್ಮ ತಲೆಯೊಳಗೆ ಮಿದುಳಿರಬೇಕಾಗುತ್ತದೆ. ಈ ಮೂರ್ಖರ ತಲೆಯೊಳಗೆ ಮಿದುಳು ಇಲ್ಲದ ಕಾರಣ ಅವರಿಗೆ ನೆಟ್ಟಗೆ ಕಾಪಿ ಮಾಡುವುದಕ್ಕೂ ಬರುವುದಿಲ್ಲ!" ಎಂದು ಹೇಳಿದರು.

ಪಾಕಿಸ್ತಾನದ ನಿಜವಾದ ಮುಖವನ್ನು ಅನಾವರಣಗೊಳಿಸಲು ಏಳು ನಿಯೋಗಗಳು 33 ದೇಶಗಳಿಗೆ ತೆರಳಿದ್ದವು. ಆದರೆ, ಸೋಷಿಯಲ್ ಮೀಡಿಯಾದಲ್ಲಿ ಅತಿ ಹೆಚ್ಚು ಟ್ರೆಂಡ್ ಆಗಿದ್ದು ಒವೈಸಿ ಇದ್ದ ನಿಯೋಗ. ಈ ನಿಯೋಗದ ನಾಯಕ ಬಿಜೆಪಿ ಸಂಸದ ಬೈಜಯಂತ್ ಪಾಂಡಾ. ನಿಯೋಗದಲ್ಲಿದ್ದ ಇನ್ನಿತರ ಸದಸ್ಯರೆಂದರೆ ನಿಶಿಕಾಂತ್ ದುಬೆ, ಪಂಗ್ನೋನ್ ಕೊನ್ಯಾಕ್, ರೇಖಾ ಶರ್ಮಾ, ಸತ್ನಂ ಸಿಂಗ್ ಸಂಧು, ಗುಲಾಂ ನಬಿ ಆಜಾದ್ ಮತ್ತು ಹರ್ಷವರ್ಧನ್ ಶ್ರಿಂಗ್ಲಾ.

ಇವರ ಪೈಕಿ ಒವೈಸಿಗೆ ಅತಿ ಹೆಚ್ಚು ಮೆಚ್ಚುಗೆ ಪ್ರಾಪ್ತವಾಗಿದೆ. ಭಾರತೀಯರೆಲ್ಲ ಒವೈಸಿಯ ದಿಟ್ಟತನ ವನ್ನು ಹೊಗಳುತ್ತಿದ್ದರೆ, ಅತ್ತ ಪಾಕಿಸ್ತಾನದಲ್ಲಿ ಸಾಕಷ್ಟು ಕಳವಳ ಉಂಟಾಗಿದೆ. ಅದಕ್ಕೆ ಕಾರಣ ಏನೆಂದರೆ, ಒವೈಸಿ ಬಹಳ ನೇರವಾಗಿ ಮಾತನಾಡುತ್ತಿದ್ದಾರೆ. “ಪಾಕಿಸ್ತಾನವು ಇಸ್ಲಾಂ ಬಗ್ಗೆ ಮಾತು ಕೂಡ ಆಡುವ ಯೋಗ್ಯತೆ ಹೊಂದಿಲ್ಲ. ಪಾಕಿಸ್ತಾನದಲ್ಲಿರುವುದಕ್ಕಿಂತ ಹೆಚ್ಚು ಮುಸ್ಲಿಮರು ಭಾರತ ದಲ್ಲಿದ್ದಾರೆ.

ನಿಜವಾದ ಮತ್ತು ಪರಿಶುದ್ಧವಾದ ಇಸ್ಲಾಂ ಅಂದರೆ ಏನು ಎಂಬುದು ಪಾಕಿಸ್ತಾನೀಯರಿಗಿಂತ ಚೆನ್ನಾಗಿ ಭಾರತೀಯರಿಗೆ ಗೊತ್ತಿದೆ" ಎಂದು ಒವೈಸಿ ಹೇಳಿದ್ದಾರೆ. ಪಾಕಿಸ್ತಾನದ ಪ್ರೊಪಗಾಂಡಾಕ್ಕೆ ಭಾರತೀಯರು ಬಲಿಯಾಗುವುದಿಲ್ಲ. ನಮ್ಮ ಪೂರ್ವಜರು 1947ರಲ್ಲೇ ಪಾಕಿಸ್ತಾನವನ್ನು ತಿರಸ್ಕರಿಸಿ ದ್ದಾರೆ ಎಂದೂ ಅವರು ಖಂಡತುಂಡವಾಗಿ ತಿಳಿಸಿದ್ದಾರೆ.

ಪಾಪ, ಪಾಕಿಸ್ತಾನ ಈಗ ಇನ್ನೇನು ತಾನೇ ಮಾಡಲು ಸಾಧ್ಯ? ಭಾರತದಲ್ಲಿರುವ ಉನ್ನತ ಮುಸ್ಲಿಂ ನಾಯಕನೊಬ್ಬ ಪಾಕಿಸ್ತಾನದ ಅಜೆಂಡಾವನ್ನು ಹೀಗೆ ಬೀದಿ ಬೀದಿಯಲ್ಲಿ ಬಯಲು ಮಾಡಿದರೆ ಪಾಕಿಸ್ತಾನ ಏನು ಮಾಡೀತು? ಧರ್ಮವನ್ನು ಭಯೋತ್ಪಾದನೆಗೆ ಬಳಸುವ ಪಾಕ್‌ಗೆ ಇದು ಬಹಳ ದೊಡ್ಡ ಜಾಗತಿಕ ಪ್ರಹಾರ.

ಇತ್ತೀಚೆಗೆ ಕಾಶ್ಮೀರದ ಪಹಲ್ಗಾಮ್‌ನಲ್ಲಿ ಭಯೋತ್ಪಾದಕ ದಾಳಿ ನಡೆಸುವ ವೇಳೆ ಪಾಕಿಸ್ತಾನದ ಭಯೋತ್ಪಾದಕರು ಧರ್ಮವನ್ನು ಕೇಳಿ ಗುಂಡು ಹಾರಿಸಿದ್ದರು. ಭಾರತದಲ್ಲಿ ಕೋಮುಗಲಭೆ ಹುಟ್ಟುಹಾಕುವುದೇ ಅವರ ಉದ್ದೇಶವಾಗಿತ್ತು. ಆದರೆ ಅವರ ಷಡ್ಯಂತ್ರ ವಿಫಲವಾಯಿತು. ಏಕೆಂದರೆ ಭಾರತೀಯರಿಗೆ ಈ ಉಗ್ರರ ಆಟವೇನು ಎಂಬುದು ಅರ್ಥವಾಗಿತ್ತು. ಪಾಕಿಸ್ತಾನಕ್ಕೆ ಇದು ನಿಜಕ್ಕೂ ಶಾಕ್. ಆ ದೇಶಕ್ಕೆ ಮೈಕೈ ಪರಚಿಕೊಳ್ಳುವಂತೆ ಆಗಿರುವುದಕ್ಕೆ ಇನ್ನೊಂದು ಕಾರಣವೇನೆಂದರೆ, ಒವೈಸಿ ಇದೆಲ್ಲವನ್ನೂ ಇಸ್ಲಾಮಿಕ್ ದೇಶಗಳಿಗೇ ಹೋಗಿ ‘ಟಾಂ ಟಾಂ’ ಮಾಡುತ್ತಿದ್ದಾರೆ.

ಈ ದೇಶಗಳೇ ಪಾಕಿಸ್ತಾನಕ್ಕೆ ಒಂದಲ್ಲಾ ಒಂದು ರೀತಿಯಲ್ಲಿ ಆರ್ಥಿಕ ನೆರವು ನೀಡುತ್ತಿದ್ದವು. ಈಗ ಭಾರತೀಯ ನಿಯೋಗದ ಭೇಟಿ ಬಳಿಕ ಇಸ್ಲಾಮಿಕ್ ಜಗತ್ತಿನ ನಾಯಕನಾಗುವ ಪಾಕಿಸ್ತಾನದ ಕನಸು ಭಗ್ನವಾಗಿದೆ. ಸ್ವತಃ ಒವೈಸಿ ಮುಂದೆ ನಿಂತು ಈ ದೇಶಗಳಿಗೆ ವಾಸ್ತವಾಂಶಗಳನ್ನು ಮನವರಿಕೆ ಮಾಡಿ ಕೊಟ್ಟಿದ್ದಾರೆ. ಪಹಲ್ಗಾಮ್ ದಾಳಿಯ ಹೊಣೆ ಹೊತ್ತುಕೊಂಡ ದಿ ರೆಸಿಸ್ಟೆನ್ಸ್ ಫ್ರಂಟ್ (ಟಿಆರ್‌ಎಫ್) ಸಂಘಟನೆಯು ಭಯೋತ್ಪಾದಕ ಸಂಘಟನೆ ಎಂದು 2023ರ ಡಿಸೆಂಬರ್‌ನಲ್ಲೇ ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ಭಾರತ ದೂರು ನೀಡಿತ್ತು.

ಈ ಸಂಘಟನೆ ಭಾರತದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸುವ ಸಾಧ್ಯತೆಯಿದೆ ಎಂದು ಭಾರತ ಹೇಳಿತ್ತು. ಇದನ್ನು ಕೂಡ ಇಸ್ಲಾಮಿಕ್ ದೇಶಗಳಿಗೆ ತಿಳಿಸಿರುವ ಒವೈಸಿ, ಪಾಕಿಸ್ತಾನಕ್ಕೆ ಯಾವುದೇ ದೇಶಗಳು ನೀಡುವ ಆರ್ಥಿಕ ನೆರವನ್ನು ಆ ದೇಶ ಭಾರತದ ವಿರುದ್ಧ ಭಯೋತ್ಪಾದನೆ ನಡೆಸಲು ಬಳಸುತ್ತದೆ ಎಂದು ನೇರಾನೇರವಾಗಿ ಹೇಳಿದ್ದಾರೆ. ಇದು ಅಕ್ಷರಶಃ ನಿಜ. ಕೆಲ ದಿನಗಳ ಹಿಂದೆ ಪಾಕಿಸ್ತಾನಕ್ಕೆ ಐಎಂಎ- ನೀಡಿರುವ ಸಾಲ ಕೂಡ ಭಯೋತ್ಪಾದಕ ಸಂಘಟನೆಗಳಿಗೆ ನೆರವು ನೀಡಲು, ಭಾರತದಲ್ಲಿ ಭಯೋತ್ಪಾದನೆಯನ್ನು ಹೆಚ್ಚಿಸಲು ದುರ್ಬಳಕೆಯಾಗುವ ಸಾಧ್ಯತೆಯಿದೆ.

ಹೀಗಾಗಿ ಫೈನಾನ್ಷಿಯಲ್ ಆಕ್ಷನ್ ಟಾಸ್ಕ್ ಫೋರ್ಸ್‌ನ (ಎಫ್ ಎಟಿಎಫ್) ಗ್ರೇ ಲಿಸ್ಟ್‌ಗೆ ಪಾಕಿಸ್ತಾನ‌ ವನ್ನು ಸೇರಿಸುವುದು ಅತ್ಯವಶ್ಯವಾಗಿದೆ. ಸಹಜವಾಗಿಯೇ ಒವೈಸಿಯವರ ನೇರಾನೇರ ನುಡಿಗಳು ಪಾಕಿಸ್ತಾನದಲ್ಲಿ ಆತಂಕವನ್ನು ಹುಟ್ಟುಹಾಕಿರುತ್ತವೆ. ಅಲ್ಲಿನ ಸೋಷಿಯಲ್ ಮೀಡಿಯಾಗಳು ಒವೈಸಿ ಮೇಲೆ ಯದ್ವಾತದ್ವಾ ದಾಳಿ ನಡೆಸುತ್ತಿವೆ. ಆದರೂ ಒವೈಸಿಯೆಂದರೆ ಒವೈಸಿಯೇ. ಅವರು ಇಂಥ ವಾಗ್ದಾಳಿ ಅಥವಾ ಆಕ್ರೋಶಗಳಿಗೆಲ್ಲ ತಲೆಕೆಡಿಸಿಕೊಳ್ಳುವ ವ್ಯಕ್ತಿಯಲ್ಲ. ಅದರಲ್ಲೂ, ಪಾಕಿಸ್ತಾನದ ನಿಜವಾದ ಬಣ್ಣವನ್ನು ಬಯಲು ಮಾಡುವ ವಿಷಯದಲ್ಲಿ ಇಡೀ ಭಾರತ ಅವರ ಬೆಂಬಲಕ್ಕೆ ನಿಂತಿದೆ!

ಅಂಕಣ ಮುಗಿಸುವ ಮುನ್ನ: ಇತ್ತೀಚೆಗೆ ಇಟಲಿ ಮತ್ತು ಯುಎಇಗೆ ಹೋಗಿದ್ದೆ. ಪ್ರವಾಸದ ವೇಳೆ, ಅಲ್ಲಿ ಕೆಲಸ ಮಾಡುತ್ತಿದ್ದ ಅನೇಕ ಪಾಕಿಸ್ತಾನೀಯರ ಜತೆಗೆ ಮಾತನಾಡುವ ಅವಕಾಶ ಸಿಕ್ಕಿತ್ತು. ಅವರೆಲ್ಲ ಹೇಳಿದ್ದು ಒಂದೇ ಮಾತು: “ಇಲ್ಲಿ ನಾವು ಮತ್ತು ಪಾಕಿಸ್ತಾನೀಯರು ಅಣ್ಣತಮ್ಮಂದಿರಂತೆ ಬದುಕುತ್ತಿದ್ದೇವೆ. ಪಾಕಿಸ್ತಾನ ನಡೆಸುತ್ತಿರುವ ಕುಚೋದ್ಯಗಳಿಗೂ ನಮಗೂ ಯಾವುದೇ ಸಂಬಂಧ ವಿಲ್ಲ.

ಆದರೂ ಅವರ ವ್ಯವಸ್ಥೆಯಲ್ಲಿ ನಾವು ಕೂಡ ಭಾಗಿಯಾಗಿರಬೇಕಾಗಿ ಬಂದಿರುವುದು ನಮ್ಮ ದುರ ದೃಷ್ಟ". ಅವರ ಜತೆಗೆ ಮಾತನಾಡಿದ ಮೇಲೆ ಕೆಲ ಕಾಲ ಸುಮ್ಮನೆ ಕುಳಿತು ಯೋಚಿಸಿದೆ. ಪಾಕಿಸ್ತಾನ ವನ್ನು ಕ್ರಿಮಿಗಳ ಕೈಯಿಂದ ಬಿಡಿಸಲು ಏನು ಮಾಡಬೇಕು? ಎಲ್ಲರೂ ಸೇರಿ ಏನಾದರೂ ಪರಿಹಾರ ಹುಡುಕಲೇಬೇಕಿದೆ.

(ಲೇಖಕರು ಹಿರಿಯ ಪತ್ರಿಕೋದ್ಯಮಿ)