ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Gururaj Gantihole Column: ಒಂದು ಕಣ್ಣಿಗೆ ಬೆಣ್ಣೆ, ಮತ್ತೊಂದಕ್ಕೆ ಎಣ್ಣೆ: ಇದ್ಯಾವ ಸೀಮೆ ನ್ಯಾಯ ?!

‘ಕ್ರೈಸ್’ನಿಂದ ಬೇರ್ಪಟ್ಟು, 2015-16ರಲ್ಲಿ ಅಲ್ಪಸಂಖ್ಯಾತ ವಸತಿಶಾಲೆಗಳಿಗೆ ಪ್ರತ್ಯೇಕ ನಿರ್ದೇಶನಾಲಯ ರಚನೆಯಾಗಿದೆ. ಆದರೆ, ಇದೇ ‘ಕ್ರೈಸ್’ ಅಡಿಯಲ್ಲಿ ದಶಕಗಳಿಂದ ಪಾಠ ಮಾಡುತ್ತಿರುವ ಎಸ್‌ಸಿ, ಎಸ್‌ಟಿ, ಒಬಿಸಿ ಇಲಾಖೆಗಳಿಗೆ ಸೇರಿದ ಉಪನ್ಯಾಸಕರನ್ನು ಮಾತ್ರ ಇನ್ನಿಲ್ಲ ದಂತೆ ಕಡೆಗಣಿಸಲಾಗುತ್ತಿದೆ. ‘ಶಿಕ್ಷಣ ದಲ್ಲಿ ಭೇದಭಾವ ತೋರಬಾರದು ಎಂಬುದನ್ನು ನಮ್ಮ ಸಂವಿಧಾನವೇ ಹೇಳಿದೆ’ ಎಂದು ನಮಗೇ ತಿಳಿಸಿ ಹೇಳುವಂಥ ಶಿಕ್ಷಕರಿಗೇ ಭೇದಭಾವ ಮಾಡುವುದು ಸರಿಯೇ?

ಒಂದು ಕಣ್ಣಿಗೆ ಬೆಣ್ಣೆ, ಮತ್ತೊಂದಕ್ಕೆ ಎಣ್ಣೆ: ಇದ್ಯಾವ ಸೀಮೆ ನ್ಯಾಯ ?!

ಗಂಟಾಘೋಷ

ರಾಜೇಶ ಮತ್ತು ರಮೇಶ ಇಬ್ಬರೂ ಅಣ್ಣ-ತಮ್ಮಂದಿರು ಇರುತ್ತಾರೆ. ಇಬ್ಬರೂ ಒಂದೇ ವಿದ್ಯಾರ್ಹತೆ ಹೊಂದಿದ್ದು, ಸರಕಾರಿ ಇಲಾಖೆ ಅಡಿಯಲ್ಲಿ ನೌಕರಿಗೆ ಸೇರುತ್ತಾರೆ. ರಾಜೇಶ ಅಲ್ಪಸಂಖ್ಯಾತ ಇಲಾಖೆಯ ವಸತಿಶಾಲೆಗೆ ಸೇರಿದರೆ, ರಮೇಶ ಎಸ್‌ಸಿ, ಎಸ್‌ಟಿ, ಒಬಿಸಿ ಇಲಾಖೆಗಳ ಅಡಿಯಲ್ಲಿರುವ ‘ಕ್ರೈಸ್’ ಮೂಲಕ, ವಸತಿ ಶಾಲೆಗೆ ಉಪನ್ಯಾಸಕರಾಗಿ ಸೇರಿಕೊಳ್ಳುತ್ತಾರೆ. ಅಲ್ಪಸಂಖ್ಯಾತ ಇಲಾಖೆಗೆ ಸೇರಿದ ರಾಜೇಶನಿಗೆ ಎಲ್ಲಾ ಸೌಲಭ್ಯಗಳು ಸಿಗುತ್ತಿವೆ. ಅದೇ ವಿದ್ಯಾ ರ್ಹತೆಯ ಮೇಲೆ ಇನ್ನೊಂದು ಕೆಲಸಕ್ಕೆ ಸೇರಿದ ರಮೇಶನಿಗೆ ಮಾತ್ರ ಸಮಾನ ವೇತನ, ಸಮಾನ ಸೌಲಭ್ಯ, ಸಮಾನ ಗೌರವ ನೀಡದೇ ಸಂವಿಧಾನಬದ್ಧ ಸರಕಾರದಿಂದಲೇ ತಾರತಮ್ಯವಾಗುತ್ತಿದೆ!

ರಾಜೇಶನು ಸರಕಾರದ ಎಲ್ಲ ಸೌಲಭ್ಯಗಳೊಂದಿಗೆ ಭದ್ರತೆಯ ಜೀವನ ನಡೆಸುತ್ತಿದ್ದರೆ, ರಮೇಶ ಮಾತ್ರ ತನಗೆ ನೀಡಬೇಕಾದ ಸಂವಿಧಾನಬದ್ಧ ಹಕ್ಕಿಗಾಗಿ ಬೀದಿಗಿಳಿದು ಹೋರಾಟ ಮಾಡಿ, ದಯನೀಯ ಸ್ಥಿತಿಯಲ್ಲಿ ಬೇಡಬೇಕಾದ ಪರಿಸ್ಥಿತಿಯಲ್ಲಿದ್ದಾನೆ. ಆಡಳಿತದ ಚುಕ್ಕಾಣಿ ಹಿಡಿದವರು, ರಾಗ-ದ್ವೇಷ, ಜಾತಿ, ಭಾಷೆ, ಧರ್ಮದ ಆಧಾರದ ಮೇಲೆ ಯಾವುದೇ ರೀತಿಯ ತಾರತಮ್ಯ ಮಾಡದೆ, ಎಲ್ಲರನ್ನೂ ಸಮಾನವಾಗಿ ಕಾಣುತ್ತೇವೆಂದು ಪ್ರತಿಜ್ಞಾವಿಧಿ ಸ್ವೀಕರಿಸಿಯೂ, ಮುಂದಿನ ಸತ್ಪ್ರಜೆ ಗಳನ್ನು ತಯಾರು ಮಾಡುವ ಶಿಕ್ಷಕರ ಜತೆಗೆ ಹೀಗೆ ನಡೆದುಕೊಳ್ಳುತ್ತಿದ್ದರೆ, ಇನ್ನುಳಿದ, ಬೆಳಕಿಗೆ ಬರದ ಅದೆಷ್ಟು ಪ್ರಾಯೋಜಿತ ದಮನ ಕಾರ್ಯಗಳು ನಡೆಯುತ್ತಿರಬಹುದು? ಎಂದು ಜನಸಾಮಾನ್ಯ ನೊಂದು ಪ್ರಶ್ನಿಸುತ್ತಿದ್ದಾನೆ.

ಇದನ್ನೂ ಓದಿ: Gururaj Gantihole Column: ಬಾಂಗ್ಲಾದೇಶದ ಹಿಂದೂಗಳ ರಕ್ಷಣೆಗೆ ಘೋಷ್‌ ಶಂಖನಾದ

“ನಾವೆಲ್ಲರೂ ಸಮಾನರು, ಸಮಾನ ಹಕ್ಕು ಉಳ್ಳವರು. ಅದು ಧಾರ್ಮಿಕ ಆಚರಣೆ ಇರಲಿ, ವಾಕ್ ಸ್ವಾತಂತ್ರ್ಯವಿರಲಿ ಅಥವಾ ಶಿಕ್ಷಣ ಪಡೆಯುವುದಿರಲಿ" ಎಂದು ಓದಿಯೇ ಇರುತ್ತೇವೆ, ಎದರೂ ಕೇಳಿಯೇ ಇರುತ್ತೇವೆ. ಇಂಥ ಒಂದು ಅಪರೂಪದ, ಅನುರೂಪದ ವ್ಯವಸ್ಥೆ ಹೊಂದಿರುವ ದೇಶ ದಲ್ಲಿ ಸಂವಿಧಾನ ಎಲ್ಲವನ್ನೂ ಸರಿಯಾಗಿಯೇ ಕೊಟ್ಟಿದೆ. ಆದರೆ, ಕೆಲ ಆಂತರಿಕ ನ್ಯೂನತೆ ಗಳನ್ನು ಬಳಸಿಕೊಂಡು, ಅವುಗಳನ್ನೇ ಮುಖ್ಯ ಪಟ್ಟುಗಳಂತೆ ಬಳಸುತ್ತ, ಮತ ಓಲೈಕೆಯ ರಾಜಕೀಯ ಲಾಭಕ್ಕಾಗಿ ನೀತಿ ನಿಯಮಗಳನ್ನು ರೂಪಿಸುವುದು ಇದೆಯಲ್ಲಾ, ಅದು ನಮ್ಮ ಸಮಗ್ರ ಜನಾಂಗ ವನ್ನು ಗಮನದಲ್ಲಿಟ್ಟುಕೊಂಡು ಸಂವಿಧಾನ, ಕಾನೂನು ಕಟ್ಟಳೆಗಳನ್ನು ರೂಪಿಸಿದ ನಮ್ಮ ಹಿರಿಯರಿಗೆ ಮಾಡುವ ಅವಮಾನವೆಂದೇ ನಾವು ತಿಳಿಯಬೇಕಾಗಿದೆ.

ಅಂಬೇಡ್ಕರ್ ಅಂದೇ ಹೇಳಿದ್ದರು- “ಮೊದಲು ಶಿಕ್ಷಣವಂತರಾಗಿ. ಶಿಕ್ಷಣವೇ ನಮ್ಮನ್ನು ಮೇಲೆತ್ತ ಬಲ್ಲದು" ಎಂದು. ಅದರಂತೆ ಇಂದು ದೇಶದಲ್ಲಿ 15 ಲಕ್ಷಕ್ಕೂ ಅಧಿಕ ಶಾಲೆಗಳಿದ್ದು, 25 ಕೋಟಿಗೂ ಅಧಿಕ ಮಕ್ಕಳಿಗೆ ಶಿಕ್ಷಣ ನೀಡುವಲ್ಲಿ ಅವು ನಿರತವಾಗಿವೆ. ಹೆಚ್ಚುಕಡಿಮೆ ಒಂದುಕಾಲು ಕೋಟಿ ಯಷ್ಟು ಶಿಕ್ಷಕರಿದ್ದಾರೆಂದೂ, ಇವರಲ್ಲಿ ಶೇ.68ರಷ್ಟು ಸರಕಾರಿ ಮತ್ತು ಶೇ.23ರಷ್ಟು ಖಾಸಗಿ ಶಾಲಾ ಶಿಕ್ಷಕರು ಇದ್ದಾರೆಂದೂ ಅಂದಾಜಿಸಲಾಗಿದೆ.

ಇನ್ನು ಕರ್ನಾಟಕದಲ್ಲಿ, 77 ಸಾವಿರಕ್ಕೂ ಹೆಚ್ಚು ಶಾಲೆಗಳಲ್ಲಿ, 50 ಸಾವಿರದಷ್ಟು ಸರಕಾರಿ ಶಾಲೆಗಳು, 7 ಸಾವಿರದಷ್ಟು ಅನುದಾನಿತ ಶಾಲೆಗಳಿದ್ದರೆ, 20 ಸಾವಿರದಷ್ಟು ಅನುದಾನರಹಿತ ಖಾಸಗಿ ಶಾಲೆ ಗಳಿವೆ ಎಂದು ಅಂದಾಜಿಸಲಾಗಿದೆ. ಹಾಗೆಯೇ, 5 ಸಾವಿರಕ್ಕೂ ಹೆಚ್ಚು ಸರಕಾರಿ ಪ್ರೌಢಶಾಲೆಗಳಿವೆ ಎಂದು ಅಂಕಿ-ಅಂಶಗಳು ಹೇಳುತ್ತವೆ.

ವಾಸ್ತವ ಹೀಗಿರಲು, 1994ರಲ್ಲಿ ಮುಖ್ಯಮಂತ್ರಿಗಳಾಗಿದ್ದ ಎಚ್ .ಡಿ.ದೇವೇಗೌಡರ ನೇತೃತ್ವದ ಕರ್ನಾಟಕ ಸರಕಾರವು ರಾಜ್ಯದಲ್ಲಿ ವಿವಿಧ ಉದ್ದೇಶಗಳನ್ನಿಟ್ಟುಕೊಂಡು ವಸತಿಶಾಲೆಗಳನ್ನು ಪ್ರಾರಂಭಿಸಲು ಸಂಪುಟ ಸಭೆಯಲ್ಲಿ ನಿರ್ಧರಿಸಿ ಅದಕ್ಕಾಗಿ ಕಾರ್ಯಪ್ರವೃತ್ತವಾಯಿತು. ಮುಂದೆ, 1996ರಲ್ಲಿ ಮುಖ್ಯಮಂತ್ರಿಗಳಾಗಿದ್ದ ಜೆ.ಎಚ್.ಪಟೇಲ್ ಅವರ ಸರಕಾರದಿಂದ ಹೆಚ್ಚಿನ ರೀತಿಯಲ್ಲಿ ಅದು ಅನುಷ್ಠಾನಗೊಂಡಿತು.

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳ ಜತೆಗೆ ಅಲ್ಪಸಂಖ್ಯಾತರನ್ನೂ ಒಳ ಗೊಂಡಂತೆ ಈ ಯೋಜನೆಯನ್ನು ರಾಜ್ಯಾದ್ಯಂತ ಜಾರಿಗೆ ತರಲಾಯಿತು. ಇದಕ್ಕಾಗಿ, ಎಲ್ಲ ಸರಕಾರಿ ಶಾಲೆಗಳಲ್ಲಿ ಉಪನ್ಯಾಸಕರನ್ನು ಆಯ್ಕೆ ಮಾಡುವಾಗ ಅನುಸರಿಸುವ ಮಾನದಂಡಗಳನ್ನು, ವಿದ್ಯಾರ್ಹತೆಗಳನ್ನೂ ಅನ್ವಯಿಸಿ, ಈ ಎಲ್ಲ ವಸತಿಶಾಲೆಗಳಿಗೆ ಶಿಕ್ಷಕ ವರ್ಗವನ್ನು ಆಯ್ಕೆಗೊಳಿಸ ಲಾಯಿತು.

ಇದಕ್ಕಾಗಿ, ಹಿಂದುಳಿದ ವರ್ಗಗಳ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸೇರಿದಂತೆ ಸಂಬಂಧಿತ ಇಲಾಖೆಗಳ ಮೂಲಕ ನಿಗದಿತವಾಗಿ ವಾರ್ಷಿಕ ನುದಾನ ಕೊಡುತ್ತ ಬರಲಾಗುತ್ತಿದೆ. ಸಮಾಜ ಕಲ್ಯಾಣ ಇಲಾಖೆಯ ಅಡಿಯಲ್ಲಿ KREIS (ಕ್ರೈಸ್) ಎಂಬ ಒಂದು ಸೊಸೈಟಿ (ಸಂಸ್ಥೆ)ಯನ್ನು ಸೃಷ್ಟಿಸಲಾಗಿದ್ದು, ಇದರ ಅಡಿಯಲ್ಲಿ ರಾಜ್ಯದ ಸುಮಾರು 820ಕ್ಕೂ ಹೆಚ್ಚು ವಸತಿ ಶಾಲೆಗಳು ಕಾರ್ಯನಿರ್ವಹಿಸುತ್ತಿವೆ. ಎಸ್‌ಸಿ, ಎಸ್‌ಟಿ, ಒಬಿಸಿ ಈ ಮೂರು ಇಲಾಖೆಗಳ ಅನುದಾನವು ಈ ‘ಕ್ರೈಸ್’ ಸಂಸ್ಥೆಗೆ ಬರುತ್ತಿದೆ.

ವಸತಿ ಶಾಲೆಗಳ ಕಟ್ಟಡ ನಿರ್ಮಾಣವಿರಬಹುದು, ಸಿಬ್ಬಂದಿಗಳ ನೇಮಕಾತಿ ಮತ್ತು ಅವರ ಸಂಬಳ, ಭತ್ಯೆಯಂಥ ಇತರೆ ಎಲ್ಲ ಖರ್ಚುಗಳಿರಬಹುದು ಅವೆಲ್ಲವನ್ನೂ ಇಂದಿಗೂ ಈ ಕ್ರೈಸ್ ಸಂಸ್ಥೆಯೇ ನೋಡಿಕೊಳ್ಳುತ್ತಿದೆ. 2011-12ರ ಸಾಲಿನಲ್ಲಿ CR ಎಂಬ ಯೋಜನೆ ರೂಪಿಸಿ, ಇದರ ಅಡಿಯಲ್ಲಿ ಪ್ರಸ್ತುತ ಪಾಠ ಮಾಡುತ್ತಿರುವ ಉಪನ್ಯಾಸಕರನ್ನು ಅದು ನೇಮಿಸಿಕೊಳ್ಳುತ್ತಿದೆ.

ಹೈಸ್ಕೂಲ್ ಶಿಕ್ಷಕರಿಗೆ ಇರುವಂತೆ ಎಲ್ಲ ಅರ್ಹತೆ, ಮಾನದಂಡಗಳ ಆಧಾರದ ಮೇಲೆ ಈ ವಸತಿ ಶಾಲೆಗಳಿಗೆ ಉಪನ್ಯಾಸಕರನ್ನು CET ಮೂಲಕವೇ ಆಯ್ಕೆಗೊಳಿಸಿದರೂ, ಸರಕಾರದ ಅಡಿಯಲ್ಲಿ ಕಾರ್ಯನಿರ್ವಹಿಸುವ ವಸತಿ ಶಾಲೆಗಳ ಮಕ್ಕಳಿಗೆ ಇವರು ಪಾಠ ಮಾಡುತ್ತಿದ್ದರೂ, ಇವರು ಸರಕಾರಿ ನೌಕರರಲ್ಲ!

ಹೌದು, ಹೈಸ್ಕೂಲ್ ಶಿಕ್ಷಕರಿಗೆ ಕೊಡುವಷ್ಟು ಸಂಬಳವನ್ನು ಕೊಡಲಾಗುತ್ತಿದೆ ಎಂಬುದನ್ನು ಹೊರತುಪಡಿಸಿ ಇನ್ನುಳಿದಂತೆ, ಜೀವನ ಭದ್ರತೆಗೆ ಯಾವುದೇ ನಿಶ್ಚಿತ ಯೋಜನೆಗಳಿಗೆ ಇವರನ್ನು ಪರಿಗಣಿಸಿಲ್ಲ. ಸರಕಾರಿ ಶಿಕ್ಷಕರಿಗೆ ಇರುವಂಥ ಆರೋಗ್ಯವಿಮೆಗಳು, ಆಕಸ್ಮಾತ್ ದುರ್ಮರಣ ಕ್ಕೀಡಾದರೆ ಯಾವುದೇ ರೀತಿಯ ಸೌಲಭ್ಯ, ಅನುಕಂಪ ಸಂಬಂಧಿತ ಸೌಲಭ್ಯಗಳಿಗೆ ಇವರ ಕುಟುಂಬ ಗಳನ್ನು ಪರಿಗಣಿಸಿಲ್ಲ. ಸಂಜೆ ಮೇಲೆ ಹೆಚ್ಚಿನ ಕೆಲಸ ಮಾಡಿದ್ದಕ್ಕೆ ಹೌಸ್ ಮಾಸ್ಟರ್ ಅಲೊವೆ ಎಂದು ಸರಕಾರಿ ಹೈಸ್ಕೂಲ್ ಶಿಕ್ಷಕರಿಗೆ ಕೊಡುತ್ತಾರೆ.

ಆದರೆ, ವಸತಿಶಾಲಾ ಶಿಕ್ಷಕರಿಗೆ ಇಲ್ಲ. ‘ಜ್ಯೋತಿ ಸಂಜೀವಿನಿ’ ಎಂಬ ಆರೋಗ್ಯ ಸೌಲಭ್ಯಕ್ಕೆ ತಮ್ಮನ್ನೂ ಪರಿಗಣಿಸಬೇಕೆಂಬುದು ಈ ವಸತಿಶಾಲಾ ಶಿಕ್ಷಕರ ಆಗ್ರಹವಾಗಿದೆ. ಈ ಹಿಂದೆ, ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳಿಗೆ, ಸಂಬಂಧಿತ ಸಚಿವರಿಗೆ ಹತ್ತಾರು ಬಾರಿ ಮನವಿ ಮಾಡಿದ್ದರೂ, ಯಾವೊಂದು ನಿರೀಕ್ಷಿತ ಫಲ ದೊರೆಯದಿರುವುದರಿಂದ, ಕರ್ನಾಟಕ ರಾಜ್ಯ ವಸತಿ ಶಿಕ್ಷಣ ಸಂಸ್ಥೆಗಳ ನೌಕರರ ಸಂಘವು ವಿವಿಧ ಹಂತಗಳಲ್ಲಿ ಸಂವಿಧಾನಾತ್ಮಕ ಹಕ್ಕುಗಳ ಬೇಡಿಕೆಗೆ ಆಗ್ರಹಿಸಿ ಸತ್ಯಾಗ್ರಹಕ್ಕೆ ಕರೆ ಕೊಟ್ಟಿದೆ.

ಕಾಯಂ ನೌಕರರಿಗೆ ನೀಡುವ ಜ್ಯೋತಿ ಸಂಜೀವಿನಿ ಸೌಲಭ್ಯವನ್ನು ಅನುಷ್ಠಾನಗೊಳಿಸುವುದು, ಮರಣ ಮತ್ತು ನಿವೃತ್ತಿ ಉಪದಾನ ಸೌಲಭ್ಯ ಒದಗಿಸುವುದು, ಕಾಯಂ ನೌಕರರಿಗೆ ಶೇ.10ರಷ್ಟು ವಿಶೇಷ ಭತ್ಯೆ ನೀಡುವುದು, ಮನೆಬಾಡಿಗೆ ಭತ್ಯೆ ನೀಡುವುದು ಸೇರಿದಂತೆ ತಮ್ಮ ಮೂಲಭೂತ ಬೇಡಿಕೆಗಳ ಈಡೇರಿಕೆಗೆ ಅದು ಆಗ್ರಹಿಸಿದೆ. ಶಾಲಾ ಕರ್ತವ್ಯದಲ್ಲಿ ಕಪ್ಪುಪಟ್ಟಿ ಧರಿಸಿ ಕಾರ್ಯ ನಿರ್ವಹಿಸಲು ನಿರ್ಧಾರ, ಒಂದು ದಿನದ ತರಗತಿ ಬಹಿಷ್ಕಾರ ಮಾಡುವುದು, ಪಾದಯಾತ್ರೆ ಮೂಲಕ ಜಿಽಕಾರಿಗೆ ಮನವಿ, ಜಿಲ್ಲಾಧಿಕಾರಿಗಳ ಕಚೇರಿ ಮತ್ತು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಧರಣಿ ಸತ್ಯಾಗ್ರಹ ಸೇರಿದಂತೆ ತನ್ನ ಆಗ್ರಹವನ್ನು ಸರಕಾರದ ಮುಂದಿಡುವ ಪ್ರಯತ್ನವನ್ನು ಅದು ಮಾಡುತ್ತಿದೆ.

ಇಷ್ಟೆಲ್ಲದರ ನಡುವೆ ಸೋಜಿಗವೆನಿಸುವ ವ್ಯವಸ್ಥೆಯೊಂದು ಇದರಲ್ಲಿ ನಡೆಯುತ್ತಿದೆ ಎಂದು ನಮಗನಿಸಿತು. ಈ ಹಿಂದೆ ಅಲ್ಪಸಂಖ್ಯಾತರನ್ನೂ ಒಳಗೊಂಡು ಈ ವಸತಿ ಶಾಲೆ ಯೋಜನೆಯನ್ನು ‘ಕ್ರೈಸ್’ ಸಂಸ್ಥೆ ನಿರ್ವಹಿಸುತ್ತಿತ್ತು. ಕಾಂಗ್ರೆಸ್ ಸರಕಾರದಲ್ಲಿ ಮುಮ್ತಾಜ್ ಅಲಿಖಾನ್ ಎಂಬುವವರು ಹಜ್, ವಕ್ ಮತ್ತು ಅಲ್ಪಸಂಖ್ಯಾತ ಇಲಾಖೆಯ ಸಚಿವರಾಗಿದ್ದ ಸಂದರ್ಭದಲ್ಲಿ, ಈ ಇಲಾಖೆ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪ್ರಮುಖ ಅಧಿಕಾರಿಯೊಬ್ಬರು ವಿಶೇಷ ಆಸ್ಥೆ ವಹಿಸುವ ಮೂಲಕ, ಅಲ್ಪಸಂಖ್ಯಾತ ಉಪನ್ಯಾಸಕರ ಬೇಡಿಕೆಗಳನ್ನು ತುರ್ತಾಗಿ ಗಮನಕ್ಕೆ ತೆಗೆದುಕೊಂಡು, “ನಮ್ಮ ಇಲಾಖೆ ಮುಖಾಂತರ ಕ್ರೈಸ್ ಸಂಸ್ಥೆಗೆ ಅನುದಾನ ಕೊಟ್ಟು ನಡೆಸಲಾಗುತ್ತಿದೆ.

ಇನ್ನುಮುಂದೆ ಅಲ್ಪಸಂಖ್ಯಾತರ ವಸತಿ ಶಾಲೆಗಳನ್ನು ನಮ್ಮ ಇಲಾಖೆಯ ಮುಖಾಂತರ ನಾವೇ ನೇರವಾಗಿ ನಡೆಸೋಣ" ಎಂದು 2015-16ರಲ್ಲಿ ಕ್ರೈಸ್‌ನಿಂದ ಅಲ್ಪಸಂಖ್ಯಾತ ವಸತಿಶಾಲೆಗಳನ್ನು ಬೇರ್ಪಡಿಸಿ, ಇದಕ್ಕಾಗಿ ಒಂದು ಪ್ರತ್ಯೇಕ ನಿರ್ದೇಶನಾಲಯ (Directorate) ರಚಿಸುತ್ತಾರೆ.

ಈ ಮೂಲಕ, ಅಲ್ಪಸಂಖ್ಯಾತರ ವಸತಿ ಶಾಲೆಗಳಲ್ಲಿ ಪಾಠ ಮಾಡುವ ಎಲ್ಲ ಉಪನ್ಯಾಸಕರಿಗೆ ಪ್ರಸ್ತುತ, ಸರಕಾರಿ ಶಿಕ್ಷಕರಿಗೆ ಕೊಡ ಮಾಡುವ ವಿಮೆ, ಭತ್ಯೆ ಸೇರಿದಂತೆ ಎಲ್ಲ ರೀತಿಯ ಸೌಲಭ್ಯ ಗಳನ್ನು ಕೊಡಲಾಗುತ್ತಿದೆ. ಇದೇ ಅರ್ಹತೆಯ ಮೇಲೆ ದಶಕಗಳಿಂದ ಪಾಠ ಮಾಡುತ್ತಿರುವ ಎಸ್‌ಸಿ, ಎಸ್‌ಟಿ, ಒಬಿಸಿ ಇಲಾಖೆಗಳಿಗೆ ಸಂಬಂಽಸಿದ ಉಪನ್ಯಾಸಕರನ್ನು ಮಾತ್ರ ಇನ್ನಿಲ್ಲದಂತೆ ಕಡೆಗಣಿಸ ಲಾಗುತ್ತಿದೆ.

ಸಮಾನತೆಯ ಪಾಠ ಮಾಡುವ, ನಾವೆಲ್ಲರೂ ಭಾರತೀಯರು, ಯಾವ ಜಾತಿ, ಮತ, ಧರ್ಮಗಳ ಭೇದಭಾವ ತೋರದೆ ಈ ದೇಶದ ಮಕ್ಕಳು ಎಂದು ಪಾಠ ಹೇಳಿಕೊಡುತ್ತಿರಬೇಕಾದರೆ, ಸ್ವತಃ ಶಿಕ್ಷಕರೇ ಈ ಸಮಸ್ಯೆಗಳನ್ನು ಅನುಭವಿಸುತ್ತಿರುವ ಸಂದರ್ಭದಲ್ಲಿ ಅವರ ಆತ್ಮಸಾಕ್ಷಿ ಏನೆಂದು ಪ್ರಶ್ನಿಸುತ್ತಿರ ಬಹುದು?! ಎಲ್ಲರ ಅಭಿವೃದ್ಧಿಯೇ ನಮ್ಮ ಬದ್ಧತೆ ಎನ್ನುತ್ತ ಅಕ್ಷರಸ್ಥರನ್ನೇ ಮೌನವಾಗಿ ದಮನಿಸು ತ್ತಿರುವುದು ಯಾವ ನ್ಯಾಯವೆಂದು ಮತ್ತು ಸಾಮಾಜಿಕ ನ್ಯಾಯದಡಿ ಆಡಳಿತ ನಡೆಸುತ್ತಿದ್ದೇವೆಂದು ಹೇಳುವ ಸರಕಾರಕ್ಕೆ ತಿಳಿಸಿ ಹೇಳುವುದಾದರೂ ಹೇಗೆಂದು ಶಿಕ್ಷಕವೃಂದ ಕೇಳುತ್ತಿದೆ.

ಕ್ರೈಸ್ ಅಡಿಯಲ್ಲಿ ಮೊರಾರ್ಜಿ ದೇಸಾಯಿ ವಸತಿಶಾಲೆ, ಕಿತ್ತೂರು ರಾಣಿ ಚೆನ್ನಮ್ಮ ವಸತಿಶಾಲೆ, ಏಕಲವ್ಯ ಮಾದರಿ ವಸತಿ ಶಾಲೆ, ಅಟಲ್ ಬಿಹಾರಿ ವಾಜಪೇಯಿ ವಸತಿಶಾಲೆ, ಇಂದಿರಾಗಾಂಧಿ ವಸತಿ ಶಾಲೆ, ಡಾ. ಬಿ.ಆರ್.ಅಂಬೇಡ್ಕರ್ ವಸತಿಶಾಲೆ, ಮಾಸ್ತಿ ವೆಂಕಟೇಶ ಅಯ್ಯಂಗಾರ್ ವಸತಿಶಾಲೆ, ಸಂಗೊಳ್ಳಿ ರಾಯಣ್ಣ ವಸತಿಶಾಲೆ, ಕವಿರನ್ನ ವಸತಿಶಾಲೆ, ಗಾಂಧಿತತ್ವ ವಸತಿಶಾಲೆ, ಶ್ರೀನಾರಾಯಣ ಗುರು ವಸತಿಶಾಲೆ ಸೇರಿದಂತೆ ಇನ್ನೂ ಅನೇಕ ಶಾಲೆಗಳು ರಾಜ್ಯಾದ್ಯಂತ ಕಾರ್ಯನಿರ್ವಹಿಸುತ್ತಿವೆ.

ಇದಕ್ಕೆ ಸಂಬಂಧಿಸಿದ ಉಪನ್ಯಾಸಕರು ತಮ್ಮ ಅಗತ್ಯ ಸೌಲಭ್ಯಗಳಿಗಾಗಿ ಕಳೆದ 13 ವರ್ಷಗಳಿಂದ ಸತತ ಬೇಡಿಕೆ ಇಡುತ್ತಲೇ ಬಂದಿದ್ದಾರೆ. ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ಹೋರಾಟ ಕೈಗೊಂಡಿದ್ದನ್ನು ಮಂತ್ರಿಯೊಬ್ಬರ ಆಶ್ವಾಸನೆ ಬಳಿಕ ನಿಲ್ಲಿಸಿ, ಇನ್ನಾದರೂ ತಮ್ಮ ಬೇಡಿಕೆ ಈಡೇರಿ ತೆಂದು ಸಮಾಧಾನಗೊಂಡಿದ್ದ ಮನಸುಗಳು ಇಂದಿಗೂ ಅತೃಪ್ತತೆಯಲ್ಲಿ, ಅಭದ್ರತೆಯಲ್ಲಿ ಬದುಕು ತ್ತಿವೆ, ನಾಡಿನ ಮಕ್ಕಳಿಗೆ ಮುಂದಿನ ಭವಿಷ್ಯತ್ತನ್ನು ಕಟ್ಟಿಕೊಡಲು ಪಾಠ ಮಾಡುತ್ತಲೇ ಇವೆ. ಇವರ ಗೋಳು ಮಾತ್ರ ಆಡಳಿತಾರೂಢರಿಗೆ ಕೇಳಿಸುತ್ತಲೇ ಇಲ್ಲ!

ಇಂದಿಗೆ, ಸರಕಾರದ ಇಲಾಖೆಯ ದಾಖಲೆಗಳೇ ಹೇಳುವಂತೆ, 95 ಮೊರಾರ್ಜಿ ದೇಸಾಯಿ ವಸತಿ ಶಾಲೆಗಳು, 6 ಸರಕಾರಿ ಮುಸ್ಲಿಂ ವಸತಿಶಾಲೆಗಳು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿ ಕಾರ್ಯ ನಿರ್ವಹಿಸುತ್ತಿವೆ. ಉತ್ತಮ ಗುಣಮಟ್ಟದ ಶಿಕ್ಷಣ, ಊಟ, ಉಪಾಹಾರ, ವಸತಿನಿಲಯ, ಆರೋಗ್ಯ ಸೌಲಭ್ಯ, ಟ್ರಂಕ್, ಆಟದ ಸಾಮಗ್ರಿಗಳ ಜತೆಗೆ ಓದುವಿಕೆಗೆ ಅಗತ್ಯವಿರುವ ಲೇಖನ ಸಾಮಗ್ರಿಗಳು, ಪುಸ್ತಕಗಳನ್ನು ಉಚಿತವಾಗಿ ನೀಡಲಾಗುತ್ತಿದೆ.

ಜತೆಗೆ, ಪ್ರತಿ ವಿದ್ಯಾರ್ಥಿಗೆ ಪ್ರತಿ ತಿಂಗಳಿಗೆ 1600 ರು.ಗಳ ವೆಚ್ಚದಲ್ಲಿ ಆಹಾರ ನೀಡಲಾಗುತ್ತಿದೆ. ಉಚಿತ ವಸತಿಯೊಂದಿಗೆ, ಎರಡು ಜೊತೆ ಸಮವಸ, ಬೂಟು, ಕಾಲುಚೀಲ ಸಹ ಕೊಡಲಾಗುತ್ತಿದೆ. ಪ್ರತಿ ಬಾಲಕರಿಗೆ ಎರಡು ತಿಂಗಳಿಗೊಮ್ಮೆ 60 ರು.ಗಳನ್ನು ಕ್ಷೌರವೆಚ್ಚವಾಗಿ ನೀಡಲಾಗುತ್ತಿದೆ. ಟೂಥ್ ಪೇ, ಸೋಪ್, ಬ್ರಷ್, ತಲೆ ಎಣ್ಣೆಯ ಜತೆಗೆ, ವೈದ್ಯಕೀಯ ಸೌಲಭ್ಯ, ಹಾಸಿಗೆ-ಹೊದಿಕೆ, ಮಂಚ, ಪ್ರಯೋಗ ಶಾಲೆಯ ಉಪಕರಣ, ಬೋಧನಾ ಸಲಕರಣೆ, ಗ್ರಂಥಾಲಯ ಸೌಲಭ್ಯಗಳನ್ನೂ ಅಲ್ಪಸಂಖ್ಯಾತ ವಸತಿಶಾಲೆಗಳಲ್ಲಿ ನಿಯತವಾಗಿ ನೀಡುತ್ತ ಬರಲಾಗುತ್ತಿದೆ.

ಶಿಕ್ಷಣದಲ್ಲಿ ಭೇದಭಾವ ತೋರಬಾರದು ಎಂಬುದನ್ನು ನಮ್ಮ ಸಂವಿಧಾನವೇ ಹೇಳಿದೆ’ ಎಂದು ನಮಗೇ ತಿಳಿಸಿ ಹೇಳುವಂಥ ಶಿಕ್ಷಕರಿಗೇ ಭೇದಭಾವ ಮಾಡುವುದು ಸರಿಯೇ?