Vishweshwar Bhat Column: ಒಂದೇ ವರ್ಷದಲ್ಲಿ ನಮ್ಮ ಬದುಕನ್ನು ಬದಲಿಸಿಕೊಳ್ಳಬಹುದೇ ? ಅದು ಹೇಗೆ ?
ಕಾವ್ಯದ ಬಗ್ಗೆ ನನ್ನಲ್ಲಿ ಯಾವ ಹೊಸ ಥಿಯರಿ-ಪ್ರಮೇಯವೂ ಇಲ್ಲ. ಇಂಥ ಕಾವ್ಯವೇ ಸರಿ, ಇಂಥದು ತಪ್ಪು ಎಂದು ನಾನು ಹೇಳಲಾರೆ. ನಾನು ಹೇಳಿ ಕೇಳಿ ಮಾಸ್ತರ. ಮಾಸ್ತರ ಆದವನು ಇದು ಹೀಗೆ, ಇದು ಹಾಗೆ ಎಂದು ವಿವರಿಸುತ್ತಾನೆಯೇ ಹೊರತು ಇದು ಮೇಲು, ಇದು ಕೀಳು ಎಂದು ತೂಗಲು ಹೊರಡುವು ದಿಲ್ಲ. ನವ್ಯಕಾವ್ಯದ ಬಗ್ಗೆ ನನ್ನ ದೃಷ್ಟಿಯೂ ಇದೇ. ಯಾವ ಕಾವ್ಯವೇ ಆಗಲಿ, ಕಾವ್ಯವಾಗಿದ್ದರೆ ಸರಿ ಎನ್ನುತ್ತೇನೆ.


ಇದೇ ಅಂತರಂಗ ಸುದ್ದಿ
vbhat@me.com
ಇದು ಸುಮಾರು ಎರಡು ವರ್ಷದ ಹಿಂದಿನ ಮಾತು. ರಿಚರ್ಡ್ ಬ್ರಾನ್ಸನ್ ಅದ್ಯಾವ ಮೂಡಿ ನಲ್ಲಿದ್ದರೋ ಏನೋ? ಟ್ವಿಟರಿನಲ್ಲಿ ಅವರಿಗೊಂದು ಮೆಸೇಜ್ ಮಾಡಿದ್ದೆ (ಟ್ವೀಟ್ ಅಲ್ಲ). ಹತ್ತು ನಿಮಿಷಗಳಲ್ಲಿ ವಾಪಸ್ ಮೆಸೇಜ್ ಮಾಡಿದರು, ನನಗೆ ಅಚ್ಚರಿಯಾಯಿತು. ‘ನಮ್ಮ ಬದುಕನ್ನು ಒಂದು ವರ್ಷದಲ್ಲಿ ಬದಲಿಸಿಕೊಳ್ಳಬಹುದೇ? ಹೇಗೆ?’ ಎಂದು ಕೇಳಿದ್ದೆ. ಅದಕ್ಕೆ ಬ್ರಾನ್ಸನ್ ಅವರು ಜಗತ್ತಿನ ಶ್ರೀಮಂತರಲ್ಲಿ ಒಬ್ಬರಾದ ವಾರೆನ್ ಬಫೆಟ್ ಹೇಳಿದ್ದನ್ನು ಪ್ರಸ್ತಾಪಿಸಿ ಬರೆದಿದ್ದರು.
? ಏನೇ ಮಾಡಿ ತಕ್ಷಣ ಫಲಿತಾಂಶ ಬರುವುದಿಲ್ಲ. ಎಲ್ಲದಕ್ಕೂ ಟೈಮು ಹಿಡಿಯುತ್ತದೆ.
? ನಿಮ್ಮ ಸಂತಸ, ನೆಮ್ಮದಿಗೆ ಬೇರೆಯವರನ್ನು ಅವಲಂಬಿಸುವುದನ್ನು ನಿಲ್ಲಿಸಬೇಕು.
? ಕಂಪ್ಲೇನ್ ಮಾಡೋದನ್ನು ನಿಲ್ಲಿಸಿ, ನನ್ನಂಥ ಅದೃಷ್ಟವಂತ ಯಾರೂ ಇಲ್ಲ ಎಂದು ಭಾವಿಸಿ.
? ಏನು ಅಂದುಕೊಂಡಿದ್ದೀರೋ ಅದನ್ನು ಮಾಡಿ, ಎಂದಿಗೂ ಕೈಚೆಲ್ಲಬೇಡಿ.
? ನೀವು ಮಾಡುವ ತಪ್ಪುಗಳಿಂದ ನಿಮ್ಮನ್ನು ಅಳೆಯುವುದನ್ನು ನಿಲ್ಲಿಸಿ.
? ಸಕಾರಾತ್ಮಕ ಯೋಚನೆಗಳಿರುವವರನ್ನು ಹತ್ತಿರಕ್ಕೆ ಇಟ್ಟುಕೊಳ್ಳಿ.
? ನಿಮ್ಮನ್ನು ಟೀಕಿಸುವವರನ್ನು ನಿರ್ಲಕ್ಷಿಸಿ.
ಇಷ್ಟು ಮಾಡಿ, ಒಂದು ವರ್ಷದಲ್ಲಿ ನೀವು ಹೊಸ ವ್ಯಕ್ತಿಯಾಗಿರುತ್ತೀರಿ.
ಅಂದ ಹಾಗೆ ಈ ಏಳೂ ಸಂಗತಿಗಳನ್ನು ನಾನಂತೂ ಅಕ್ಷರಶಃ ಪಾಲಿಸುತ್ತಿದ್ದೇನೆ. ಹೀಗಾಗಿ ಪ್ರತಿದಿನವನ್ನೂ ಹೊಸದಾಗಿ, ಖುಷಿಯಾಗಿ ಕಳೆಯುತ್ತೇನೆ. ನೀವೂ ಪ್ರಯತ್ನಿಸಿ.
ನನ್ನ ಸಾಹಿತ್ಯ ನಷ್ಟವಾದರೂ ಚಿಂತೆಯಿಲ್ಲ
ಕಾವ್ಯದ ಬಗ್ಗೆ ನನ್ನಲ್ಲಿ ಯಾವ ಹೊಸ ಥಿಯರಿ-ಪ್ರಮೇಯವೂ ಇಲ್ಲ. ಇಂಥ ಕಾವ್ಯವೇ ಸರಿ, ಇಂಥದು ತಪ್ಪು ಎಂದು ನಾನು ಹೇಳಲಾರೆ. ನಾನು ಹೇಳಿ ಕೇಳಿ ಮಾಸ್ತರ. ಮಾಸ್ತರ ಆದವನು ಇದು ಹೀಗೆ, ಇದು ಹಾಗೆ ಎಂದು ವಿವರಿಸುತ್ತಾನೆಯೇ ಹೊರತು ಇದು ಮೇಲು, ಇದು ಕೀಳು ಎಂದು ತೂಗಲು ಹೊರಡುವುದಿಲ್ಲ. ನವ್ಯಕಾವ್ಯದ ಬಗ್ಗೆ ನನ್ನ ದೃಷ್ಟಿಯೂ ಇದೇ. ಯಾವ ಕಾವ್ಯವೇ ಆಗಲಿ, ಕಾವ್ಯವಾಗಿದ್ದರೆ ಸರಿ ಎನ್ನುತ್ತೇನೆ.

ಸಹಾನುಭೂತಿ-ಸ್ವಾನುಭೂತಿಗಳ ಮಿಶ್ರಣವೇ ನೈಜ ಕಾವ್ಯ ಎಂದು ನನ್ನ ಮಟ್ಟಿಗೆ ಹೇಳಬಲ್ಲೆ. ಹಾಗೆಯೇ ನನ್ನ ಕಾವ್ಯಗಳಲ್ಲಿ ಅತಿ ಶ್ರೇಷ್ಠವಾದುದು ಯಾವುದು ಎಂದೂ ನಾನು ಹೇಳಲಾರೆ. ಹತ್ತು-ಹದಿನೆಂಟು ಕವಿತೆಗಳನ್ನು ಆರಿಸಿ ಕೇಳಿದರೆ, ಇದು ಇದಕ್ಕಿಂತ ಒಳ್ಳೇದು ಎಂದು ವಿವರಿಸಬಹು ದಷ್ಟೇ.
ನಾನು ಬರೆದಿದ್ದರಲ್ಲಿ ಹಲವು ಕವಿತೆಗಳನ್ನು ಇಂದು ಪುನಃ ಓದುವಾಗ ನಾನು ಮೊದಲಿನಷ್ಟು ಆನಂದದಿಂದ ಪುಳಕಿತನಾಗುತ್ತೇನೆ. ನಾನು ಬರೆದಿದ್ದೆಲ್ಲಾ ಶಾಶ್ವತ ಎಂದೂ ನಾನು ಸಾಧಿಸುವು ದಿಲ್ಲ. ನನ್ನ ಎಲ್ಲ ಸಾಹಿತ್ಯ ನಷ್ಟವಾಗಿ ಹೋಗಿ ಕೇವಲ ಎಂಟು-ಹತ್ತು ಪಂಕ್ತಿ ಉಳಿದುಕೊಂಡು ಅದರ ಕರ್ತನಾರೆಂಬುದು ಮರೆತು ಹೋದರೂ ಅಡ್ಡಿಯಿಲ್ಲ.
ಅದನ್ನು ಓದಿದವರು ಹೊಂದುವ ಆನಂದ ನನಗೆ ಸ್ವರ್ಗದಲ್ಲಿ ಮುಟ್ಟುತ್ತದೆಂದು ನಾನು ನಂಬಿ ದ್ದೇನೆ. ಅದು ಸಪ್ತ ಸ್ವರ್ಗಕ್ಕೂ ಹೆಚ್ಚು ತೂಕ. ಈ ಸಾಲುಗಳನ್ನು ನಾನು ಸುಮಾರು 44 ವರ್ಷಗಳ ಹಿಂದೆ ನೋಟ್ಬುಕ್ (ಪಟ್ಟಿ)ನಲ್ಲಿ ಬರೆದಿಟ್ಟುಕೊಂಡಿದ್ದೆ. ಚೆಂದವಾದ ಸಾಲುಗಳನ್ನು ಓದಿದಾಗ ಅವುಗಳನ್ನು ಬರೆದಿಟ್ಟುಕೊಳ್ಳುವಂತೆ ಹೇಳುತ್ತಿದ್ದುದನ್ನು ಶಿರಸಾ ಪಾಲಿಸುತ್ತಿದ್ದೆ.
ಇತ್ತೀಚೆಗೆ ನಾನು ಹಾಗೆ ಬರೆದಿಟ್ಟುಕೊಂಡ ಕೆಲವು ನೋಟ್ ಬುಕ್ಸ್ ಸಿಕ್ಕಿದವು. ನನಗೆ ಅನರ್ಘ್ಯ ರತ್ನಗಳು ಸಿಕ್ಕಷ್ಟು ಸಂತಸವಾದವು. ಅಂದ ಹಾಗೆ ಮೇಲಿನ ಸಾಲುಗಳನ್ನು ಹೇಳಿದವರು ವರಕವಿ ದ.ರಾ.ಬೇಂದ್ರೆ!
ಇದನ್ನೂ ಓದಿ: Vishweshwar Bhat Column: ಆ ದೇಶವೇಕೆ ಹಾಗಿದೆ ?
ಸಿಟ್ಟು ಬಂದಾಗ..!
‘ಸಿಟ್ಟನ್ನು ನಿಭಾಯಿಸುವುದು ಹೇಗೆ?’ ಎಂಬ ವಿಷಯದ ಬಗ್ಗೆ ವಾಟ್ಸಾಪ್ ಗುಂಪಿನಲ್ಲಿ ಒಂದು ಚರ್ಚೆ ನಡೆಯುತ್ತಿತ್ತು. ‘ಸಿಟ್ಟು ಬಂದಾಗ ಮಾತಾಡಬಾರದು’ ಎಂದರು ಒಬ್ಬರು. ‘ನೀವು ಸಿಟ್ಟು ಮಾಡಿಕೊಳ್ಳುವ ವ್ಯಕ್ತಿ ನಿಮಗಿಂತ ಚಿಕ್ಕವನಾಗಿದ್ದರೆ ಒಂದರಿಂದ ಹತ್ತರವರೆಗೆ ಎಣಿಸಿ, ನಂತರ ಮಾತಾಡಿ’ ಎಂದರು ಮತ್ತೊಬ್ಬರು.
‘ಎದುರಿಗಿನ ವ್ಯಕ್ತಿ ಸಮವಯಸ್ಕನಾಗಿದ್ದರೆ, ಒಂದರಿಂದ ಮೂವತ್ತರವರೆಗೆ ಎಣಿಸಬೇಕು ಹಾಗೂ ನಂತರ ಮಾತಾಡಬೇಕು’ ಎಂದು ಇನ್ನೊಬ್ಬರು ಸಲಹೆ ಮಾಡಿದರು. ‘ನಿಮಗಿಂತ ಹಿರಿಯರಾಗಿದ್ದರೆ?’ ಎಂದು ಕೇಳಿದಾಗ, ‘ಒಂದರಿಂದ ಐವತ್ತರ ತನಕ’ ಎಂಬ ಸಲಹೆ ಬಂತು. ಈ ಮಧ್ಯೆ, ಯಾರೋ ಕೇಳಿದರು- ‘ಎದುರಿಗಿರುವ ವ್ಯಕ್ತಿ ನಿಮ್ಮ ಹೆಂಡತಿಯಾಗಿದ್ದರೆ?’ ಅದಕ್ಕೆ ನಾನು ಹೇಳಿದೆ- ‘ಒಂದೂ ಮಾತಾಡದೇ, ಬರೀ ಎಣಿಸುತ್ತಲೇ ಇರಬೇಕು’.
ಹೀಗೊಂದು ಫನ್ ಕ್ಲಬ್!
ನಾನು ಡೆನ್ವರ್ನ ಒಂದು ಹೋಟೆಲ್ಗೆ ಹೋಗಿದ್ದೆ. ಅದರ ಹೆಸರು ಫನ್ ಕ್ಲಬ್ ಅಂತ. ಹಾಗೆ ನೋಡಿ ದರೆ, ಅದೊಂದು ಪಬ್. ಅಲ್ಲಿ ಕುಳಿತಷ್ಟು ಹೊತ್ತು ಬೇಸರವಾಗುವುದಿಲ್ಲ. ಅಲ್ಲಿನ ಗೋಡೆ ಗಳ ಮೇಲೆ ‘ವಕ್ರತುಂಡೋಕ್ತಿ’ ಮಾದರಿಯ ಸಾಲುಗಳನ್ನು ಬರೆದು ತಗುಲಿ ಹಾಕಲಾಗಿದೆ. ಕೆಲವು ಸಾಲು ಗಳನ್ನು ನೋಡಿ.
Why do German love American?
- Because American are most hated people
ಯಾರಾದರೂ ಎರಡೂ ಭಾಷೆ ಮಾತಾಡಿದರೆ bilingual ಅಂತಾರೆ. ಹಲವು ಭಾಷೆಗಳನ್ನು ಮಾತಾಡಿದರೆ multi lingual ಅಂತಾರೆ. ಆದರೆ ಒಂದೇ ಭಾಷೆ ಮಾತಾಡುವವರನ್ನು ಏನಂತಾರೆ?
- ಅಮೆರಿಕನ್!
ಅಮೆರಿಕನ್ಗೂ ಯೋಗರ್ಟ್(ಮೊಸರು)ಗೂ ಏನು ವ್ಯತ್ಯಾಸ?
- ಒಂದು ತಿಂಗಳು ಬಿಟ್ಟರೆ ಯೋಗರ್ಟ್ ತನ್ನದೇ ಆದ ಗುಣ, ಸ್ವಭಾವವನ್ನು ಬೆಳೆಸಿಕೊಳ್ಳುತ್ತದೆ. ಈ ಮಾತನ್ನು ಅಮೆರಿಕನ್ಗೆ ಹೇಳಲಾಗದು!
ಅಮೆರಿಕದಲ್ಲಿ ಮಾತ್ರ ಇದು ಸಾಧ್ಯ!
-ಗ್ರಾಹಕರು ಡಬಲ್ ಚೀಸ್ ಬರ್ಗರ್, ಲಾರ್ಜ್ ಫ್ರೆಂಚ್ ಫ್ರೈಸ್ಗಳ ಜತೆಗೆ ಡಯಟ್ ಕೋಕ್ ಆರ್ಡರ್ ಮಾಡುತ್ತಾರೆ!
ಸಾವಿರಾರು ಡಾಲರ್ನ ಕಾರನ್ನು ಮನೆಮುಂದೆ ರಸ್ತೆಯಲ್ಲಿ ನಿಲ್ಲಿಸುತ್ತಾರೆ. ಬೇಡದ ಸಾಮಾನು ಗಳನ್ನು ಗರಾಜ್ನಲ್ಲಿ ಜೋಪಾನವಾಗಿ ಇಟ್ಟಿರುತ್ತಾರೆ!
ಅದು ರಂಗಭೂಮಿ ಅಲ್ಲ, ಹುಚ್ಚಾಸ್ಪತ್ರೆ
ಒಮ್ಮೆ ಮಾಸ್ಟರ್ ಹಿರಣ್ಣಯ್ಯ ಅವರ ಜತೆಗೆ ವೇದಿಕೆ ಹಂಚಿಕೊಂಡಿದ್ದೆ. ಆ ದಿನ ಅವರು ಅದ್ಭುತ ವಾಗಿ ಮಾತಾಡಿದರು. ಕಾರ್ಯಕ್ರಮ ಮುಗಿದ ಬಳಿಕ ಹಲವರು ಅವರನ್ನು ಸುತ್ತುವರಿದು ಅಭಿನಂದಿಸಿದರು. ಅವರಬ್ಬ, “ಹಿರಣ್ಣಯ್ಯನವರೇ, ನೀವು ರಂಗಭೂಮಿಯ ನಟರಾಗುವ ಬದಲು, ಲೋಕಸಭಾ ಸದಸ್ಯರಾಗಿದ್ದರೆ, ಎಷ್ಟು ಚೆನ್ನಾಗಿತ್ತು. ನಿಮ್ಮ ಮಾತಿನಿಂದ ಇಡೀ ಲೋಕಸಭೆ ತಲೆದೂಗುವಂತೆ ಮಾಡಬಹುದಾಗಿತ್ತು. ಲೋಕಸಭೆಗಿಂತ ದೊಡ್ಡ ರಂಗಭೂಮಿ ಯಾವುದಿದೆ? ಈಗಲೂ ಕಾಲ ಮಿಂಚಿಲ್ಲ, ಲೋಕಸಭಾ ಚುನಾವಣೆಗೆ ಸ್ಪರ್ಧಿಸಿ" ಎಂದು ಹೇಳಿದ.
ಅದಕ್ಕೆ ಹಿರಣ್ಣಯ್ಯನವರು ಥಟ್ಟನೆ ಹೇಳಿದರು- “ಅಲ್ಲಯ್ಯಾ, ನಾನು ಲೋಕಸಭಾ ಸದಸ್ಯ ನಾಗಿದ್ದಿದ್ದರೆ ಮೂರ್ಖನ ಹಾಗೆ ಬಾಯಿಮುಚ್ಚಿ ಕುಳಿತು ಎದ್ದು ಬರಬೇಕಾಗುತ್ತಿತ್ತು. ನಮ್ಮ ರಾಜ್ಯ ದಿಂದ ಹೋದ ಒಬ್ಬನೇ ಒಬ್ಬ ಲೋಕಸಭಾ ಸದಸ್ಯ ಮಾತಾಡಿದ್ದನ್ನು ನೀವೆಲ್ಲ ಕೇಳಿದ್ದೀರಾ, ನೋಡಿದ್ದೀರಾ? ಇಲ್ಲಿ ನೀವೆಲ್ಲ ನನ್ನ ಮಾತನ್ನು ಕೇಳಿದಿರಿ ಎಂದು ಅಲ್ಲಿ ಯಾರು ಕೇಳುತ್ತಾರೆ? ಅಲ್ಲಿದ್ದವರಿಗೆ ಮಾತನ್ನು ಕೇಳುವ ವ್ಯವಧಾನ ಇಲ್ಲ.
ಲೋಕಸಭಾ ಸದಸ್ಯನಾದರೆ ಪಕ್ಷದ ನಾಯಕರು ಹೇಳಿದಂತೆ ಮೂಕನಾಗಿ ಇರಬೇಕಾಗುತ್ತದೆ. ನಾನು ಹಾಗೆ ಇರುವುದುಂಟಾ? ಅಷ್ಟಕ್ಕೂ ಲೋಕಸಭೆ ಅನ್ನೋದು ರಂಗಭೂಮಿ ಅಲ್ಲ. ಅದೊಂದು ಹುಚ್ಚಾಸ್ಪತ್ರೆ. ಹೀಗಾಗಿ ನಾನು ನನ್ನ ಪಾಡಿಗೆ ನಾಟಕ ಮಾಡಿಕೊಂಡಿರುತ್ತೇನೆ. ಅದೇ ನನಗೆ ಇಷ್ಟ. ನನಗೆ ಮೂಕನ ಪಾತ್ರ ಮಾಡಿ ಗೊತ್ತಿಲ್ಲ.’
ಖುಲಾಸೆ ಅಂದ್ರೆ ಏನರ್ಥ?
ಬೆಳಗ್ಗೆ ಪತ್ರಿಕೆ ಓದುವಾಗ, ಮಂತ್ರಿ ಖುಷಿಯಿಂದ ಬೀಗುತ್ತಿದ್ದ. ತನ್ನ ಹತ್ತಿರದ ಸಂಬಂಧಿಕರಿಗೆ ಲಾಭ ಮಾಡಿಕೊಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ ತೀರ್ಪು ನೀಡಿತ್ತು. ಅದರಂತೆ, ಮಂತ್ರಿ ಯನ್ನು ಸ್ವಜನ ಪಕ್ಷಪಾತ ಆಪಾದನೆಯಿಂದ ಖುಲಾಸೆಗೊಳಿಸಲಾಗಿತ್ತು. ಮುಖಪುಟದಲ್ಲಿ ಪ್ರಕಟ ವಾದ ಈ ಸುದ್ದಿ ನೋಡಿ ಮಂತ್ರಿಗೆ ಅತೀವ ಆನಂದವಾಗಿತ್ತು. ಸದಾ ಗಂಭೀರವಾದನನಾಗಿ ಪತ್ರಿಕೆ ಓದುವ ಅಪ್ಪ, ಇಂದು ನಗುತ್ತಾ ಖುಷಿಯಲ್ಲಿರುವುದನ್ನು ಕಂಡು ಮಗನಿಗೆ ತುಸು ಆಶ್ಚರ್ಯ ವಾಯಿತು.
“ಅಪ್ಪ, ನೀನು ಖುಷಿಪಡುವಂಥ ವಿಷಯ ಪತ್ರಿಕೆಯಲ್ಲಿ ಪ್ರಕಟವಾಗಿದೆಯಾ? ಅದು ಯಾವ ಸುದ್ದಿ?" ಎಂದು ಮಗ ಕೇಳಿದ.
“ನಾನು ಎಲ್ಲಾ ಆರೋಪಗಳಿಂದ ಖುಲಾಸೆ ಆಗಿದ್ದೇನೆ ಗೊತ್ತಾ? ಇದಕ್ಕಿಂತ ಖುಷಿ ಮತ್ತೇನಿದೆ?" ಎಂದು ಮಂತ್ರಿ ಮಗನಿಗೆ ಹೇಳಿದ.
ಮಗನಿಗೆ ‘ಖುಲಾಸೆ’ ಪದದ ಅರ್ಥ ಗೊತ್ತಾಗಲಿಲ್ಲ. “ಅಪ್ಪ,
ಖುಲಾಸೆ ಅಂದ್ರೆ ಏನು?" ಕೇಳಿದ.
“ಅಷ್ಟೂ ಗೊತ್ತಾಗುವುದಿಲ್ಲವಾ? ಖುಲಾಸೆ ಅಂದ್ರೆ ನಾನು
ಏನೂ ಮಾಡಿಲ್ಲ ಅಂತ ಅರ್ಥ" ಎಂದ ಮಂತ್ರಿ.
ಅದಕ್ಕೆ ಮಗ ಹೇಳಿದ: “ಈ ಮಾತನ್ನು ನಮ್ಮ ಕಾಲೇಜಿನಲ್ಲೂ
ಎಲ್ಲರೂ ಹೇಳ್ತಾರೆ. ನಿನ್ನಪ್ಪ ಏನೂ ಮಾಡಲ್ಲ ಅಂತ’
ಇದ್ದದ್ದನ್ನು ಇದ್ದ ಹಾಗೆ ಹೇಳಿದರೆ..
ಕೆಲ ತಿಂಗಳ ಹಿಂದೆ, ಯೋಗಿ ದುರ್ಲಭಜೀ ಹೇಳಿದ ಒಂದು ತಮಾಷೆ ಪ್ರಸಂಗವಿದು. ಮೊಬೈಲ್ ಫೋನ್ ಇಲ್ಲದ ಕಾಲದಲ್ಲಿ ನಡೆದ ಪ್ರಸಂಗವಿದು. ಇದ್ದದ್ದನ್ನು ಇದ್ದ ಹಾಗೆ ಹೇಳಿದರೆ ಕೆಲವರು ತಪ್ಪಾಗಿ ಭಾವಿಸುತ್ತಾರೆ ಎಂಬುದನ್ನು ವಿವರಿಸಲು ಅವರು ಈ ಘಟನೆ ಹೇಳಿದ್ದರು.
ಯುವ ವಿದ್ಯಾರ್ಥಿಯೊಬ್ಬ ಲೈಬ್ರರಿಯಿಂದ ಹೊರಡುವಾಗ ರಾತ್ರಿ ಹತ್ತು ಗಂಟೆಯಾಗಿತ್ತು. ಲೈಬ್ರರಿ ಯಿಂದ ನಿರ್ಗಮಿಸಿದವರಲ್ಲಿ ಅವನೇ ಕೊನೆಯವನಾಗಿದ್ದ. ಪಾರ್ಕಿಂಗ್ ತಾಣದಲ್ಲಿ ನಿಲ್ಲಿಸಿದ್ದ ಕಾರನ್ನು ಸ್ಟಾರ್ಟ್ ಮಾಡಬೇಕು ಎಂದು ಚಾವಿ ತಿರುವಿದರೆ, ಬ್ಯಾಟರಿ ಡೆಡ್ ಆಗಿತ್ತು. ಮೆಕಾನಿಕ್ಗೆ ಫೋನ್ ಮಾಡಿ ಕರೆಯೋಣ ಅಂದರೆ ಫೋನ್ ಬೂತ್ ದೂರದಲ್ಲಿತ್ತು.
ಬೇರೆ ದಾರಿ ಕಾಣದೇ ಹತ್ತಿರದಲ್ಲಿರುವ ಲೇಡೀಸ್ ಹಾಸ್ಟೆಲ್ಗೆ ಹೋದ. ಬಾಗಿಲಲ್ಲಿ ಯುವತಿ ಯೊಬ್ಬಳು ಕುಳಿತಿದ್ದಳು. ತನ್ನ ಸಮಸ್ಯೆಯನ್ನು ಅವಳಿಗೆ ಹೇಳಿದ. ಅವಳು ಹಾಸ್ಟೆಲ್ ವರಾಂಡ ದಲ್ಲಿರುವ ಫೋನ್ ತೋರಿಸುತ್ತಾ, “ಪರವಾಗಿಲ್ಲ, ಒಳಗೆ ಹೋಗಿ, ಫೋನ್ ಮಾಡಿ" ಎಂದು ಹೇಳಿದಳು.
ಆತ ಒಳ ಬಂದು ಮೆಕಾನಿಕ್ಗೆ ಫೋನ್ ಮಾಡಿದ. ಮೆಕಾನಿಕ್ ಗೆ ಸರಿಯಾಗಿ ಕೇಳಿಸುತ್ತಿರಲಿಲ್ಲ. ಹೀಗಾಗಿ ಯುವಕ ಜೋರಾಗಿ ಕಿರುಚುತ್ತಿದ್ದ. ಆ ಹೊತ್ತಿನಲ್ಲಿ ಗಂಡಸಿನ ದನಿಯನ್ನು ಕೇಳಿದ ಮೊದಲ ಮಹಡಿಯಲ್ಲಿದ್ದ ಹಾಸ್ಟೆಲ್ ಸಂಘದ ಸೆಕ್ರೆಟರಿ ಗಾಬರಿಗೊಂಡಳು. ಬಾಗಿಲಲ್ಲಿ ಕುಳಿತಿದ್ದ ಯುವತಿಗೆ ಹೇಳಿದಳು-
“ಏನಮ್ಮಾ, ಯಾವನೋ ಗಂಡಸು ಹಾಸ್ಟೆಲ್ ಒಳಗೆ ಬಂದಂತಿದೆ. ರಾತ್ರಿ ಹತ್ತು ಗಂಟೆ ನಂತರ, ಹಾಸ್ಟೆಲ್ ಒಳಗೆ ಗಂಡಸರನ್ನು ಒಳಬಿಡಬಾರದು ಎಂಬುದು ಗೊತ್ತಿಲ್ಲವಾ?". ಅದಕ್ಕೆ ಬಾಗಿಲಲ್ಲಿ ನಿಂತವಳು ಜೋರಾಗಿ ಹೇಳಿದಳು- “ಪರವಾಗಿಲ್ಲ ಬಿಡಮ್ಮ, ಅವನ ಬ್ಯಾಟರಿ ಡೆಡ್ ಆಗಿದೆಯಂತೆ".
ಹೀಗೊಂದು ಸಂಭಾಷಣೆ
ಇದು, ಕೆಲವು ವರ್ಷಗಳ ಹಿಂದೆ ನಾನು ಸ್ವೀಡನ್ ರಾಜಧಾನಿ ಸ್ಟಾಕ್ಹೋಮ್ಗೆ ಹೋದಾಗ ಅಲ್ಲಿ ಕೇಳಿದ್ದು. ಒಮ್ಮೆ ಅಮೆರಿಕದ ಪ್ರವಾಸಿಗ ಸ್ಟಾಕ್ಹೋಮ್ನಲ್ಲಿ ಬಸ್ಸಿನಲ್ಲಿ ಹೋಗುತ್ತಿದ್ದ. ಅವನ ಪಕ್ಕದಲ್ಲಿ ಸ್ವೀಡಿಷ್ ಪ್ರಜೆ ಕುಳಿತಿದ್ದ. ಇಬ್ಬರೂ ಪರಸ್ಪರ ಪರಿಚಿತರಾದರು. ಹರಟೆ ಹೊಡೆಯ ಲಾರಂಭಿಸಿದರು.
ಅಮೆರಿಕನ್ ಪ್ರಜೆ ಬಡಾಯಿ ಕೊಚ್ಚಿಕೊಳ್ಳುತ್ತಿದ್ದ- “ಜಗತ್ತಿನಲ್ಲಿಯೇ ಅಮೆರಿಕದಂಥ ಪ್ರಜಾಸತ್ತಾತ್ಮಕ ದೇಶ ಮತ್ತೊಂದಿಲ್ಲ. ವೈಟ್ ಹೌಸಿಗೆ ಹೋಗಿ ಅಧ್ಯಕ್ಷನನ್ನು ಭೇಟಿ ಮಾಡಬಹುದು. ಅವನ ಜತೆ ಕೈಕುಲುಕಬಹುದು. ಪ್ರಮುಖ ವಿಷಯಗಳ ಬಗ್ಗೆ ಚರ್ಚಿಸಬಹುದು. ಇವೆ ಬೇರೆ ದೇಶಗಳಲ್ಲಿ ಸಾಧ್ಯವಿಲ್ಲ. ಅದರಲ್ಲೂ ನಿಮ್ಮ ದೇಶದಲ್ಲಂತೂ ಸಾಧ್ಯವೇ ಇಲ್ಲವೇನೋ?".
ಇದೇನು ಅಮೆರಿಕನ್ ಪ್ರವಾಸಿಗ ತನ್ನ ದೇಶದ ಬಗ್ಗೆ ಬಹಳ ಬಡಾಯಿ ಕೊಚ್ಚಿಕೊಳ್ಳುತ್ತಾನಲ್ಲ ಎಂದು ಸ್ವೀಡಿಷ್ ಪ್ರಜೆಗೆ ಅನಿಸಿತು. ಆತ ಅಷ್ಟು ಹೇಳಿದ ನಂತರ ತಾನೂ ತನ್ನ ದೇಶದ ಬಗ್ಗೆ ಹೇಳದಿದ್ದರೆ ಹೇಗೆ ಎಂದು ಅನಿಸಿತು. “ನಿಮ್ಮದೇನು ಮಹಾ? ನಮ್ಮ ದೇಶದಲ್ಲಿ ರಾಜ ಮತ್ತು ಸಾಮಾನ್ಯ ಒಂದೇ ಬಸ್ಸಿನಲ್ಲಿ ಕುಳಿತುಕೊಂಡು ಪ್ರಯಾಣ ಮಾಡುತ್ತಾರೆ, ಗೊತ್ತಾ?" ಎಂದ ಸ್ವೀಡಿಷ್ ಪ್ರಜೆ.
ಅಷ್ಟೊತ್ತಿಗೆ ಮುಂದಿನ ಸ್ಟಾಪ್ ಬಂತು. ಸ್ವೀಡಿಷ್ ಪ್ರಜೆ ಬಸ್ಸಿನಿಂದ ಇಳಿದು ಹೋದ. ಅವರಿಬ್ಬರ ಸಂಭಾಷಣೆಯನ್ನು ಮತ್ತೊಬ್ಬ ಕೇಳಿಸಿಕೊಳ್ಳುತ್ತಿದ್ದ. “ನಿಮ್ಮ ಪಕ್ಕದಲ್ಲಿ ಕುಳಿತಿದ್ದವ ಯಾರು ಗೊತ್ತಾಯಿತಾ?" ಎಂದು ಕೇಳಿದಕ್ಕೆ ಅಮೆರಿಕದ ಪ್ರವಾಸಿಗ ‘ಗೊತ್ತಿಲ್ಲ’ ಎಂದು ತಲೆ ಅಡಿಸಿದ. ಆಗ ಮತ್ತೊಬ್ಬ ಹೇಳಿದ-
“ಆತನೇ ಸ್ವೀಡನ್ನ ಆರನೇ ರಾಜ ಗುಸ್ತಾಫ್ ಅಡಾಲ್ಫ್!"
ನಗರಕ್ಕೆ ಸೆಕ್ಸ್ ವಾಲೆ ಆಗಮನ!
ಆಗ ನಾನು ‘ವಿಜಯ ಕರ್ನಾಟಕ’ ಪತ್ರಿಕೆಯ ಸಂಪಾದಕನಾಗಿದ್ದೆ. ನಾನು ಶಿವಮೊಗ್ಗ ಪ್ರವಾಸದಲ್ಲಿz. ಬೆಳಗ್ಗೆ ಪತ್ರಿಕೆ ನೋಡಿದರೆ, ಒಂದು ಸುದ್ದಿ ಪ್ರಕಟವಾಗಿತ್ತು. ‘ನಗರಕ್ಕೆ ಸೆಕ್ಸ್ ವಾಲೆ ಆಗಮನ’ ಎಂಬ ಶೀರ್ಷಿಕೆಯಡಿಯಲ್ಲಿ, ಎರಡು ಪ್ಯಾರಾ, ಸಿಂಗಲ್ ಕಾಲಂ ಸುದ್ದಿ ಪ್ರಕಟವಾಗಿತ್ತು. ಮೊದಲ ಪ್ಯಾರಾ ದಲ್ಲಿ ‘ಬೆಂಗಳೂರಿನಲ್ಲಿ ಸಮಾವೇಶವೊಂದರಲ್ಲಿ ಪಾಲ್ಗೊಳ್ಳಲು ದಕ್ಷಿಣ ಆಫ್ರಿಕಾ ನಿಯೋಗದ ಸೆಕ್ಸ್ ವಾಲೆ ಆಗಮಿಸಲಿದ್ದಾರೆ’ ಎಂದಿತ್ತು.

ಆ ಸುದ್ದಿಯನ್ನು ಬರೆದ ಉಪಸಂಪಾದಕ ಆ ಹೆಸರನ್ನು ಕೇಳಿಯೇ ಇಲ್ಲ ಎಂಬುದು ಖಾತ್ರಿ ಯಾಯಿತು. ತಕ್ಷಣ ನಾನು ಆ ಸುದ್ದಿಯನ್ನು ಬರೆದವರು ಯಾರು ಎಂಬುದನ್ನು ತಿಳಿದುಕೊಂಡೆ. ನಂತರ ಅದನ್ನು ಬರೆದವನಿಗೆ ಕೇಳಿದಾಗ, “ಸರ್, ಇಂಗ್ಲೀಷಿನಲ್ಲಿ Sexwale ಅಂತ ಇದ್ದುದರಿಂದ ಹಾಗೆ ಬರೆದೆ. ಅದರಲ್ಲಿ ತಪ್ಪೇನಿದೆ?" ಎಂದು ವಾದಿಸಿದ.
ನನಗೆ ತುಸು ಕೋಪ ಬಂತು. “ಅವರು ಸೆಕ್ಸ್ ವಾಲೆ ಅಲ್ಲ ಮಾರಾಯ, ಅವರ ಹೆಸರಿನ ಸ್ಪೆಲ್ಲಿಂಗ್ Sexwale ಎಂದಿರಬಹುದು, ಆದರೆ ಅವರ ಹೆಸರನ್ನು ‘ಸೆಸ್ವಾಲೆ’ ಎಂದು ಉಚ್ಚರಿಸುತ್ತಾರೆ. ನೀನು ಆ ಹೆಸರನ್ನು ಕೇಳಿಯೇ ಇಲ್ಲವಾ?" ಎಂದು ಕೇಳಿದ್ದಕ್ಕೆ ಆತ, “ಇಲ್ಲ, ನಾನು ಅವರ ಹೆಸರನ್ನು ಕೇಳಿಲ್ಲ, ಸ್ಸಾರಿ" ಎಂದ.
ಮೊಸಿಮಾ ಗೇಬ್ರಿಯಲ್ ಸೆಸ್ವಾಲೆ ದಕ್ಷಿಣ ಆಫ್ರಿಕಾದ ಉದ್ಯಮಿ ಮತ್ತು ರಾಜಕಾರಣಿ. ವರ್ಣಭೇದ ನೀತಿ ವಿರೋಧಿ ಹೋರಾಟಗಾರರೂ ಹೌದು. ನೆಲ್ಸನ್ ಮಂಡೇಲಾ ಅವರ ಜತೆಗೆ ಇವರನ್ನೂ ರಾಬನ್ ಐಲ್ಯಾಂಡಿನಲ್ಲಿ ಬಂಧಿಸಿಡಲಾಗಿತ್ತು (ನಾನು ರಾಬನ್ ಐಲ್ಯಾಂಡಿಗೆ ಹೋದಾಗ, ಅಲ್ಲಿನ ಚಿತ್ರ ಸಂಗ್ರಹಾಲಯದಲ್ಲಿ ಮಂಡೇಲಾ ಜತೆ ಸೆಸ್ವಾಲೆ ಫೋಟೋ ನೋಡಿ, ನಮ್ಮ ಪತ್ರಿಕೆಯಲ್ಲಿ ಅವಾಂತರ ಸೃಷ್ಟಿಸಿದ್ದ ‘ಸೆಕ್ಸ್ ವಾಲೆ’ ಎಂದು ಜತೆಗಿದ್ದ ಸಂಪಾದಕ ಮಿತ್ರ ರವಿ ಹೆಗಡೆ ಅವರಿಗೆ ಹೇಳಿ ನಕ್ಕಿದ್ದೆ). ಮಂಡೇಲಾ ಸೆರೆಮನೆಯಿಂದ ಬಿಡುಗಡೆಯಾದಾಗ,
ಇವರೂ ಅವರ ಜತೆ ಬಿಡುಗಡೆಯಾಗಿದ್ದರು. ನಂತರ ನಡೆದ ಚುನಾವಣೆಯಲ್ಲಿ ಸೆಸ್ವಾಲೆ ಆರಿಸಿ ಬಂದು, ದಕ್ಷಿಣ ಆಫ್ರಿಕಾದ ಗೌಟೆಂಗ್ ಪ್ರಾಂತ್ಯದ ಮುಖ್ಯಸ್ಥರಾಗಿದ್ದರು. ತರುವಾಯ, ಸುಮಾರು ಐದು ವರ್ಷಗಳ ಕಾಲ ಅವರು ಮಂತ್ರಿಯೂ ಆಗಿದ್ದರು. ಆ ಸಂದರ್ಭದಲ್ಲಿಯೇ ಅವರು ಬೆಂಗಳೂರಿಗೂ ಬಂದಿದ್ದರು. ಇವರು ‘ಟೋಕಿಯೋ’ ಸೆಸ್ವಾಲೆ ಎಂದೇ ಪ್ರಸಿದ್ಧರಾಗಿದ್ದರು. ಮೂಲತಃ ಕರಾಟೆ ಪಟುವಾಗಿದ್ದರಿಂದ ಅವರ ಹೆಸರಿಗೆ ಬಾಲಂಗೋಚಿಯಂತೆ ‘ಟೋಕಿಯೋ’ ತಗುಲಿಕೊಂಡಿದ್ದಿರಬಹುದು.