ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Shashidhara Halady Column: ಗ್ರಾಮೀಣ ಜನರನ್ನೂ ಕಾಡುತ್ತಿರುವ ಸಕ್ಕರೆ ಕಾಯಿಲೆ !

ಪ್ರತಿ ಮನೆಯಲ್ಲಿಯೂ ಒಬ್ಬರಾದರೂ ‘ಸಕ್ಕರೆ ಕಾಯಿಲೆ’ಯವರು ಇದ್ದರು! ಅವರಲ್ಲಿ ಕೆಲವರು ತೀವ್ರ ಸ್ಥಿತಿ ತಲುಪಿ, ಇನ್ಸುಲಿನ್ ಇಂಜೆಕ್ಷನ್ ತೆಗೆದುಕೊಳ್ಳುವ ಸ್ಥಿತಿಯಲ್ಲಿದ್ದರು. ಇನ್ನೂ ಕೆಲವರು ಪ್ರತಿದಿನ ತಪ್ಪದೇ ಸಮಯಕ್ಕೆ ಸರಿಯಾಗಿ ಮಾತ್ರಗಳನ್ನು ತಿನ್ನುತ್ತಾ ತಮ್ಮ ಸಕ್ಕರೆ ಕಾಯಿಲೆಯನ್ನು ನಿಯಂತ್ರಣ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದರು. ದೇವರಿಗೆ ಪೂಜೆ ತಪ್ಪಿದರೂ ಪರವಾಗಿಲ್ಲ- ಆದರೆ ಸಕ್ಕರೆ ಕಾಯಿಲೆಯ ಮಾತ್ರೆ ತಿನ್ನುವುದನ್ನು ತಪ್ಪಿಸುವಂತಿರಲಿಲ್ಲ!

ಗ್ರಾಮೀಣ ಜನರನ್ನೂ ಕಾಡುತ್ತಿರುವ ಸಕ್ಕರೆ ಕಾಯಿಲೆ !

-

ಶಶಾಂಕಣ

ವಿದ್ಯೆ ಕಲಿತು, ಕೆಲಸ ಹುಡುಕಿಕೊಂಡು ದೂರದ ಊರಿಗೆ ಹೋಗುವುದು ಇತ್ತೀಚೆಗೆ ಜಾಸ್ತಿಯಾಗಿದೆ. ಅದೇ ರೀತಿ ನಮ್ಮ ಹಳ್ಳಿಯಲ್ಲೂ ಆಗಿದೆ. ಸ್ವಾತಂತ್ರ್ಯಪೂರ್ವದಲ್ಲಿ ಕುಂದಾಪುರ ಸರಹದ್ದಿನ ಜನರು ಹೋಟೆಲ್‌ನಲ್ಲಿ ಕೆಲಸ ಮಾಡಲು ದೂರದೂರಿಗೆ ಹೋಗುತ್ತಿದ್ದರು.

ಸ್ವಾತಂತ್ರ್ಯ ದೊರೆತು ಒಂದೆರಡು ದಶಕಗಳ ಸಮಯದಲ್ಲಿ ವಿದ್ಯಾಭ್ಯಾಸಕ್ಕೆ ಅವಕಾಶ ದೊರೆತು, ಹಲವರು ವಿದ್ಯೆ ಕಲಿತರು; ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ದೊರೆತು ಘಟ್ಟ ಹತ್ತಿದ ನನ್ನ ತಲೆಮಾರಿನ ಬಹಳಷ್ಟು ಮಂದಿ, ಸ್ವಾತಂತ್ರ್ಯಾನಂತರದ ನಮ್ಮ ದೇಶದ ಅಭಿವೃದ್ಧಿಯ ಫಲವನ್ನು ಉಂಡಿದ್ದಂತೂ ನಿಜ.

2000ದ ನಂತರ, ಸಾಫ್ಟ್‌ ವೇರ್ ಕ್ಷೇತ್ರದಲ್ಲಿ ಪರಿಣತಿ ಹೊಂದಿ, ನಮ್ಮ ತಾಲೂಕಿನ ಸಾಕಷ್ಟು ಯುವ ಜನತೆ, ಬೆಂಗಳೂರಿನತ್ತ ಧಾವಿಸಿ, ಹೊಸ ಬದುಕನ್ನು ಕಟ್ಟಕೊಂಡದ್ದು ಕಾಣುತ್ತಿದ್ದೇವೆ. ಅಂಥವ ರಲ್ಲಿ ಕೆಲವರು ಹಳ್ಳಿಗೆ ವಾಪಸಾಗುವುದೂ ಉಂಟು. ಅಂಥವರಿಗೆ, ಹಳ್ಳಿಗಳಲ್ಲಿ ಆಗುತ್ತಿರುವ ಬದಲಾವಣೆ ಕಂಡು ವಿಸ್ಮಯವಾಗುವುದೂ ಇದೆ!

ಕಳೆದ 3-4 ದಶಕಗಳಲ್ಲಿ ನಮ್ಮ ಹಳ್ಳಿಗಳು ಬದಲಾವಣೆ ಕಂಡ ಪರಿಯನ್ನು ವಿವರಿಸಲು, ಅಧ್ಯಯನ ಮಾಡಲು ಸಾಕಷ್ಟು ಶ್ರಮ, ಪುಟಗಳು ಅಗತ್ಯ. ಬದಲಾವಣೆಯಲ್ಲಿ ಎದ್ದು ಕಾಣುವುದು, ನಮ್ಮ ಗ್ರಾಮೀಣ ಜನರಲ್ಲಿ ಕಂಡುಬಂದ ಆರೋಗ್ಯದ ಏರುಪೇರು. ನಮ್ಮ ಹಳ್ಳಿಯನ್ನೇ ಗಮನಿಸುವು ದಾದರೆ, 3 ದಶಕಗಳ ಹಿಂದೆ ಇದ್ದಂಥ ಆರೋಗ್ಯ ಈಗ ಬದಲಾಗಿದೆ! ಅದರಲ್ಲಿ ಥಟ್ಟನೆ ಗೋಚರ ವಾಗುವುದು, ನಮ್ಮ ಹಳ್ಳಿಯ ಹೆಚ್ಚಿನವರ ಮನೆಗಳಲ್ಲಿ ವ್ಯಾಪಕ ವಾಗಿರುವ ‘ಸಕ್ಕರೆ ಕಾಯಿಲೆ’. ನಮ್ಮೂರಿನ ಸುತ್ತಮುತ್ತಲಿನ ಹಲವರನ್ನು ಮಾತನಾಡಿಸಿದೆ.

ಇದನ್ನೂ ಓದಿ: Shashidhara Halady Column: ಆಂಗ್ಲರು ಇದಕ್ಕೆ ಇಟ್ಟಿದ್ದಾರೆ ಆಕರ್ಷಕ ಹೆಸರು !

ಪ್ರತಿ ಮನೆಯಲ್ಲಿಯೂ ಒಬ್ಬರಾದರೂ ‘ಸಕ್ಕರೆ ಕಾಯಿಲೆ’ಯವರು ಇದ್ದರು! ಅವರಲ್ಲಿ ಕೆಲವರು ತೀವ್ರ ಸ್ಥಿತಿ ತಲುಪಿ, ಇನ್ಸುಲಿನ್ ಇಂಜೆಕ್ಷನ್ ತೆಗೆದುಕೊಳ್ಳುವ ಸ್ಥಿತಿಯಲ್ಲಿದ್ದರು. ಇನ್ನೂ ಕೆಲವರು ಪ್ರತಿದಿನ ತಪ್ಪದೇ ಸಮಯಕ್ಕೆ ಸರಿಯಾಗಿ ಮಾತ್ರಗಳನ್ನು ತಿನ್ನುತ್ತಾ ತಮ್ಮ ಸಕ್ಕರೆ ಕಾಯಿಲೆಯನ್ನು ನಿಯಂತ್ರಣ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದರು. ದೇವರಿಗೆ ಪೂಜೆ ತಪ್ಪಿದರೂ ಪರವಾಗಿಲ್ಲ- ಆದರೆ ಸಕ್ಕರೆ ಕಾಯಿಲೆಯ ಮಾತ್ರೆ ತಿನ್ನುವು ದನ್ನು ತಪ್ಪಿಸುವಂತಿರಲಿಲ್ಲ!

ಅವರಿಗೆ ವೈದ್ಯರು ಹೇಳಿಬಿಟ್ಟಿದ್ದರು- ಈ ಮಾತ್ರೆ ಪ್ರತಿದಿನ, ಜೀವನ ಪೂರ್ತಿ ತಿನ್ನಬೇಕು! ವೈದ್ಯರ ಮಾತನ್ನು ಮೀರಲು ಸಾಧ್ಯವೇ? ನಮ್ಮೂರ ಸಕ್ಕರೆ ಕಾಯಿಲೆಯವರ ಇನ್ನೊಂದು ವಿಶೇಷ ಅಥವಾ ಅನಿವಾರ್ಯತೆ ಎಂದರೆ, ಪ್ರತಿ ವರ್ಷ ಅವರು ಸೇವಿಸುವ ಮಾತ್ರೆಗಳ ‘ಪವರ್’ ಮತ್ತು ಸಂಖ್ಯೆ ಜಾಸ್ತಿಯಾಗುತ್ತಾ ಹೋಗುತ್ತದೆ. ಕೆಲವರು ‘ಸಕ್ಕರೆ ಕಾಯಿಲೆ’ಯ ತುರೀಯಾವಸ್ಥೆಯಲ್ಲಿದ್ದರು. ಅಲ್ಲಲ್ಲಿ ಒಬ್ಬೊಬ್ಬರು ಇದರಿಂದಾಗಿಯೇ ಪರಲೋಕವಾಸಿಯಾದರು!

ನಮ್ಮ ಊರಿನಂಥ ಪುಟ್ಟ ಹಳ್ಳಿಯಲ್ಲೂ ‘ಮಧುಮೇಹ’ ಈ ರೀತಿಯ ಸಂಕಷ್ಟವನ್ನು ತಂದಿಟ್ಟ ದ್ದನ್ನು ಕಂಡು ನನಗಂತೂ ಅಚ್ಚರಿ. ಬೆಂಗಳೂರು, ಶಿವಮೊಗ್ಗದಂಥ ದೊಡ್ಡ ದೊಡ್ಡ ಊರುಗಳಲ್ಲಿ ಮನೆಮನೆಯಲ್ಲಿಯೂ ‘ಶುಗರ್ ಪೇಷೆಂಟ್’ಗಳನ್ನು ಕಂಡಿದ್ದೆ. ಮಲೆನಾಡಿನ ಅಂಚಿನಲ್ಲಿರುವ ಹಾಲಾಡಿಯಂಥ ಹಳ್ಳಿಯಲ್ಲೂ ಸಕ್ಕರೆ ಕಾಯಿಲೆಯ ಹಾವಳಿಯನ್ನು ಕಂಡು, ಆ ‘ರೋಗ’ ಅಥವಾ ದೇಹಸ್ಥಿತಿಯ ಕುರಿತು ನನ್ನಲ್ಲಿದ್ದ ತಿಳಿವಳಿಕೆಯೇ ಬುಡಮೇಲಾಯಿತು.

ಇತ್ತ ಬಯಲು ಸೀಮೆಯಲ್ಲೂ ಇಂಥದ್ದೇ ಸ್ಥಿತಿ ಇದೆ! ಸಕ್ಕರೆ ಕಾಯಿಲೆಯು ಇಂದು ನಮ್ಮ ನಾಡಿನ ಹಳ್ಳಿಹಳ್ಳಿಯನ್ನು ಪ್ರವೇಶಿಸಿದ ತೀವ್ರತೆ ಕಂಡು ನನಗೆ ದಿಗ್ಭ್ರಮೆ ಆದದ್ದಂತೂ ನಿಜ. ನಮ್ಮೂರಿನ ಪ್ರತಿಮನೆಯಲ್ಲಿಯೂ, ‘ಶುಗರ್ ಪೇಷೆಂಟ್’ ಇರುವ ವಿಚಾರ ಸಹ ನನ್ನನ್ನು ಅಚ್ಚರಿಗೆ ತಳ್ಳಿತು. ಹಾಲಾಡಿಯಲ್ಲಿನ ದುರ್ಗಾ ನರ್ಸಿಂಗ್ ಹೋಮ್ ವೈದ್ಯರಾದ ಡಾ.ಪದ್ಮನಾಭ ಆಚಾರ್ಯರೊಂದಿಗೆ ಈ ವಿಚಾರವಾಗಿ ಚರ್ಚಿಸಿದಾಗ, ಇಂಥದೊಂದು ಸ್ಥಿತಿ ಇರುವುದರ ಕುರಿತು ಖಚಿತಪಡಿಸಿದರು.

“ನಿಜ, ಈಗ ಇಲ್ಲಿ ಎಲ್ಲಾ ಕಡೆ ಸಕ್ಕರೆ ಕಾಯಿಲೆ ವ್ಯಾಪಕವಾಗಿದೆ. ಸಸ್ಯಾಹಾರಿಗಳಲ್ಲಿ ಇದು ಜಾಸ್ತಿ ಎಂದು ಅನಿಸಿದರೂ, ಎಲ್ಲ ಜನಾಂಗಗಳ ಮನೆಗಳಲ್ಲೂ ಈ ಕಾಯಿಲೆ ಹರಡಿದೆ. ಪ್ರತಿದಿನ ಕೆಲಸ ಮಾಡುವ ಶ್ರಮಜೀವಿಗಳ ಮನೆಗಳಲ್ಲೂ ಮಧುಮೇಹ ರೋಗಿಗಳಿರುವುದು ಈಗ ಸಾಮಾನ್ಯ ವೆನಿಸಿದೆ" ಎಂದು ಡಾ. ಪದ್ಮನಾಭ ಆಚಾರ್ಯರು ಹೇಳಿದ್ದು ಕೇಳಿ ನನಗೂ ಅಚ್ಚರಿ ಎನಿಸಿತು.

ಈ ನಡುವೆ ಮಧುಮೇಹದ ಕುರಿತು ಸಾಕಷ್ಟು ವಿಚಾರ ಓದಿದೆ. ಪಕ್ಕಾ ಗ್ರಾಮೀಣ ಪ್ರದೇಶವಾಗಿರುವ, ಶ್ರಮ ಸಂಸ್ಕೃತಿಯೇ ಪ್ರಧಾನವಾಗಿದ್ದ ನಮ್ಮೂರಿನಲ್ಲಿ, ಹೆಚ್ಚಿನ ಮನೆಗಳಲ್ಲಿ ಇಂಥದೊಂದು ಸಕ್ಕರೆ ಕಾಯಿಲೆ ಹರಡಲು ಮುಖ್ಯ ಕಾರಣಗಳೇನು ಎಂದು ಯೋಚಿಸಿದಾಗ, ಕೆಲವು ವಿಚಾರಗಳು ಗಮನಕ್ಕೆ ಬಂದವು. ಇದು ಕರಾವಳಿಯ ಹಳ್ಳಿ ಮಾತ್ರವಲ್ಲ, ನಮ್ಮ ರಾಜ್ಯದ ಹಲವು ಹಳ್ಳಿಗಳಲ್ಲಿನ ವಾಸ್ತವ ಎಂಬುದನ್ನು ಗಮನಿಸಬಹುದು. ಅರಿವಾಯಿತು.

1970ರ ದಶಕದಲ್ಲಿ, ನಮ್ಮೂರಿನಲ್ಲಿ ಹೆಸರೇ ಕೇಳದಿದ್ದ, ಅಂದಿನ ಶ್ರೀಮಂತರ ಮತ್ತು ನಗರ ವಾಸಿಗಳ ಸಕ್ಕರೆ ಕಾಯಿಲೆ, ಈಗ ಮನೆಮನೆಗೂ ಹರಡಿರುವ ಮುಖ್ಯ ಕಾರಣಗಳನ್ನು ಹೀಗೆ ಪಟ್ಟಿ ಮಾಡಬಹುದು:

೧. ಕಡಿಮೆಯಾದ ದೈಹಿಕ ಚಟುವಟಿಕೆ

೨. ಸಕ್ಕರೆ ಹಾಕಿದ ಚಹಾ, ಕಾಫಿಯನ್ನು ಪದೇ ಪದೆ ಸೇವಿಸುವಿಕೆ

೩. ವಿಶೇಷದ ಊಟಗಳಲ್ಲಿ ಸಿಹಿತಿನಿಸುಗಳನ್ನು ಸೇರಿಸಿ, ಹೊಟ್ಟೆ ಬಿರಿಯುವಂತೆ ತಿನ್ನುವುದು

೪. ಪದೇ ಪದೆ ಬಾಯಿರುಚಿಗೆ ಎಣ್ಣೆ ತಿಂಡಿಗಳ ಸೇವನೆ

೫. ನಾರುರಹಿತ ಆಹಾರ ಸೇವನೆ, ಮುಖ್ಯವಾಗಿ ಬೆಳ್ತಿಗೆ (ಬಿಳಿ) ಅಕ್ಕಿ ಊಟ

ನಾನು ವಿದ್ಯಾರ್ಥಿಯಾಗಿದ್ದಾಗ, ಪ್ರತಿದಿನ ಕನಿಷ್ಠ 6-8 ಕಿ.ಮೀ. ನಡೆಯುತ್ತಿದ್ದೆ. ನಾನು ಮಾತ್ರವಲ್ಲ, ನನ್ನ ಸಹಪಾಠಿಗಳು, ನಮ್ಮ ಮನೆಯವರು ಎಲ್ಲರೂ ಪೇಟೆಗೆ ಬರಬೇಕೆಂದರೆ ನಡೆಯಲೇಬೇಕು. ಜತೆಗೆ ಗಂಟಿ ಮೇಯಿಸುವ ಕೆಲಸ, ಗದ್ದೆ ಕೆಲಸ, ಬಟ್ಟೆ ಒಗೆಯುವುದು, ಬಗ್ಗುಬಾವಿಯಿಂದ ನೀರನ್ನು ಎತ್ತಿ ತರುವುದು ಇವೆಲ್ಲವೂ ಅಂದಿನ ದಿನಚರಿಯ ಭಾಗಗಳಾಗಿದ್ದವು.

ಇಂದಿನಂತೆ ಮನೆಗೊಂದರಂತೆ ಸ್ಕೂಟರ್, ಮೋಟರ್ ಬೈಕ್ ಅಂದು ಎಲ್ಲಿತ್ತು? ಅಂದು ಆಟೋ ರಿಕ್ಷಾ ಎಲ್ಲಿತ್ತು? ಕಾರು ಎಲ್ಲಿತ್ತು? ಅಸಲು ರಸ್ತೆಗಳೇ ಎಲ್ಲಿದ್ದವು? ಇಂದು ಎಲ್ಲರಲ್ಲೂ ಮೋಟಾರ್ ಬೈಕ್ ಇದೆ; ಶಾಲೆಗೆ ಮಕ್ಕಳು ನಡೆಯುವುದು ಕಡಿಮೆ. ಆಟೋರಿಕ್ಷಾ ಅಥವಾ ಶಾಲಾ ಬಸ್‌ಗಳ ಸೌಕರ್ಯ ಇದೆ.

ಜನರು, ಇಂದು ಮನರಂಜನೆಗಾಗಿಯೋ ಸುದ್ದಿ ತಿಳಿಯಲೋ ಗಂಟೆಗಟ್ಟಲೆ ಟಿವಿ ನೋಡುತ್ತಾರೆ. ಈ ಎಲ್ಲಾ ಸೌಕರ್ಯದಿಂದಾಗಿ, ನಡೆಯುವ ವ್ಯಾಯಾಮ ಕಡಿಮೆಯಾಗಿದೆ, ಶ್ರಮವಹಿಸಿ ಕೆಲಸ ಮಾಡು ವಾಗ ದೊರೆಯುತ್ತಿರುವ ವ್ಯಾಯಾಮವೂ ಕಡಿಮೆಯಾಗಿದೆ. ಜಗತ್ತಿನಲ್ಲಿಯೇ ‘ಅತ್ಯುತ್ತಮ ವ್ಯಾಯಾಮ’ ಎನಿಸಿರುವ ನಡಿಗೆ ನಮ್ಮ ಜನರ ಕೈತಪ್ಪಿ ಹೋಗಿದೆ.

ಹಳ್ಳಿಯ ಜನರು ಗದ್ದೆ-ತೋಟಗಳಲ್ಲಿ ಶ್ರಮವಹಿಸಿ ಕೆಲಸ ಮಾಡುವ ಪದ್ಧತಿಯೂ ಹಲವು ಕುಟುಂಬಗಳಲ್ಲಿ ಮರೆಯಾಗಿದೆ. ಮನೆ ಮನೆಯಲ್ಲೂ ಸಕ್ಕರೆ ಕಾಯಿಲೆ ಹೆಚ್ಚಲು ಇದು ಒಂದು ಪ್ರಮುಖ ಕಾರಣವಾಗಿದೆ.

ಮೂರು ದಶಕಗಳ ಹಿಂದೆ, ಸಕ್ಕರೆ ಹಾಕಿದ ಚಹಾ/ಕಾಫಿ ಕುಡಿಯಲು ನಿರ್ಬಂಧ ಇತ್ತು. 1970ರ ದಶಕದಲ್ಲಿ ಪಡಿತರ ಚೀಟಿಯ ಮೂಲಕ ನಮಗೆ ಸಿಗುತ್ತಿದ್ದುದು ಅರ್ಧ ಕೆ.ಜಿ. ಅಥವಾ ಒಂದು ಕೆಜಿ ಸಕ್ಕರೆ! ಒಂದು ತಿಂಗಳ ಕಾಲ ಅದನ್ನೇ ಮಿತವಾಗಿ ಬಳಸುವ ಅನಿವಾರ್ಯತೆ. ಕ್ರಮೇಣ ಮುಕ್ತ ಮಾರುಕಟ್ಟೆಯಲ್ಲಿ ಮಾಮೂಲಿ ದರದಲ್ಲಿ ಸಕ್ಕರೆ ದೊರೆಯಲು ಆರಂಭವಾಯಿತು.

ಸಕ್ಕರೆಯ ಬೆಲೆಯೂ ಕಡಿಮೆ ಆಯಿತು. ಬೆಳಗ್ಗೆ ಎದ್ದ ಕೂಡಲೆ ಕಾಫಿ, ತಿಂಡಿಯ ಜತೆಗೆ ಕಾಫಿ, 11 ಗಂಟೆಗೊಂದು ಚಹಾ, 5 ಗಂಟೆಗೆ ಕಾಫಿ, 7 ಗಂಟೆಗೆ ಕಾಫಿ, ರಾತ್ರಿ ಊಟದ ನಂತರ ಹಾಲು. ಈ ರೀತಿ ಪದೇ ಪದೆ, ಸಿಹಿ ಬೆರೆಸಿದ ಪಾನೀಯ ಸೇವನೆ ನಮ್ಮ ಮನೆಮನೆಗಳಲ್ಲಿ ಆರಂಭವಾಯಿತು. ಇದರ ಜತೆ, ಮನೆಗೆ ಯಾರಾದರೂ ಬಂದಾಗ, ಹೊರಗೆ ಹೋದಾಗ ಕಾಫಿ-ಟೀ ಸೇವನೆ. ನಮ್ಮ ದೇಹಕ್ಕೆ ಬೇಡವಾದ ನಿಧಾನ ವಿಷವೆನಿಸಿದ, ನಮ್ಮ ಜೀರ್ಣಾಂಗವ್ಯೂಹಕ್ಕೆ ಜೀರ್ಣಿಸಿಕೊಳ್ಳಲು ಕಷ್ಟವೆನಿಸಿದ, ರಕ್ತದಲ್ಲಿನ ನೈಸರ್ಗಿಕ ಇನ್ಸುಲಿನ್‌ನ ಸಮತೋಲನವನ್ನು ವ್ಯತ್ಯಯಮಾಡುವ ‘ಸಕ್ಕರೆ’ಯು ಈ ರೀತಿ ದೇಹವನ್ನು ಆಗಾಗ ಪ್ರವೇಶಿಸುವ ಪ್ರಕ್ರಿಯೆಯು ಕ್ರಮೇಣ ಮಧುಮೇಹಕ್ಕೆ ನಾಂದಿ ಹಾಡಿತು.

ನಮ್ಮ ದೇಹವು ಆಹಾರವನ್ನು ನುರಿದು, ಜೀರ್ಣಿಸಿ ತನಗೆ ಅಗತ್ಯವಾದ ಗ್ಲೂಕೋಸ್ (ಸಕ್ಕರೆಯ ಶಕ್ತಿ) ಅನ್ನು ತಯಾರಿಸಿಕೊಳ್ಳುತ್ತದೆ. ಅದು ಸಹಜಕ್ರಿಯೆ. ಆದರೆ ಈ ರೀತಿ, ಗಂಟೆಗೊಮ್ಮೆಯೋ, ಎರಡು ಗಂಟೆಗೊಮ್ಮೆಯೋ, ಕಾಫಿ ಮೂಲಕ ಹರಳು ರೂಪದ, ರಾಸಾಯನಿಕ ಬಳಸಿ ತಯಾರಿಸಿದ ಸಕ್ಕರೆ ನೇರವಾಗಿ ದೇಹವನ್ನು ಸೇರಿದಾಗ, ಅಲ್ಲಿನ ಸಮತೋಲನ ತಪ್ಪುವುದೇ ಸಕ್ಕರೆ ಕಾಯಿಲೆ ಹಬ್ಬಲು ಮತ್ತೊಂದು ಮುಖ್ಯ ಕಾರಣ.

ನಮ್ಮ ಊರುಗಳಲ್ಲಿ ಈಚೆಗೆ ಹೆಚ್ಚು ಹೆಚ್ಚು ಬಳಕೆಯಾಗುತ್ತಿರುವ ಬೆಳ್ತಿಗೆ ಅಕ್ಕಿ, ಸೊಸೈಟಿ ಅಕ್ಕಿ ಸಹ ಮಧುಮೇಹ ಹರಡಲು ತನ್ನದೇ ಕೊಡುಗೆ ನೀಡುತ್ತಿದೆ ಎಂದರೆ ನಿಮಗೆ ಅಚ್ಚರಿ ಆಗಬಹುದು!

ಏಕೆಂದರೆ ಅದರಲ್ಲಿ ನಾರಿನ ಅಂಶ, ವಿಟಮಿನ್ ಇಲ್ಲ. ಸಕ್ಕರೆಯ ರೀತಿಯಲ್ಲೇ, ಬಿಳಿ ಅಕ್ಕಿ, ಪಾಲಿಶ್ ಮಾಡಿದ ಅಕ್ಕಿ ಸಹ ನಮ್ಮ ದೇಹಕ್ಕೆ ಹಾನಿಕಾರಕ ಎಂಬುದು ಈಗ ವ್ಯಾಪಕವಾಗಿ ಸ್ವೀಕೃತ ವಾಗುತ್ತಿರುವ ಸತ್ಯ. ವಿಪರೀತ ಪಾಲಿಶ್ ಮಾಡಿದ ಬೆಳ್ತಿಗೆ ಅಕ್ಕಿಯಲ್ಲಿ ನಾರಿನ ಅಂಶ ಇರುವುದಿಲ್ಲ, ವಿಟಮಿನ್ ಇರುವುದಿಲ್ಲ. ಆದ್ದರಿಂದ ಬಿಳಿ ಅನ್ನವು ಬಹುಬೇಗನೆ ಜೀರ್ಣವಾಗಿ, ದೇಹಕ್ಕೆ ಅಗತ್ಯ ಕ್ಕಿಂತ ಹೆಚ್ಚು ಗ್ಲೂಕೋಸ್ ಕಡಿಮೆ ಅವಧಿಯಲ್ಲಿ ಸರಬರಾಜಾಗಿ, ರಕ್ತದಲ್ಲಿನ ಸಕ್ಕರೆಯ ಸಮತೋಲನವನ್ನು ಏರುಪೇರು ಮಾಡುತ್ತದೆ!

ಇದಕ್ಕೆ ಪರಿಹಾರವಾಗಿ ಸೂಚಿಸುವುದು ಸಿರಿಧಾನ್ಯಗಳಾದ ನವಣೆ ಅಕ್ಕಿ, ಅರ್ಕದ ಅಕ್ಕಿ, ಮೊದಲಾದ ವುಗಳ ಸೇವನೆ. ಕೊನೆಯ ಪಕ್ಷ, ಕರಾವಳಿಗರಲ್ಲಿ ವಿಶಿಷ್ಟ ಎನಿಸಿರುವ ಉತ್ತಮ ಗುಣಮಟ್ಟದ ಕುಚ್ಚಿಗೆ ಅಕ್ಕಿಯನ್ನು ಸೇವಿಸಿದರೂ ಸ್ವಲ್ಪ ಮಟ್ಟಿನ ಪರಿಹಾರ ದೊರಕೀತು. ಕುಚ್ಚಿಗೆ ಅನ್ನ ದೂರ ಮಾಡಿ, ಬೆಳ್ತಿಗೆ ಅಕ್ಕಿಯನ್ನು ಸೇವಿಸುವ ಪರಿಪಾಠ ಬೆಳೆಸಿಕೊಂಡವರ ಮನೆಗಳಲ್ಲಿ, ಸಕ್ಕರೆ ಕಾಯಿಲೆ ಜಾಸ್ತಿ!

ಸಿರಿಧಾನ್ಯ ಸೇವನೆ, ವಾಕಿಂಗ್ ಮೊದಲಾದ ಎಚ್ಚರಿಕೆಗಳನ್ನು ತೆಗೆದುಕೊಳ್ಳುವ ಮೂಲಕ ಸಕ್ಕರೆ ಕಾಯಿಲೆಯನ್ನು ರಿವರ್ಸ್ ಮಾಡಬಹುದು ಎಂದು ಹಾಲಾಡಿಯ ವೈದ್ಯ ಡಾ.ಪದ್ಮನಾಭ ಆಚಾರ್ಯರು ಹೇಳುತ್ತಾರೆ. ಮೈಸೂರಿನ ಪದ್ಮ ಪ್ರಶಸ್ತಿ ಪುರಸ್ಕೃತ ಡಾ. ಖಾದರ್ ಸಹ ಸಿರಿಧಾನ್ಯ ದಲ್ಲಿರುವ ನಾರಿನ ಅಂಶವು ದೇಹಕ್ಕೆ ಬಹು ಉಪಕಾರಿ ಎಂಬುದನ್ನು ಕಳೆದ 2 ದಶಕಗಳಿಂದ ಹೇಳುತ್ತಲೇ ಬಂದಿದ್ದಾರೆ.

ನಾನೇನು ಮಾಡಬೇಕು?

ನಮ್ಮ ತಾಲೂಕಿನ ಹಳ್ಳಿ ಹಳ್ಳಿಗಳಲ್ಲಿ, ನಮ್ಮ ಬಂಧುಗಳ ಮನೆಯಲ್ಲಿ ಕಿರುಕುಳ ಕೊಡುತ್ತಿರುವ ಸಕ್ಕರೆ ಕಾಯಿಲೆಯನ್ನು ದೂರ ಮಾಡಲು ಏನು ಮಾಡಬಹುದು? ಈಗ ಆರೋಗ್ಯವಂತರಾಗಿರು ವವರು ಮಧುಮೇಹದ ತೊಂದರೆಗೊಳಗಾಗದಂತೆ ಯಾವ ಮುನ್ನೆಚ್ಚರಿಕೆಯನ್ನು ವಹಿಸಬಹುದು? ಹಳ್ಳಿಗಳಲ್ಲಿನ ಜನಜೀವನದಲ್ಲಿ ನಾನು ಕಂಡ ಬದಲಾವಣೆಗಳ ಹಿನ್ನೆಲೆಯಲ್ಲಿ ಕೆಳಗಿನ ಒಂದೆರಡು ‘ಟಿಪ್ಸ್’ ಅಥವಾ ಕಿವಿಮಾತನ್ನು ಹೇಳಬಹುದು.

ಇವು ಅನುಭವಜನ್ಯ ಮತ್ತು ಸಂಗ್ರಹಿತ ಮಾಹಿತಿಯೇ ಹೊರತು ವೈದ್ಯಕೀಯ ಸಲಹೆ ಅಲ್ಲ. ಸಕ್ಕರೆ ಸೇವನೆಯ ಹಾನಿಯ ಕುರಿತು, ಸಿರಿಧಾನ್ಯ ಸೇವನೆಯ ಲಾಭಗಳ ಕುರಿತಾದ ಹೆಚ್ಚಿನ ಮಾಹಿತಿಯನ್ನು ನುರಿತ ವೈದ್ಯರ ಬಳಿಯೇ ಪಡೆಯಬೇಕು. ಇಂದಿನ ದಿನಚರಿಯಲ್ಲಿ ಸಕ್ಕರೆ ಕಾಯಿಲೆಯಿಂದ ದೂರ ಇರಲು ಈ ಸೂತ್ರಗಳನ್ನು ಪಾಲಿಸಬಹುದು:

1. ಪ್ರತಿದಿನ 30ರಿಂದ 40 ನಿಮಿಷಗಳ ಕಾಲ ನಡಿಗೆ. ಶಕ್ತಿ, ಅವಕಾಶ ಇದ್ದವರು ದಿನಕ್ಕೆ ಎರಡು ಬಾರಿ ನಡೆಯಬಹುದು. ಬೆಳಗ್ಗೆ ಬೇಗನೇ ನಡೆಯುವುದು ಸೂಕ್ತ. ಅದಾಗದಿದ್ದರೆ ದಿನದ ಯಾವುದೇ ಸಮಯದಲ್ಲೂ (ಊಟವಾದ ನಂತರ ಹೊರತುಪಡಿಸಿ) ನಡೆಯಬಹುದು.

2. ಸಕ್ಕರೆ ಬೆರೆಸಿದ ಯಾವುದೇ ಪಾನೀಯ, ತಿನಿಸು ತಿನ್ನಬಾರದು. ತಿಂದರೂ ಕನಿಷ್ಠಮಟ್ಟದಲ್ಲಿ ರಬೇಕು. ಬೆಳಗ್ಗೆ ಒಂದು ಕಾಫಿ, ಸಂಜೆ ಒಂದು ಕಾಫಿ ಅಥವಾ ಟೀ ಪರವಾಗಿಲ್ಲ. ಇದಕ್ಕಿಂತ ಹೆಚ್ಚಾದರೆ ರಿಸ್ಕ್ ಇದೆ. ಇಂದು ಅಂಗಡಿಗಳಲ್ಲಿ ದೊರಕುವ ಬೆಲ್ಲವನ್ನು ಸಹ ಸಕ್ಕರೆಯಿಂದಲೇ ತಯಾರಿಸುವ ಪದ್ಧತಿ ಇದೆ! ಆದ್ದರಿಂದ ಸಕ್ಕರೆಗಿಂತ ಬೆಲ್ಲ ಉತ್ತಮ ಎಂದು ಸಾರ್ವತ್ರಿಕವಾಗಿ ಹೇಳುವ ಕಾಲ ಇದಲ್ಲ!

3. ಬೆಳ್ತಿಗೆ ಅಕ್ಕಿಯ ಬದಲು ಕುಚ್ಚಿಗೆ ಅಕ್ಕಿ ಉತ್ತಮ. ಹಳ್ಳಿಯಲ್ಲಿ, ಹಳೆಯ ವಿಧಾನದಿಂದ ತಯಾರಿಸಿದ ಕುಚ್ಚಲು ಅಕ್ಕಿ ಒಳ್ಳೆಯದು. ಅವಕಾಶ, ಅನುಕೂಲ ಇರುವವರು ಸಿರಿಧಾನ್ಯ ಸೇವಿಸಬಹುದು. ಆಹಾರ ಮಿತವಾಗಿರಬೇಕು. ವಿಶೇಷದ ಊಟಕ್ಕೆ ಹೋದಾಗ, ದಿನಕ್ಕಿಂತ ಕಡಿಮೆ ತಿನ್ನಬೇಕು. ಅದರಲ್ಲೂ ಮುಖ್ಯವಾಗಿ ಪಾಯಸ, ಲಾಡು ಮೊದಲಾದವುಗಳನ್ನು ಕನಿಷ್ಟ ಮಟ್ಟದಲ್ಲಿ ಸ್ವೀಕರಿಸ ಬೇಕು.

ನಮ್ಮ ಸಮಾಜಕ್ಕೆ ಇಂದು ಒಂದು ಪಿಡುಗಾಗಿರುವ ಸಕ್ಕರೆ ಕಾಯಿಲೆ, ಒಟ್ಟಾರೆಯಾಗಿ ನಮ್ಮ ಜೀವನದ ಗುಣಮಟ್ಟವನ್ನೇ ಕಡಿಮೆಮಾಡುತ್ತಿದೆ!

ಸಕ್ಕರೆಯ ಸೇವನೆಯಿಂದ ದೂರವಿರುವ ಮೂಲಕ ಸಕ್ಕರೆ ಕಾಯಿಲೆಯನ್ನು ತಕ್ಕಮಟ್ಟಿಗೆ ದೂರ ವಿಡಬಹುದು! ಜತೆಗೆ ದೈಹಿಕ ಚಟುವಟಿಕೆ ಅತಿ ಮುಖ್ಯ.