Roopa Gururaj Column: ಅತಿಯಾಸೆ ಯಾರಿಗೂ ಒಳ್ಳೆಯದಲ್ಲ
ಅಜ್ಜಿ ತಾನು ಪ್ರೀತಿ ಪಡುತ್ತಿದ್ದ ಸ್ವಂತ ಜಮೀನನ್ನೇ ಯೋಚನೆ ಇಲ್ಲದೆ ಬಿಟ್ಟು ಹೋಗುತ್ತಿದ್ದಾಳೆ. ನನಗೆ ಈಗಲೇ ಅರ್ಧ ಆಯಸ್ಸು ಕಳೆದಿದೆ. ಇಷ್ಟೊಂದು ಜಮೀನುಗಳಿವೆ ಹೋಗುವಾಗ ಒಂದು ಹಿಡಿ ಮಣ್ಣು ಒಯ್ಯಲು ಸಾಧ್ಯವಿಲ್ಲ. ನನ್ನದು ಎಂಬುದು ಭ್ರಮೆ ಮಾತ್ರ ಎಂದುಕೊಂಡವನೇ ಅಜ್ಜಿಯನ್ನು ಕೂಗಿ ಕರೆದು ಕಾಲಿಗೆ ಬಿದ್ದು ನಮಸ್ಕರಿಸಿ ಕ್ಷಮೆಯಾಚಿಸಿದನು.


ಒಂದೊಳ್ಳೆ ಮಾತು
ಒಂದೂರಲ್ಲಿ ಒಬ್ಬ ಅಜ್ಜಿ ಇದ್ದಳು. ಅವಳಿಗೆ ಹಿರಿಯರಿಂದ ಬಂದ ಒಳ್ಳೆಯ ಜಮೀನು ಇತ್ತು. ಕಷ್ಟ ಪಟ್ಟಾದರೂ ಅದರಲ್ಲಿ ಒಂದಿಷ್ಟು ಬೆಳೆಯನ್ನು ಬೆಳೆದು ಜೀವಿಸುತ್ತಿದ್ದಳು. ಅದೇ ಊರಿನ ಇನ್ನೊಬ್ಬ ದೊಡ್ಡ ಜಮೀನುದಾರ, ಮಹಾಲೋಬಿ. ಊರಿನವರಿಗೆಲ್ಲ ಸಾಲ ಕೊಟ್ಟು, ಬಡ್ಡಿ ಲೆಕ್ಕದಲ್ಲಿ ಅವರ ತುಂಡು ತುಂಡು ಜಮೀನುಗಳನ್ನೆಲ್ಲ ತನ್ನದಾಗಿಸಿಕೊಂಡು ಊರಿಗೆ ಶ್ರೀಮಂತನಾಗಿ ಮೆರೆಯು ತ್ತಿದ್ದ. ಊರಿನಲ್ಲಾ ಜಮೀನಿನ ಮಧ್ಯೆ ಅಜ್ಜಿಯ ಜಮೀನು ಮಾತ್ರ ಅವನಿಗೆ ದಕ್ಕಿರಲಿಲ್ಲ.
ಎಷ್ಟೇ ಕೇಳಿದರೂ ಅಜ್ಜಿ ಅದನ್ನು ಮಾರಲು ಸಿದ್ಧವಿರಲಿಲ್ಲ. ಕೊನೆಗೆ ಮೋಸದ ದಾಖಲೆ ಸೃಷ್ಟಿಸಿ, ಅವಳ ಮುಂದೆ ಹಿಡಿದು ಈ ಜಮೀನು ನನಗೆ ಸೇರಿದ್ದು ಎಂದ. ಅವಳಿಗೆ ದಿಕ್ಕು ತೋಚದಾಯಿತು. ಊರಿನವರೆಲ್ಲ ಅವನ ಹಂಗಿನಲ್ಲಿ ಇದ್ದವರೆ. ಯಾರು ಕೂಡ ಅಜ್ಜಿಯ ಪರವಾಗಿ ನಿಲ್ಲದೇ ಹೋದರು. ಹೀಗಾಗಿ ಅವಳ ಜಮೀನೆಲ್ಲ ಜಮೀನ್ದಾರನದೇ ಎಂದು ಸಾಬೀತಾಯಿತು. ಕೋರ್ಟು ಸಹ ಅವನ ಪರವಾಗಿ ತೀರ್ಪು ನೀಡಿತು.
ಮುದುಕಿಗೆ ಇದರಿಂದ ದುಃಖವಾಯಿತು ಆದರೆ ಅವಳು ಅಳಲಿಲ್ಲ. ಎಷ್ಟೆಷ್ಟು ಲಭ್ಯವಿದೆಯೋ ಅಷ್ಟೇ ಸಿಗುವುದು ಇನ್ನು ಮುಂದೆ ಈ ಊರಿನಲ್ಲೇ ಇರುವುದಿಲ್ಲ ಎಂದು ಗಂಟು ಕಟ್ಟಿಕೊಂಡು ಕೊನೆಯ ಬಾರಿ ಜಮೀನಿಗೆ ಬಂದು ಮನೆದೇವರನ್ನು ನೆನೆಯುತ್ತಾ, "ಭಗವಂತ ಇದು ನನ್ನ ಸೋಲ ಲ್ಲ. ನೀನು ಸೋತಿರುವೆ ಜಮೀನ್ದಾರ ಗೆದ್ದಿದ್ದಾನೆ". ಅಷ್ಟೇ ಇದರಲ್ಲಿ ನನ್ನದೇನೂ ಇಲ್ಲ ಎಂದು ಕಣ್ಣೀರಿಟ್ಟಳು. ಅಲ್ಲೇ ನಿಂತಿದ್ದ ಜಮೀನ್ದಾರನಿಗೆ , ಈ ಮಣ್ಣಿನ ವಾಸನೆ ಇಲ್ಲದಿದ್ದರೆ ನನಗೆ ನಿದ್ದೆ ಬರುವುದಿಲ್ಲ.
ಇದನ್ನೂ ಓದಿ: Roopa Gururaj Column: ಭಗವಂತನನ್ನು ಕಾಣಲು ಬೇಕಾದ ಭಾವ
ನಾನು ಇಲ್ಲಿಂದ ಒಂದು ಬುಟ್ಟಿ ಮಣ್ಣು ತೆಗೆದುಕೊಂಡು ಹೋಗಬಹುದೇ? ಎಂದು ಕೇಳಿದಳು. ಜಮೀನ್ದಾರ ಇಷ್ಟೇನಾ ಧಾರಾಳವಾಗಿ ತೆಗೆದುಕೊಂಡು ಹೋಗು ಎಂದನು. ಅಜ್ಜಿಯು ಒಂದು ಬುಟ್ಟಿ ತುಂಬಾ ಮಣ್ಣನ್ನು ತುಂಬಿಸಿದಳು. ಎತ್ತಲು ಹೋದಳು ಅವಳ ಕೈಲಿ ಆಗಲಿಲ್ಲ.
ಜಮೀನ್ದಾರನಿಗೆ ಅದನ್ನು ಎತ್ತಿ ತಲೆಯ ಮೇಲೆ ಇಡಲು ಹೇಳಿದಳು. ಅವನು ತುಂಬಿದ ಬುಟ್ಟಿ ಎತ್ತಲು ಹೋದ ಅವನ ಕೈಲೂ ಎತ್ತಲು ಆಗಲಿಲ್ಲ ಭಾರವಿತ್ತು. ಇದೇನಜ್ಜಿ ನಿನಗೆ ಎಷ್ಟು ಸಾಧ್ಯವೋ ಅಷ್ಟನ್ನು ತೆಗೆದುಕೊಂಡು ಹೋಗಬೇಕು ಅದು ಬಿಟ್ಟು ಈ ಪಾಟಿ ತೆಗೆದುಕೊಂಡರೆ, ಹೊತ್ತು ಕೊಂಡು ಹೋಗಲು ಆಗುತ್ತದೆಯೇ ? ನಿನಗೆ ಬುದ್ಧಿ ಇದೆಯಾ? ಎಂದನು. ತಕ್ಷಣ ಮುದುಕಿ ನಗುತ್ತಾ ನೋಡಿದೆಯಾ? ನನ್ನ ಜಮೀನಿನ ಒಂದು ಬುಟ್ಟಿ ಮಣ್ಣನ್ನೆ ನಾನು ಹೊತ್ತುಕೊಂಡು ಹೋಗಲು ಆಗುವುದಿಲ್ಲ.
ಇನ್ನು ನೀನು ಯಾರ್ಯಾರದ್ದೊ ಜಮೀನನ್ನೆಲ್ಲ ಕಬಳಿಸಿ ಇದೆಲ್ಲಾ ನನ್ನದು, ನಾನು ಎಷ್ಟು ದೊಡ್ಡ ಶ್ರೀಮಂತ ಎಂದು ಹೇಳಿಕೊಂಡು ಓಡಾಡುತ್ತಿಯಲ್ಲಾ ನಾಳೆ ನೀನು ಸತ್ತರೆ, ಈ ಜಮೀನಿನಲ್ಲಿರುವ ಒಂದು ಬುಟ್ಟಿ ಮಣ್ಣಿರಲಿ ಒಂದು ಹಿಡಿ ಮಣ್ಣನ್ನು ಹೊತ್ತುಕೊಂಡು ಹೋಗಲಾರೆ. ನಾನು ಇಂದೋ, ನಾಳೆಯೋ ಸಾಯುವ ಮುದುಕಿ ನನಗೆ ಯಾವ ಹೊರೆಯೂ ಬೇಡ. ಎಲ್ಲಾ ಹೊರೆ ನಿನ್ನ ಮೇಲೆ ಇರಲಿ ಎಂದು ಮಣ್ಣನ್ನು ಅಲ್ಲೇ ಬಿಟ್ಟು ಅಜ್ಜಿ ಹೊರಟಳು. ಅಜ್ಜಿ ಮಾತು ಕೇಳಿ ಜಮೀನ್ದಾ ರನ ಮನಸ್ಸು ಕಲಕಿತು, ಹೌದು ನಾನು ಇಷ್ಟೂಂದು ಜಮೀನು ಮಾಡಿರುವೆ, ಅದೂ ನನ್ನ ಸ್ವಂತದ್ದಲ್ಲ.
ಅಜ್ಜಿ ತಾನು ಪ್ರೀತಿ ಪಡುತ್ತಿದ್ದ ಸ್ವಂತ ಜಮೀನನ್ನೇ ಯೋಚನೆ ಇಲ್ಲದೆ ಬಿಟ್ಟು ಹೋಗುತ್ತಿದ್ದಾಳೆ. ನನಗೆ ಈಗಲೇ ಅರ್ಧ ಆಯಸ್ಸು ಕಳೆದಿದೆ. ಇಷ್ಟೊಂದು ಜಮೀನುಗಳಿವೆ ಹೋಗುವಾಗ ಒಂದು ಹಿಡಿ ಮಣ್ಣು ಒಯ್ಯಲು ಸಾಧ್ಯವಿಲ್ಲ. ನನ್ನದು ಎಂಬುದು ಭ್ರಮೆ ಮಾತ್ರ ಎಂದುಕೊಂಡವನೇ ಅಜ್ಜಿ ಯನ್ನು ಕೂಗಿ ಕರೆದು ಕಾಲಿಗೆ ಬಿದ್ದು ನಮಸ್ಕರಿಸಿ ಕ್ಷಮೆಯಾಚಿಸಿದನು. ಅವಳ ಕಾಗದ ಪತ್ರ ಗಳನ್ನೆಲ್ಲ ಹರಿದು ಇನ್ನು ಮುಂದೆ ನೀನು ಇಲ್ಲಿಯೇ ಇರು ಎಂದು ಕೇಳಿಕೊಂಡನು. ಅಜ್ಜಿ ಸಮಾಧಾನದ ಉಸಿರು ಬಿಟ್ಟಳು.
ಬೇಕು ಬೇಡವೋ ಅಗತ್ಯಕ್ಕಿಂತ ಹೆಚ್ಚು ಸಾಮಾನುಗಳನ್ನು ಕೊಳ್ಳುತ್ತಾ ಹಣವನ್ನು ಪೋಲು ಮಾಡುವವರಿಗೆಲ್ಲ ಇದು ಒಂದು ಪಾಠ. ಎಲ್ಲವನ್ನು ಬಿಟ್ಟು ಒಂದು ದಿನ ನಡೆಯಲೇಬೇಕು. ಬದುಕಿರುವವರೆಗೂ ನಾಲ್ಕು ಜನರಿಗೆ ಸಹಾಯ ಮಾಡೋಣ.