ಫೋಟೋ ಗ್ಯಾಲರಿ ಗುಜರಾತ್​ ವಿಮಾನ ಪತನ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Ganesh Bhat Column: ಭಾರತವು ನಾಲ್ಕನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗುತ್ತಿರುವುದು ಹೇಗೆ ?

ಭಾರತದಲ್ಲಾದ ತೆರಿಗೆ ಸುಧಾರಣೆ, ಕೇಂದ್ರ ಮಟ್ಟದಲ್ಲಿ ಕಡಿಮೆಯಾದ ಭ್ರಷ್ಟಾಚಾರ, ರಾಜಕೀಯ ಇಚ್ಛಾ ಶಕ್ತಿ, ಡಿಜಿಟಲ್ ಇಂಡಿಯಾ ಮೂಲಕ ಫಲಾನುಭವಿಗಳಿಗೆ ಸಹಾಯಧನದ ನೇರ ಹಸ್ತಾಂತರ, ಮೂಲ ಭೂತ ಸೌಕರ್ಯಗಳಲ್ಲಾದ ಭಾರಿ ಅಭಿವೃದ್ಧಿ, ಓಬೀರಾಯನ ಕಾಲದ ಕಾನೂನುಗಳ ಸುಧಾರಣೆ, ಸ್ಟಾರ್ಟ್-ಅಪ್ ಇಂಡಿಯಾ ಮತ್ತು ಮೇಕ್ ಇನ್ ಇಂಡಿಯಾ ಉಪಕ್ರಮಗಳು ಭಾರತವನ್ನಿಂದು ಅತಿ ವೇಗವಾಗಿ ಬೆಳೆಯುತ್ತಿರುವ ಆರ್ಥಿಕ ಶಕ್ತಿಯನ್ನಾಗಿ ರೂಪಿಸಿವೆ.

ಭಾರತವು ನಾಲ್ಕನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗುತ್ತಿರುವುದು ಹೇಗೆ ?

Profile Ashok Nayak Jun 16, 2025 8:35 AM

ವಿತ್ತಲೋಕ

ಗಣೇಶ್‌ ಭಟ್‌, ವಾರಾಣಾಸಿ

ಕೆನಡಾ ದೇಶದ ಪ್ರಧಾನಿ ಮಾರ್ಕ್ ಕಾನಿ ಅವರು ಭಾರತದ ಪ್ರಧಾನಿ ನರೇಂದ್ರ ಮೋದಿಯವರಿಗೆ ಇತ್ತೀಚೆಗೆ ಕರೆ ಮಾಡಿ, ಜೂನ್ 15ರಿಂದ 17ರವರೆಗೆ ಕೆನಡಾದ ಅಲ್ಬೆರ್ಟ ಕೆನಾನಸ್ಕಿಸ್‌ನಲ್ಲಿ ನಡೆಯ ಲಿರುವ ಜಿ-7 ರಾಷ್ಟ್ರಗಳ ನಾಯಕರ ಶೃಂಗಸಭೆಗೆ ಆಹ್ವಾನಿಸಿದರು. ಮಾರ್ಕ್ ಕಾನಿಗಿಂತ ಮೊದಲು ಕೆನಡಾದ ಪ್ರಧಾನಿಯಾಗಿದ್ದ ಜಸ್ಟಿನ್ ಟ್ರೂಡೋ ಅವರು ಪ್ರತ್ಯೇಕತಾವಾದಿ ಖಲಿಸ್ತಾನಿ ಉಗ್ರರ ಪರವಾಗಿ ನಿಂತುದರಿಂದ ಭಾರತ ಮತ್ತು ಕೆನಡಾಗಳ ನಡುವಿನ ಸಂಬಂಧ ಹದಗೆಟ್ಟಿತ್ತು. 2023ರಲ್ಲಿ ಕೆನಡಾದಲ್ಲಿ ಖಲಿಸ್ತಾನಿ ಉಗ್ರ ಹರ್‌ದೀಪ್ ಸಿಂಗ್ ನಿಜ್ಜರ್‌ನ ಹತ್ಯೆಯ ಆರೋಪವನ್ನು ಜಸ್ಟಿನ್ ಟ್ರೂಡೋ ನೇರವಾಗಿ ಭಾರತದ ಮೇಲೆ ಹೊರಿಸಿದ ನಂತರ ವಂತೂ, ಭಾರತ ಮತ್ತು ಕೆನಡಾ ದೇಶಗಳು ರಾಜಕೀಯ ಸಂಬಂಧಗಳನ್ನೇ ಕಡಿದುಕೊಂಡು ಪರಸ್ಪರರ ರಾಯಭಾರಿಗಳನ್ನು ಉಚ್ಚಾಟಿಸಿದ್ದವು.

ನಂತರದ ದಿನಗಳಲ್ಲಿ, ಕೆನಡಾದಲ್ಲಾದ ರಾಜಕೀಯ ಬೆಳವಣಿಗೆಯಿಂದಾಗಿ ಪ್ರಧಾನಿ ಸ್ಥಾನಕ್ಕೆ ಜಸ್ಟಿನ್ ಟ್ರೂಡೋ ರಾಜೀನಾಮೆ ಕೊಡಬೇಕಾಯಿತು. ನಂತರ ಪ್ರಧಾನಿಯಾಗಿ ಆಯ್ಕೆಯಾದ ಮಾರ್ಕ್ ಕಾನಿ ಇದೀಗ ಜಿ-7 ಶೃಂಗಸಭೆಗೆ ಭಾರತವನ್ನು ಆಮಂತ್ರಿಸಿದ್ದಾರೆ. ನಿಜ್ಜರ್ ಹತ್ಯೆ ಪ್ರಕರಣ ವನ್ನು ಕೆದಕಿದ ಕೆನಡಾದ ಪತ್ರಕರ್ತರು, “ಮೋದಿಯವರಿಗೇಕೆ ಹೀಗೆ ಆಹ್ವಾನ ಕೊಟ್ಟಿರಿ?" ಎಂದು ಪ್ರಶ್ನಿಸಿದಾಗ ಮಾರ್ಕ್ ಕಾನಿಯವರು, “ಜಗತ್ತಿನ ಅತಿಹೆಚ್ಚು ಜನಸಂಖ್ಯೆಯಿರುವ ಭಾರತವು ಜಾಗತಿಕ ವಾಗಿ 5ನೇ ಅತಿದೊಡ್ಡ ಆರ್ಥಿಕ ರಾಷ್ಟ್ರವಾಗಿದ್ದು, ಜಾಗತಿಕ ಪೂರೈಕೆಯ ಸರಪಣಿಯ ಹೃದಯ ದಂತಿದೆ.

ಹೀಗಾಗಿ ಇಂಥ ನಿರ್ದಿಷ್ಟ ಪ್ರದೇಶಗಳನ್ನು ಶೃಂಗಸಭೆಯ ಮಾತುಕತೆಗಳಲ್ಲಿ ಒಳಗೊಳಿಸುವುದು ಅನಿವಾರ್ಯ" ಎಂದುತ್ತರಿಸಿದರು. ಇಂದಿನ ದಿನಗಳಲ್ಲಿ ಭಾರತವು ಜಗತ್ತಿಗೆ ಎಷ್ಟು ಅನಿವಾರ್ಯ ವಾಗಿದೆ ಎಂಬುದು ಇದರಿಂದ ಅರ್ಥವಾಗುತ್ತದೆ.

ಇದನ್ನೂ ಓದಿ: Ganesh Bhat Column: ಭಾರತದಲ್ಲಿ ಆಗುತ್ತಿರುವ ಬಡತನ ನಿವಾರಣೆ ಆಕಸ್ಮಿಕವೇ ?

2014ರಲ್ಲಿ, ಜಾಗತಿಕ ಆರ್ಥಿಕ ಬಲಾಢ್ಯ ದೇಶಗಳ ಪಟ್ಟಿಯಲ್ಲಿ 10ನೇ ಸ್ಥಾನದಲ್ಲಿದ್ದ ಭಾರತವು ಕಳೆದ 11 ವರ್ಷಗಳಲ್ಲಿ ಕ್ಷಿಪ್ರ ಆರ್ಥಿಕ ಪ್ರಗತಿಯನ್ನು ಸಾಧಿಸಿ, ರಷ್ಯಾ, ಬ್ರೆಜಿಲ್, ಇಟಲಿ, ಫ್ರಾನ್ಸ್, ಇಂಗ್ಲೆಂಡ್‌ ಗಳನ್ನು ಹಿಂದಿಕ್ಕಿ ಹಾಗೂ ಈಗ ಜಪಾನ್ ಅನ್ನೂ ದಾಟಿ ನಾಲ್ಕನೇ ಸ್ಥಾನಕ್ಕೆ ಏರಲಿದೆ. 2024-25ರಲ್ಲಿ ಶೇ.6.5ರಷ್ಟು ಆರ್ಥಿಕ ಬೆಳವಣಿಗೆಯನ್ನು ಸಾಧಿಸಿರುವ ಭಾರತವು, ಜಗತ್ತಿನ ಅತಿವೇಗವಾಗಿ ಬೆಳೆಯು ತ್ತಿರುವ ಜಿಡಿಪಿಯಾಗಿ ಹೊರಹೊಮ್ಮಿದೆ.

ಮುಂದಿನ ವರ್ಷಗಳಲ್ಲೂ ಭಾರತವು ಇದೇ ವೇಗವನ್ನು ಕಾಯ್ದುಕೊಳ್ಳಲಿದೆ ಎಂದು ಅಂದಾಜಿಸ ಲಾಗಿದೆ. 2025-26ರ ಆರ್ಥಿಕ ವರ್ಷಾಂತ್ಯಕ್ಕೆ ಭಾರತದ ಒಟ್ಟು ದೇಶೀಯ ಉತ್ಪಾದನೆಯ ಮೌಲ್ಯ (ಜಿಡಿಪಿ) 4.187 ಲಕ್ಷ ಕೋಟಿ ಡಾಲರ್‌ಗೆ ಏರಲಿದೆ. 2013-14ರಲ್ಲಿ ಭಾರತದ ಜಿಡಿಪಿ ಮೌಲ್ಯವು 1.86 ಟ್ರಿಲಿಯನ್ ಡಾಲರ್‌ನಷ್ಟಿತ್ತು.

2014ರಲ್ಲಿ ಅಸ್ಥಿರ ಆರ್ಥಿಕತೆಯುಳ್ಳ ‘ಫ್ರಾಜೈಲ್ 5’ ರಾಷ್ಟ್ರಗಳ ಪಟ್ಟಿಯಲ್ಲಿದ್ದ ಭಾರತವು, 202ರಲ್ಲಿ ಜರ್ಮನಿಯನ್ನು ಹಿಂದಿಕ್ಕಿ ಜಾಗತಿಕವಾಗಿ ಮೂರನೆಯ ಅತಿದೊಡ್ಡ ಆರ್ಥಿಕ ಶಕ್ತಿಯಾಗಲಿದೆ ಎಂದು ತಜ್ಞರು ಅಂದಾಜಿಸಿದ್ದಾರೆ. ಭಾರತದಲ್ಲಾದ ಈ ಆರ್ಥಿಕ ಪ್ರಗತಿಯು ಆಕಸ್ಮಿಕವಲ್ಲ. ಇದರ ಹಿಂದೆ ಸರಕಾರವು ತೆಗೆದುಕೊಂಡ ಯೋಜನಾಬದ್ಧ ಹೆಜ್ಜೆಗಳಿವೆ. ಭಾರತದಲ್ಲಾದ ತೆರಿಗೆ ಸುಧಾರಣೆ, ಕೇಂದ್ರ ಮಟ್ಟದಲ್ಲಿ ಕಡಿಮೆಯಾದ ಭ್ರಷ್ಟಾಚಾರ, ರಾಜಕೀಯ ಇಚ್ಛಾಶಕ್ತಿ, ಡಿಜಿಟಲ್ ಇಂಡಿಯಾ ಮೂಲಕ ಫಲಾನುಭವಿಗಳಿಗೆ ಸಹಾಯಧನದ ನೇರ ಹಸ್ತಾಂತರ (ಡೈರೆಕ್ಟ್ ಬೆನಿಫಿಟ್ ಟ್ರಾನ್ಸ್ ಫರ್- ಡಿಬಿಟಿ), ಮೂಲಭೂತ ಸೌಕರ್ಯಗಳಲ್ಲಾದ ಭಾರಿ ಅಭಿವೃದ್ಧಿ, ಓಬೀರಾಯನ ಕಾಲದ ಕಾನೂನು ಗಳ ಸುಧಾರಣೆ, ಸ್ಟಾರ್ಟ್-ಅಪ್ ಇಂಡಿಯಾ ಮತ್ತು ಮೇಕ್ ಇನ್ ಇಂಡಿಯಾ ಉಪಕ್ರಮಗಳು, ಉತ್ಪಾದನಾಧಾರಿತ ಪ್ರೋತ್ಸಾಹಧನ (ಪ್ರೊಡಕ್ಷನ್ ಲಿಂಕ್ಡ್ ಇನ್ಸೆಂಟಿವ್), ಪ್ರಾದೇಶಿಕ ಸಮಾನತೆ, ಅಂತಾರಾಷ್ಟ್ರೀಯ ಸಂಬಂಧಗಳಲ್ಲಾದ ಸುಧಾರಣಾ ಕ್ರಮಗಳು, ಹೆಚ್ಚಾದ ವಿದೇಶಿ ನೇರ ಹೂಡಿಕೆ ಳು ಮೊದಲಾದ ಸಕಾರಾತ್ಮಕ ನಡೆಗಳು ಭಾರತವನ್ನಿಂದು ಜಾಗತಿಕವಾಗಿ ಅತಿ ವೇಗವಾಗಿ ಬೆಳೆಯುತ್ತಿರುವ ಆರ್ಥಿಕ ಶಕ್ತಿಯನ್ನಾಗಿ ರೂಪಿಸಿವೆ.

ತೆರಿಗೆ ವ್ಯವಸ್ಥೆಯಲ್ಲಾದ ಸುಧಾರಣೆಯು ಭಾರತದ ಆರ್ಥಿಕತೆಯನ್ಜು ಸುಧಾರಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿತು. ವಾಣಿಜ್ಯ ತೆರಿಗೆಯಡಿಯಲ್ಲಿ ವ್ಯಾಟ್, ಕಸ್ಟಮ್ ಡ್ಯೂಟಿ, ಎಕ್ಸೈಸ್ ಡ್ಯೂಟಿ, ಅಂತಾರಾಜ್ಯ ತೆರಿಗೆ, ಆಕ್ಟ್ರಾಯ್ ತೆರಿಗೆ, ಸೆಸ್ ಹೀಗೆ ಹತ್ತು ಹಲವು ತೆರಿಗೆಗಳು ಸೇರಿಕೊಂಡು ಇಡೀ ವ್ಯವಸ್ಥೆಯನ್ನು ಜಟಿಲಗೊಳಿಸಿದ್ದವು.

ಇದನ್ನು ‘ಟ್ಯಾಕ್ಸ್ ಟೆರರಿಸಂ’ ಎನ್ನಲಾಗುತ್ತಿತ್ತು. ತೆರಿಗೆಯ ವಿವಿಧ ಹಂತಗಳಲ್ಲಿ ಸೋರಿಕೆಯಾಗುವು ದರೊಂದಿಗೆ ಉತ್ಪಾದಕರು, ಪೂರೈಕೆದಾರರು ಮತ್ತು ಗ್ರಾಹಕರನ್ನು ಈ ಎಲ್ಲಾ ತೆರಿಗೆಗಳು ಕಾಡು ತ್ತಿದ್ದವು. ಇಂಥ ವಿವಿಧ ತೆರಿಗೆಗಳನ್ನು ತೆಗೆದು ಹಾಕಿ ನಾಲ್ಕು ಸ್ತರಗಳಲ್ಲಿ ಜಾರಿಗೆ ತಂದ ಏಕರೂಪದ ಜಿಎಸ್‌ಟಿ ಪದ್ಧತಿಯು ವಾಣಿಜ್ಯ ತೆರಿಗೆ ವ್ಯವಸ್ಥೆಯನ್ನು ಸರಳಗೊಳಿಸಿ ಉತ್ಪಾದನೆ, ವ್ಯಾಪಾರಗಳನ್ನು ಸುಗಮಗೊಳಿಸಿತು.

ಅದೇ ರೀತಿ, ಗ್ರಾಹಕನ ಮೇಲಿನ ಭಾರವನ್ನೂ ಜಿಎಸ್‌ಟಿ ಪದ್ಧತಿಯು ಇಳಿಸಿದೆ. 2019ರಲ್ಲಿ ನಡೆಸಲಾದ ಅಧ್ಯಯನವೊಂದು, ‘ಹಿಂದಿನ ವಾಣಿಜ್ಯ ತೆರಿಗೆ ವ್ಯವಸ್ಥೆಗೆ ಹೋಲಿಸಿದರೆ ಜಿಎಸ್‌ಟಿ ವ್ಯವಸ್ಥೆಯಲ್ಲಿ ಪ್ರತಿ ತಿಂಗಳು ಗ್ರಾಹಕನಿಗೆ 320 ರುಪಾಯಿಗಳ ಉಳಿತಾಯವಾಗುತ್ತದೆ’ ಎಂದಿದೆ.

ಅದೇ ರೀತಿ, ಜಿಎಸ್‌ಟಿ ಪದ್ಧತಿಯಿಂದ ತೆರಿಗೆ ಸೋರಿಕೆ ತುಂಬಾ ಕಡಿಮೆಯಾಗಿದೆ. ಜಿಎಸ್‌ಟಿ ಆರಂಭ ವಾದ 2017-18ರಲ್ಲಿ ಮಾಸಿಕ ಸಂಗ್ರಹದ ಸರಾಸರಿಯು ಸುಮಾರು 20 ಸಾವಿರ ಕೋಟಿ ರುಪಾಯಿ ಗಳಾಗಿದ್ದರೆ, 2024-25ಕ್ಕೆ ಆ ಮೊತ್ತ ದ್ವಿಗುಣಗೊಂಡು 1.84 ಲಕ್ಷ ಕೋಟಿ ರುಪಾಯಿ ಗಳಿಗೇರಿದೆ.

ಈ ಮೊತ್ತವು ಈ ವರ್ಷದಲ್ಲಿ 2 ಲಕ್ಷ ಕೋಟಿಯನ್ನು ದಾಟಲಿದೆ. ಹೆಚ್ಚು ತೆರಿಗೆ ಸಂಗ್ರಹವಾದಷ್ಟೂ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಸರಕಾರಕ್ಕೆ ಹೆಚ್ಚು ಸಂಪನ್ಮೂಲ ಸಿಗುತ್ತದೆ. ಭಾರತದಲ್ಲಿ ಹೂಡಿಕೆಯ ವಾತಾವರಣವನ್ನು ಉತ್ತಮಗೊಳಿಸಲಾಗಿದೆ. ‘ಈಸ್ ಆಫ್ ಡೂಯಿಂಗ್ ಬ್ಯುಸಿನೆಸ್’‌ ನಲ್ಲಿ ಭಾರತವು ತನ್ನ ಸ್ಥಾನವನ್ನು ಸುಧಾರಿಸುತ್ತಾ ಬಂದಿದೆ. ದೇಶದಲ್ಲಿದ್ದ ಹಲವು ಹಳೆಯ ಕಾನೂನುಗಳು, ಉದ್ಯಮ ಸ್ಥಾಪನೆಗೆ ಮತ್ತು ಹೂಡಿಕೆಗಳಿಗೆ ಅಡ್ಡಿಮಾಡುತ್ತಿದ್ದವು.

ಆ ಕಾನೂನುಗಳನ್ನು ತೆಗೆದು ಹಾಕಿ ಹಾದಿಯನ್ನು ಸುಗಮಗೊಳಿಸಲಾಗಿದೆ. ಹಲವು ಕ್ಷೇತ್ರಗಳಲ್ಲಿ ಶೇ.100ರಷ್ಟು ವಿದೇಶಿ ನೇರ ಹೂಡಿಕೆಗೆ ಅನುಮತಿಸಲಾಗಿದೆ. ಇದರಿಂದಾಗಿ ಭಾರತದಲ್ಲಿ ಹೂಡಿಕೆ ಗಳ ಜತೆಜತೆಗೆ ಉದ್ಯಮಾವಕಾಶಗಳು ಗಣನೀಯವಾಗಿ ಹೆಚ್ಚಾಗಿವೆ. ಕಳೆದ 11 ವರ್ಷಗಳಲ್ಲಿ ಭಾರತ ದಲ್ಲಿ 769 ಶತಕೋಟಿ ಡಾಲರ್‌ಗಳಷ್ಟು ವಿದೇಶಿ ನೇರ ಹೂಡಿಕೆಯಾಗಿದೆ.

2004ರಿಂದ 2014ರವರೆಗಿನ ಅವಧಿಯೊಡನೆ ಹೋಲಿಸಿದಾಗ, 2014-2024ರ ಅವಧಿಯಲ್ಲಿ ಭಾರತ ದಲ್ಲಾದ ವಿದೇಶಿ ಹೂಡಿಕೆಯ ಪ್ರಮಾಣ ದ್ವಿಗುಣಗೊಂಡಿದೆ ಮತ್ತು 2024-25ರಲ್ಲಿ ಇದು 81 ಶತ ಕೋಟಿ ಡಾಲರ್‌ಗಳಷ್ಟು ಪ್ರಮಾಣಕ್ಕೆ ಮುಟ್ಟಿದೆ. ಹೆಚ್ಚಾದ ವಿದೇಶಿ ಹೂಡಿಕೆಯಿಂದಾಗಿ ಕೈಗಾರಿಕೆ ಗಳು, ರಫ್ತು ಪ್ರಮಾಣ, ಉದ್ಯೋಗಾವಕಾಶಗಳು ಹೆಚ್ಚಾದವು ಹಾಗೂ ದೇಶದ ಆದಾಯವೂ ಹೆಚ್ಚಿತು.

ಮೂಲಭೂತ ಸೌಕರ್ಯಗಳಲ್ಲಾದ ಅಭಿವೃದ್ಧಿಯು ವಿವಿಧ ನೆಲೆಗಟ್ಟಿನಲ್ಲಿ ದೇಶದ ಸ್ಥಿತಿಯನ್ನು ಮೇಲಕ್ಕೆತ್ತಿದೆ. ದೇಶದ ಪ್ರತಿ ಮನೆಗೂ ವಿದ್ಯುತ್ ಮತ್ತು ಅಡುಗೆ ಅನಿಲದ ಸಂಪರ್ಕವನ್ನು ಕೊಡ ಲಾಗಿದೆ. ಈಗ ಪ್ರತಿ ಮನೆಗೂ ಕೊಳಾಯಿ ಮೂಲಕ ನೀರಿನ ಸಂಪರ್ಕವನ್ನು ಕೊಡಲಾಗುತ್ತಿದೆ. ದೇಶದ ಉದ್ದಗಲಕ್ಕೂ ದಶಪಥ, ಷಟ್ಪಥ ಹೈವೇ, ಎಕ್ಸ್‌ಪ್ರೆಸ್ ವೇಗಳು ನಿರ್ಮಾಣವಾಗುತ್ತಿವೆ.

ವಿಭಿನ್ನ ಸ್ತರದ ನಗರಗಳಿಗೆ ಮೆಟ್ರೋ ರೈಲು ಸಂಪರ್ಕವನ್ನು ಒದಗಿಸಲಾಗುತ್ತಿದೆ. ನಾಗರಿಕ ವಿಮಾನ ನಿಲ್ದಾಣಗಳ ಸಂಖ್ಯೆಯು ದ್ವಿಗುಣಗೊಂಡು 140ಕ್ಕೆ ಮುಟ್ಟಿವೆ. ವಿದ್ಯುತ್ ಉತ್ಪಾದನೆಯಲ್ಲಾಗಿರುವ ಹೆಚ್ಚಳವು ನಾಗರಿಕರ ಮತ್ತು ಕೈಗಾರಿಕಾ ವಲಯದ ಬೇಡಿಕೆಯನ್ನು ಈಡೇರಿಸುತ್ತಿದೆ. ಸ್ವಾತಂತ್ರ್ಯಾ ನಂತರದಿಂದ 2014ರವರೆಗೆ ದೇಶದಲ್ಲಿನ ಮೂಲಭೂತ ಸೌಕರ್ಯ ನಿರ್ಮಾಣಕ್ಕೆ ಸರಕಾರಗಳು ವ್ಯಯಿಸಿದ ಹಣಕ್ಕಿಂತ ಹೆಚ್ಚು ಮೊತ್ತವನ್ನು 2014-2025ರ ಅವಧಿಯಲ್ಲಿ ಈ ಬಾಬತ್ತಿಗೆ ವಿನಿಯೋ ಗಿಸಲಾಗಿದೆ ಮತ್ತು 2024-25ರ ವರ್ಷದಲ್ಲಿ 11 ಲಕ್ಷ ಕೋಟಿ ರುಪಾಯಿಗಳನ್ನು ಈ ವಲಯಕ್ಕೆ ವ್ಯಯಿಸಲಾಗುತ್ತಿದೆ.

‘ಮೇಕ್ ಇನ್ ಇಂಡಿಯಾ’ ಉಪಕ್ರಮವು ಭಾರತದ ಆರ್ಥಿಕತೆಯನ್ನು ಮೇಲಕ್ಕೆತ್ತಿದ ಪ್ರಮುಖ ಯೋಜನೆಯಾಗಿದೆ. ದೇಶದಲ್ಲಿ ಹೂಡಿಕೆ ಮಾಡಿ ಉತ್ಪಾದನೆಯಲ್ಲಿ ತೊಡಗುವ ಎಲ್ಲ ಉದ್ಯಮ ಗಳನ್ನು ಸರಕಾರವು ಪ್ರೋತ್ಸಾಹಿಸುತ್ತಿದೆ. ಉತ್ಪಾದನಾಧಾರಿತ ಪ್ರೋತ್ಸಾಹಧನವಾಗಿ ಸರಕಾರವು ಉತ್ಪಾದಕರಿಗೆ 26 ಬಿಲಿಯನ್ ಡಾಲರ್‌ನಷ್ಟು ಹಣವನ್ನು ನೀಡುತ್ತಿದೆ.

‘ಮೇಕ್ ಇನ್ ಇಂಡಿಯಾ’ ಉಪಕ್ರಮದಡಿ ಭಾರತವಿಂದು ಜಾಗತಿಕವಾಗಿ 2ನೇ ಅತಿ ದೊಡ್ಡ ಮೊಬೈಲ್ ಫೋನ್ ಉತ್ಪಾದಕ ಮತ್ತು ನಿರ್ಯಾತ ರಾಷ್ಟ್ರವಾಗಿ ಹೊರಹೊಮ್ಮಿದೆ. ರಕ್ಷಣಾ ಕ್ಷೇತ್ರದ ಉಪಕರಣಗಳಿಗಾಗಿ ಒಂದು ಕಾಲಕ್ಕೆ ವಿದೇಶಗಳನ್ನು ನೆಚ್ಚಿದ್ದ ಭಾರತವಿಂದು, ತನಗೆ ಅಗತ್ಯವಿರುವ ಶೇ.70ರಷ್ಟು ರಕ್ಷಣೋಪಕರಣಗಳನ್ನು ಸ್ವತಃ ಉತ್ಪಾದಿಸುತ್ತಿರುವುದರ ಜತೆಗೆ ವಿದೇಶಗಳಿಗೂ ರಫ್ತು ಮಾಡುತ್ತಿದೆ. ಇಲೆಕ್ಟ್ರಾನಿಕ್-ಆಟೋಮೊಬೈಲ್ ಉಪಕರಣಗಳು, ಸಿದ್ಧ ಉಡುಪುಗಳು, ಉಕ್ಕು, ಔಷಧಗಳು ಭಾರತದಿಂದ ವಿದೇಶಗಳಿಗೆ ರಫ್ತಾಗುತ್ತಿವೆ.

ಇದೀಗ ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ಭಾರತವು ದಾಪುಗಾಲಿಡುತ್ತಿದ್ದು, ಇದುವರೆಗೆ ದೇಶದಲ್ಲಿ ಟಾಟಾ, ವೇದಾಂತ, ಫಾಕ್ಸ್ ಕಾನ್ ಮೊದಲಾದ ಬೃಹತ್ ಸಂಸ್ಥೆಗಳು ಸೆಮಿಕಂಡಕ್ಟರ್ ತಯಾರಿಕಾ ಘಟಕಗಳನ್ನು ತೆರೆದಿವೆ. 50ಕ್ಕೂ ಹೆಚ್ಚು ಸ್ಟಾರ್ಟ್-ಅಪ್ ಕಂಪನಿಗಳೂ ಈ ತಯಾರಿಕಾ ವಲಯ ದಲ್ಲಿ ತೊಡಗಿಸಿಕೊಂಡಿವೆ.

ಇವುಗಳಿಗೆ ಪೂರಕವಾಗಿ ಸರಕಾರವು 76 ಸಾವಿರ ಕೋಟಿ ರುಪಾಯಿಗಳಷ್ಟು ಉತ್ಪಾದನಾಧಾರಿತ ಪ್ರೋತ್ಸಾಹಧನವನ್ನು ಕೊಡುತ್ತಿದೆ. ‘ಮೇಕ್ ಇನ್ ಇಂಡಿಯಾ’ ಉಪಕ್ರಮವು ಭಾರತದ ಆರ್ಥಿಕತೆ ಯನ್ನು ಬಲಪಡಿಸಿದ್ದು ಮಾತ್ರವಲ್ಲದೆ ಕೋಟ್ಯಂತರ ಜನರಿಗೆ ಉದ್ಯೋಗವನ್ನು ದೊರಕಿಸಿಕೊಟ್ಟಿದೆ. ಬ್ಯಾಂಕುಗಳ ಮತ್ತು ಸರಕಾರಗಳಿಂದ ನಡೆಸಲ್ಪಡುವ ಸಾರ್ವಜನಿಕ ಉದ್ಯಮಗಳ ಉತ್ಪಾದಕತೆಯು ಕಳೆದ ೧೧ ವರ್ಷಗಳಲ್ಲಿ ಗಣನೀಯವಾಗಿ ಹೆಚ್ಚಿದೆ.

ಸಾರ್ವಜನಿಕ ವಲಯದ ಒಎನ್‌ಜಿಸಿ, ಐಒಸಿ, ಎಲ್‌ಐಸಿ, ಎಚ್‌ಎಎಲ್, ಕೋಲ್ ಇಂಡಿಯಾ ಮುಂತಾದ ಸಂಸ್ಥೆಗಳು 2024-25ರಲ್ಲಿ 5 ಲಕ್ಷ ಕೋಟಿ ರು. ಲಾಭ ಮಾಡಿವೆ. ಇದೇ ರೀತಿಯಲ್ಲಿ, ಸಾರ್ವಜನಿಕ ವಲಯದ ಬ್ಯಾಂಕುಗಳು 2013-14ರಲ್ಲಿ 37 ಸಾವಿರ ಕೋಟಿ ರು. ಲಾಭವನ್ನು ಗಳಿಸಿ ದ್ದರೆ, 2024-25ರಲ್ಲಿ ಈ ಮೊತ್ತವು 1.78 ಲಕ್ಷ ಕೋಟಿ ರು.ಗಳಿಗೇರಿದೆ. 10 ಲಕ್ಷ ಕೋಟಿ ರುಪಾಯಿ ಗಳಿಗೂ ಹೆಚ್ಚಿನ ಮೊತ್ತದ ‘ಕೆಟ್ಟ ಸಾಲಗಳು’, 2016ರಲ್ಲಿ ಭಾರತ ಸರಕಾರವು ಜಾರಿಗೆ ತಂದ ‘ಇನ್‌ ಸಾಲ್ವೆನ್ಸಿ ಹಾಗೂ ಬ್ಯಾಂಕ್ರಪ್ಟಸಿ ಕಾನೂನು’ ಮತ್ತು ಇತರ ವಿಧಿಬದ್ಧ ಕ್ರಮಗಳ ಮೂಲಕ ವಸೂಲಿ ಯಾಗಿ, ಸಾರ್ವಜನಿಕ ವಲಯ ಹಾಗೂ ಖಾಸಗಿ ಬ್ಯಾಂಕುಗಳ ಆರ್ಥಿಕ ಸ್ವಾಸ್ಥ್ಯವು ಪುನಶ್ಚೇತನ ಗೊಂಡಿದೆ.

ಜನಧನ್ ಬ್ಯಾಂಕ್ ಖಾತೆ, ಆಧಾರ್ ನಂಬರ್ ಹಾಗೂ ಫಲಾನುಭವಿಗಳ ಮೊಬೈಲ್ ನಂಬರ್‌ಗಳನ್ನು ಬೆಸೆದ ‘ಜೆಎಎಂ’ ವ್ಯವಸ್ಥೆಯಡಿ ಸರಕಾರವು ಕೊಡಮಾಡಿದ ಸಹಾಯಧನವು ಫಲಾನುಭವಿಗಳನ್ನು ನೇರವಾಗಿ ಸೇರಿ, ಸುಮಾರು 3.5 ಲಕ್ಷ ಕೋಟಿ ರುಪಾಯಿಗಳಷ್ಟು ಹಣವು ಸೋರಿ ಹೋಗುವುದು ನಿಂತಿದೆ.

‘ಡಿಜಿಟಲ್ ಇಂಡಿಯಾ’ ಅಡಿಯಲ್ಲಿ ನಡೆಯುತ್ತಿರುವ ಯುಪಿಐ ವಹಿವಾಟುಗಳು ಜಗತ್ತಿಗೇ ಮಾದರಿ ಯಾಗಿವೆ. ‘ಸ್ಟಾರ್ಟ್ ಅಪ್ ಇಂಡಿಯಾ’ ಯೋಜನೆಯ ಅಡಿಯಲ್ಲಿ ರೂಪುಗೊಂಡ ಒಂದೂವರೆ ಲಕ್ಷಕ್ಕೂ ಹೆಚ್ಚಿನ ನವೋದ್ಯಮಗಳು ಲಕ್ಷಾಂತರ ಮಂದಿಗೆ ಉದ್ಯೋಗಗಳನ್ನು ಕೊಟ್ಟಿರುವುದು ಮಾತ್ರವಲ್ಲದೆ, ದೇಶದ ಆದಾಯವನ್ನೂ ಹೆಚ್ಚಿಸಿವೆ.

ಪ್ರಸ್ತುತ ದೇಶದಲ್ಲಿ 122 ‘ಯುನಿಕಾರ್ನ್ ಸ್ಟಾರ್ಟಪ್’ಗಳಿವೆ (ಇವು ಶತಕೋಟಿ ಡಾಲರ್ ಮೌಲ್ಯ ವನ್ನು ಮೀರಿದಂಥವು). ಇವುಗಳ ಒಟ್ಟು ಮೌಲ್ಯ 385 ಶತಕೋಟಿ ಡಾಲರ್‌ಗಳನ್ನು ಮೀರುತ್ತದೆ. ಯುವಜನರನ್ನು ಉದ್ಯಮಶೀಲರನ್ನಾಗಿಸಲು ಕೊಡ ಮಾಡಿದ ಮುದ್ರಾ ಸಾಲ, ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಉದ್ಯಮಿಗಳಿಗೆ ಕೊಡಲಾದ ಆರ್ಥಿಕ ಬೆಂಬಲದ ‘ಸ್ಟ್ಯಾಂಡ್ ಅಪ್ ಇಂಡಿಯಾ’ ಯೋಜನೆ, ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಸ್ತರದ ಉದ್ಯಮಗಳಿಗೆ ಸರಕಾರವು ನೀಡಿದ ಆರ್ಥಿಕ ಪುನಶ್ಚೇತನ ಕಾರ್ಯಕ್ರಮಗಳು ದೇಶದ ಜನರ ಆರ್ಥಿಕತೆಯನ್ನು ಮೇಲೆತ್ತುವಲ್ಲಿ ಸಹಕಾರಿಯಾಗಿವೆ.

ಕಳೆದ 11 ವರ್ಷಗಳಲ್ಲಿ ಭಾರತದ 27 ಕೋಟಿ ಜನರು ತೀವ್ರ ಬಡತನದ ಮಟ್ಟದಿಂದ ಹೊರ ಬಂದಿದ್ದಾರೆ ಎಂದು ವಿಶ್ವಬ್ಯಾಂಕ್ ಹೇಳಿದೆ. 2011-12ರಲ್ಲಿ ದೇಶದ ಶೇ.27.1ರಷ್ಟು ಜನರು ಬಡತನ ರೇಖೆಯ ಕೆಳಗಿದ್ದರೆ, ಈಗ ಆ ಪ್ರಮಾಣ ಶೇ.5.3ಕ್ಕೆ ಇಳಿದಿದೆ. 2013-14ರಲ್ಲಿ ಭಾರತೀಯರ ತಲಾ ಆದಾಯವು 75000 ರುಪಾಯಿಗಳಾಗಿದ್ದರೆ, ಇಂದು ಅದು 2.44 ಲಕ್ಷ ರು.ಗೆ ಏರಿದೆ. ಇವು ಭಾರತದ ಆರ್ಥಿಕ ಪ್ರಗತಿಯ ಯಶೋಗಾಥೆಗಳಾಗಿವೆ.

(ಲೇಖಕರು ಹವ್ಯಾಸಿ ಬರಹಗಾರರು)