Ranjith H Ashwath Column: ಫಲಿತಾಂಶ ಸರಿಯಾಗಬೇಕೆಂದರೆ, ವ್ಯವಸ್ಥೆ ಸರಿಪಡಿಸಿ
ಡಿಡಿಪಿಐಗಳಿಗೆ ನೀಡಿರುವ ನೋಟಿಸ್, ಈಗ ಬಂದಿರುವ ಫಲಿತಾಂಶಕ್ಕೆ ಸ್ಪಷ್ಟನೆ ನೀಡುವ ಬದಲಾಗಿ ಮುಂಬರುವ ದಿನಗಳಲ್ಲಿ ಯಾವ ರೀತಿಯಲ್ಲಿ ವಿದ್ಯಾರ್ಥಿಗಳನ್ನು ಸಿದ್ಧಪಡಿಸಬೇಕು ಎನ್ನುವ ನೀಲನಕ್ಷೆ ತಯಾರಿಸಲು ‘ಎಚ್ಚರಿಕೆ’ ನೀಡುವ ನಿಟ್ಟಿನಲ್ಲಿ ನೀಡಲಾಗಿರುವ ನೋಟಿಸ್ ಆಗಿದ್ದರೆ ಉತ್ತಮ. ಆದರೆ ನೋಟಿಸ್ನ ಈ ನಡೆ ಹಲವರ ಆಕ್ಷೇಪಕ್ಕೆ ಕಾರಣವಾಗಿರುವುದಂತೂ ಸುಳ್ಳಲ್ಲ.


ಅಶ್ವತ್ಥಕಟ್ಟೆ
ranjith.hoskere@gmail.com
ಪ್ರಸಕ್ತ ಸಾಲಿನ ಎಸ್ಎಸ್ಎಲ್ಸಿ, ಪಿಯುಸಿ ಫಲಿತಾಂಶ ಬಂದಾಯ್ತು, 10ನೇ ತರಗತಿಯ ಎರಡನೇ ಪರೀಕ್ಷೆ ಮುಗಿದು ಫಲಿತಾಂಶವೂ ಪ್ರಕಟವಾಗಿದೆ. ದ್ವಿತೀಯ ಪಿಯುಸಿಯ 2ನೇ ಫಲಿತಾಂಶವೂ ಶೀಘ್ರದಲ್ಲಿಯೇ ಬರಲಿದೆ. ಇಂಥ ಸಮಯದಲ್ಲಿ ಇದೀಗ ಫಲಿತಾಂಶ ಕುಸಿತಗೊಂಡಿರುವ ಜಿಲ್ಲೆಗಳ ಡಿಡಿಪಿಐಗಳಿಗೆ ನೋಟಿಸ್ ನೀಡಲು ಸರಕಾರ ಮುಂದಾಗಿದೆ. ಈ ನೋಟಿಸ್ನ ಹಿಂದೆ ಫಲಿತಾಂಶ ವೃದ್ಧಿಸಿಕೊಳ್ಳಬೇಕು ಎನ್ನುವ ಆಶಯವಿದ್ದರೂ, ಪ್ರಾಯೋಗಿಕವಾಗಿ ಇದು ಸಾಧ್ಯವೇ ಎನ್ನುವ ಪ್ರಶ್ನೆಗೆ ಉತ್ತರ ಇನ್ನಷ್ಟೇ ಸಿಗಬೇಕಿದೆ.
ಅದರಲ್ಲಿಯೂ 10ನೇ ತರಗತಿಯಲ್ಲಿ ಫಲಿತಾಂಶ ಕುಸಿತವಾಗಿರುವುದಕ್ಕೆ ಡಿಡಿಪಿಐಗಳಿಗೆ ನೋಟಿಸ್ ನೀಡಲು ಮುಖ್ಯಮಂತ್ರಿಗಳು ಸೂಚಿಸಿದ್ದಾರೆ. ಈ ನೋಟಿಸ್ ಬಗ್ಗೆ ಮಾತನಾಡುವ ಮೊದಲು, ಫಲಿತಾಂಶದ ಕುಸಿತಕ್ಕೆ ಕಾರಣವೇನು ಎನ್ನುವುದನ್ನು ನೋಡಬೇಕಿದೆ. ಹೌದು, ಈ ಹಿಂದೆ ಇದ್ದ ಪರೀಕ್ಷಾ ಪದ್ಧತಿಯಲ್ಲಿ ಬದಲಾವಣೆ ತರಬೇಕೆಂಬ ಉದ್ದೇಶದಿಂದ ಸರಕಾರವೇ ಕಠಿಣ ನಿಯಮ ಗಳನ್ನು ಜಾರಿಗೊಳಿಸಿದೆ. ಈ ನಿಯಮಗಳು ಜಾರಿಯಾಗಿದ್ದರಿಂದ ಹಲವು ಜಿಲ್ಲೆಗಳಲ್ಲಿ ಫಲಿತಾಂಶ ಕುಸಿತಗೊಂಡಿದೆ. ಪಾರದರ್ಶಕ ಪರೀಕ್ಷೆಯ ಕಾರಣಕ್ಕೆ ಈ ರೀತಿಯಾಗಿದ್ದರೆ ಅದು ಸರಕಾರದ ಹಿನ್ನಡೆಯಾಗುವುದಿಲ್ಲ. ಬದಲಿಗೆ ಗುಣಮಟ್ಟದ ಶಿಕ್ಷಣವನ್ನು ನೀಡಿದರೆ ಭವಿಷ್ಯದಲ್ಲಿ ‘ನೈಜ’ ಫಲಿತಾಂಶ ಸಿಗುತ್ತದೆ.
ಡಿಡಿಪಿಐಗಳಿಗೆ ನೀಡಿರುವ ನೋಟಿಸ್, ಈಗ ಬಂದಿರುವ ಫಲಿತಾಂಶಕ್ಕೆ ಸ್ಪಷ್ಟನೆ ನೀಡುವ ಬದಲಾಗಿ ಮುಂಬರುವ ದಿನಗಳಲ್ಲಿ ಯಾವ ರೀತಿಯಲ್ಲಿ ವಿದ್ಯಾರ್ಥಿಗಳನ್ನು ಸಿದ್ಧಪಡಿಸಬೇಕು ಎನ್ನುವ ನೀಲನಕ್ಷೆ ತಯಾರಿಸಲು ‘ಎಚ್ಚರಿಕೆ’ ನೀಡುವ ನಿಟ್ಟಿನಲ್ಲಿ ನೀಡಲಾಗಿರುವ ನೋಟಿಸ್ ಆಗಿದ್ದರೆ ಉತ್ತಮ. ಆದರೆ ನೋಟಿಸ್ನ ಈ ನಡೆ ಹಲವರ ಆಕ್ಷೇಪಕ್ಕೆ ಕಾರಣವಾಗಿರುವುದಂತೂ ಸುಳ್ಳಲ್ಲ.
ಇದನ್ನೂ ಓದಿ: Ranjith H Ashwath Column: ಯುದ್ದ ಭಾವನೆಗಳ ಮೇಲೆ ನಡೆಯಲ್ಲ
ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಎಸ್ಎಸ್ಎಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಮಹತ್ವದ ತೀರ್ಮಾನವನ್ನು ಕೈಗೊಂಡಿತ್ತು. ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರೂ, “ನಮಗೆ ಫಲಿತಾಂಶ ಕುಸಿತವಾಗಿರುವುದಕ್ಕಿಂತ ನೈಜ ಫಲಿತಾಂಶ ಕೊಟ್ಟಿರುವ ಸಮಾಧಾನವಿದೆ" ಎಂದು ಹೇಳಿದ್ದರು.
ಕಳೆದ ಬಾರಿ ಫಲಿತಾಂಶದಲ್ಲಿನ ಕುಸಿತವನ್ನು ತಡೆಯಲು ಗ್ರೇಸ್ ಮಾರ್ಕ್ಸ್ ನೀಡಿರುವುದು ವಿವಾದಕ್ಕೆ ಕಾರಣವಾಗುತ್ತಿದ್ದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಮುಂದಿನ ಬಾರಿಯಿಂದ ಗ್ರೇಸ್ ಮಾರ್ಕ್ಸ್ ಯೋಜನೆ ಕೈಬಿಡಿ ಎನ್ನುವ ಸ್ಪಷ್ಟ ಎಚ್ಚರಿಕೆಯನ್ನು ನೀಡಿದ್ದರು. ಇಷ್ಟಾದರೂ, ಈ ಬಾರಿ ಯೂ ಸುಮಾರು 50 ಸಾವಿರ ವಿದ್ಯಾರ್ಥಿಗಳು ‘ಗ್ರೇಸ್ ಅಂಕದ’ ಕೃಪೆಯಿಂದ ಪಾಸಾಗಿದ್ದಾರೆ ಎನ್ನು ವುದು ಕೆಲ ಅಧಿಕಾರಿಗಳ ಮಾತಾಗಿದೆ.
ಆದರೆ ಇಲ್ಲಿರುವ ಪ್ರಮುಖ ಪ್ರಶ್ನೆಯೆಂದರೆ, ಗುಣಮಟ್ಟದ ಶಿಕ್ಷಣ, ಫಲಿತಾಂಶ ಏಕಾಏಕಿ 10ನೇ ತರಗತಿಯಿಂದ ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ಶಿಕ್ಷಣ ಎನ್ನುವುದು ನಿರಂತರ ಪ್ರಕ್ರಿಯೆ ಯಾಗಿರುವುದರಿಂದ ಯಾವುದೇ ಬದಲಾವಣೆ ತರುವುದಿದ್ದರೂ ಅದನ್ನು ಒಂದನೇ ತರಗತಿಯಿಂದ ತರಬೇಕು. ಅಂದರೆ, ರಾಜ್ಯ ಸರಕಾರ ಒಂದು ವೇಳೆ 10ನೇ ತರಗತಿಯ ಶಿಕ್ಷಣದ ಗುಣಮಟ್ಟದಲ್ಲಿ ಯಾವುದೇ ರೀತಿಯಲ್ಲಿ ರಾಜಿಯಾಗದಿದ್ದರೆ, ಉತ್ತಮ ಫಲಿತಾಂಶ ನಿರೀಕ್ಷೆ ಮಾಡಬೇಕೆಂದರೆ ಕನಿಷ್ಠ ಆರೇಳು ವರ್ಷ ಕಾಯಬೇಕು.
ಶಿಕ್ಷಣ ಹಾಗೂ ಪರೀಕ್ಷಾ ವ್ಯವಸ್ಥೆಯಲ್ಲಿ ಯಾವುದೇ ಬದಲಾವಣೆ ತರುವುದಿದ್ದರೂ, ಅದು ಪ್ರಾಥಮಿಕ ಶಾಲೆಯಿಂದ ಆರಂಭಗೊಂಡರೆ ಅದಕ್ಕೆ ವಿದ್ಯಾರ್ಥಿಗಳು ಹೊಂದಿಕೊಳ್ಳುತ್ತಾರೆ. ಆದ್ದರಿಂದ ರಾಜ್ಯ ಸರಕಾರ ನಿರೀಕ್ಷಿಸುತ್ತಿರುವ ಗುಣಮಟ್ಟದ ಫಲಿತಾಂಶ ಸಿಗಬೇಕೆಂದರೆ, 2025-26ನೇ ಸಾಲಿನಲ್ಲಿ 3 ಅಥವಾ 4ನೇ ತರಗತಿಯಲ್ಲಿರುವ ವಿದ್ಯಾರ್ಥಿಗಳನ್ನು ಟಾರ್ಗೆಟ್ ಮಾಡಿ ಕಾರ್ಯಕ್ರಮಗಳನ್ನು ರೂಪಿಸಬೇಕು.
ಅದನ್ನು ಮಾಡದೇ, ಮುಂದಿನ ವರ್ಷವೇ 10ನೇ ತರಗತಿಯಲ್ಲಿ ಫಲಿತಾಂಶ ಭಾರಿ ಪ್ರಮಾಣದಲ್ಲಿ ಏರಿಕೆಯಾಗಬೇಕು ಎಂದರೆ ಗುಣಮಟ್ಟದಲ್ಲಿ ರಾಜಿಯಾಗಲೇಬೇಕು ಎನ್ನುವುದು ಸ್ಪಷ್ಟ. ಈ ಅಭಿಪ್ರಾಯ ಕೆಲವರ ಮಾತಾಗಿಲ್ಲ. ಬಹುತೇಕ ಡಿಡಿಪಿಐಗಳ ಅಭಿಪ್ರಾಯವೂ ಇದೇ ಆಗಿದೆ. ಒಂದು ವೇಳೆ ಸರಕಾರ ‘ಫಲಿತಾಂಶ ಕುಸಿಯಲು ಸ್ಪಷ್ಟ ಕಾರಣ ನೀಡಿ’ ಎಂದು ನೋಟಿಸ್ ನೀಡಿದರೆ ತಳಮಟ್ಟದಲ್ಲಿ ಆಗುತ್ತಿರುವ ಎಲ್ಲ ವಿಷಯಗಳನ್ನು ಬಿಡಿಸಿ ಸರಕಾರಕ್ಕೆ ಹೇಳಲು ಆಗುವುದಿಲ್ಲ.
ಕೆಲ ನಗ್ನಸತ್ಯಗಳನ್ನು ಮೇಲಽಕಾರಿಗಳು ಅಥವಾ ಸಚಿವರು ಹೇಳಿದಾಗ ‘ಆನ್ ದಿ ರೆಕಾರ್ಡ್’ ಹೇಳು ವುದು ಕಷ್ಟವಾಗುತ್ತದೆ. ಒಂದು ವೇಳೆ ಫಲಿತಾಂಶವೇ ಬೇಕೆಂದು ಮೇಲಿಂದ ಒತ್ತಡ ಶುರುವಾದರೆ, ದಾಖಲೆಯಲ್ಲಿ ಫಲಿತಾಂಶ ಕೊಡಿಸುವುದು ದೊಡ್ಡದಲ್ಲ. ಆದರೆ ಅದು ವಿದ್ಯಾರ್ಥಿಗಳ ಶ್ರಮದಿಂದ ಅಥವಾ ಬುದ್ಧಿವಂತಿಕೆಯಿಂದ ಬಂದಿರುವ ಫಲಿತಾಂಶವಾಗಿರುವುದಿಲ್ಲ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು ಎನ್ನುವ ಮಾತುಗಳು ಅಧಿಕಾರಿಗಳ ಮಟ್ಟದಲ್ಲಿ ಬರುತ್ತಿದೆ.
ಫಲಿತಾಂಶ ಕುಸಿತವಾಗುವುದು ತಪ್ಪಲ್ಲ; ಆದರೆ ಕಾಪಿ ಹೊಡೆದೋ, ಗ್ರೇಸ್ ಅಂಕ ಪಡೆದೋ ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಮುಂದಕ್ಕೆ ಕಳುಹಿಸಿದರೆ ಯಾವುದೋ ಒಂದು ಘಟ್ಟದಲ್ಲಿ ಸಮಸ್ಯೆ ಅನುಭವಿಸಲೇಬೇಕು. ಭವಿಷ್ಯದಲ್ಲಿ ಅನುಭವಿಸುವ ಬದಲು ಎಸ್ಎಸ್ಎಲ್ ಸಿಯಲ್ಲಿಯೇ ಫೇಲಾದರೂ ಪರವಾಗಿಲ್ಲ, ಕನಿಷ್ಠ ಪಕ್ಷ ಅಲ್ಲಿಯೇ ವಿದ್ಯಾರ್ಥಿಯಲ್ಲಿರುವ ಸಮಸ್ಯೆಯನ್ನು ಪರಿಹರಿಸಿ ಭವಿಷ್ಯದಲ್ಲಿ ಎದುರಾಗಬಹುದಾದ ಆಪತ್ತನ್ನು ತಡೆಗಟ್ಟಬೇಕು.
‘ರಾಜ್ಯದಲ್ಲಿ ಐತಿಹಾಸಿಕ ಫಲಿತಾಂಶ’ವೆಂದು ಹೇಳಿಕೊಳ್ಳುವ ಕಾರಣಕ್ಕೆ ಪರೀಕ್ಷೆಯ ‘ಪಾವಿತ್ರ್ಯ’ ವನ್ನು ದುರ್ಬಲಗೊಳಿಸಿದರೆ ಮುಂದೊಂದು ದಿನ ಬಹುದೊಡ್ಡ ಹೊಡೆತವನ್ನು ತಿನ್ನಬೇಕಾಗುತ್ತದೆ ಎನ್ನುವುದನ್ನು ಅಽಕಾರಿಗಳು ಅಥವಾ ಸರಕಾರ ಮರೆಯಬಾರದು.
ಕಳೆದ ಎರಡು ವರ್ಷದಿಂದ ಫಲಿತಾಂಶ ಇಳಿಮುಖದಲ್ಲಿ ಸಾಗಿರುವುದರಿಂದ, ರಾಜ್ಯ ಸರಕಾರ ಸಹಜವಾಗಿಯೇ ಡಿಡಿಪಿಐಗಳ ಮೇಲೆ ಈ ರೀತಿಯ ಒತ್ತಡ ಹೇರುತ್ತಿದೆ. ಡಿಡಿಪಿಐಗಳ ವ್ಯಾಪ್ತಿಗೆ ಇಡೀ ಜಿಲ್ಲೆಯ ಶಿಕ್ಷಣ ಸಂಸ್ಥೆಗಳು ಬರುತ್ತವೆ ಎನ್ನುವುದು ಸತ್ಯವಾದರೂ, ಖಾಸಗಿ ಶಾಲೆಗಳ ಮೇಲೆ ಯಾವ ಹಂತದಲ್ಲಿ ನಿಯಂತ್ರಣವಿದೆ ಎನ್ನುವುದನ್ನು ಗಮನಿಸಬೇಕಿದೆ. ಹಾಗೆ ನೋಡಿದರೆ, ಈ ವರ್ಷದಲ್ಲಿ ಫಲಿತಾಂಶ ಕುಸಿಯುವಲ್ಲಿ ‘ಶೂನ್ಯ ಫಲಿತಾಂಶ’ ಪಡೆದಿರುವ ಖಾಸಗಿ ಶಾಲೆಗಳ ಕೊಡುಗೆಯೂ ಬಹುದೊಡ್ಡ ಪ್ರಮಾಣದಲ್ಲಿದೆ.
ಕೇವಲ ಪ್ರಸಕ್ತ ಸಾಲು ಮಾತ್ರವಲ್ಲದೇ, ಬಹುತೇಕ ಸಮಯದಲ್ಲಿ ಶೂನ್ಯ ಫಲಿತಾಂಶ ಪಡೆದಿರುವ ಶಾಲೆಗಳಲ್ಲಿ ಶೇ.75ರಷ್ಟು ಶಾಲೆಗಳು ಅನುದಾನರಹಿತ ಶಾಲೆಗಳಾಗಿವೆ ಎನ್ನುವುದು ಅಂಕಿ-ಅಂಶ ದಲ್ಲಿ ಸ್ಪಷ್ಟ. 2024-25ನೇ ಸಾಲಿನ ಎಸ್ಎಸ್ ಎಲ್ಸಿ ಫಲಿತಾಂಶದಲ್ಲಿ ಒಟ್ಟು 144 ಶಾಲೆಗಳಲ್ಲಿ ಶೂನ್ಯ ಫಲಿತಾಂಶ ಬಂದಿದ್ದರೆ, ಅದರಲ್ಲಿ 108 ಶಾಲೆಗಳು ಅನುದಾನರಹಿತ ಶಾಲೆಗಳಾಗಿವೆ.
ಇನ್ನುಳಿದಂತೆ ಆರು ಸರಕಾರಿ ಹಾಗೂ 30 ಅನುದಾನಿತ ಶಾಲೆಗಳಲ್ಲಿ ಶೂನ್ಯ ಫಲಿತಾಂಶ ಬಂದಿದೆ. ಅನುದಾನರಹಿತ ಶಾಲೆಗಳಲ್ಲಿ ಹಲವು ಶಾಲೆಗಳು ಅತ್ಯುತ್ತಮ ಫಲಿತಾಂಶವನ್ನು ನೀಡುತ್ತಿದ್ದರೂ, ಪ್ರತಿ ಜಿಲ್ಲೆಯಲ್ಲಿ ಅದರಲ್ಲಿಯೂ ಶಿಕ್ಷಣದಲ್ಲಿ ಹಿಂದಿರುವ ಜಿಲ್ಲೆಗಳಲ್ಲಿ ಉತ್ತಮ ಶಿಕ್ಷಣ ನಿರೀಕ್ಷಿತ ಪ್ರಮಾಣದಲ್ಲಿ ಸಿಗುತ್ತಿಲ್ಲ ಎನ್ನುವುದು ಸ್ಪಷ್ಟ.
ಇಂಥ ಅನುದಾನ ರಹಿತ ಶಾಲೆಗಳ ಮೇಲೆ ‘ಕಾಗದ’ದಲ್ಲಿ ಡಿಡಿಪಿಐಗಳಿಗೆ ಅಧಿಕಾರ ಚಲಾಯಿಸಲು ಅವಕಾಶವಿದ್ದರೂ, ಸ್ಥಳೀಯ ರಾಜಕೀಯ ಒತ್ತಡಕ್ಕೆ ಏನೂ ಮಾಡಲಾಗದ ಸ್ಥಿತಿಯಲ್ಲಿರುತ್ತಾರೆ. ಹೀಗಿರುವಾಗ, ಸರಕಾರಿ ಶಾಲೆಗಳ ಫಲಿತಾಂಶವನ್ನು ಹೆಚ್ಚಿಸಿದರೂ, ಖಾಸಗಿ ಶಾಲೆಗಳ ವಿರುದ್ಧ ರಾಜಕೀಯ ಒತ್ತಡಗಳನ್ನು ಮೀರಿ ಕ್ರಮವಹಿಸಲು ಸಾಧ್ಯವೇ ಎನ್ನುವ ಪ್ರಶ್ನೆಗೆ ಬಹುತೇಕರ ಬಳಿ ಉತ್ತರವಿಲ್ಲ. ಹಾಗೆ ನೋಡಿದರೆ, ಶೂನ್ಯ ಫಲಿತಾಂಶ ಪಡೆಯುವ ಸರಕಾರಿ ಶಾಲೆಯ ಶಿಕ್ಷಕರ ಡಿಎ ತಡೆಹಿಡಿಯಬೇಕು ಎಂದು ಕೆಲವರ್ಷದ ಹಿಂದೆ ತೀರ್ಮಾನಿಸಲಾಗಿತ್ತು (ಈಗ ಇದು ಜಾರಿಯಲ್ಲಿ ದೆಯೋ, ಇಲ್ಲವೋ ಗೊತ್ತಿಲ್ಲ).
ಅದೇ ರೀತಿ ಅನುದಾನ ರಹಿತ ಶಾಲೆಗಳಲ್ಲಿ ನಿರಂತರವಾಗಿ ಶೂನ್ಯ ಫಲಿತಾಂಶ ಬಂದರೆ, ಆ ಶಾಲೆ ಯನ್ನು ಬ್ಲಾಕ್ಲಿಸ್ಟ್ಗೆ ಹಾಕಬೇಕು ಎನ್ನುವ ಪುರಾತನ ನಿಯಮವಿತ್ತು. ಆದರೆ ನನಗಿರುವ ಮಾಹಿತಿ ಪ್ರಕಾರ ಈವರೆಗೆ ಈ ರೀತಿಯ ಯಾವುದೇ ತೀರ್ಮಾನವಾಗಿಲ್ಲ. ಕೆಲ ಶಾಲೆಗಳಿಗೆ ನಾಮ್ -ಕೆ-ವಾಸ್ತೆ ನೋಟಿಸ್ ನೀಡಿದ್ದರೂ, ಬಳಿಕ ಕೈಗೊಂಡ ಕ್ರಮವೇನು ಎನ್ನುವುದಕ್ಕೆ ಶಿಕ್ಷಣ ಇಲಾಖೆ ಅಧಿಕಾರಿಗಳ ಬಳಿ ಮಾಹಿತಿಯಿಲ್ಲ.
ಇನ್ನು ನಿಜಕ್ಕೂ ಗುಣಮಟ್ಟದ ಶಿಕ್ಷಣವನ್ನು ಸರಕಾರಿ ಶಾಲೆಗಳಲ್ಲಿ ನೀಡುವುದೇ ಸರಕಾರದ ಉದ್ದೇಶ ವಾಗಿದ್ದರೆ, ಹೊಸ ಹೊಸ ಯೋಜನೆಯನ್ನು ರೂಪಿಸುವ ಮೊದಲು ಖಾಲಿಯಿರುವ ಶಿಕ್ಷಕ ಹುದ್ದೆ ಗಳನ್ನು ಭರ್ತಿ ಮಾಡುವ ನಿಟ್ಟಿನಲ್ಲಿ ಗಂಭೀರ ಚಿಂತನೆ ನಡೆಸಬೇಕಿದೆ. ಶಿಕ್ಷಕರ ಭರ್ತಿ ಎನ್ನುವುದು ಬಹುದೊಡ್ಡ ‘ಆರ್ಥಿಕ’ ಹೊರೆಯಾಗಿದ್ದರೂ, ಫಲಿತಾಂಶ ಹಾಗೂ ವಿದ್ಯಾರ್ಥಿಗಳ ಭವಿಷ್ಯದ ದೃಷ್ಠಿಯಿಂದ ಅನಿವಾರ್ಯ ಎಂದರೆ ತಪ್ಪಾಗುವುದಿಲ್ಲ.
ಇದೇ ರೀತಿ ಖಾಸಗಿ ಶಾಲೆಗಳಲ್ಲಿ ಶಿಕ್ಷಕರನ್ನು ‘ತುಂಬಿಸಿಕೊಳ್ಳುವ’ ಭರದಲ್ಲಿ ‘ಗುಣಮಟ್ಟ’ಕ್ಕೆ ಕೆಲ ಆಡಳಿತ ಮಂಡಳಿಗಳು ಒತ್ತುನೀಡುತ್ತಿಲ್ಲ. ಈ ನಿಟ್ಟಿನಲ್ಲಿ ಮಾರ್ಗಸೂಚಿಯನ್ನು ರೂಪಿಸುವುದು ಉತ್ತಮ. ಸರಕಾರಿ ಶಾಲಾ-ಕಾಲೇಜುಗಳಲ್ಲಿನ ಫಲಿತಾಂಶವನ್ನು ಮುಂದಿಟ್ಟುಕೊಂಡು ಡಿಡಿಪಿಐಗಳ ಮೇಲೆ ನೋಟಿಸ್ ಜಾರಿ ಮಾಡುವ ಮೂಲಕ ‘ಎಚ್ಚರಿಕೆ’ ನೀಡಿರುವುದು ತಪ್ಪೆನ್ನಲಾಗುವುದಿಲ್ಲ.
ಆದರೆ ಡಿಡಿಪಿಐಗಳಿಗೆ ನೋಟಿಸ್ ನೀಡಿದಾಕ್ಷಣಕ್ಕೆ, ಫಲಿತಾಂಶ ‘ನೈಜ’ವಾಗಿ ಏರಿಕೆಯಾಗುತ್ತದೆ ಎನ್ನುವುದು ಸುಳ್ಳು. ಒಂದು ವೇಳೆ ಮುಖ್ಯಮಂತ್ರಿಗಳ ಸೂಚನೆಯ ಬೆನ್ನಲ್ಲೇ ಡಿಡಿಪಿಐಗಳಿಗೆ ನೋಟಿಸ್ ನೀಡಿ, ಸಮರ್ಪಕ ಉತ್ತರ ನೀಡಿಲ್ಲವೆಂದು ಡಿಡಿಪಿಐಗಳ ವಿರುದ್ಧ ಕ್ರಮವಹಿಸಿದ ಮಾತ್ರಕ್ಕೆ ಫಲಿತಾಂಶ ಸರಿ ಹೋಗುತ್ತದೆ ಎನ್ನುವುದು ವಾಸ್ತವಕ್ಕೆ ತುಸು ದೂರವೇ ನಿಲ್ಲುತ್ತದೆ.
ಇದರ ಬದಲು, ಈಗಾಗಲೇ ರಾಜ್ಯ ಸರಕಾರ ಅನುತ್ತೀರ್ಣಗೊಂಡ ವಿದ್ಯಾರ್ಥಿಗಳಿಗೆ, ಅಭ್ಯಾಸದಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ವಿಶೇಷ ತರಗತಿಗಳನ್ನು ಆರಂಭಿಸಿದೆ. ಈ ತರಗತಿಗಳು ಸರಿಯಾದ ರೀತಿಯಲ್ಲಿ ನಡೆಯುವಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿಯನ್ನು ಜಿಲ್ಲಾ ಡಿಡಿಪಿಐಗಳಿಗೆ ನೀಡಲಿ.
ವಿದ್ಯಾಭ್ಯಾಸ ಗುಣಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಹೊಸ ಯೋಜನೆ, ಈಗಾಗಲೇ ಜಾರಿಯಲ್ಲಿ ಹತ್ತಾರು ಯೋಜನೆಗಳು ಸಮರ್ಪಕವಾಗಿ ಜಾರಿಯಾಗುವ ರೀತಿಯಲ್ಲಿ ಎಚ್ಚರ ವಹಿಸುವ ಟಾಸ್ಕ್ ಗಳನ್ನು ಡಿಡಿಐಪಿಗಳಿಗೆ ನೀಡಿ, ಅದರಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಯಶಸ್ಸು ಸಿಗದಿದ್ದರೆ ಆ ಹಂತದಲ್ಲಿ ಕ್ರಮವಹಿಸಲಿ.
ಅದನ್ನು ಬಿಟ್ಟು, ಎಸ್ಎಸ್ಎಲ್ಸಿ ಫಲಿತಾಂಶ ವೃದ್ಧಿಸಲು ಯಾವುದೇ ಕ್ರಮ ಕೈಗೊಳ್ಳದೇ, ಏಕಾಏಕಿ ಫಲಿತಾಂಶವನ್ನು ಮಾನದಂಡವಾಗಿಟ್ಟುಕೊಂಡು ಕ್ರಮಕ್ಕೆ ಮುಂದಾದರೆ ಮುಂದಿನ ವರ್ಷದಲ್ಲಿ ‘ಉತ್ತಮ’ ಫಲಿತಾಂಶ ಸಿಗುವುದಕ್ಕೆ ಬೇಕಾದ ಅನೇಕ ಕಳ್ಳಮಾರ್ಗಗಳ ಮೂಲಕ ಫಲಿತಾಂಶ ಕೊಡಿಸುತ್ತಾರೆಯೇ ಹೊರತು, ಮೌಲ್ಯಯುತ ಫಲಿತಾಂಶ ಸಿಗುವುದಿಲ್ಲ ಎನ್ನುವುದಂತೂ ಸ್ಪಷ್ಟ.