Roopa Gururaj Column: ತುಳಿಯುವವರು ಸಾವಿರ ಮೇಲೆತ್ತುವನು ಒಬ್ಬನೇ !
ನಾನು ಈಗ ಪುಟ್ಟ ಬೀಜ ಅಲ್ಲ, ಶ್ರೀಮಂತ ವೃಕ್ಷ. ನನ್ನೊಳಗೆ ಆನಂದವಿದೆ, ತೃಪ್ತಿ ಇದೆ. ನೀನು ಒಂದು ಹಿಡಿ ಮಣ್ಣು ಬೊಗಸೆ ನೀರು ಹಾಕಿದೆ. ನಾನು ಎಲ್ಲಿಯೂ ಹೋಗದೆ ಇಲ್ಲಿಯೇ ಇದ್ದು ನನ್ನನ್ನೇ ನಾನು ಸಂಪತ್ತಾಗಿ ಮಾಡಿಕೊಂಡೆ, ನನ್ನಲ್ಲಿರುವ ಸಂಪತ್ತನ್ನು ಎಲ್ಲರಿಗೂ ಹಂಚಿದೆ, ಸಿಹಿಯನ್ನು ತಿನ್ನಿಸಿದೆ, ತಂಪು ಮಾಡಿದೆ, ಪಶು ಪಕ್ಷಿಗಳ ವಂಶಾಭಿವೃದ್ಧಿ ಮಾಡಲು ವಸತಿ ಕೊಟ್ಟೆ. ಎಷ್ಟೋ ಜನ ನನ್ನ ತುಳಿ ದರು ಆದರೆ ನಿನ್ನಂಥ ಒಬ್ಬ ಪುಣ್ಯಾತ್ಮ ನನ್ನನ್ನು ಮೇಲೆತ್ತಿ ಒಳ್ಳೆಯ ಜಾಗದಲ್ಲಿ ಇಟ್ಟು ಮಣ್ಣು ನೀರು ಕೊಟ್ಟೆ.ಅದರಿಂದ ನಾನು ಬೆಳೆದೆ ಎಂದು ಪುಣ್ಯಾತ್ಮನನ್ನು ವೃಕ್ಷ ಕೊಂಡಾಡಿತು.


ಒಂದೊಳ್ಳೆ ಮಾತು
rgururaj628@gmail.com
ನಡೆವ ಮಾರ್ಗದಲ್ಲಿ ಯಾವುದೋ ನಿರೀಕ್ಷೆಯಲ್ಲಿ ಒಂದು ಪುಟ್ಟ ಮಾವಿನ ಗೊರಟು ಎಷ್ಟೋ ಕಾಲದಿಂದ ಬಿದ್ದಿತ್ತು. ಯಾರೋ ಮಾವಿನ ಹಣ್ಣು ತಿಂದು ಬಿಸಾಕಿದ ಗೊರಟು. ನಡೆದಾಡುವ ವರೆಲ್ಲ ಅದನ್ನು ತುಳಿದು ಹೋಗುತ್ತಿದ್ದರು. ಒಂದು ದಿನ ನಡೆದು ಹೋಗುತ್ತಿದ್ದ ವ್ಯಕ್ತಿಗೆ ಅದು ಕಣ್ಣಿಗೆ ಕಂಡು ಕೈಗೆ ತೆಗೆದುಕೊಂಡು.
ಪುಟ್ಟ ಗೊರಟು ಮಾತಾಡಿತು ಪುಣ್ಯಾತ್ಮ ಕೆಳಗೆ ಬಿದ್ದಿದ್ದ ನನ್ನನ್ನು ಎತ್ತಿಕೊಂಡೆಯಲ್ಲ ನನಗೆ ತುಂಬಾ ಸಂತೋಷವಾಯಿತು ನಿನಗೆ ಧನ್ಯವಾದಗಳು ಎಂದಿತು. ಆ ವ್ಯಕ್ತಿ ಹೇಳಿದ, ಪಾಪ ನೀನೊಂದು ಪುಟ್ಟ ಬೀಜ ಎಷ್ಟೋ ಕಾಲದಿಂದ ಇಲ್ಲೇ ಬಿದ್ದು ಎಲ್ಲರೂ ತುಳಿದು ಹೋಗುತ್ತಿದ್ದರು. ಅವರೆಲ್ಲರ ತುಳಿತಕ್ಕೆ ಸಿಕ್ಕಿ ನೀನು ಎಷ್ಟು ನೋವು ಅನುಭವಿಸಿದೆ ಪಾಪ ಎಂದನು. ಬೀಜ ಹೇಳಿತು, ಪುಣ್ಯಾತ್ಮ ನನ್ನನ್ನು ಇದುವರೆಗೂ ಲೆಕ್ಕವಿಲ್ಲದಷ್ಟು ಜನ ತುಳಿದು ಹೋಗಿರಬಹುದು, ತುಳಿದು ಹೋದವರ ಬಗ್ಗೆ ನನಗೆ ಚಿಂತೆ ಇಲ್ಲ.
ಎಂದೋ ಒಂದು ದಿನ ಒಬ್ಬ ಒಳ್ಳೆ ಮನುಷ್ಯ ಬಂದೇ ಬರುತ್ತಾನೆ ಅವನು ನನ್ನನ್ನು ಎತ್ತುತ್ತಾನೆ ಎಂದು ದಾರಿ ಕಾಯುತ್ತಿದ್ದೆ. ಗೊರಟು, ಮಾತು ಮುಂದುವರಿಸಿ, ದಯವಿಟ್ಟು ನನ್ನನ್ನು ಜನಗಳ ಸಂಚಾರ ಇಲ್ಲದ ಕಡೆ ಪುಟ್ಟಪಾತಿ ಮಾಡಿ ನನ್ನನ್ನು ಮಣ್ಣಿನಲ್ಲಿ ಹಾಕಿ ಸ್ವಲ್ಪ ನೀರು ಹಾಕುವೆಯಾ? ಎಂದು ಕೇಳಿಕೊಂಡಿತು.
ಇದನ್ನೂ ಓದಿ: Roopa Gururaj Column: ಭಗವಂತನ ಮೇಲೆ ಸಂಪೂರ್ಣವಾದ ನಂಬಿಕೆ
ನನಗೆ ಬೇಕಾಗಿರುವುದು ಒಂದು ಹಿಡಿ ಮಣ್ಣು ಸ್ವಲ್ಪ ನೀರು ಅಷ್ಟೇ ಎಂದಿತು. ಆ ಮನುಷ್ಯ ಅಂತೆಯೇ ಮಾಡಿದ. ಬೀಜ ಸಂತೋಷದಿಂದ ಮನುಷ್ಯನಿಗೆ, ನೀನು ನನ್ನನ್ನು ಒಳ್ಳೆಯ ಜಾಗದಲ್ಲಿ ಸೇರಿಸಿದೆ, ಧನ್ಯವಾದ ಎಂದಿತು.
ಮರು ಕ್ಷಣದಿಂದಲೇ ಗೊರಟೆಯಲ್ಲಿ ಸಣ್ಣ ಸಣ್ಣ ಬದಲಾವಣೆಗಳು ಕಂಡವು. ಗೊರಟೆ ನಿಧಾನವಾಗಿ ಚಿಗುರೊಡೆದು ಮರವಾಗಿ ವಿಸ್ತಾರವಾಗಿ ಎಲ್ಲಾ ಕಡೆ ಹರಡಿತು.
ಹಸಿರೆಲೆಗಳು ತುಂಬಿದವು, ಗಿಡದ ತುಂಬಾ ಹೂವಾಗಿ, ಕಾಯಾಯಿತು. ಮರದ ತುಂಬ ರಸಭರಿತ ವಾದ ಮಾವಿನ ಹಣ್ಣುಗಳು ತುಂಬಿತು. ಮಾವಿನ ಮರ ಎಲ್ಲರೂ ನನ್ನ ಹತ್ತಿರ ಬರಲಿ ಬರಲಿ ಎಂದು ದಾರಿ ಕಾಯುತ್ತಿತ್ತು. ಜನಗಳು ಬಂದರು ಹಣ್ಣು ತಿಂದರು. ಮರದ ನೆರಳಲ್ಲಿ ಕುಳಿತು ವಿಶ್ರಾಂತಿ ಪಡೆದರು.
ಎಲ್ಲೆಲ್ಲಿಂದಲೂ ಹಿಂಡು ಹಿಂಡು ಪಕ್ಷಿಗಳು ಹಾರಿ ಬಂದವು, ಹಣ್ಣು ತಿಂದವು ಅಲ್ಲಿಯೇ ಗೂಡು ಕಟ್ಟಿದವು. ಸಂತೋಷದಿಂದ ಚಿಲಿಪಿಲಿ ಗುಟ್ಟಿದವು. ಒಂದು ಹಣ್ಣಿನ ಮರದ ಸುತ್ತ ನಿತ್ಯವೂ ವಸಂತೋತ್ಸವ ನಡೆಯಿತು. ಹಿಂದೆ ಬೀಜ ನೆಟ್ಟು ನೀರು ಹಾಕಿ ಹೋಗಿದ್ದ ಮನುಷ್ಯ ಒಮ್ಮೆ ಬಂದು ನೋಡುತ್ತಾನೆ,
ತಾನು ಹಾಕಿದ ಬೀಜ ಎಲ್ಲಿ ಎಂದು ಹುಡುಕಲು ಪ್ರಾರಂಭಿಸಿದ. ಅವನನ್ನು ನೋಡಿ ಮರ ಹೇಳಿತು. ನಾನು ಈಗ ಪುಟ್ಟ ಬೀಜ ಅಲ್ಲ, ಶ್ರೀಮಂತ ವೃಕ್ಷ. ನನ್ನೊಳಗೆ ಆನಂದವಿದೆ, ತೃಪ್ತಿ ಇದೆ. ನೀನು ಒಂದು ಹಿಡಿ ಮಣ್ಣು ಬೊಗಸೆ ನೀರು ಹಾಕಿದೆ. ನಾನು ಎಲ್ಲಿಯೂ ಹೋಗದೆ ಇಲ್ಲಿಯೇ ಇದ್ದು ನನ್ನನ್ನೇ ನಾನು ಸಂಪತ್ತಾಗಿ ಮಾಡಿಕೊಂಡೆ, ನನ್ನಲ್ಲಿರುವ ಸಂಪತ್ತನ್ನು ಎಲ್ಲರಿಗೂ ಹಂಚಿದೆ, ಸಿಹಿಯನ್ನು ತಿನ್ನಿಸಿದೆ, ತಂಪು ಮಾಡಿದೆ, ಪಶು ಪಕ್ಷಿಗಳ ವಂಶಾಭಿವೃದ್ಧಿ ಮಾಡಲು ವಸತಿ ಕೊಟ್ಟೆ. ಎಷ್ಟೋ ಜನ ನನ್ನ ತುಳಿದರು ಆದರೆ ನಿನ್ನಂಥ ಒಬ್ಬ ಪುಣ್ಯಾತ್ಮ ನನ್ನನ್ನು ಮೇಲೆತ್ತಿ ಒಳ್ಳೆಯ ಜಾಗದಲ್ಲಿ ಇಟ್ಟು ಮಣ್ಣು ನೀರು ಕೊಟ್ಟೆ.ಅದರಿಂದ ನಾನು ಬೆಳೆದೆ ಎಂದು ಪುಣ್ಯಾತ್ಮನನ್ನು ವೃಕ್ಷ ಕೊಂಡಾಡಿತು. ಬದುಕಲಿ ಮೇಲೆ ಬರಲು ಇಂತಹ ಒಂದು ಸಹಾಯ ಅಥವಾ ಅವಕಾಶ ಸಿಕ್ಕರೆ ಸಾಕು. ನಮ್ಮ ಸುತ್ತಮುತ್ತಲು ಅನೇಕರು ಕೆಲವೊಮ್ಮೆ ಸರಿಯಾದ ಅವಕಾಶಗಳಿಲ್ಲದೆ ಕೈ ಚೆಲ್ಲಿ ಕುಳಿತಿರುತ್ತಾರೆ.
ಅಂತಹವರಿಗೆ ನಾವು ಒಂದು ಸಣ್ಣ ಅವಕಾಶ ಕೊಟ್ಟರು, ಸಹಾಯ ಮಾಡಿದರೂ ಅವರ ಜೀವನ ವನ್ನೇ ಬದಲಾಯಿಸುವ ಘಳಿಗೆ ಅದಾಗುತ್ತದೆ. ಆದ್ದರಿಂದಲೇ ಮತ್ತೊಬ್ಬರಿಗೆ ಸಹಾಯ ಮಾಡು ವಾಗ ಹೆಚ್ಚು ಯೋಚಿಸಬೇಡಿ. ನಾವು ಇಂದು ಮಾಡಿದ ಸಹಾಯ 100 ಪಟ್ಟಾಗಿ ನಾಳೆ ನಮಗೆ ಬಂದು ಒದಗುತ್ತದೆ.