Chinthamani News: ಚಿಂತಾಮಣಿಯಲ್ಲಿ ಬೃಹತ್ ಉಚಿತ ಹೃದಯ ಆರೋಗ್ಯ ತಪಾಸಣಾ ಶಿಬಿರ ಯಶಸ್ವಿ
ನಾರಾಯಣ ಹಾರ್ಟ್ ಸೆಂಟರ್ನ ವೈದ್ಯರ ತಂಡ, ಸ್ಥಳೀಯ ಮುಖಂಡರಾದ ನಾಗರಾಜ್ ಹಾಗೂ ಶಂಕರ ಮಠದ ಟ್ರಸ್ಟ್ ಮಂಡಳಿಯ ಎಲ್ಲಾ ಸದಸ್ಯರ ಸಹಕಾರದಿಂದ ಈ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ಮೂಡಿಬಂದಿದೆ ಎಂದು ತಿಳಿಸಿ, ಸಹಕರಿಸಿದ ಎಲ್ಲರಿಗೂ ಮನಃಪೂರ್ವಕ ಧನ್ಯವಾದ ಗಳನ್ನು ಅರ್ಪಿಸಿದರು.
-
ಚಿಂತಾಮಣಿ: ನಗರದ ವಾರ್ಡ್ ನಂಬರ್ 24ರ ನರಸಿಂಹಪೇಟೆಯ ನಿವಾಸಿಯೂ ಹಾಗೂ ಸಮಾಜ ಸೇವಕರೂ ಆದ ದಾದಾಪೀರ್ ಅವರ ಹುಟ್ಟುಹಬ್ಬದ ಅಂಗವಾಗಿ ಸಾರ್ವಜನಿಕರಿಗಾಗಿ ಬೃಹತ್ ಉಚಿತ ಹೃದಯ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.
ಮೆಗಾ ಫ್ಯಾನ್ಸ್ ಅಸೋಸಿಯೇಷನ್ ಹಾಗೂ ಕೋಲಾರ ಜಿಲ್ಲೆಯ ಟಮಕದ ಆರ್.ಎಲ್.ಜಾಲಪ್ಪ ನಾರಾಯಣ ಹಾರ್ಟ್ ಸೆಂಟರ್ (ನಾರಾಯಣ ಹೆಲ್ತ್) ಇವರ ಜಂಟಿ ಆಶ್ರಯದಲ್ಲಿ ಈ ಜನಪರ ಕಾರ್ಯಕ್ರಮ ಆಯೋಜಿಸಲಾಗಿತ್ತು. ಚಿಂತಾಮಣಿ ನಗರದ ಬ್ರಾಹ್ಮಣರ ಬೀದಿಯಲ್ಲಿರುವ ಶ್ರೀ ಶಾರದಾ ಶಂಕರ ಮಠದಲ್ಲಿ ನಡೆದ ಈ ಶಿಬಿರದಲ್ಲಿ, ವಿಶೇಷ ಪರಿಣತಿ ಪಡೆದ ನುರಿತ ವೈದ್ಯರ ತಂಡವು ಸಾರ್ವಜನಿಕರಿಗೆ ಸಂಪೂರ್ಣ ಉಚಿತವಾಗಿ ತಪಾಸಣೆಗಳನ್ನು ನಡೆಸಿತು.
ಶಿಬಿರದಲ್ಲಿ ಸಾರ್ವಜನಿಕರಿಗೆ ಅತ್ಯಗತ್ಯವಾದ ಇ.ಸಿ.ಜಿ ಸ್ಕ್ಯಾನಿಂಗ್, ಎಕೋ, ಥೈರಾಯ್ಡ್ ತಪಾಸಣೆ ಹಾಗೂ ಬಿಪಿ ಮತ್ತು ಶುಗರ್ ಪರೀಕ್ಷೆಗಳನ್ನು ಸಂಪೂರ್ಣ ಉಚಿತವಾಗಿ ಮಾಡಲಾಯಿತು.
ಇದನ್ನೂ ಓದಿ: Chinthamani News: ಜೂ.17ಕ್ಕೆ ಕೈವಾರ ತಾತಯ್ಯ ಆರಾಧನೆ
ಈ ಸಂದರ್ಭದಲ್ಲಿ ಮಾತನಾಡಿದ ಆಯೋಜಕರು ಹಾಗೂ ಗಣ್ಯರು, ದಾದಾಪೀರ್ ಅವರ ಹುಟ್ಟು ಹಬ್ಬದ ಅಂಗವಾಗಿ ಇಂತಹ ಅರ್ಥಪೂರ್ಣ ಆರೋಗ್ಯ ಶಿಬಿರ ಆಯೋಜಿಸಿರುವುದು ಶ್ಲಾಘನೀಯ.
ನಾರಾಯಣ ಹಾರ್ಟ್ ಸೆಂಟರ್ನ ವೈದ್ಯರ ತಂಡ, ಸ್ಥಳೀಯ ಮುಖಂಡರಾದ ನಾಗರಾಜ್,ಹಾಗೂ ಶಂಕರ ಮಠದ ಟ್ರಸ್ಟ್ ಮಂಡಳಿಯ ಎಲ್ಲಾ ಸದಸ್ಯರ ಸಹಕಾರದಿಂದ ಈ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ಮೂಡಿಬಂದಿದೆ ಎಂದು ತಿಳಿಸಿ, ಸಹಕರಿಸಿದ ಎಲ್ಲರಿಗೂ ಮನಃಪೂರ್ವಕ ಧನ್ಯವಾದ ಗಳನ್ನು ಅರ್ಪಿಸಿದರು. ಮುಂಬರುವ ದಿನಗಳಲ್ಲೂ ಸಾರ್ವಜನಿಕರಿಗೆ ಅನುಕೂಲವಾಗುವಂತಹ ಇನ್ನು ಹೆಚ್ಚಿನ ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಅವರು ಆಶಯ ವ್ಯಕ್ತಪಡಿಸಿದರು.
ಶಿಬಿರದಲ್ಲಿ ನೂರಾರು ನಾಗರಿಕರು ಪಾಲ್ಗೊಂಡು ಉಚಿತ ಆರೋಗ್ಯ ತಪಾಸಣೆಯ ಸೌಲಭ್ಯವನ್ನು ಪಡೆದುಕೊಂಡರು.
ಈ ಸಂದರ್ಭದಲ್ಲಿ ಡಾ.ಇಮ್ರಾನ್ ಖಾನ್, ನಾಗರಾಜ್, ಶಹಬುದ್ದೀನ್, ವೆಂಕಟಲಕ್ಷ್ಮು, ಗಂಗಕ್ಕ, ಅಶ್ವತಪ್ಪ, ಮನ್ಸೂರ್, ಶಬಾಸ್ ಸೇರಿದಂತೆ ಮತ್ತಿತರರು ಇದ್ದರು.