Naveen Sagar Column: ಕರ್ನಾಟಕದ ಈ ಅಪ್ರತಿಮ ಅಟಗಾರ ರಾಜಕೀಯಕ್ಕೆ ಬಲಿಯಾಗಿದ್ದ !
ಇಂದು ನಾನು ಹೇಳೋಕೆ ಹೊರಟಿರೋದು ಕರ್ನಾಟಕದ ಮತ್ತೊಬ್ಬ ಅಪ್ರತಿಮ ಕೀಪರ್ ಬ್ಯಾಟ್ಸ್ಮನ್ ಆದರೆ ನತದೃಷ್ಟ ಆಟಗಾರನ ಬಗ್ಗೆ. ಆತನ ಹೆಸರು ಬೂಧಿ ಕುಂದರನ್. ಬೂಧಿ ಕುಂದರನ್ ಅವರ ಅಸಲಿ ಹೆಸರಿನ ಬಗ್ಗೆ ಹಲವಾರು ಗೊಂದಲಗಳಿವೆ. ಕುಂದರನ್ ಎಂಬ ಹೆಸರು ಕೇಳಿದಾಗ ತಮಿಳರೋ ಮಲಯಾಳಿಯೋ ಅನಿಸಬಹುದು. ಆದರೆ ಇವರು ಕರ್ನಾಟಕದ ದಕ್ಷಿಣ ಕನ್ನಡದ ಮೂಲ್ಕಿಯವರಂತೆ.


ಪದಸಾಗರ
naveensagar2709@gmail.com
ಭಾರತ ಕ್ರಿಕೆಟ್ ತಂಡ ಕಂಡ ಸರ್ವಶ್ರೇಷ್ಠ ವಿಕೆಟ್ ಕೀಪರ್ ಯಾರು? ದಾಖಲೆಗಳನ್ನು ನೋಡಿದಾಗ ನಿಸ್ಸಂಶಯವಾಗಿ ಮಹೇಂದ್ರ ಸಿಂಗ್ ಧೋನಿ ಹೆಸರು ಉತ್ತರವಾಗಿ ಬರುತ್ತದೆ. ಬೆಸ್ಟ್ ವಿಕೆಟ್ ಕೀಪರ್ ಬ್ಯಾಟರ್ ಯಾರು ಎಂಬ ಪ್ರಶ್ನೆಗೂ ಸದ್ಯಕ್ಕೆ ಹೊರ ಬರುವ ಉತ್ತರ ಎಂ.ಎಸ್ ಧೋನಿ. ಆದರೆ ಎಂಬತ್ಮೂರರ ವಿಶ್ವಕಪ್ ಗೆzಗ, ವಿಕೆಟ್ ಕೀಪರ್ ಅಂದ್ರೆ ಕಿರ್ಮಾನಿ ಎಂಬಷ್ಟು ಖ್ಯಾತಿ ಸೈಯದ್ ಕಿರ್ಮಾನಿಗೆ ಸಿಕ್ಕಿತ್ತು. ಆ ನಂತರ ಬಂದ ಮತ್ತೊಬ್ಬ ಕರ್ನಾಟಕದ ವಿಕೆಟ್ ಕೀಪರ್ ಅಂದ್ರೆ ಅದು ಸದಾನಂದ ವಿಶ್ವನಾಥ್ !
ಇವರನ್ನು ಹೊರತುಪಡಿಸಿದರೆ ಭಾರತದ ವಿಕೆಟ್ ಕೀಪರ್ಗಳು ಯಾವತ್ತಿಗೂ ಸ್ಟಾರ್ ಆಗಿರಲಿಲ್ಲ. ಕಿರಣ್ ಮೋರೆ, ಸಾಬಾ ಕರೀಮ, ಚಂದ್ರಕಾಂತ ಪಂಡಿತ್, ಅಜಯ್ ರಾತ್ರಾ, ವಿಜಯ್ ದಹಿಯಾ, ನಯನ್ ಮೋಂಗಿಯಾ ಹೀಗೆ ಸಾಲು ಸಾಲು ಕೀಪರ್ ಗಳು ಬಂದು ಹೋದರು.
ಇವರಲ್ಲಿ ನಯನ್ ಮೋಂಗಿಯಾ ಟೆಸ್ಟ್ ಗಳಲ್ಲಿ ಒಂದು ಮಟ್ಟಿಗೆ ಬ್ಯಾಟಿಂಗ್ ಪವರ್ ತೋರಿಸಿದ್ದು, ಅಂದು ಇಂದು ಮ್ಯಾಚ್ ಗಳಲ್ಲಿ ಕಿರಣ್ ಮೋರೆ ಚಿನಕುರಳಿ ಇನ್ನಿಂಗ್ಸ್ ಆಡಿದ್ದು ಬಿಟ್ಟರೆ, ನಮ್ಮ ದೇಶದ ವಿಕೆಟ್ ಕೀಪರ್ ಅಂದ್ರೆ ಆತ ನೈಟ್ ವಾಚ್ ಮನ್ ಆಗೋಕೆ ಲಾಯಕ್ ಎಂಬಂಥ ಸ್ಥಿತಿ ಇತ್ತು.
ಕೀಪರ್ ಗಳ ಬ್ಯಾಟಿಂಗ್ ಬಗ್ಗೆ ಯಾವತ್ತೂ ನಂಬಿಕೆ ಇರಲಿಲ್ಲ. ಬ್ಯಾಟ್ ಮಾಡುವ ಕೀಪರ್ ಬೇಕು ಎಂಬ ಅಗತ್ಯವನ್ನೇ ಭಾರತ ಕಂಡಿರಲಿಲ್ಲ. ಬಹುಶಃ ಅದರ ಅಗತ್ಯ ಮೊತ್ತ ಮೊದಲ ಬಾರಿ ಕಂಡ ವನು ಸೌರವ್ ಗಂಗೂಲಿ. ರಾಹುಲ್ ದ್ರಾವಿಡ್ನನ್ನು ತಂಡದಲ್ಲಿ ಉಳಿಸಿಕೊಳ್ಳಲೆಂದೋ ಅಥವಾ ಒಬ್ಬ ಎಕ್ಸ್ ಟ್ರಾ ಬೌಲರ್ ಅಥವಾ ಬ್ಯಾಟರ್ಗೆ ಜಾಗ ಮಾಡಿಕೊಡಲೆಂದೋ, ಒಟ್ಟು ಒಂದು ರಣತಂತ್ರದ ಭಾಗವಾಗಿ ದ್ರಾವಿಡ್ ಗೆ ಕೀಪಿಂಗ್ ಜವಾಬ್ದಾರಿ ವಹಿಸಿಬಿಟ್ಟ.
ಇದನ್ನೂ ಓದಿ: Naveen Sagar Column: ಅನಂತರಿಗೆ ಸಿಕ್ಕ ಪದ್ಮಭೂಷಣ, ರಾಜ್ಯದಲ್ಲಿ ಅನಾಥವಾಯ್ತು
ಅದು ಬಹುಶಃ ಭಾರತೀಯ ಕ್ರಿಕೆಟ್ ನಲ್ಲಿ ಆದ ಮಹತ್ತರ ಬದಲಾವಣೆ. ಇತರ ದೇಶಗಳ ತಂಡದಲ್ಲಿ ಗಿಲ್ ಕ್ರಿಸ್ಟ್, ಸಂಗಕ್ಕಾರ, ಮೋಯಿನ್ ಖಾನ್, ಆಂಡಿ ಫ್ಲವರ್, ಅಲೆಕ್ ಸ್ಟುವರ್ಟ್, ಬೌಚರ್ ಹೀಗೆ ಬ್ಯಾಟಿಂಗ್ನಲ್ಲಿ ಅಬ್ಬರಿಸುವ ಕೀಪರ್ ಗಳಿದ್ದರು. ಇದರಿಂದಾಗಿ ಟೀಮಿಗೊಂದು ಸಮತೋಲನ ಸಿಕ್ಕಿಬಿಡುತ್ತಿತ್ತು.
ಗಂಗೂಲಿ ಇದನ್ನು ಅರ್ಥ ಮಾಡಿಕೊಂಡು ದ್ರಾವಿಡ್ ಕೈಗೆ ಕೀಪರ್ ಗ್ಲೋವ್ಸ್ ತೊಡಿಸಿಬಿಟ್ಟಿದ್ದ. ಅಲ್ಲಿಂದ ಮುಂದೆ ಭಾರತ ಬ್ಯಾಟಿಂಗ್ ಚೆನ್ನಾಗಿ ಆಡಬಲ್ಲ ಕೀಪರೇ ಬೇಕು ಎಂಬ ನಿಯಮ ಮಾಡಿ ಕೊಂಡಿತು. ಅದರ ಫಲವಾಗಿ ಧೋನಿ, ಕಾರ್ತಿಕ್, ಸಂಜು ಸ್ಯಾಮ್ಸನ್, ರಿಷಬ್ ಪಂತ್, ಹೀಗೆ ಬ್ಯಾಟಿಂಗ್ ಮಾಡುವ ಕೀಪರ್ ಗಳ ಪರಂಪರೆ ಶುರುವಾಯಿತು. ಕೆ.ಎಲ್ ರಾಹುಲ್ ನಂಥ ಕ್ಲಾಸಿಕ್ ಬ್ಯಾಟ್ಸ್ಮನ್ ತಂಡದಲ್ಲಿ ಸ್ಥಾನ ಗಳಿಸಿಕೊಳ್ಳಲು ಉಳಿಸಿಕೊಳ್ಳಲು ಕೀಪರ್ ಆಗುವುದು ಅನಿವಾರ್ಯ ವಾಯಿತು.
ಧೋನಿ ಶಾಸ್ತ್ರೀಯ ಶೈಲಿಯ ವಿಕೆಟ್ ಕೀಪಿಂಗ್ ಗೊತ್ತಿಲ್ಲದಾಗ್ಯೂ ಕೀಪರ್ ಆಗಿ ಉಳಿದದ್ದು ಬ್ಯಾಟಿಂಗ್ ನಿಂದಲೇ. ಕಾರ್ತಿಕ್ ಸೇರಿದಂತೆ ಹಲವಾರು ಕೀಪರ್ ಗಳು, ಶುದ್ಧ ಬ್ಯಾಟರ್ ಗಳಾಗಿ ಟೀಮ್ ಸೇರುವಂತಾಗಿದ್ದೂ ಒಂದು ಕ್ರಾಂತಿಯೇ. ಪ್ರತಿ ತಂಡದಲ್ಲಿ ಈಗ ಮೂರ್ನಾಲ್ಕು ಮಂದಿ ಕೀಪಿಂಗ್ ಮಾಡಬಲ್ಲ ಬ್ಯಾಟರ್ ಗಳಿರ್ತಾರೆ.
ಇತ್ತೀಚೆಗೆ ನಡೆದ ಇಂಗ್ಲೆಂಡ್ ಭಾರತ ನಡುವಣ ಟೆಸ್ಟ್ ಪಂದ್ಯದಲ್ಲಿ ರಿಷಬ್ ಪಂತ್ ಎರಡೂ ಇನ್ನಿಂಗ್ಸ ಗಳಲ್ಲಿ ಶತಕ ಗಳಿಸಿ ದಾಖಲೆ ನಿರ್ಮಿಸಿದ. ಆದರೆ ಪಂದ್ಯ ಸೋತಾಗ ರಿಷಬ್ ಸೆಂಚುರಿಯ ಖುಷಿ ಮಾಯವಾಯ್ತು. ಆತನ ಕೀಪಿಂಗ್ ಬಗ್ಗೆ ಟೀಕೆಗಳು ಕೇಳಿ ಬಂದವು. ಇದರ ಜತೆ ಜತೆಗೆ ಮತ್ತು ಶುರುವಾದದ್ದು ಭಾರತದ ಶ್ರೇಷ್ಠ ಕೀಪರ್ ಬ್ಯಾಟ್ಸ್ ಮನ್ ಯಾರು ಎಂಬ ಚರ್ಚೆ.
ನಾನು ಕಿರ್ಮಾನಿಯ ಕೀಪಿಂಗ್ ಲೈವ್ ಮ್ಯಾಚ್ ಗಳಲ್ಲಿ ನೋಡಿದವನಲ್ಲ. ಆದರೆ ಸದಾನಂದ್ ವಿಶ್ವನಾಥ್ ಎಂಬ ಸಿಡಿಲಮರಿಯ ಕೀಪಿಂಗ್ ನೋಡಿದ್ದೇನೆ. ವೇಗದ ಬೌಲರ್ ಗಳಿಗೂ ಹೆಲ್ಮೆಟ್ ಕೂಡ ಧರಿಸದೇ ವಿಕೆಟ್ಗೆ ಅಂಟಿಕೊಂಡು ನಿಂತು ಕೀಪಿಂಗ್ ಮಾಡುತ್ತಿದ್ದ ಸದಾನಂದ ವಿಶ್ವನಾಥ್ ಭಾರತ ಕಂಡ ಅತ್ಯದ್ಭುತ ಕೀಪರ್. ಅಂದು ತಂತ್ರಜ್ಞಾನ ಇಷ್ಟು ಮುಂದುವರಿದಿದ್ದರೆ, ಫಾಸ್ಟೆಸ್ಟ್ ಸ್ಟಂಪಿಂಗ್ ದಾಖಲೆ ಅವನ ಹೆಸರ ಇದ್ದಿರುತ್ತಿತ್ತೇನೋ.
ತಾಳ್ಮೆ ಅಂದರೇನು ಅಂತ ಗೊತ್ತಿಲ್ಲದ, ಆಕ್ರಮಣಕಾರಿ ಮನೋಭಾವದ ಕೀಪರ್ ಮತ್ತು ಬ್ಯಾಟ್ಸ್ ಮನ್ ಎಸ್.ವಿಶ್ವನಾಥ್. ಅದೇ ಆತನ ವೃತ್ತಿ ಬದುಕನ್ನು ಮೊಟಕುಗೊಳಿಸಿದ್ದು ಎಂಬ ಮಾತಿದೆ. ಆದರೆ ಇದ್ದಷ್ಟು ದಿನ ತಂಡದಲ್ಲಿ ತನ್ನ ಮನೋಭಾವದ ಮೂಲಕ ಹೈ ಎನರ್ಜಿ ತುಂಬುವುದರಲ್ಲಿ ಯಶಸ್ವಿಯಾಗಿದ್ದ ಆಟಗಾರ ಈತ. ಇವತ್ತಿಗೂ ಯೂಟ್ಯೂಬ್ ನಲ್ಲಿ ಸದಾನಂದ್ ವಿಶ್ವನಾಥ್ ಕೀಪಿಂಗ್ ನ ಕೆಲವು ತುಣುಕುಗಳು ಸಿಗುತ್ತವೆ. ಆಸಕ್ತರು ನೋಡಬಹುದು.
ಇಂದು ನಾನು ಹೇಳೋಕೆ ಹೊರಟಿರೋದು ಕರ್ನಾಟಕದ ಮತ್ತೊಬ್ಬ ಅಪ್ರತಿಮ ಕೀಪರ್ ಬ್ಯಾಟ್ಸ್ ಮನ್ ಆದರೆ ನತದೃಷ್ಟ ಆಟಗಾರನ ಬಗ್ಗೆ. ಆತನ ಹೆಸರು ಬೂಧಿ ಕುಂದರನ್. ಬೂಧಿ ಕುಂದರನ್ ಅವರ ಅಸಲಿ ಹೆಸರಿನ ಬಗ್ಗೆ ಹಲವಾರು ಗೊಂದಲಗಳಿವೆ. ಕುಂದರನ್ ಎಂಬ ಹೆಸರು ಕೇಳಿದಾಗ ತಮಿಳರೋ ಮಲಯಾಳಿಯೋ ಅನಿಸಬಹುದು. ಆದರೆ ಇವರು ಕರ್ನಾಟಕದ ದಕ್ಷಿಣ ಕನ್ನಡದ ಮೂಲ್ಕಿಯವರಂತೆ.
ಅದು ಕುಂದರನ್ ಅಲ್ಲ ಕರಾವಳಿಯ ಕಡಲತಡಿಯ ಕುಟುಂಬದ ಕುಂದರ್ ಎಂದು ಅವರ ಕುಟುಂಬವನ್ನು ಬಲ್ಲವರು ಹೇಳುತ್ತಾರೆ. ಬೂಧಿ ಕುಂದರನ್ ಭಾರತ ಕಂಡ ಮೊದಲ ಸಿಡಿಲಬ್ಬರದ ಬ್ಯಾಟರ್ ಮತ್ತು ವಿಕೆಟ್ ಕೀಪರ್ ಅನ್ನುತ್ತದೆ ಕ್ರಿಕೆಟ್ ಇತಿಹಾಸ. ಬೂಧಿ ಕುಂದರನ್ ಬಡ ಮೀನುಗಾರರ ಕುಟುಂಬದಲ್ಲಿ ಹುಟ್ಟಿದ ಹುಡುಗ. ಅಪ್ಪನೆದುರು ಕ್ರಿಕೆಟ್ ಅನ್ನೋ ಪದವನ್ನೂ ಮಾತನಾಡುವಂತಿರಲಿಲ್ಲ. ಆದರೆ ತಾಯಿ ಮಗನ ಕ್ರಿಕೆಟ್ ಕನಸಿಗೆ ಬಲ ತುಂಬುತ್ತಾರೆ. ಅಪ್ಪನ ಬಿಳಿ ಅಂಗಿ ಪ್ಯಾಂಟುಗಳನ್ನೇ ರಿಪೇರಿ ಮಾಡಿ ಹೊಲಿಸಿ ಕೊಟ್ಟು ಕ್ರಿಕೆಟ್ ಆಡಲು ಕಳಿಸುತ್ತಾರೆ.
ದುಸ್ತರ ಬದುಕು ಸಾಕಾಗಿ, ಭವಿಷ್ಯ ಅರಸಿಕೊಂಡು ತಂದೆ ಕುಟುಂಬ ಸಮೇತ ಮುಂಬಯಿಗೆ ಪಯಣಿಸುತ್ತಾರೆ. ಮುಂಬಯಿಗೆ ಬಂದ ನಂತರ ಬೂಧಿ ಕುಂದರನ್ ಅವರ ಕ್ರಿಕೆಟ್ ಕನಸು ಇನ್ನಷ್ಟು ಹಿರಿದಾಗುತ್ತದೆ. ಸ್ಟೇಡಿಯಂಗಳಲ್ಲಿ ಬೌಂಡರಿ ಆಚೆ ನಿಂತು ಬಾಲ್ ಬಾಯ್ ಥರ ಕೆಲಸ ಮಾಡುತ್ತಾರೆ. ಹಾಗಾದರೂ ಒಮ್ಮೆ ಆಡುವ ಅವಕಾಶ ಸಿಕ್ಕಬಹುದು ಎಂದು. ಒಂದುದಿನ ಅವಕಾಶ ಸಿಕ್ಕೇ ಬಿಡುತ್ತದೆ. ಕೀಪಿಂಗ್ ಮಾಡು ಎಂದು ತಂಡಕ್ಕೆ ಕರೆಯುತ್ತಾರೆ.
ಹುಡುಗನ ಆಸಕ್ತಿ, ಚುರುಕುತನ, ಆಕ್ರಮಣಕಾರಿ ಮನೋಭಾವ ಮೊದಲ ನೋಟದ ಗೊತ್ತಾಗಿ ಬಿಡುತ್ತದೆ. ಬೂಧಿ ಕುಂದರನ್ ಒಂದೇ ಒಂದು ದೇಶೀ ಪಂದ್ಯವನ್ನೂ ಆಡದೇ ನೇರವಾಗಿ ಭಾರತ ತಂಡಕ್ಕೆ ಆಯ್ಕೆಯಾಗಿ ಬಿಡುತ್ತಾನೆ. ಮುಂಬಯಿಯಲ್ಲಿ ಮೊದಲ ಪಂದ್ಯ. ಆಗ ಕ್ರಿಕೆಟ್ ಮಂಡಳಿಯ ಧೋರಣೆಗಳು ಎಷ್ಟು ಕೆಟ್ಟದಾಗಿದ್ದವು ಅಂದರೆ , ಸ್ಥಳೀಯ ಆಟಗಾರರಿಗೆ ಹೊಟೇಲ್ ವಾಸ್ತವ್ಯ ನೀಡುತ್ತಾ ಇರಲಿಲ್ಲ. ಮಿಕ್ಕವರ ಹಾಗೆ ಸಿರಿವಂತನಲ್ಲ ಬೂಧಿ.
ಐದು ರಾತ್ರಿಗಳನ್ನು ಹುಲ್ಲುಹಾಸಿನಲ್ಲಿ ಸೊಳ್ಳೆ ಇರುವೆಗಳ ಕಾಟದ ನಡುವೆ ಮಲಗಿ ಕಳೆದಿದ್ದ. ಹಗಲು ಹೊತ್ತಿನಲ್ಲಿ ಸುಮಾರು 150 ಓವರ್ ಕೀಪಿಂಗ್ ಮಾಡಿ ಸೈ ಎನಿಸಿಕೊಂಡಿದ್ದ. ಮೊದಲ ಪಂದ್ಯದಲ್ಲಿ ಎಂಟನೇ ಬ್ಯಾಟ್ಸ್ಮನ್ ಆಗಿ ಹೋಗಿದ್ದ ಹುಡುಗ ಹೊಡೆಯಲು ಸಾಧ್ಯವಾಗಿದ್ದು ಒಟ್ಟು ಇಪ್ಪತ್ತೆರಡು ರನ್ ಮಾತ್ರ. ಆ ಪಂದ್ಯ ಆಡೋದಕ್ಕೂ ಆತ ಯಾರದ್ದೋ ಪ್ಯಾಡ್ ಮತ್ತು ಗ್ಲೋವ್ಸ್ ಕಡ ಪಡೆದಿದ್ದ ಅಂದ್ರೆ ಆತನ ಪರಿಸ್ಥಿತಿ ಎಷ್ಟು ಶೋಚನೀಯವಿದ್ದಿರಬಹುದು.
ಎರಡನೇ ಪಂದ್ಯದಲ್ಲಿ ಕುಂದರನ್ ಗೆ ಇನ್ನಿಂಗ್ಸ್ ಓಪನ್ ಮಾಡುವ ಅಚ್ಚರಿಯ ಅವಕಾಶ. ನಾರಿ ಕಂಟ್ರಾಕ್ಟರ್ ಎಂಬ ಓಪನರ್ ಹೊಸ ಚೆಂಡು ಎದುರಿಸೋಕೆ ಸಿದ್ಧನಿಲ್ಲ ಎಂದು ಹಿಂದೆ ಸರಿದ ಪರಿಣಾಮ ಕುಂದರನ್ ಗೆ ಇನ್ನಿಂಗ್ಸ್ ಆರಂಭಿಸುವ ಹೊಣೆ ಒಪ್ಪಿಸಲಾಗುತ್ತದೆ. ಅಂದಿನ ಟೆಸ್ಟ್ ಪಂದ್ಯದಲ್ಲಿ ಬೂಧಿ ಟ್ವೆಂಟಿ ಇನ್ನಿಂಗ್ಸ್ ಮಾದರಿಯಲ್ಲಿ 12 ಬೌಂಡರಿಯ 71 ರನ್ ಗಳಿಸಿ ಬಿಡುತ್ತಾನೆ. ಕೀಪರ್ ಬ್ಯಾಟ್ಸ್ಮನ್ ಸಾಮಾನ್ಯನಲ್ಲ ಎಂದು ಅವತ್ತೇ ಜಗತ್ತಿಗೆ ತಿಳಿದಿತ್ತು. ಅಲ್ಲಿಂದ ಮುಂದೆ ರಣಜಿ ಪದಾರ್ಪಣೆ ಮಾಡುವ ಬೂಧಿ , ಸ್ಫೋಟಕ ದ್ವಿಶತಕ ಬಾರಿಸುತ್ತಾನೆ. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಆಯ್ಕೆಯಾಗಿ, ಚೆನ್ನೈಯಲ್ಲಿ 192 ರನ್ ಗಳ ಇನ್ನಿಂಗ್ಸ್ ಕಟ್ಟುತ್ತಾನೆ.
ನಿಮಗೆ ನೆನಪಿರಲಿ. ಈ ದಾಖಲೆ ದಶಕಗಳ ಕಾಲ ಆಬಾಧಿತವಾಗಿಯೇ ಇತ್ತು. ಅದೇ ಮೈದಾನದಲ್ಲಿ ಧೋನಿ 205 ರನ್ ಬಾರಿಸುವ ತನಕ! ಆ ಪಂದ್ಯದಲ್ಲಿ ಬಾರಿಸಿದ ಮೂವತ್ತೊಂದು ಬೌಂಡರಿ ಕೂಡ ಕೋಲ್ಕತ್ತಾದಲ್ಲಿ ವಿವಿಎಸ್ ಲಕ್ಷ್ಮಣ್ 281 ರನ್ ಗಳ ಇನ್ನಿಂಗ್ಸ್ ಆಡುವ ತನಕ ದಾಖಲೆಯಾಗಿಯೇ ಉಳಿದಿತ್ತು. ಆ ಸರಣಿಯಲ್ಲಿ ಬೂಧಿ ಕುಂದರನ್ 525 ರನ್ ಗಳಿಸಿದ್ದು ಟೆಸ್ಟ್ ಸರಣಿಯಲ್ಲಿ ಕೀಪರ್ ಒಬ್ಬನ ದಾಖಲೆಯಾಗಿತ್ತು.
ಆದರೆ ಬೂಧಿಯ ದುರದೃಷ್ಟ ಹೇಗಿತ್ತು ನೋಡಿ. ಆತನ ಕಾಲದಲ್ಲಿ ಫಾರೂಕ್ ಇಂಜಿನಿಯರ್ ಎಂಬ ಮತ್ತೊಬ್ಬ ಅದ್ಭುತ ಕೀಪರ್ ಬ್ಯಾಟರ್ ಇದ್ದ. ಈಗ ಧೋನಿ ಜಮಾನದಲ್ಲಿ ಕಾರ್ತಿಕ್ ಅನುಭವಿಸಿದ ಪರಿಸ್ಥಿತಿ ಇಂಜಿನಿಯರ್ ಕಾಲದಲ್ಲಿ ಬೂಧಿ ಅನುಭವಿಸಿದ. ಓಪನಿಂಗ್ ಸ್ಥಾನ ಬಿಟ್ಟು ಕೊಡಬೇ ಕಾಯ್ತು. ಕೀಪರ್ ಸ್ಥಾನವೂ ಅಭದ್ರವಾಯ್ತು. ಆದರೂ ಸಿಕ್ಕ ಅವಕಾಶ ಬಿಡಲಿಲ್ಲ. ವೆಸ್ಟ್ ಇಂಡೀಸ್ ವಿರುದ್ಧ ಅದೊಂದು ಪಂದ್ಯದಲ್ಲಿ ಭಾರತ 197 ರನ್ ಗಳಿಗೆ ಏಳು ವಿಕೆಟ್ ಕಳೆದು ಕೊಂಡು ಕಳವಳ ಪಡ್ತಾ ಇದ್ದಾಗ, ಕೇವಲ ಒಂದೇ ಒಂದು ಗಂಟೆಯಲ್ಲಿ 79 ರನ್ ಚಚ್ಚಿ ಕೆಡವಿದ್ದ ಬೂಧಿ ಕುಂದರನ್. ನಸೀಬು ಹೇಗಿತ್ತು, ಒತ್ತಡ ಹೇಗಿತ್ತು ನೋಡಿ.
1967ರಲ್ಲಿ ತಂಡಕ್ಕೆ ಆಯ್ಕೆ ಆದಾಗ ಏಕಾಏಕಿಯಾಗಿ ನಾಯಕ ಪಟೌಡಿ, ಬೂಧಿ ಕೈಗೆ ಚೆಂಡು ಕೊಟ್ಟು ಬೌಲ್ ಮಾಡು ಅಂದು ಬಿಡುತ್ತಾನೆ. ಓಪನರ್ ಬ್ಯಾಟ್ಸ್ಮನ್ ಮತ್ತು ಓಪನಿಂಗ್ ಬೌಲರ್ ಆಗಿ ಆಡಿದ ಏಕೈಕ ಆಟಗಾರ ಎಂದು ಹಿಸ್ಟರಿಯಲ್ಲಿ ಬೂಧಿ ದಾಖಲಾಗುತ್ತಾನೆ. ಆದರೆ ಯಾವತ್ತೂ ಬೌಲಿಂಗ್ ಮಾಡಿರದ, ತನಗೆ ಬೌಲಿಂಗ್ ಮಾಡುವ ಪರಿಸ್ಥಿತಿ ಬರಬಹುದು ಎಂದೂ ಗೊತ್ತಿಲ್ಲದ ಬೂಧಿ, ಅಂದು ಬೌಲಿಂಗ್ ಮಾಡಲೇಬೇಕಾಗುತ್ತದೆ.
ಅದು ಆತ ಆಡಿದ ಕೊನೆಯ ಟೆಸ್ಟ್. ಆತನನ್ನು ತಂಡದಿಂದ ಹೊರ ಹಾಕಲೆಂದೇ ಹೂಡಿದ ಷಡ್ಯಂತ್ರಗಳಲ್ಲಿ ಅದೂ ಒಂದು. ಭಾರತೀಯ ಕ್ರಿಕೆಟ್ ನ ಹಾಳು ರಾಜಕೀಯಕ್ಕೆ ಬೂಧಿ ಕುಂದರನ್ ಹಂತಹಂತವಾಗಿ ಬಲಿಯಾಗುತ್ತಾ ಹೋಗುತ್ತಾನೆ. ಕೊನೆಗೊಮ್ಮೆ ಭಾರತವನ್ನೇ ತೊರೆದು ಸ್ಕಾಟ್ಲೆಂಡ್ ನಲ್ಲಿ ನೆಲೆಸುವಂತಾಗುತ್ತದೆ. ಅಲ್ಲಿಯ ತಂಡಕ್ಕೆ ಆಡಲು ಶುರು ಮಾಡುತ್ತಾನೆ.
ಪ್ಯಾಶನ್ ಕಡಿಮೆಯಾಗುವುದೇ ಇಲ್ಲ. ಐವತ್ತಾರನೇ ವಯಸ್ಸಿನ ತನಕ ಕ್ರಿಕೆಟ್ ಆಡುತ್ತಲೇ ಇರುತ್ತಾನೆ. ಕ್ರಿಕೆಟ್ ಮಂಡಳಿ ಮತ್ತು ಪಟೌಡಿ ಜೊತೆಗಿನ ಹಳಸಿದ ಸಂಬಂಧ ಭಾರತೀಯ ಕ್ರಿಕೆಟ್ ನಲ್ಲಿ ಸ್ಟಾರ್ ಆಗಿ ಮಿಂಚಬಹುದಾಗಿದ್ದ ಪ್ರತಿಭೆಯೊಂದು ಆರಿಹೋಗುವಂತೆ ಮಾಡುತ್ತದೆ. ಕೊನೆಗೊಮ್ಮೆ ಕ್ಷಮೆ ಕೇಳಿಕೊಂಡರೂ ಕ್ರಿಕೆಟ್ ಮಂಡಳಿ ಬೂಧಿ ಕುಂದರನ್ ನನ್ನು ಸುವರ್ಣ ಮಹೋತ್ಸವ ಕಾರ್ಯಕ್ರಮದಿಂದ ದೂರ ಇಡುತ್ತದೆ.
2004ರಮ್ಮೆ ಭಾರತಕ್ಕೆ ಬಂದು ಹೋಗುವ ಬೂಧಿ ಕುಂದರನ್, 2006ರಲ್ಲಿ ಕ್ಯಾನ್ಸರ್ ಗೆ ಬಲಿಯಾಗಿ ಸಾವನ್ನಪ್ಪುತ್ತಾರೆ. ಮೊನ್ನೆ ಜೂನ್ 23ಕ್ಕೆ ಬೂಧಿ ಕುಂದರನ್ ಇಲ್ಲವಾಗಿ ಹತ್ತೊಂಬತ್ತು ವರ್ಷ. ಗಾಂಧಿ ಜಯಂತಿಯಂದು ಹುಟ್ಟಿದ್ದ ಈ ಪ್ರತಿಭಾವಂತ ಕ್ರಿಕೆಟರ್ ಇನ್ಯಾವ ತಂಡದಲ್ಲೂ ಕಾಣ ಸಿಗದ ಬ್ಯಾಟಿಂಗ್ ವಿಕೆಟ್ ಕೀಪರ್ ಆಗಿದ್ದರು. ಧೋನಿ, ಗಿಲ್ ಕ್ರಿಸ್ಟ್, ಪಂತ್ ಮುಂತಾದ ಹಿಟ್ಟರ್ ಗಳನ್ನು ನೋಡುವ ಮೊದಲೇ ಭಾರತ ಇಂಥ ಒಬ್ಬ ಆಟಗಾರನನ್ನು ಕಂಡಿತ್ತು. ಆದರೆ ಉಳಿಸಿ ಕೊಳ್ಳಲಿಲ್ಲ ಎಂಬುದು ದುರಂತ.