ಬೆಂಗಳೂರಲ್ಲಿ ಡೆಂಘೀ ಗಣನೀಯ ಇಳಿಕೆ
ಮಳೆಗಾಲದ ಆರಂಭದಲ್ಲಿಯೇ ಡೆಂಘೀ ಪ್ರಕರಣಗಳು ಬೆಳಕಿಗೆ ಬರುತ್ತಿದ್ದಂತೆಯೇ ಅಧಿಕಾರಿಗಳು ನಿಯಂತ್ರಿಸಲು ಕ್ರಮ ಕೈಗೊಂಡಿದ್ದರಿಂದ ಡೆಂಘೀ ಪ್ರಕರಣಗಳಲ್ಲಿ ಇಳಿಕೆ ಕಂಡಿದ್ದು, ಶೇ.50ರಷ್ಟು ಪ್ರಕರಣಗಳು ಕಡಿಮೆಯಾಗಿದೆ. ಜನವರಿ 1 ರಿಂದ ಜುಲೈ 23 ರವರೆಗೆ ನಗರದಲ್ಲಿ ಕೇವಲ 1676 ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ.


ಅಪರ್ಣಾ.ಎ.ಎಸ್ ಬೆಂಗಳೂರು
ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರಕರಣಗಳಲ್ಲಿ ತೀವ್ರ ಕುಸಿತ
ಎಂಟು ಸಾವಿರ ಪ್ರಕರಣಗಳಿಂದ ಒಂದುವರೆ ಸಾವಿರಕ್ಕೆ ಇಳಿಕೆ
ಮುಂಗಾರು ಸಮಯದಲ್ಲಿ ರಾಜಧಾನಿ ಬೆಂಗಳೂರಿನಲ್ಲಿ ಪ್ರತಿವರ್ಷ ಕಾಡುತ್ತಿದ್ದ ಡೆಂಘೀ ನಿಯಂತ್ರಿಸುವಲ್ಲಿ ಬಿಬಿಎಂಪಿ ಈ ವರ್ಷ ಯಶಸ್ವಿಯಾಗಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರಸಕ್ತ ಸಾಲಿನಲ್ಲಿ ಡೆಂಘೀ ಪ್ರಕರಣಗಳು ಗಣನೀಯವಾಗಿ ಇಳಿಕೆಯಾಗಿದೆ.
ನಗರದಲ್ಲಿ ಮಳೆಗಾಲ ಆರಂಭವಾಗುತ್ತಿದ್ದಂತೆಯೇ ವಿವಿಧ ಕಾಯಿಲೆಗಳ ಆರಂಭವಾಗುತ್ತಿತ್ತು. ಆದರೆ ಈ ಬಾರಿ ಡೆಂಘೀ, ಚಿಕೂನ್ ಗುನ್ಯಾ, ಮಲೇರಿಯಾ ಸೇರಿದಂತೆ ಕಾಯಿಲೆಗಳ ನಿಯಂತ್ರಣಕ್ಕೆ ಮುಂಜಾಗೃತ ಕ್ರಮವನ್ನು ಬಿಬಿಎಂಪಿ ವಹಿಸಿದ್ದರಿಂದ, ಈ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಸಂಖ್ಯೆಯಲ್ಲಿ ತೀವ್ರ ಕುಸಿತವಾಗಿದೆ ಎಂದು ಅಂಕಿ- ಅಂಶಗಳಲ್ಲಿ ಬಹಿರಂಗವಾಗಿದೆ.
ಮಳೆಗಾಲದ ಆರಂಭದಲ್ಲಿಯೇ ಡೆಂಘೀ ಪ್ರಕರಣಗಳು ಬೆಳಕಿಗೆ ಬರುತ್ತಿದ್ದಂತೆಯೇ ಅಧಿಕಾರಿಗಳು ನಿಯಂತ್ರಿಸಲು ಕ್ರಮ ಕೈಗೊಂಡಿದ್ದರಿಂದ ಡೆಂಘೀ ಪ್ರಕರಣಗಳಲ್ಲಿ ಇಳಿಕೆ ಕಂಡಿದ್ದು, ಶೇ.50ರಷ್ಟು ಪ್ರಕರಣಗಳು ಕಡಿಮೆಯಾಗಿದೆ. ಜನವರಿ 1 ರಿಂದ ಜುಲೈ 23 ರವರೆಗೆ ನಗರದಲ್ಲಿ ಕೇವಲ 1676 ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ.
ಇದನ್ನೂ ಓದಿ: Dengue Fever: ಡೆಂಗಿ ಜ್ವರ: ಮಕ್ಕಳ ಆರೈಕೆ ಹೇಗೆ?
ಕಳೆದ ವರ್ಷ ಇದೇ ಅವಧಿಯಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ 8688 ಡೆಂ ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದವು ಎಂದು ಪಾಲಿಕೆ ಅಧಿಕಾರಿಗಳು ಹೇಳಿದ್ದಾರೆ.
ಪಾಲಿಕೆಯ ಆರೋಗ್ಯ ಅಧಿಕಾರಿಗಳು ಡೆಂಘೀ ನಿಯಂತ್ರಣಕ್ಕೆ ಹೆಚ್ಚು ಗಮನಹರಿಸಿದ್ದು, ಹಲವು ಅಭಿಯಾನ ಹಾಗೂ ಕ್ರಮಗಳನ್ನು ಕೈಗೊಂಡಿತ್ತು. ಅಧಿಕಾರಿಗಳ ಹಾಗೂ ಸ್ವಯಂಸೇವಕರ ಪರಿಶ್ರಮದ ಪರಿಣಾಮವಾಗಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಈ ಹಿಂದಿಗಿಂತಲೂ ಪಾಸಿಟಿವ್ ಪ್ರಕರಣ ಗಳ ಸಂಖ್ಯೆಯಲ್ಲಿ ಕುಸಿತ ಕಂಡು ಬಂದಿದೆ. ಜತೆಗೆ ಡೆಂಘೀಯಿಂದಾಗಿ ಸಾವು ನೋವುಗಳೂ ದಾಖಲಾಗಿಲ್ಲ ಎಂದು ತಿಳಿಸಿದರು. ಕಳೆದ ವರ್ಷ ಜುಲೈ ತಿಂಗಳಿನಲ್ಲಿಯೇ ಒಟ್ಟು 5172 ಪ್ರಕರಣಗಳು ದಾಖಲಾಗಿತ್ತು. ಆದರೆ ಈ ಬಾರಿ ಈ ಸಂಖ್ಯೆ 442ಕ್ಕೆ ಇಳಿದಿದೆ.
ಇನ್ನು ಕಳೆದ ವರ್ಷದ ಜುಲೈನಲ್ಲಿ ಅತಿಹೆಚ್ಚು ಪ್ರಕರಣ ಮಹದೇವಪುರದಲ್ಲಿ ಕಾಣಿಸಿ ಕೊಂಡಿತ್ತು. 1405 ಪ್ರಕರಣ ಕಾಣಿಸಿಕೊಂಡಿದ್ದರೆ, ಈ ಬಾರಿ ಮಹದೇವಪುರದಲ್ಲಿ ಈ ಸಂಖ್ಯೆ 174ಕ್ಕೆ ಇಳಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಡೆಂಘೀ ನಿಯಂತ್ರಣಕೆ ಹಲವು ಕ್ರಮ
ಬಿಬಿಎಂಪಿಯು ಡೆಂಘೀ ನಿಯಂತ್ರಿಸಲು ಹಲವು ಕ್ರಮಗಳನ್ನು ಕೈಗೊಂಡಿದ್ದು, ಪಾಲಿಕೆ ವ್ಯಾಪ್ತಿ ಯಲ್ಲಿ ಎಲ್ಲಾ ವಲಯಗಳಲ್ಲೂ ಕೂಡಾ ಸೊಳ್ಳೆ ನಿಯಂತ್ರಕವನ್ನು ಸಿಂಪಡಿಸಲಾಗಿದೆ. ಆಶಾ ಕಾರ್ಯಕರ್ತರು, ಅಧಿಕಾರಿಗಳು ಮನೆ ಮನೆಗೆ ಭೇಟಿ ನೀಡಿ ಮಾಹಿತಿ ನೀಡಿ ಸ್ವಚ್ಛತೆಯ ಅಗತ್ಯ ವನ್ನು ಅರಿವು ಮಾಡಿಸುವ ಕಾರ್ಯವನ್ನು ಮಾಡಲಾಗಿದೆ. ಜಾಗೃತಿ ಅಭಿಯಾನಗಳನ್ನು ನಡೆಸಿದ್ದು, ನೀರು ಸಂಗ್ರಹಿಸುವ ತೊಟ್ಟಿಗಳು, ಡ್ರಂಗಳು ಹಾಗೂ ಎಲ್ಲಾ ಪ್ರದೇಶಗಳನ್ನು ಗುರುತಿಸಿ ಲಾರ್ವ ನಾಶಕ್ಕೆ ಕ್ರಮಕೈಗೊಳ್ಳಲಾಯಿತು. ಡೆಂ ಲಾರ್ವಾ ಮೂಲದ ಕಡಿತದ ಬಗ್ಗೆ ವಿದ್ಯಾರ್ಥಿಗಳು ಮತ್ತು ಜನರಿಗೆ ಶಿಕ್ಷಣ ನೀಡಿ ಡೆಂಘೀ ತಡೆಗೆ ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ಈ ವರ್ಷ ಡೆಂಘೀ ಹೆಚ್ಚಳ ವನ್ನು ನಿಯಂತ್ರಿಸಲು ಪಾಲಿಕೆಯು ಹಲವಾರು ಕ್ರಮಗಳನ್ನು ತೆಗೆದುಕೊಂಡಿದೆ. ನಮ್ಮಲ್ಲಿ ಡೆಂಘೀ ಪ್ರಕರಣಗಳಿದ್ದರೂ ಪರಿಸ್ಥಿತಿ ಕಳೆದ ವರ್ಷಕ್ಕಿಂತ ಉತ್ತಮವಾಗಿದೆ. ಡೆಂಘೀ ವಿರುದ್ಧದ ನಮ್ಮ ಕಾರ್ಯಾಚರಣೆ ಮುಂದುವರೆಯಲಿದೆ.
ನಮ್ಮ ಆರೋಗ್ಯ ಅಧಿಕಾರಿಗಳನ್ನು ಜಾಗೃತಿ ವಹಿಸಿದ್ದು, ಅಗತ್ಯವಿರುವ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಸೋಂಕು ಹರಡುವಿಕೆಯನ್ನು ತಡೆಯಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲು ಅವರಿಗೆ ಅಧಿಕಾರ ನೀಡಲಾಗಿದೆ ಎಂದು ಹೇಳಿದ್ದಾರೆ.
ಸ್ವಚ್ಛತೆ ಕಾಪಾಡದವರಿಗೆ ಮತ್ತೆ ದಂಡ ಪ್ರಯೋಗ
ಡೆಂಘೀ ಪ್ರಕರಣಗಳ ಹೆಚ್ಚಳದ ಬೆನ್ನ ಇದೀಗ ಬಿಬಿಎಂಪಿ ವ್ಯಾಪ್ತಿಯಲ್ಲಿ ಆರೋಗ್ಯ ಇಲಾಖೆ ಮತ್ತೆ ದಂಡ ಪ್ರಯೋಗ ಮುಂದುವರಿಸಲು ಆರಂಭಿಸಿದೆ. ಜತೆಗೆ ನೀರು ನಿಂತ ಕಡೆಗಳಲ್ಲಿ ಹಾಗೂ ಸ್ವಚ್ಛತೆ ಇಲ್ಲದ ಕಡೆಯಲ್ಲಿ ಡೆಂಘೀ ಹರಡುವ ಸೊಳ್ಳೆಗಳು ಉತ್ಪತ್ತಿಯಾಗುತ್ತಿದ್ದು, ಮನೆಗಳು, ಕಚೇರಿ, ಖಾಲಿ ನಿವೇಶನಗಳು ಹಾಗೂ ಸ್ಥಳಗಳಲ್ಲಿ ಸ್ವಚ್ಛತೆ ಕಾಪಾಡದವರ ವಿರುದ್ಧ ದಂಡ ವಿಧಿಸಲಾಗುತ್ತಿದೆ.
*
ಈ ವರ್ಷ ಡೆಂಘೀಯನ್ನು ನಿಯಂತ್ರಿಸಲು ಬಿಬಿಎಂಪಿ ಹಲವು ಕ್ರಮಗಳನ್ನು ಕೈಗೊಂಡಿದ್ದು, ಕಳೆದ ವರ್ಷಕ್ಕಿಂತ ಶೇ.50ರಷ್ಟು ಪ್ರಕರಣ ಕುಸಿತವಾಗಿದೆ. ಬಿಬಿಎಂಪಿಯ ಅಧಿಕಾರಿಗಳು, ಆಶಾ ಕಾರ್ಯ ಕರ್ತರು ಸೇರಿದಂತೆ ಹಲವು ತಂಡಗಳು ಎಲ್ಲಾ ವಲಯಗಳಲ್ಲಿಯೂ ಡೆಂಘೀ ನಿಯಂತ್ರಣಕ್ಕೆ ಅಭಿಯಾನಗಳನ್ನು ಕೈಗೊಳ್ಳುತ್ತಿದ್ದು, ಲಾರ್ವಾ ನಾಶಪಡಿಸುವ ಕ್ರಮಗಳು, ನೀರು ನಿಲ್ಲದಂತೆ, ನಿಂತ ನೀರಿನಲ್ಲಿ ಲಾರ್ವ ನಾಶಕ ಸಿಂಪಡೆಣೆಯ ಜತೆಗೆ ಸಾರ್ವಜನಿಕರಿಗಹೆ ಮಾಹಿತಿಯನ್ನು ನೀಡುವ ಮೂಲಕ ಜಾಗೃತಿ ಕೈಗೊಳ್ಳುತ್ತಿದ್ದೇವೆ.
-ಸೈಯದ್ ಸಿರಾಜುದ್ದೀನ್ ಮದನಿ ಮುಖ್ಯ ಆರೋಗ್ಯಾಧಿಕಾರಿ