Actor Shiva Rajkumar: ಕಮಲ್ ಹಾಸನ್ ಹೇಳಿಕೆಯನ್ನು ಸಮರ್ಥನೆ ಮಾಡಿಕೊಳ್ಳಲ್ಲ: ನಟ ಶಿವರಾಜ್ ಕುಮಾರ್ ಸ್ಪಷ್ಟನೆ
Actor Shiva Rajkumar: ಅಣ್ಣಾವ್ರು, ಅಣ್ಣಾವ್ರ ಕುಟುಂಬದ ಕನ್ನಡಾಭಿಮಾನ ಎಲ್ಲರಿಗೂ ಗೊತ್ತಿದೆ. ಆ ವಿಚಾರದ ಬಗ್ಗೆ ನಾನು ಸ್ಪಷ್ಟನೆ ಕೊಡಲ್ಲ. ಕಮಲ್ ಹಾಸನ್ ಮಾತನಾಡಿದ್ದನ್ನು ನಾನು ಸಮರ್ಥನೆ ಮಾಡಿಕೊಳ್ಳಲ್ಲ. ಆ ಕಾರ್ಯಕ್ರಮದಲ್ಲಿ ಕಮಲ್ ಹಾಸನ್ ಮಾತಾಡಿದ್ದು ನನಗೆ ಗೊತ್ತಾಗಿಲ್ಲ. ಹೀಗಾಗಿ ಚಪ್ಪಾಳೆ ತಟ್ಟಿದೆ ಎಂದು ನಟ ಶಿವರಾಜ್ ಕುಮಾರ್ ತಿಳಿಸಿದ್ದಾರೆ.


ಬೆಂಗಳೂರು: ನಟ ಕಮಲ್ ಹಾಸನ್ ಕನ್ನಡ ಭಾಷೆ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿರುವ ಬಗ್ಗೆ ಕೊನೆಗೂ ಸ್ಯಾಂಡಲ್ ವುಡ್ ನಟ ಶಿವರಾಜ್ ಕುಮಾರ್ (Actor Shiva Rajkumar) ಅವರು ಮೌನ ಮುರಿದಿದ್ದಾರೆ. ನಾನು ಕಮಲ್ ಹಾಸನ್ ಹೇಳಿಕೆ ಸಮರ್ಥಿಸಿಕೊಳ್ಳಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ಕಮಲ್ ಹಾಸನ್ ಹೇಳಿಕೆಯನ್ನು ನಾನೇನೂ ಸಮರ್ಥನೆ ಮಾಡಿಕೊಂಡಿಲ್ಲ. ಭಾಷೆ ಬಗ್ಗೆ ಮಾತನಾಡುತ್ತಿದ್ದಾಗ ನಾನು ಕೈ ತಟ್ಟಿದ್ದು ನಿಜ, ಆ ಸಂದರ್ಭದಲ್ಲಿ ಏನು ಮಾತನಾಡುತ್ತಿದ್ದರು ಅಂತ ಗೊತ್ತಾಗಲಿಲ್ಲ ಎಂಬುದಾಗಿ ತಿಳಿಸಿದ್ದಾರೆ.
ಎಲ್ಲರೂ ಕನ್ನಡಾಭಿಮಾನದ ಬಗ್ಗೆ ಮಾತನಾಡುತ್ತಾರೆ. ಕನ್ನಡ ಅಭಿಮಾನ ಏನು ಎಂಬುದು ನಮಗೂ ಗೊತ್ತಿದೆ. ನಾನು ಕೂಡ ಕನ್ನಡಾಭಿಮಾನಿನೇ. ಅಣ್ಣಾವ್ರು, ಅಣ್ಣಾವ್ರ ಕುಟುಂಬದ ಕನ್ನಡಾಭಿಮಾನ ಎಲ್ಲರಿಗೂ ಗೊತ್ತಿದೆ. ಆ ವಿಚಾರದ ಬಗ್ಗೆ ನಾನು ಸ್ಪಷ್ಟನೆ ಕೊಡಲ್ಲ. ಕಮಲ್ ಹಾಸನ್ ಮಾತನಾಡಿದ್ದನ್ನು ನಾನು ಸಮರ್ಥನೆ ಮಾಡಿಕೊಳ್ಳಲ್ಲ. ಆ ಬಗ್ಗೆ ಅವರನ್ನೇ ಪ್ರಶ್ನೆ ಮಾಡಿ. ನಾನು ಎರಡನೇ ಬಾರಿ ಕ್ಲಿಪ್ಪಿಂಗ್ ಕೇಳಿದಾಗಲೆ ಗೊತ್ತಾಗಿದ್ದು. ಆ ಕಾರ್ಯಕ್ರಮದಲ್ಲಿ ಕಮಲ್ ಹಾಸನ್ ಮಾತಾಡಿದ್ದು ನನಗೆ ಗೊತ್ತಾಗಿಲ್ಲ. ಹೀಗಾಗಿ ಚಪ್ಪಾಳೆ ತಟ್ಟಿದೆ. ಕಲಾವಿದನಾಗಿ ಭಾಷೆ ಬಗ್ಗೆ ಮಾತಾಡಿದಾಗ ಚಪ್ಪಾಳೆ ತಟ್ಟಿದ್ದೆ ಎಂದು ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ | Kamal Haasan: ತಪ್ಪು ಮಾಡಿಲ್ಲ.. ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ; ಮತ್ತೆ ಮೊಂಡುತನ ಮೆರೆದ ಕಮಲ್ ಹಾಸನ್
ಕಮಲ್ ಹಾಸನ್ ಕ್ಷಮೆ ಕೇಳುವವರೆಗೂ ಬಿಡಲ್ಲ: ಸಚಿವ ಶಿವರಾಜ್ ತಂಗಡಗಿ
ಬೆಂಗಳೂರು: ಕನ್ನಡದ ಕುರಿತು ಅವಮಾನಕಾರಿಯಾಗಿ ಮಾತನಾಡಿರುವ ನಟ ಕಮಲ್ ಹಾಸನ್ (Kamal Hassan controversy) ವಿರುದ್ಧ ಪ್ರತಿಭಟನೆಗಳು (Protest) ಮುಂದುವರಿದಿವೆ. ತಮಿಳಿನಿಂದ ಕನ್ನಡ ಹುಟ್ಟಿದ್ದು ಎಂದ ಕಮಲ್ ಹಾಸನ್ ಮಾತು ಕನ್ನಡಿಗರ ಕಣ್ಣು ಕೆಂಪಾಗಿಸಿದೆ. ರಾಜ್ಯದ ವಿವಿಧೆಡೆ ಕಮಲ್ ಹಾಸನ್ ವಿರುದ್ಧ ಪ್ರತಿಭಟನೆಗಳು ನಡೆಯುತ್ತಿವೆ. ತಮ್ಮ ನಿಲುವು ಹಿಂದೆಗೆದುಕೊಳ್ಳುವ ಬದಲು, ಕ್ಷಮೆ ಕೇಳಲ್ಲ ಎಂದು ಕಮಲ್ ಮತ್ತಷ್ಟು ಉದ್ಧಟತನದಿಂದ ಹೇಳಿದ್ದಾರೆ ಎಂಬುದರಿಂದ ಕನ್ನಡಿಗರಲ್ಲಿ ಮತ್ತಷ್ಟು ಆಕ್ರೋಶ ವ್ಯಕ್ತವಾಗಿದೆ. ಇದೀಗ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ಎಸ್ ತಂಗಡಗಿ (Shivaraj Tangadagi) ಕಮಲ್ ಹಾಸನ್ ವಿರುದ್ಧ ಕಿಡಿಕಾರಿದ್ದು, ಕ್ಷಮೆ ಕೇಳುವವರೆಗೂ ನಾವು ಬಿಡಲ್ಲ ಎಂದು ತಿರುಗೇಟು ನೀಡಿದ್ದಾರೆ.
ತಮಿಳಿನಿಂದ ಕನ್ನಡ ಹುಟ್ಟಿದ್ದು ಎಂಬ ಕಮಲ್ ಹಾಸನ್ ಹೇಳಿಕೆ ದಿನ ಹೋದಂತೆ ತೀವ್ರ ವಿವಾದ ಸೃಷ್ಟಿಸುತ್ತಿದೆ. ಅದರಲ್ಲೂ ಕಮಲ್ ಹಾಸನ್ ಮಾಧ್ಯಮದ ಮುಂದೆಯೂ ತಾನು ತಪ್ಪೇ ಮಾಡಿಲ್ಲ, ಕ್ಷಮೆ ಕೇಳಲ್ಲ ಎಂದು ನೀಡಿರುವ ಹೇಳಿಕೆ ಕನ್ನಡಿಗರನ್ನು ಮತ್ತಷ್ಟು ಕೆರಳಿಸಿದೆ. ಕಮಲ್ ಹಾಸನ್ಗೆ ಇದೀಗ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ತಿರುಗೇಟು ನೀಡಿದ್ದು, ಅವರು ಕ್ಷಮೆ ಕೇಳಲೇಬೇಕು, ಕ್ಷಮೆ ಕೇಳುವವರೆಗೂ ನಾವು ಬಿಡಲ್ಲ. ನಾವು ಕನ್ನಡಿಗರು, ಕನ್ನಡದ ವಿಚಾರದಲ್ಲಿ ಯಾರೇ ಮಾತಾಡಿದ್ರು ಸಹಿಸಿಕೊಳ್ಳುವುದಿಲ್ಲ. ಈಗಾಗಲೇ ಅವರಿಗೆ ಎರಡು ದಿನ ಸಮಯಾವಕಾಶ ಕೊಟ್ಟಿದ್ದೇವೆ. ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಗೆ ಪತ್ರ ಬರೆದಿದ್ದೇನೆ. ಅವರು ಕ್ಷಮೆ ಕೇಳಲಿಲ್ಲ ಅಂದರೆ ಅವರ ಮೇಲೆ ಕ್ರಮ ತೆಗೆದುಕೊಳ್ಳುತ್ತೇವೆ. ಅವರನ್ನ ಬ್ಯಾನ್ ಮಾಡುತ್ತೇವೆ ಎಂದು ವಿಧಾನಸೌಧದಲ್ಲಿ ಸಚಿವ ಶಿವರಾಜ್ ತಂಗಡಗಿ ಹೇಳಿದ್ದಾರೆ.
ಕನ್ನಡದ ವಿಚಾರವಾಗಿ ಎಂಥ ದೊಡ್ಡವರು ಹೇಳಿಕೆ ಕೊಟ್ರೂ ನಾವು ಕ್ರಮ ವಹಿಸುತ್ತೇವೆ. ಶಿವರಾಜ್ ಕುಮಾರ್ ಸುಮ್ಮನೆ ಇದ್ದರು ಅನ್ನೋದಕ್ಕೆ ನಾವು ಆಕ್ಷೇಪ ವ್ಯಕ್ತಪಡಿಸಿದ್ದೇವೆ. ನಿನ್ನೆ ನಾನು ವೇದಿಕೆ ಮೇಲೆಯೇ ಪ್ರಸ್ತಾಪ ಮಾಡಿದ್ದೇನೆ. ರಾಜ್ ಕುಮಾರ್ ಫ್ಯಾಮಿಲಿ ಕನ್ನಡಕ್ಕಾಗಿ ದುಡಿದಿದ್ದಾರೆ. ಕನ್ನಡಿಗರೂ ಕೂಡ ಅವರಿಗಾಗಿ ಕೈ ಜೋಡಿಸಿದ್ದಾರೆ.
ಗುರುವಾರ ಒಂದೇ ವೇದಿಕೆಯಲ್ಲಿ ಶಿವರಾಜ್ ಕುಮಾರ್ ಮತ್ತು ಸಚಿವ ಶಿವರಾಜ್ ತಂಗಡಗಿ ಭೇಟಿಯಾಗಿದ್ದಾಗ, ನೀವು ದೊಡ್ಡ ನಟ ಅವರು ಹೇಳಿದಾಗ ಅದನ್ನ ತಡೆಯಬಹುದಿತ್ತು ಎಂದು ಹೇಳಿದ್ದರಂತೆ. ಶಿವರಾಜ್ ಕುಮಾರ್ ಆಗಲಿ, ಯಾರೇ ನಟರೂ ಕಮಲ್ ಹಾಸನ್ ಬಗ್ಗೆ ಮಾತನಾಡಲಿ ಸಹಿಸಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ:Kamal Haasan: ತಪ್ಪು ಮಾಡಿಲ್ಲ.. ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ; ಮತ್ತೆ ಮೊಂಡುತನ ಮೆರೆದ ಕಮಲ್ ಹಾಸನ್
ಇಲ್ಲಿ ಹೇಗಾಗಿದೆ ಅಂದರೆ ಬೇರೆ ಭಾಷೆಯವರು ಒಬ್ಬೊಬ್ಬರೇ ಬಂದು ಹೀಗೆ ಮಾತಾಡ್ತಾನೇ ಇರ್ತಾರೆ. ಹಿಂದೆ ಸೋನು ನಿಗಮ್ ಮಾತಾಡಿದ್ರು, ನಾಳೆ ಮತ್ತೊಬ್ಬರು ಬಂದು ಮಾತಾಡ್ತಾರೆ. ಹೀಗೆ ಕನ್ನಡಕ್ಕೆ ಬಂದು ಮಾತಾಡಿದ್ರೆ ಸಹಿಸಲು ಆಗುತ್ತಾ? ಇದನ್ನು ನಾವು ಖಂಡಿಸುತ್ತೇವೆ ಎಂದು ಸಚಿವ ಶಿವರಾಜ್ ತಂಗಡಗಿ ಆಕ್ರೋಶ ಹೊರಹಾಕಿದ್ದಾರೆ. ಎಲ್ಲಾ ಭಾಷೆಯಲ್ಲೂ ಅವರು ನಟಿಸಿದ್ದಾರೆ. ನಟನಿಗೆ, ನಟನೆಗೆ ಗೌರವ ಕೊಡ್ತೀವಿ. ಆದರೆ ಭಾಷೆ ಅಂತ ಬಂದರೆ ನಮಗೆ ಮೊದಲು ಭಾಷೆಯೇ. ನಾವು ಯಾವುದೇ ಕಾರಣಕ್ಕೂ ರಾಜಿ ಆಗುವುದಿಲ್ಲ ಎಂದು ಹೇಳಿದ್ದಾರೆ.