ನಾಲ್ಕು ವರ್ಷಗಳ ಶೋಧದ ನಂತರ ಜಮ್ಮುವಿನಲ್ಲಿ ಹಿಜ್ಬುಲ್ ನಾರ್ಕೊ ಭಯೋತ್ಪಾದಕ ಮನೋಜ್ ಕುಮಾರ್ ಭಟ್ ಬಂಧನ
Hizbul narco-terrorist: ಗಡಿಯಾಚೆಗಿನ ಮಾದಕವಸ್ತು ಸಾಗಣೆ ಮತ್ತು ಭಯೋತ್ಪಾದನೆಗೆ ಹಣಕಾಸು ನೆರವು ಒದಗಿಸುತ್ತಿದ್ದ ಜಾಲಕ್ಕೆ ಸಂಬಂಧಿಸಿದಂತೆ, ಕಳೆದ ಸುಮಾರು ನಾಲ್ಕು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಮನೋಜ್ ಕುಮಾರ್ ಭಟ್ ಎಂಬ ನಾರ್ಕೋ-ಭಯೋತ್ಪಾದಕನನ್ನು ಜಮ್ಮು ಮತ್ತು ಕಾಶ್ಮೀರದ ರಾಜ್ಯ ತನಿಖಾ ಸಂಸ್ಥೆಯು (SIA) ಜಮ್ಮುವಿನಲ್ಲಿ ಬಂಧಿಸಿದೆ.
ಹಿಜ್ಬುಲ್ ನಾರ್ಕೊ ಭಯೋತ್ಪಾದಕ ಮನೋಜ್ ಕುಮಾರ್ ಭಟ್ ಬಂಧನ -
ಜಮ್ಮು, ಆ.18: ನಾಲ್ಕು ವರ್ಷಗಳ ಶೋಧದ ನಂತರ ಜಮ್ಮುವಿನಲ್ಲಿ (Jammu) ಹಿಜ್ಬುಲ್ ನಾರ್ಕೊ ಭಯೋತ್ಪಾದಕನನ್ನು (narco-terrorist) ಬಂಧಿಸಲಾಗಿದೆ. ಗಡಿಯಾಚೆಗಿನ ಮಾದಕವಸ್ತು ಸಾಗಣೆ ಮತ್ತು ಭಯೋತ್ಪಾದನೆಗೆ ಹಣಕಾಸು ನೆರವು ಒದಗಿಸುತ್ತಿದ್ದ ಜಾಲಕ್ಕೆ ಸಂಬಂಧಿಸಿದಂತೆ, ಕಳೆದ ಸುಮಾರು ನಾಲ್ಕು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಮನೋಜ್ ಕುಮಾರ್ ಭಟ್ ಎಂಬ ನಾರ್ಕೋ-ಭಯೋತ್ಪಾದಕನನ್ನು ಜಮ್ಮು ಮತ್ತು ಕಾಶ್ಮೀರದ ರಾಜ್ಯ ತನಿಖಾ ಸಂಸ್ಥೆಯು (SIA) ಜಮ್ಮುವಿನಲ್ಲಿ ಬಂಧಿಸಿದೆ.
ಎಲ್ಒಸಿ ಮೂಲಕ ಮಾದಕವಸ್ತು ಕಳ್ಳಸಾಗಣೆ ಮತ್ತು ಕಣಿವೆಯಲ್ಲಿ ಭಯೋತ್ಪಾದಕ ಚಟುವಟಿಕೆಗಳಿಗೆ ಹಣಕಾಸು ಒದಗಿಸಲು ಮಾದಕವಸ್ತು ಆದಾಯವನ್ನು ಬಳಸಿಕೊಂಡ ಆರೋಪದ ಮೇಲೆ 2022 ರಲ್ಲಿ ಎಸ್ಐಎ ದಾಖಲಿಸಿದ ಪ್ರಕರಣದಲ್ಲಿ ಭಟ್ ಬೇಕಾಗಿದ್ದ.
ಅಧಿಕೃತ ಮೂಲಗಳ ಪ್ರಕಾರ, ಭಯೋತ್ಪಾದಕ ಸಂಘಟನೆ ಹಿಜ್ಬುಲ್ ಮುಜಾಹಿದೀನ್ನ ಪಾಕಿಸ್ತಾನ ಮೂಲದ ಹ್ಯಾಂಡ್ಲರ್ಗಳೊಂದಿಗೆ ಭಟ್ ಅತ್ಯಂತ ನಿಕಟ ಸಂಪರ್ಕ ಹೊಂದಿದ್ದು, ಅವರ ಸೂಚನೆಯ ಮೇರೆಗೆ ಕೆಲಸ ಮಾಡುತ್ತಿದ್ದ ಎಂಬುದು ತನಿಖೆಯಿಂದ ತಿಳಿದುಬಂದಿದೆ. ನಿಯಂತ್ರಣ ರೇಖೆಯ (LoC) ಮೂಲಕ ಭಾರತದೊಳಗೆ ಮಾದಕವಸ್ತುಗಳನ್ನು ವಿತರಿಸಲಾಗುತ್ತಿತ್ತು. ಇದರಿಂದ ಬರುತ್ತಿದ್ದ ಹಣವನ್ನು ಭಯೋತ್ಪಾದಕ ಮೂಲಸೌಕರ್ಯ ಹಾಗೂ ಚಟುವಟಿಕೆಗಳಿಗೆ ಬಳಸಲಾಗುತ್ತಿತ್ತು.
“ತನಿಖೆಯ ಸಮಯದಲ್ಲಿ, ಗಡಿಯಾಚೆಯಿಂದ ಕಾರ್ಯಾಚರಣೆ ನಡೆಸುತ್ತಿರುವ ಹಿಜ್ಬುಲ್ ಹ್ಯಾಂಡ್ಲರ್ಗಳೊಂದಿಗೆ ಭಟ್ ಹೊಂದಿದ್ದ ನೇರ ಸಂಪರ್ಕವನ್ನು ನಾವು ಪತ್ತೆಹಚ್ಚಿದ್ದೇವೆ. ಈ ಜಾಲವು ಭಯೋತ್ಪಾದನೆಗೆ ಹಣಕಾಸು ಒದಗಿಸಲು ಮತ್ತು ಶಾಂತಿಯನ್ನು ಕದಡಲು ಮಾದಕವಸ್ತುಗಳನ್ನು ಒಂದು ಸಾಧನವಾಗಿ ಬಳಸಿಕೊಳ್ಳುತ್ತಿತ್ತು” ಎಂದು ಎಸ್ಐಎ (SIA) ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
2022ರಲ್ಲಿ ಪ್ರಕರಣ ದಾಖಲಾದಾಗಿನಿಂದ ಭಟ್ ಬಂಧನದಿಂದ ತಪ್ಪಿಸಿಕೊಳ್ಳುತ್ತಿದ್ದ. ನಿರ್ದಿಷ್ಟ ಗುಪ್ತಚರ ಮಾಹಿತಿಯ ಮೇರೆಗೆ ಕಾರ್ಯನಿರ್ವಹಿಸುತ್ತಿದ್ದ ಎಸ್ಐಎ ತಂಡವು ಜಮ್ಮುವಿನಲ್ಲಿ ಆತನನ್ನು ಪತ್ತೆಹಚ್ಚಿ ಬಂಧಿಸಿತು. ಭಟ್ ಬಂಧನವು ಜಮ್ಮು ಮತ್ತು ಕಾಶ್ಮೀರ ಮತ್ತು ಗಡಿಯುದ್ದಕ್ಕೂ ಕಾರ್ಯನಿರ್ವಹಿಸುತ್ತಿರುವ ವ್ಯಾಪಕವಾದ ಮಾದಕವಸ್ತು-ಭಯೋತ್ಪಾದನಾ ಜಾಲವನ್ನು ಪತ್ತೆಹಚ್ಚುವಲ್ಲಿ ಪ್ರಮುಖ ಸುಳಿವುಗಳನ್ನು ನೀಡುವ ನಿರೀಕ್ಷೆಯಿದೆ ಎಂದು ಸಂಸ್ಥೆ ತಿಳಿಸಿದೆ.
ಎಸ್ಐಎ (SIA) ಪ್ರಸ್ತುತ ಈ ಜಾಲದ ಹಣಕಾಸಿನ ಮೂಲಗಳನ್ನು ಪತ್ತೆಹಚ್ಚುತ್ತಿದ್ದು, ಮಾದಕವಸ್ತು ಮತ್ತು ಹಣದ ಸಾಗಣೆಗೆ ನೆರವು ನೀಡಿದ ಆಸ್ತಿಪಾಸ್ತಿಗಳು, ಹವಾಲಾ ಮಾರ್ಗಗಳು ಹಾಗೂ ಇತರ ಸಹಚರರನ್ನು ಗುರುತಿಸುವ ಪ್ರಕ್ರಿಯೆಯಲ್ಲಿ ತೊಡಗಿದೆ. ಭಯೋತ್ಪಾದಕ ಸಂಘಟನೆಗಳಿಗೆ ಸಿಗುವ ಹಣಕಾಸಿನ ನೆರವನ್ನು ಕಡಿತಗೊಳಿಸಲು ಮತ್ತು ಜಮ್ಮು-ಕಾಶ್ಮೀರದಲ್ಲಿ ಅವುಗಳ ಜಾಲವನ್ನು ಸಂಪೂರ್ಣವಾಗಿ ಧ್ವಂಸಗೊಳಿಸಲು ನಾರ್ಕೋ-ಭಯೋತ್ಪಾದನಾ ಘಟಕಗಳ ಮೇಲಿನ ಈ ಕಠಿಣ ಕಾರ್ಯಾಚರಣೆಯು ತಮ್ಮ ಮೊದಲ ಆದ್ಯತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನು ಈ ಸಂಬಂಧ ಭಟ್ನನ್ನು ವಶಕ್ಕೆ ತೆಗೆದುಕೊಳ್ಳಲಾಗಿದ್ದು, ಶೀಘ್ರದಲ್ಲೇ ಎನ್ಐಎ (NIA) ವಿಶೇಷ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆತನ ಹೆಚ್ಚಿನ ವಿಚಾರಣೆ ಮತ್ತು ವಿವಿಧೆಡೆ ತಪಾಸಣಾ ದಾಳಿಗಳು ಮುಂದುವರಿದಿವೆ.