ಕೇರಳದಲ್ಲಿ ಶಶಿ ತರೂರ್ ಗನ್ಮ್ಯಾನ್, ಚಾಲಕನ ಮೇಲೆ ಹಲ್ಲೆ
ಸಂಸದ ಶಶಿ ತರೂರ್ ಅವರ ಗನ್ಮ್ಯಾನ್ ಮತ್ತು ಚಾಲಕನ ಮೇಲೆ ಹಲ್ಲೆ ನಡೆಸಿರುವ ಘಟನೆ ಕೇರಳದ ವಂಡೂರಿನಲ್ಲಿ ಶುಕ್ರವಾರ ಸಂಜೆ ನಡೆದಿದೆ. ವಂಡೂರಿನ ತಿರುವಾಲಿ ಬಳಿಯ ಚೆಲ್ಲಿತೋಡ್ನಲ್ಲಿ ಈ ದಾಳಿ ನಡೆಸಲಾಗಿದೆ ಎಂದು ಶಶಿ ತರೂರ್ ಅವರ ಚಾಲಕ ವಂಡೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ. ಈ ಕುರಿತು ಶಶಿ ತರೂರ್ ಅವರು ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಾದ ಎಕ್ಸ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಸಂಗ್ರಹ ಚಿತ್ರ -
ಕೇರಳ: ವಿಧಾನ ಸಭಾ ಚುನಾವಣೆ (Legislative Assembly elections) ನಡೆಯಲಿರುವ ಕೇರಳದಲ್ಲಿ (Kerala) ಕಾಂಗ್ರೆಸ್ ಸಂಸದ ಶಶಿ ತರೂರ್ (Congress MP Shashi Tharoor) ಅವರ ಗನ್ಮ್ಯಾನ್ ಮತ್ತು ಚಾಲಕನ ಮೇಲೆ ಹಲ್ಲೆ ನಡೆಸಲಾಗಿದೆ. ವಂಡೂರಿನ (Wandoor) ತಿರುವಾಲಿ ಬಳಿಯ ಚೆಲ್ಲಿತೋಡ್ನಲ್ಲಿ ಶುಕ್ರವಾರ ಸಂಜೆ 7.30 ರ ಸುಮಾರಿಗೆ ಐವರ ಗುಂಪೊಂದು ಇವರ ಮೇಲೆ ಹಲ್ಲೆ ನಡೆಸಿದೆ. ಈ ಕುರಿತು ಶಶಿ ತರೂರ್ ಅವರ ಚಾಲಕ ವಂಡೂರು ಪೊಲೀಸ್ ಠಾಣೆಗೆ ದೂರು ನೀಡಿರುವುದಾಗಿ ಸಂಸದ ತರೂರ್ ಅವರು ತಮ್ಮ ಸಾಮಾಜಿಕ ಮಾಧ್ಯಮ (Social Media) ಖಾತೆಯಾದ ಎಕ್ಸ್ ನಲ್ಲಿ ತಿಳಿಸಿದ್ದಾರೆ.
ಘಟನೆಯ ಕುರಿತು ಮಾಹಿತಿ ನೀಡಿರುವ ವಂಡೂರಿನ ಪೊಲೀಸರು, ವಿಧಾನಸಭಾ ಚುನಾವಣೆ ನಡೆಯಲಿರುವ ಕೇರಳದ ವಂಡೂರಿನಲ್ಲಿ ಕಾಂಗ್ರೆಸ್ ಸಂಸದ ಶಶಿ ತರೂರ್ ಅವರ ಗನ್ಮ್ಯಾನ್ ಮತ್ತು ಚಾಲಕನ ಮೇಲೆ ಐವರು ಹಲ್ಲೆ ನಡೆಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಓರ್ವ ವ್ಯಕ್ತಿಯನ್ನು ಬಂಧಿಸಲಾಗಿದೆ. ತರೂರ್ ಅವರ ಚಾಲಕ ರತೀಶ್ ಕೆಪಿ ಅವರು ನೀಡಿರುವ ದೂರಿನ ಪ್ರಕಾರ ಎಫ್ಐಆರ್ ದಾಖಲಿಸಿರುವುದಾಗಿ ಅವರು ತಿಳಿಸಿದ್ದಾರೆ.
ಆಪ್ ಉಪನಾಯಕ ಹುದ್ದೆಯಿಂದ ತೆಗೆದುಹಾಕಿದ ಬಳಿಕ ರಾಘವ್ ಚಡ್ಡಾ ಬಿಡುಗಡೆ ಮಾಡಿರುವ ಮೊದಲ ವಿಡಿಯೊದಲ್ಲಿ ಏನಿದೆ?
ವಂಡೂರಿನ ತಿರುವಾಲಿ ಬಳಿಯ ಚೆಲ್ಲಿತೋಡ್ನಲ್ಲಿ ಶುಕ್ರವಾರ ಸಂಜೆ 7.30 ರ ಸುಮಾರಿಗೆ ಈ ಘಟನೆ ನಡೆದಿದ್ದು, ಬಂಧಿತನಾಗಿರುವ ಆರೋಪಿಯನ್ನು ವಿಚಾರಣೆ ನಡೆಸಲಾಗುತ್ತಿದ್ದು, ಉಳಿದ ನಾಲ್ವರಿಗಾಗಿ ಶೋಧ ಕಾರ್ಯಾಚರಣೆ ನಡೆಸುತ್ತಿರುವುದಾಗಿ ಹೇಳಿದರು.
Truly touched by all the messages and calls expressing concern about the untoward incident last night when my security guard was attacked. He is well and I was untouched. Thank you to all friends and well-wishers. We carried on undaunted yesterday and concluded two more events as…
— Shashi Tharoor (@ShashiTharoor) April 4, 2026
ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ಹಂಚಿಕೊಂಡ ತರೂರ್, ದಾಳಿಯಲ್ಲಿ ಯಾವುದೇ ಹಾನಿಯಾಗಿಲ್ಲ. ಚಾಲಕ ಮತ್ತು ಗನ್ ಮ್ಯಾನ್ ಆರೋಗ್ಯವಾಗಿದ್ದಾರೆ. ಇವರ ಮೇಲೆ ದಾಳಿ ನಡೆದ ಬಳಿಕ ಅನೇಕರು ಕಳವಳ ವ್ಯಕ್ತಪಡಿಸಿ ಸಂದೇಶಗಳನ್ನು ಕಳುಹಿಸುತ್ತಿದ್ದಾರೆ. ಎಲ್ಲಾ ಸ್ನೇಹಿತರು ಮತ್ತು ಹಿತೈಷಿಗಳಿಗೆ ಧನ್ಯವಾದಗಳು. ನಾವು ಯೋಜಿತ ಕಾರ್ಯಕ್ರಮವನ್ನು ಧೈರ್ಯದಿಂದ ಮುಗಿಸಿದ್ದೇವೆ. ಈ ಘಟನೆಯು ಕಾರ್ಯಕ್ರಮದ ಮೇಲೆ ಯಾವುದೇ ಪರಿಣಾಮ ಬೀರಿಲ್ಲ ಎಂದು ತಿಳಿಸಿದ್ದಾರೆ.
ಏನಾಗಿತ್ತು?
ಶಶಿ ತರೂರ್ ಅವರು ಕಾಂಗ್ರೆಸ್ ನಾಯಕ ಎಪಿ ಅನಿಲ್ಕುಮಾರ್ ಅವರ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಲು ಹೋಗುತ್ತಿದ್ದಾಗ ಚೆಲಿಥೋಡ್ ಸೇತುವೆಯಲ್ಲಿ ರಸ್ತೆ ತಡೆ ಮಾಡಲಾಗಿದೆ. ಎರಡು ವಾಹನಗಳಲ್ಲಿ ಪ್ರಯಾಣಿಸುತ್ತಿದ್ದ ಆರೋಪಿಗಳು ಸಂಸದರ ವಾಹನವನ್ನು ತಡೆದು ಅವರ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ. ಆದರೆ ಭದ್ರತಾ ಸಿಬ್ಬಂದಿ ಮತ್ತು ಚಾಲಕ ಇದನ್ನು ತಡೆಯಲೆತ್ನಿಸಿದ್ದರಿಂದ ಅವರ ಮೇಲೆ ಹಲ್ಲೆ ನಡೆಸಲಾಗಿದೆ.
ರಸ್ತೆ ಕಿರಿದಾಗಿದ್ದು ತಿರುವನಂತಪುರಂ ಸಂಸದರ ಬೆಂಗಾವಲು ಪಡೆ ಸುಗಮವಾಗಿ ಸಾಗುವಂತೆ ಗನ್ ಮ್ಯಾನ್ ಮುಂದಿದ್ದ ವಾಹನವನ್ನು ವೇಗವಾಗಿ ಚಲಿಸುವಂತೆ ಕೇಳಿಕೊಂಡಿದ್ದಾನೆ. ಆ ಬಳಿಕ ಈ ಘಟನೆ ನಡೆದಿದೆ ಎಂದು ಎಫ್ ಐಆರ್ ನಲ್ಲಿ ತಿಳಿಸಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿ ಶುಕ್ರವಾರ ತಡರಾತ್ರಿಯೇ ಒಬ್ಬನನ್ನು ಬಂಧಿಸಲಾಗಿದ್ದು, ಉಳಿದ ಆರೋಪಿಗಳನ್ನು ಗುರುತಿಸಲಾಗಿದೆ. ಶೀಘ್ರದಲ್ಲೇ ಅವರನ್ನು ಬಂಧಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.
ಕೇರಳ ವಿಧಾನ ಸಭಾ ಚುನಾವಣೆಯು ಏಪ್ರಿಲ್ 9 ರಂದು ನಡೆಯಲಿದ್ದು, ಕಾಂಗ್ರೆಸ್ ಸಂಸದ ಶಶಿ ತರೂರ್ ಅವರು ಕಾಂಗ್ರೆಸ್ ಪ್ರಚಾರದಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದಾರೆ. 140 ಸ್ಥಾನಗಳ ಕೇರಳ ವಿಧಾನಸಭಾ ಚುನಾವಣೆಯ ಮತ ಎಣಿಕೆ ಮೇ 4 ರಂದು ನಡೆಯಲಿದೆ. ಇದೇ ಅವಧಿಯಲ್ಲಿ ಅಸ್ಸಾಂ, ತಮಿಳುನಾಡು, ಪುದುಚೇರಿ ಮತ್ತು ಪಶ್ಚಿಮ ಬಂಗಾಳದ ಚುನಾವಣೆಗಳು ಕೂಡ ನಡೆಯಲಿದೆ.
AAP vs Raghav Chadda: ಪಕ್ಷದ ನಾಯಕರಿಂದಲೇ ರಾಘವ್ ಚಡ್ಡಾ ವಿರುದ್ಧ ವಾಗ್ದಾಳಿ; ಬೆಂಬಲಕ್ಕೆ ನಿಂತ ಬಿಜೆಪಿ
ಮಲಪ್ಪುರಂ ಜಿಲ್ಲೆಯ ವಂಡೂರ್ ಕ್ಷೇತ್ರದಲ್ಲಿ ಯುಡಿಎಫ್ ಅಭ್ಯರ್ಥಿಯ ಪರ ಚುನಾವಣಾ ಪ್ರಚಾರ ಕಾರ್ಯ ನಡೆಸಿದ ಶಶಿ ತರೂರ್, ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ಕೇರಳದಲ್ಲಿ ಮತ್ತೆ ಅಧಿಕಾರಕ್ಕೆ ಬರುತ್ತದೆ. ಚುನಾಯಿತ ಶಾಸಕರ ಅಭಿಪ್ರಾಯಗಳನ್ನು ಪರಿಗಣಿಸಿ ಕಾಂಗ್ರೆಸ್ ಹೈಕಮಾಂಡ್ ಇಲ್ಲಿನ ಮುಖ್ಯಮಂತ್ರಿ ಯಾರಾಗಬೇಕು ಎಂದು ನಿರ್ಧರಿಸುತ್ತಾರೆ ಎಂದರು.