ಸೂರತ್ನಲ್ಲಿ ಒಂದೇ ಕುಟುಂಬದ ಮೂವರ ಆತ್ಮಹತ್ಯೆ: ಕ್ರೆಡಿಟ್ ಕಾರ್ಡ್ ವಂಚನೆ, ಮಾನಸಿಕ ಕಿರುಕುಳ ನೀಡಿದ್ದ ಆರೋಪಿ ಬಂಧನ!
ಸೂರತ್ನ ಖೇತನ್ ಕುಟುಂಬದ ಸಾಮೂಹಿಕ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಪ್ರಮುಖ ಆರೋಪಿ ವೈಭವ್ ರುಂಗ್ತಾವನ್ನು ದೆಹಲಿಯಲ್ಲಿ ಬಂಧಿಸಲಾಗಿದೆ. ಬಾಲಮುಕುಂದ್ ಖೇತನ್ ಬರೆದ ಡೆತ್ನೋಟ್ ಹಾಗೂ ವಿಷ ಸೇವಿಸಿ ಬದುಕುಳಿದ 7 ವರ್ಷದ ಪುತ್ರಿಯ ಹೇಳಿಕೆಯ ಆಧಾರದ ಮೇಲೆ ಬಂಧನ ನಡೆದಿದೆ. ಕ್ರೆಡಿಟ್ ಕಾರ್ಡ್ ದುರುಪಯೋಗ ಮತ್ತು ನಿರಂತರ ಮಾನಸಿಕ ಕಿರುಕುಳದಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಕುಟುಂಬ ಅಲ್ಯೂಮಿನಿಯಂ ಫಾಸ್ಫೈಡ್ ವಿಷ ಸೇವಿಸಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಪ್ರಕರಣದ ಕುರಿತು ಪೊಲೀಸರು ಹೆಚ್ಚಿನ ತನಿಖೆ ಮುಂದುವರೆಸಿದ್ದಾರೆ.
ಖೇತನ್ ಕುಟುಂಬದ ಸಾಮೂಹಿಕ ಆತ್ಮಹತ್ಯೆ -
ಸೂರತ್: ಇಡೀ ಸೂರತ್ (Surat) ನಗರವನ್ನೇ ಬೆಚ್ಚಿಬೀಳಿಸಿದ್ದ ಖೇತನ್ ಕುಟುಂಬ (Khetan family)ದ ಸಾಮೂಹಿಕ ಆತ್ಮಹತ್ಯೆ (mass suicide) ಪ್ರಕರಣಕ್ಕೆ ಸಂಬಂಧಿಸಿದಂತೆ, ಕುಟುಂಬವನ್ನು ಸಾವಿನ ಅಂಚಿಗೆ ತಳ್ಳಿದ್ದ ಪ್ರಮುಖ ಆರೋಪಿಯನ್ನು ದೆಹಲಿ (Delhi)ಯಲ್ಲಿ ಬಂಧಿಸಲಾಗಿದೆ. ಮೃತ ಬಾಲಮುಕುಂದ್ ಖೇತನ್ (Balmukund Khetan) ಬರೆದಿದ್ದ ಮೂರು ಪುಟಗಳ ಡೆತ್ನೋಟ್ ಮತ್ತು ವಿಷ ಸೇವಿಸಿ ಬದುಕುಳಿದ ಏಳು ವರ್ಷದ ಪುತ್ರಿಯ ಹೇಳಿಕೆಯ ಆಧಾರದ ಮೇಲೆ ವೈಭವ್ ರುಂಗ್ತಾ (Vaibhav Rungta) ಎಂಬಾತನನ್ನು ವಶಕ್ಕೆ ಪಡೆಯಲಾಗಿದೆ.
ಏನಿದು ಪ್ರಕರಣ?
ಮೂಲತಃ ಬಿಹಾರ (Bhihar)ದವರಾದ ಮತ್ತು ಷೇರು ಮಾರುಕಟ್ಟೆ ವೃತ್ತಿಯಲ್ಲಿದ್ದ ಬಾಲಮುಕುಂದ್ ಖೇತನ್, ತಮ್ಮ ಪತ್ನಿ ಪ್ರಿಯಾಂಕಾ ಮತ್ತು ಇಬ್ಬರು ಪುತ್ರಿಯರೊಂದಿಗೆ ಸೂರತ್ನಲ್ಲಿ ವಾಸವಿದ್ದರು. ಆರೋಪಿ ವೈಭವ್ ರುಂಗ್ತಾ, ಬಾಲಮುಕುಂದ್ ಅವರ ಕ್ರೆಡಿಟ್ ಕಾರ್ಡ್ಗಳನ್ನು ದುರುಪಯೋಗಪಡಿಸಿಕೊಂಡು ಭಾರಿ ಹಣಕಾಸು ವಂಚನೆ ಎಸಗಿದ್ದ ಎನ್ನಲಾಗಿದೆ. ಬಾಲಮುಕುಂದ್ ಅವರು ಹಣವನ್ನು ಮರಳಿ ಕೇಳಿದಾಗ, ಆರೋಪಿಯು ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೊಲೆ ಬೆದರಿಕೆ ಹಾಕುವ ಮೂಲಕ ನಿರಂತರ ಮಾನಸಿಕ ಕಿರುಕುಳ ನೀಡುತ್ತಿದ್ದ ಎಂದು ಡೆತ್ನೋಟ್ನಲ್ಲಿ ವಿವರಿಸಲಾಗಿದೆ.
ಮಾಧ್ಯಮ ವರದಿಗಳ ಪ್ರಕಾರ ಮಾನಸಿಕ ಮತ್ತು ಆರ್ಥಿಕ ಒತ್ತಡ ತಾಳಲಾರದೆ ಕುಟುಂಬವು ಅಲ್ಯೂಮಿನಿಯಂ ಫಾಸ್ಫೈಡ್ ಎಂಬ ವಿಷಕಾರಿ ವಸ್ತುವನ್ನು ಸೇವಿಸಿದೆ. ಮೊದಲು ಮಕ್ಕಳಿಗೆ ವಿಷ ಉಣಿಸಿ, ನಂತರ ದಂಪತಿಗಳು ಸೇವಿಸಿದ್ದಾರೆ ಎಂದು ಶಂಕಿಸಲಾಗಿದೆ. ಈ ದುರಂತದಲ್ಲಿ ಬಾಲಮುಕುಂದ್ ಸ್ಥಳದಲ್ಲೇ ಮೃತಪಟ್ಟರೆ, ಪತ್ನಿ ಪ್ರಿಯಾಂಕಾ ಮತ್ತು ಹಿರಿಯ ಪುತ್ರಿ ಭವ್ಯಾ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಅದೃಷ್ಟವಶಾತ್ 7 ವರ್ಷದ ಕಿರಿಯ ಪುತ್ರಿ ಪೃಥ್ವಿ ಚಿಕಿತ್ಸೆಯಿಂದ ಬದುಕುಳಿದಿದ್ದಾಳೆ. ಚಿಕಿತ್ಸೆಯ ಸಮಯದಲ್ಲಿ ಆಕೆ ತನ್ನ ಪೋಷಕರು ತನಗೆ ಚಮಚದ ಮೂಲಕ ಏನನ್ನೋ ಕುಡಿಸಿದರು ಎಂದು ಸಂಬಂಧಿಕರಿಗೆ ತಿಳಿಸಿದ್ದಾಳೆ.
ತಾಂತ್ರಿಕ ಕಣ್ಗಾವಲು ಮೂಲಕ ಆರೋಪಿಯನ್ನು ದೆಹಲಿಯಲ್ಲಿ ಬಂಧಿಸಿರುವ ಪೊಲೀಸರು, ಈಗ ಆತನನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಬಾಲಮುಕುಂದ್ ಅವರ ಬ್ಯಾಂಕ್ ಖಾತೆಗಳು ಮತ್ತು ಕ್ರೆಡಿಟ್ ಕಾರ್ಡ್ ವಹಿವಾಟುಗಳನ್ನು ಆಡಿಟ್ ಮಾಡಲಾಗುತ್ತಿದೆ. ಈ ಕಿರುಕುಳದಲ್ಲಿ ಇನ್ನೂ ಯಾರಾದರೂ ಸಾಲ ನೀಡುವವರು ಅಥವಾ ಸಹಚರರು ಭಾಗಿಯಾಗಿದ್ದಾರೆಯೇ ಎಂಬ ಬಗ್ಗೆ ತನಿಖೆ ಮುಂದುವರಿದಿದೆ.