Sheikh Hasina: ಬಾಂಗ್ಲಾದೇಶದಿಂದ ಶೇಖ್ ಹಸೀನಾ ಪಲಾಯನ ಮಾಡಿದ್ದು ಹೇಗೆ? ಬಯಲಾಯ್ತು ನಿಜಾಂಶ
ಬಾಂಗ್ಲಾದೇಶದಲ್ಲಿ ಉದ್ವಿಗ್ನತೆ ಹೆಚ್ಚಾದಾಗ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರು ಭಾರತಕ್ಕೆ ಪಲಾಯನ ಮಾಡಿರುವುದು ವಿಶ್ವಕ್ಕೆ ಗೊತ್ತಿದೆ. ಆದರೆ ಇವರು ಹೇಗೆ ಬಂದರು, ಯಾವ ವಿಮಾನ ಇವರನ್ನು ಕರೆದುಕೊಂಡು ಬಂದಿತ್ತು, ಎಲ್ಲಿ ಇವರ ವಿಮಾನ ಲ್ಯಾಂಡ್ ಆಗಿತ್ತು ಮೊದಲಾದ ವಿಚಾರಗಳು ಇನ್ನೂ ಗೊಂದಲದಲ್ಲೇ ಇದೆ. ಆದರೆ ಈ ಬಗ್ಗೆ ಈಗ ಸ್ವತಃ ಬಾಂಗ್ಲಾದೇಶದ ದಿನಪತ್ರಿಕೆಯೊಂದು ಮಾಹಿತಿಯನ್ನು ಹಂಚಿಕೊಂಡಿದೆ.


ನವದೆಹಲಿ: ಬಾಂಗ್ಲಾದೇಶದಲ್ಲಿ (Bangladesh) ರಾಜಕೀಯ ಉದ್ವಿಗ್ನತೆಯು ಹೆಚ್ಚಾದಾಗ ಮಾಜಿ ಪ್ರಧಾನಿ ಶೇಖ್ ಹಸೀನಾ (Former PM Sheikh Hasina) ಅವರು ಭಾರತಕ್ಕೆ ಪಲಾಯನ ಮಾಡಿದ್ದರು. ಅವರನ್ನು ಸುರಕ್ಷಿತವಾಗಿ ಕರೆ ತರುವಲ್ಲಿ ಭಾರತೀಯ ಆಡಳಿತ, ಸೇನೆ, ವಾಯು ಸಾರಿಗೆ ಸಂಪೂರ್ಣ ಯೋಜನಾ ಬದ್ದವಾಗಿ ಕಾರ್ಯನಿರ್ವಹಿಸಿದೆ. ಇದನ್ನು ಸ್ವತಃ ಭಾರತದ ವಿಮಾನ ನಿಲ್ದಾಣದ (Kolkata's Netaji Subhas Chandra Bose airport ) ಮೂಲಗಳು ತಿಳಿಸಿರುವುದಾಗಿ ಬಾಂಗ್ಲಾದೇಶದ ದಿನಪತ್ರಿಕೆಯೊಂದು ವರದಿ ಮಾಡಿದ್ದು, ಇದರಲ್ಲಿ ಶೇಖ್ ಹಸೀನಾ ಅವರ ಪಲಾಯನದ ವೇಳೆ ನಡೆದ ನಾಟಕೀಯ ಬೆಳವಣಿಗೆಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಿದೆ.
2024ರ ಆಗಸ್ಟ್ 5ರಂದು ಢಾಕಾದಿಂದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರು ಕೋಲ್ಕತ್ತಾದ ನೇತಾಜಿ ಸುಭಾಸ್ ಚಂದ್ರ ಬೋಸ್ ವಿಮಾನ ನಿಲ್ದಾಣಕ್ಕೆ ಮಿಲಿಟರಿ ವಿಮಾನದಲ್ಲಿ ಆಗಮಿಸಬೇಕಿತ್ತು. ಆದರೆ ಅಂತಿಮ ಕ್ಷಣದಲ್ಲಿ ಅದರ ಮಾರ್ಗವನ್ನು ಬದಲಾಯಿಸಲಾಯಿತು. ಅದು ಕೊನೆಗೆ ಉತ್ತರ ಪ್ರದೇಶದ ಗಾಜಿಯಾಬಾದ್ನಲ್ಲಿರುವ ಹಿಂಡನ್ ವಾಯುಪಡೆಯ ನೆಲೆಯಲ್ಲಿ ಇಳಿದಿದೆ ಎಂದು ಕೋಲ್ಕತ್ತಾದ ನೇತಾಜಿ ಸುಭಾಸ್ ಚಂದ್ರ ಬೋಸ್ ವಿಮಾನ ನಿಲ್ದಾಣದ ಮೂಲಗಳು ತಿಳಿಸಿರುವುದಾಗಿ ಬಾಂಗ್ಲಾದೇಶದ ದಿನಪತ್ರಿಕೆ ಹೇಳಿಕೊಂಡಿದೆ.
ಇದು ಎಲ್ಲರ ಗಮನವನ್ನು ತಪ್ಪಿಸಲು ಮಾಡಿರುವ ಲೆಕ್ಕಾಚಾರವಾಗಿದೆ. ಭಾರತದ ಮಾಧ್ಯಮಗಳು ಶೇಖ್ ಹಸೀನಾ ಅವರು ಕೋಲ್ಕತ್ತಾಗೆ ಬರುತ್ತಿದ್ದಾರೆ ಎಂದು ವರದಿ ಮಾಡಿದ್ದವು.ಶೇಖ್ ಹಸೀನಾ ಅವರ ವಿಮಾನವು ಬಾಂಗ್ಲಾದೇಶ ವಾಯುಪ್ರದೇಶದಲ್ಲಿ ಸಾಧ್ಯವಾದಷ್ಟು ಕಡಿಮೆ ಸಮಯ ಕಳೆಯಲು ಬಯಸಿದ್ದರಿಂದ ದೆಹಲಿಗೆ ಬರುವ ಮಾರ್ಗವನ್ನು ತಡವಾಗಿ ಬದಲಾಯಿಸಿತು. ಅಂತಿಮ ಕ್ಷಣದವರೆಗೂ ಅದು ಕೋಲ್ಕತ್ತಾದ ನೇತಾಜಿ ಸುಭಾಸ್ ಚಂದ್ರ ಬೋಸ್ ವಿಮಾನ ನಿಲ್ದಾಣಕ್ಕೆ ಹೋಗುವ ಮಾರ್ಗದಲ್ಲಿತ್ತು.
ಸಾಮಾನ್ಯವಾಗಿ ಢಾಕಾದಿಂದ ದೆಹಲಿಗೆ ಹಾರುವ ವಿಮಾನಗಳು ಕೋಲ್ಕತ್ತಾಗೆ ಹೋಗುವ ವಿಮಾನಗಳಿಗಿಂತ ಬಾಂಗ್ಲಾದೇಶದ ವಾಯುಪ್ರದೇಶದಲ್ಲಿ ಹೆಚ್ಚು ಸಮಯ ಕಳೆಯುತ್ತವೆ. ಯಾಕೆಂದರೆ ಢಾಕಾ ಮತ್ತು ಕೋಲ್ಕತ್ತಾ ಪಶ್ಚಿಮಕ್ಕೆ ನೇರ ಹಾರಾಟ ಮಾರ್ಗವನ್ನು ಹೊಂದಿದೆ. ಆದರೆ ದೆಹಲಿಗೆ ಹೋಗುವ ವಿಮಾನ ಮಾರ್ಗ ವಾಯುವ್ಯದಲ್ಲಿದ್ದು, ಬಾಂಗ್ಲಾದೇಶ ನಿಯಂತ್ರಿತ ವಾಯುಪ್ರದೇಶದಲ್ಲಿ ಹೆಚ್ಚು ಸಮಯವನ್ನು ಕಳೆಯುತ್ತದೆ.
ನಾಗರಿಕ ವಿಮಾನಯಾನ ಮೂಲಗಳ ಪ್ರಕಾರ ವಿಮಾನಗಳು ಸಮೀಪಿಸುತ್ತಿರುವ ಬಗ್ಗೆ ಢಾಕಾ ಮತ್ತು ಕೋಲ್ಕತ್ತಾದಲ್ಲಿ ವಾಯು ಸಂಚಾರ ನಿಯಂತ್ರಣದ ನಡುವೆ ಹಾಟ್ಲೈನ್ ಅನ್ನು ಹೊಂದಿದೆ. ಸಂಭಾವ್ಯ ಅಪಾಯವನ್ನು ತಪ್ಪಿಸಲು ಹಸೀನಾ ಅವರು ದೇಶದಿಂದ ಪಲಾಯನ ಮಾಡಲು ಮಿಲಿಟರಿ ತರಬೇತಿ ವಿಮಾನವನ್ನು ಬಳಸಲಾಗಿದೆ. ಹಿಂಸಾತ್ಮಕ ಜನಸಮೂಹ ಢಾಕಾದಲ್ಲಿರುವ ಮಾಜಿ ಪ್ರಧಾನಿಯ ಅಧಿಕೃತ ನಿವಾಸವಾಗಿರುವ ಗಣ ಭವನವನ್ನು ವಶಪಡಿಸಿಕೊಳ್ಳುವ ಮುನ್ನ ಅವರು ದೇಶದಿಂದ ಪಲಾಯನ ಮಾಡಿದ್ದಾರೆ.
ಆ ದಿನ ಏನಾಗಿತ್ತು?
ಹಸೀನಾ ಅವರ ವಿಮಾನವು ಕೋಲ್ಕತ್ತಾಗೆ ಬರುವ ಯೋಜನೆಯನ್ನು ಮಾಡಿಕೊಂಡಿತ್ತು. ಮಧ್ಯಾಹ್ನ 3 ಗಂಟೆಯ ಅನಂತರ ವಿಮಾನವು ಬಾಂಗ್ಲಾದೇಶ ವಾಯುಪಡೆಯ ಬಂಗಬಂಧು ನೆಲೆಯಿಂದ ಹೊರಟಿತ್ತು. ಅದಕ್ಕೆ 4131ರ ನಾಲ್ಕು ಅಂಕೆಯ 'ಸ್ಕ್ವಾಕ್ ಕೋಡ್' ಅನ್ನು ನೀಡಲಾಗಿತ್ತು. 'ಸ್ಕ್ವಾಕ್ ಕೋಡ್' ಅನ್ನು ಕೋಲ್ಕತ್ತಾ ವಾಯು ಸಂಚಾರ ನಿಯಂತ್ರಣದೊಂದಿಗೆ ಹಂಚಿಕೊಳ್ಳಲಾಗಿತ್ತು.
ಢಾಕಾದಿಂದ ವಿಮಾನ ಟೇಕ್ ಆಫ್ ಆದ ಬಳಿಕ ವಿಮಾನವು ಅದರ ಟ್ರಾನ್ಸ್ಪಾಂಡರ್ಗಳನ್ನು ಆಫ್ ಮಾಡಿತು. ಇದು ವಿಮಾನದ ಎತ್ತರ, ವೇಗ ಮತ್ತು ಸ್ಥಳದ ಗುರುತಿನ ವಿವರಗಳನ್ನು ಬಹಿರಂಗ ಪಡಿಸುತ್ತದೆ. ಟ್ರಾನ್ಸ್ಪಾಂಡರ್ಗಳು ವಿಮಾನದ ಸುರಕ್ಷಿತ ಸಾಗಣೆಯನ್ನು ಖಚಿತಪಡಿಸಿಕೊಳ್ಳಲು ನೆಲದ ನಿಯಂತ್ರಣದೊಂದಿಗೆ ನಡೆಸುವ ಸಂವಹನಕ್ಕಾಗಿ ಬಳಸಲಾಗುತ್ತದೆ.
ಹಸೀನಾ ಅವರು ಸಹೋದರಿ ಮತ್ತು ಇನ್ನು ಕೆಲವರೊಂದಿಗೆ ವಿಮಾನದಲ್ಲಿ ಪ್ರಯಾಣ ಬೆಳೆಸಿದ್ದು, ಅವರ ವಿಮಾನದ ಟ್ರಾನ್ಸ್ಪಾಂಡರ್ಗಳನ್ನು ಬಂಗಾಳ ಗಡಿಯ ಬಳಿ ಮಾತ್ರ ಆನ್ ಮಾಡಲಾಗಿತ್ತು. ಆ ವೇಳೆ ಅದು ಢಾಕಾ ವಿಮಾನ ಉಪಸ್ಥಿತಿಯ ಮಾಹಿತಿಯನ್ನು ಕೋಲ್ಕತ್ತಾ ವಿಮಾನ ನಿಲ್ದಾಣಕ್ಕೆ ನೀಡಿತ್ತು. ಆದರೆ ಪೈಲಟ್ ತಮ್ಮ ಆಗಮನದ ಬಗ್ಗೆ ಘೋಷಿಸಲು ವಾಯು ಸಂಚಾರ ನಿಯಂತ್ರಣವನ್ನು ಸಂಪರ್ಕಿಸಬೇಕಾಗಿತ್ತು. ಇದನ್ನು ಸಾಮಾನ್ಯವಾಗಿ ವಿಮಾನವು ಗಡಿಯ ಹತ್ತಿರದಲ್ಲಿದ್ದಾಗ ಮಾಡಲಾಗುತ್ತದೆ.
ಇದನ್ನೂ ಓದಿ: Rakesh Poojary: ರಾಕೇಶ್ ಪೂಜಾರಿ ಮನೆಗೆ ದಿಢೀರ್ ಭೇಟಿಕೊಟ್ಟ ರಿಷಭ್ ಶೆಟ್ಟಿ: ತಾಯಿ, ಸಹೋದರಿಗೆ ಸಾಂತ್ವನ
ಈ ಹಂತದಲ್ಲಿ ಅಂದರೆ ಬಾಂಗ್ಲಾದೇಶ ವಾಯುಪಡೆಯ ಸಿ-130ಜೆ ವಿಮಾನ ಅಂತಾರಾಷ್ಟ್ರೀಯ ಗಡಿಯಿಂದ ಸುಮಾರು 10 ಕಿ.ಮೀ. ದೂರದಲ್ಲಿದ್ದಾಗ ಭಾರತೀಯ ವಾಯುಯಾನ ಅಧಿಕಾರಿಗಳು ಹಸೀನಾ ಅವರಿದ್ದ ವಿಮಾನವನ್ನು ಟ್ರ್ಯಾಕ್ ಮಾಡಲು ಪ್ರಾರಂಭಿಸಿದರು. ದೆಹಲಿಯಿಂದ ಅನುಮತಿ ಮತ್ತು ಭದ್ರತೆಯನ್ನು ಪಡೆದ ಬಳಿಕ ಶೇಖ್ ಹಸೀನಾ ಅವರ ವಿಮಾನವು ಭಾರತಕ್ಕೆ ಆಗಮಿಸಿತ್ತು. ಢಾಕಾದಿಂದ ಹಸೀನಾ ಅವರ ವಿಮಾನ ಹಾರಿದ ಕೆಲವೇ ಗಂಟೆಗಳಲ್ಲಿ ಅದು ಗಾಜಿಯಾಬಾದ್ ತಲುಪಿತ್ತು.