ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಪ್ರವಾಹಕ್ಕೆ 550ಕ್ಕೂ ಹೆಚ್ಚು ಮಂದಿ ಬಲಿ; 2,400 ಕ್ಕೂ ಅಧಿಕ ಮಂದಿ ನಾಪತ್ತೆ, ಮುಂದುವರಿದ ಶೋಧ ಕಾರ್ಯ

ನೇಪಾಳದಲ್ಲಿ ಶುಕ್ರವಾರ ಸಂಭವಿಸಿದ ವಿನಾಶಕಾರಿ ಹಠಾತ್ ಪ್ರವಾಹದಿಂದ ಸಾವನ್ನಪ್ಪಿದವರ ಸಂಖ್ಯೆ 586 ಕ್ಕೆ ಏರಿದ್ದು, 2,400 ಕ್ಕೂ ಹೆಚ್ಚು ಜನರು ಕಾಣೆಯಾಗಿದ್ದಾರೆ. ನೇಪಾಳದ ವಿಪತ್ತು ಅಧಿಕಾರಿಗಳು ಎಂಟು ಜಿಲ್ಲೆಗಳಲ್ಲಿ 579 ಜನರು ಸಾವನ್ನಪ್ಪಿದ್ದಾರೆ ಮತ್ತು ಟಿಬೆಟ್‌ನಲ್ಲಿ ಏಳು ಸಾವುಗಳು ವರದಿಯಾಗಿವೆ ಎಂದು ಹೇಳಿದ್ದಾರೆ.

ಪ್ರವಾಹಕ್ಕೆ 550ಕ್ಕೂ ಹೆಚ್ಚು ಮಂದಿ ಬಲಿ;2,400 ಕ್ಕೂ ಅಧಿಕ ಮಂದಿ ನಾಪತ್ತೆ

ಸಂಗ್ರಹ ಚಿತ್ರ -

Vishakha Bhat Heggar
Vishakha Bhat Heggar Aug 29, 2026 9:27 AM

ಕಠ್ಮಂಡು: ನೇಪಾಳದಲ್ಲಿ ಶುಕ್ರವಾರ ಸಂಭವಿಸಿದ ವಿನಾಶಕಾರಿ ಹಠಾತ್ ಪ್ರವಾಹದಿಂದ ಸಾವನ್ನಪ್ಪಿದವರ ಸಂಖ್ಯೆ 586 ಕ್ಕೆ ಏರಿದ್ದು, 2,400 ಕ್ಕೂ (Nepal Floods) ಹೆಚ್ಚು ಜನರು ಕಾಣೆಯಾಗಿದ್ದಾರೆ. ನೇಪಾಳದ ವಿಪತ್ತು ಅಧಿಕಾರಿಗಳು ಎಂಟು ಜಿಲ್ಲೆಗಳಲ್ಲಿ 579 ಜನರು ಸಾವನ್ನಪ್ಪಿದ್ದಾರೆ ಮತ್ತು ಟಿಬೆಟ್‌ನಲ್ಲಿ ಏಳು ಸಾವುಗಳು ವರದಿಯಾಗಿವೆ ಎಂದು ಹೇಳಿದ್ದಾರೆ. ಪ್ರವಾಹದಿಂದಾಗಿ ಸಾವನ್ನಪ್ಪಿದ್ದವರ ಸಂಖ್ಯೆ ಕ್ಷಣಕ್ಷಣಕ್ಕೂ ಏರಿಕೆಯಾಗುತ್ತಿದೆ. ಇದರ ಬೆನ್ನಲ್ಲೇ ನೆರವು ಬೇಡ ಎಂದಿದ್ದ ನೇಪಾಳ ಇದೀಗ ನಿರ್ಧಾರ ಬದಲಿಸಿ, ವಿದೇಶಿ ಸಹಾಯ ಪಡೆಯಲು ಒಪ್ಪಿಕೊಂಡಿದೆ.

ಹಿಮನದಿ ಕುಸಿತದಿಂದಾಗಿ ಹಿಮಾಲಯದ ನದಿ ವ್ಯವಸ್ಥೆಗಳ ಮೂಲಕ ಮಂಜುಗಡ್ಡೆ, ಕಲ್ಲು, ಮಣ್ಣು ಮತ್ತು ಶಿಲಾಖಂಡರಾಶಿಗಳ ಬೃಹತ್ ಅಲೆಗಳು ಹರಿದು ಬಂದಿದ್ದರಿಂದ ಈ ದುರಂತ ಸಂಭವಿಸಿದೆ ಎಂದು ಅಮೆರಿಕದ ಭೂವೈಜ್ಞಾನಿಕ ಸಮೀಕ್ಷೆ ತಿಳಿಸಿದೆ. ಶುಕ್ರವಾರ ಶಿಲಾಖಂಡರಾಶಿಗಳಿಂದ ರೂಪುಗೊಂಡ ಸರೋವರವು ಲೆಂಡೆ ಖೋಲಾ ಮತ್ತು ತ್ರಿಶೂಲಿ ನದಿಗಳ ಕಡೆಗೆ ಉಕ್ಕಿ ಹರಿಯಲು ಪ್ರಾರಂಭಿಸಿದ ನಂತರ ರಕ್ಷಣಾ ಕಾರ್ಯಾಚರಣೆಗೆ ಸ್ವಲ್ಪ ಸಮಯ ಅಡ್ಡಿಯಾಯಿತು. ಟಿಬೆಟ್ ಭಾಗದಲ್ಲಿ ನೀರಿನ ಅಣೆಕಟ್ಟು ಒಡೆದಿದೆ ಎಂಬ ಮಾಹಿತಿ ಬಂದ ನಂತರ ನೇಪಾಳಿ ಪೊಲೀಸರು ರಕ್ಷಣಾ ಸಿಬ್ಬಂದಿಗೆ ತಕ್ಷಣ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಎಚ್ಚರಿಕೆ ನೀಡಿದ್ದಾರೆ.

ಪ್ರವಾಹದ ದುರಂತದ ನಂತರವೂ ವಿದೇಶಿ ನೆರವನ್ನು ಸ್ವೀಕರಿಸಲು ಶುಕ್ರವಾರ (ಆ.28) ನೇಪಾಳ ಸರ್ಕಾರ ಹಿಂದೇಟು ಹಾಕಿತ್ತು. ಈ ಭೀಕರ ಪ್ರವಾಹ ಪರಿಸ್ಥಿತಿಯನ್ನು ಎದುರಿಸಲು ನಾವು ಸಮರ್ಥರಾಗಿದ್ದೇವೆ. ವಿದೇಶಗಳ ಸಹಾಯದ ಅಗತ್ಯ ಇಲ್ಲ. ಆದರೆ ಸದ್ಯಕ್ಕೆ ಸಹಾಯ ಬೇಡ, ಸಾಧ್ಯವಾದರೆ ಹಣಕಾಸಿನ ನೆರವು ನೀಡಿ ಎಂದಿತ್ತು. ಪ್ರವಾಹ ದುರಂತದ ಬಳಿಕ ತಮ್ಮ ದೇಶದ ನಾಗರಿಕರು ನಾಪತ್ತೆಯಾಗಿರುವ ರಾಷ್ಟ್ರಗಳ ಒತ್ತಡದಿಂದಾಗಿ ನೇಪಾಳ ಈ ಯು-ಟರ್ನ್ ತೆಗೆದುಕೊಂಡಿದ್ದು, ಪ್ರಸ್ತುತ ರಕ್ಷಣಾ ಕಾರ್ಯಾಚರಣೆ ಮತ್ತು ಫೋರೆನ್ಸಿಕ್ ತಪಾಸಣೆ ನಡೆಸಲು ಭಾರತ, ಚೀನಾ, ಆಸ್ಟ್ರೇಲಿಯಾ ಮತ್ತು ದಕ್ಷಿಣ ಕೊರಿಯಾದ ತಂಡಗಳಿಗೆ ಹಾಗೂ ತಜ್ಞರಿಗೆ ಅವಕಾಶ ನೀಡಿದೆ.

ಭಾರತಕ್ಕೆ ಭಾರತವೇ ಸಾಟಿ: ಪ್ರವಾಹ ಪೀಡಿತ ನೇಪಾಳಕ್ಕೆ ತ್ವರಿತ ನೆರವು; 62 ಟನ್ ಪರಿಹಾರ ಸಾಮಗ್ರಿ ರವಾನೆ

ಪ್ರವಾಹದ ವೇಳೆ ನೇಪಾಳದಲ್ಲಿದ್ದ 320 ಭಾರತೀಯರು ನಾಪತ್ತೆಯಾಗಿದ್ದು, ಸುಮಾರು 400 ಮಂದಿ ಚೀನಾದಲ್ಲಿ ಸಿಲುಕಿಕೊಂಡಿದ್ದಾರೆ ಎಂದು ವಿದೇಶಾಂಗ ಇಲಾಖೆ ಶುಕ್ರವಾರ ಮಾಹಿತಿ ನೀಡಿದೆ. ‘ಪ್ರವಾಹಪೀಡಿತ ಪ್ರದೇಶಗಳಲ್ಲಿದ್ದ ತಮಿಳುನಾಡಿನವರು ಸೇರಿದಂತೆ 21 ಭಾರತೀಯರು ಕಠ್ಮಂಡು ಮಾರ್ಗವಾಗಿ ದೆಹಲಿಗೆ ಬಂದಿಳಿದಿದ್ದಾರೆ. ಅವರನ್ನೆಲ್ಲಾ ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ ಬರಮಾಡಿಕೊಂಡರು. ಅತ್ತ ಚೀನಾದಲ್ಲಿದ್ದ 96 ಮಂದಿ ರಸ್ತೆ ಮಾರ್ಗದ ಮೂಲಕ ಸುರಕ್ಷಿತವಾಗಿ ನೇಪಾಳ ತಲುಪಿದ್ದಾರೆ. ಇನ್ನೂ 100 ಜನ ಭಾರತೀಯರು ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ವಿದೇಶಾಂಗ ಇಲಾಖೆ ತಿಳಿಸಿದೆ.