ಏಟಿನ ಮೇಲೆ ಏಟು ಬಿದ್ದರೂ ಬುದ್ಧಿ ಕಲಿಯುತ್ತಿಲ್ಲ ಪಾಕಿಸ್ತಾನ; ಆಪರೇಷನ್ ಸಿಂದೂರ್ ವೇಳೆ ಧ್ವಂಸಗೊಂಡಿದ್ದ ಉಗ್ರರ ನೆಲೆ ಪುನರ್ನಿರ್ಮಾಣ
Jaish-e-Mohammed: ಕಳೆದ ವರ್ಷ ಭಾರತ ನಡೆಸಿದ ಆಪರೇಷನ್ ಸಿಂದೂರ್ ಕಾರ್ಯಾಚರಣೆ ಸಮಯದಲ್ಲಿ ನಾಶವಾಗಿದ್ದ ಪಾಕಿಸ್ತಾನದ ಬಹವಾಲ್ಪುರದಲ್ಲಿರುವ ಉಗ್ರ ಸಂಘಟನೆ ಜೈಷ್-ಎ-ಮೊಹಮ್ಮದ್ನ ಕೇಂದ್ರ ಕಚೇರಿ ಮರ್ಕಜ್ ಸುಭಾನಲ್ಲಾವನ್ನು ಪುನರ್ನಿರ್ಮಿಸಲಾಗಿದೆ. ಪಾಕಿಸ್ತಾನ ಭಯೋತ್ಪಾದನೆಗೆ ಆಶ್ರಯ ನೀಡುತ್ತಿದೆ ಎನ್ನುವ ಭಾರತದ ವಾದವನ್ನು ಈ ಘಟನೆ ಪುಷ್ಟೀಕರಿಸಿದೆ.
ಪಾಕಿಸ್ತಾನದಲ್ಲಿ ಪುನರ್ನಿರ್ಮಾಣಗೊಂಡ ಉಗ್ರರ ನೆಲೆ -
ಇಸ್ಲಾಮಾಬಾದ್, ಆ. 23: 'ನಾಯಿ ಬಾಲ ಡೊಂಕುʼ ಎನ್ನುವ ಗಾದೆ ಮಾತು ತನಗೆ ಸರಿಯಾಗಿ ಹೊಂದುತ್ತದೆ ಎನ್ನುವುದನ್ನು ಪಾಕಿಸ್ತಾನ ಮತ್ತೆ ಮತ್ತೆ ಸಾಬೀತುಪಡಿಸುತ್ತಲೇ ಇರುತ್ತದೆ. ಅದಕ್ಕೆ ಇದೀಗ ಮತ್ತೊಂದು ಬೆಳವಣಿಗೆ ಸೇರ್ಪಡೆಯಾಗಿದೆ. ಭಾರತವನ್ನು ಕೆಣಕಲು ಬಂದು ಸರಿಯಾಗಿ ಪೆಟ್ಟು ತಿಂದಿದ್ದರೂ ತನ್ನ ನರಿ ಬುದ್ಧಿ ಬಿಡದ ಪಾಕಿಸ್ತಾನ ಮತ್ತೆ ತನ್ನ ಬಾಲ ಬಿಚ್ಚುವಂತೆ ಈ ಬಾರಿಯೂ ವರ್ತಿಸಿದೆ. ಕಳೆದ ವರ್ಷ ಆಪರೇಷನ್ ಸಿಂದೂರ್ (Operation Sindoor) ಕಾರ್ಯಾಚರಣೆ ಸಮಯದಲ್ಲಿ ಭಾರತೀಯ ಸೇನೆ ನಾಶ ಪಡಿಸಿದ್ದ ಬಹವಾಲ್ಪುರದಲ್ಲಿರುವ ಉಗ್ರ ಸಂಘಟನೆ ಜೈಷ್-ಎ-ಮೊಹಮ್ಮದ್ನ (Jaish-e-Mohammed-JeM) ಕೇಂದ್ರ ಕಚೇರಿ ಮರ್ಕಜ್ ಸುಭಾನಲ್ಲಾವನ್ನು (Markaz Subhanallah) ಪುನರ್ನಿರ್ಮಿಸಲಾಗಿದೆ.
ಪಾಕಿಸ್ತಾನ ಭಯೋತ್ಪಾದನೆಗೆ ಆಶ್ರಯ ನೀಡುತ್ತಿದೆ ಎನ್ನುವ ಭಾರತದ ವಾದವನ್ನು ಪುಷ್ಟೀಕರಿಸುವಂತಹ ಚಟುವಟಿಕೆ ಇದೀಗ ಅಲ್ಲಿ ನಡೆಯುತ್ತಿದೆ. ಮರ್ಕಜ್ ಸುಭಾನಲ್ಲಾ ಕಚೇರಿಯು ಆಪರೇಷನ್ ಸಿಂದೂರ್ ವೇಳೆ ಸಂಪೂರ್ಣವಾಗಿ ನೆಲ ಕಚ್ಚಿತ್ತು. ಇದೀಗ ಈ ಕಚೇರಿ ಮತ್ತೆ ತಲೆ ಎತ್ತಿ ನಿಂತಿದೆ.
ಪಾಕಿಸ್ತಾನದಲ್ಲಿ ಮತ್ತೆ ತಲೆ ಎತ್ತಿದ ಉಗ್ರ ನೆಲೆ:
Jaish-e-Mohammed’s Markaz Subhanallah complex in Bahawalpur has reportedly been fully restored.
— Manjeet Negi (@manjeetnegilive) August 23, 2026
Strike-damaged domes and halls have been rebuilt with fresh plaster, paint and marble.
Reports allege the reconstruction was backed by Pakistani state funding, reviving the terror hub. pic.twitter.com/fUxO3litmV
ಮರ್ಕಜ್ ಸುಭಾನಲ್ಲಾ ಸಂಕೀರ್ಣವನ್ನು ಈಗ ಮತ್ತೆ ಪುನರ್ನಿರ್ಮಿಸಲಾಗಿದೆ. ಕ್ಷಿಪಣಿಗಳ ಡಿಕ್ಕಿಯಿಂದ ಹಾನಿಗೊಳಗಾಗಿದ್ದ ಸ್ಥಳದಲ್ಲಿ ಹೊಸ ಕಟ್ಟಡ ಕಾಣಿಸಿಕೊಂಡಿದೆ ಎಂದು ಎನ್ಡಿಟಿವಿ ವರದಿ ಮಾಡಿದೆ. ಧ್ವಂಸಗೊಂಡ ಕೇಂದ್ರ ಸಭಾಂಗಣವನ್ನು ದುರಸ್ತಿ ಮಾಡಲಾಗಿದೆ. ಒಂದು ಕಾಲದಲ್ಲಿ ಹಾಳು ಕುಂಪೆಯಾಗಿದ್ದ ಜಾಗದಲ್ಲಿ ಇದೀಗ ಜೈಷ್-ಎ-ಮೊಹಮ್ಮದ್ ಸಂಘಟನೆಯ ಚಟುವಟಿಕೆ ಆರಂಭವಾಗಿದೆ.
ಆಪರೇಷನ್ ಸಿಂದೂರ್ನಲ್ಲಿ ನೂರ್ ಖಾಸ್ ಏರ್ ಬೇಸ್ ನಾಶ; ಕೊನೆಗೂ ಸತ್ಯ ಒಪ್ಪಿಕೊಂಡ ಪಾಕ್
ಎನ್ಡಿಟಿವಿ ವರದಿಯಲ್ಲಿ ಉಲ್ಲೇಖಿಸಲಾದ ಗುಪ್ತಚರ ಮಾಹಿತಿಯ ಪ್ರಕಾರ, ಪಾಕಿಸ್ತಾನಿ ಆಡಳಿತವು ಜೈಷ್-ಎ-ಮೊಹಮ್ಮದ್ ಸಂಘಟನೆಗೆ ಕಂತುಗಳ ಮೂಲಕ 25 ಕೋಟಿ ಪಾಕಿಸ್ತಾನಿ ರುಪಾಯಿ ಒದಗಿಸಿದೆ. ಆ ಮೊತ್ತದಲ್ಲಿ ಸುಮಾರು 11 ಕೋಟಿ ಪಾಕಿಸ್ತಾನಿ ರುಪಾಯಿ ಸೆಂಟ್ರಲ್ ಹಾಲ್ ಪುನರ್ನಿರ್ಮಾಣಕ್ಕೆ ಹಂಚಿಕೆ ಮಾಡಲಾಗಿದೆ ಎಂದು ವರದಿಯಾಗಿದೆ.
ಇನ್ನು ಆಪರೇಷನ್ ಸಿಂದೂರ್ ಸಮಯದಲ್ಲಿ ಹಾನಿಗೊಳಗಾದ ಕಟ್ಟಡಗಳು, ಬೋಧನೆ ಕೇಂದ್ರ ಎಂದು ವಿವರಿಸಲಾದ ಮದರಸಾ ಅಲ್-ಸಬೀರ್ ಮತ್ತು ಜೆಇಎಂ ಕಮಾಂಡರ್ಗಳಿಗೆ ಸಂಬಂಧಿಸಿದ ವಸತಿ ಸೌಲಭ್ಯಗಳನ್ನು ಕೆಡವಲಾಗಿದ್ದು, ಆ ಸ್ಥಳದಲ್ಲಿ ಹೊಸ ನಿರ್ಮಾಣ ಕಾರ್ಯ ನಡೆದಿದೆ. ಜೆಇಎಂ ಸ್ಥಾಪಕ ಮತ್ತು ಮುಖ್ಯಸ್ಥ ಮಸೂದ್ ಅಜರ್ ಅನಾರೋಗ್ಯದಿಂದ ಬಳಲುತ್ತಿದ್ದಾನೆ ಎಂದು ವರದಿಯಾಗಿರುವುದರಿಂದ, ಪ್ರಧಾನ ಕಚೇರಿಯ ಕಾರ್ಯಾಚರಣೆಯ ಜವಾಬ್ದಾರಿಗಳನ್ನು ತಲ್ಹಾ ಅಲ್-ಸೈಫ್ ಮತ್ತು ಮೊಹಿನುದ್ದೀನ್ ಔರಂಗಜೇಬ್ ಅಲಿಯಾಸ್ ಅಮ್ಮರ್ ಅಲ್ವಿ ಸೇರಿ ಆತನ ಸಹೋದರರು ಹೊತ್ತುಕೊಂಡಿದ್ದಾರೆ ಎನ್ನಲಾಗಿದೆ.
ಮಸೂದ್ ಅಜರ್ ಮತ್ತು ಆತನ ಸಹೋದರ ರೌಫ್ ಅಸ್ಗರ್ ಪಾಕಿಸ್ತಾನದೊಳಗೆ ರಕ್ಷಣೆ ಪಡೆಯುತ್ತಿದ್ದಾರೆ ಎಂದು ಹೇಳಲಾಗುತ್ತಿದ್ದರೂ, ಅವರು ಭಾರತೀಯ ಸಂಸ್ಥೆಗಳ ವ್ಯಾಪ್ತಿಯಿಂದ ಹೊರಗಿದ್ದಾರೆ ಎಂದು ಗುಪ್ತಚರ ಮಾಹಿತಿಗಳು ತಿಳಿಸಿವೆ.
ಮತ್ತೆ ಬಾಲ ಬಿಚ್ಚಿದ ಪಾಕಿಸ್ತಾನ; ಉಗ್ರ ಹಫೀಜ್ ಸಯೀದ್, ಮಸೂದ್ ಅಜರ್ಗಾಗಿ ಸೇನೆ ಹೋರಾಡಿದೆ ಎಂದ ನಾಯಕ
ಆಪರೇಷನ್ ಸಿಂದೂರ್ ಮೂಲಕ ಹೊಡೆತ
2025ರ ಏಪ್ರಿಲ್ನಲ್ಲಿ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ಮೇಲೆ ದಾಳಿ ನಡೆಸಿದ ಭಯೋತ್ಪಾದಕರು 26 ಪ್ರವಾಸಿಗರನ್ನು ಹತ್ಯೆಗೈದಿದ್ದರು. ಇದಕ್ಕೆ ಪ್ರತೀಕಾರವಾಗಿ ಮೇಯಲ್ಲಿ ಆಪರೇಷನ್ ಸಿಂದೂರ್ ಕಾರ್ಯಾಚರಣೆ ನಡೆಸಿದ್ದ ಭಾರತೀಯ ಸೇನೆ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿದ್ದ ಉಗ್ರರ ನೆಲೆಗಳನ್ನು ಧ್ವಂಸಗೊಳಿಸಿತ್ತು.
ವಿದೇಶ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್ಸೈಟ್ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.