Meditation: ಒತ್ತಡದ ಮನಸ್ಸಿಗೆ ಬೇಕು ಧ್ಯಾನವೆಂಬ ದಿವ್ಯ ಮದ್ದು
ಧ್ಯಾನ ಅಥವಾ ಮೆಡಿಟೇಶನ್ ಮಾಡುವುದೆಂದರೆ ಕಣ್ಣು ಮುಚ್ಚಿಕೊಂಡು, ಒಳ ಮನದಲ್ಲಿ ಲೋಕದ ಚಿಂತೆಯನ್ನೆಲ್ಲ ಮಾಡುವುದು ಹೆಚ್ಚಿನವರ ಕ್ರಮ! ಆದರೆ ಬದುಕಿನ ಸ್ವಾಸ್ಥ್ಯ ವೃದ್ಧಿಗೆ ಹಾಗೂ ಒತ್ತಡ ನಿವಾರಣೆಗೆ ವ್ಯಾಪಕವಾಗಿ ವಿಶ್ವದೆಲ್ಲೆಡೆ ಚಿಕಿತ್ಸೆಯ ರೂಪದಲ್ಲಿ ಬಳಕೆಯಾಗುತ್ತಿರುವ ಕ್ರಮವಿದು. ಕಣ್ಣು ಮುಚ್ಚಿ ಒಳ ಹೋಗುವ ಈ ಕ್ರಿಯೆಗೆ ಹೊರಗಿನಿಂದ ವಿಮುಖರಾಗುವುದು ಅಗತ್ಯವೇ? ಇಂದಿನ ದಿನಗಳಲ್ಲಿ ಇದಕ್ಕೆ ಏಕಿಷ್ಟು ಮಹತ್ವ ದೊರೆತಿದೆ?


ನವದೆಹಲಿ: ಅಂತಾರಾಷ್ಟ್ರೀಯ ಯೋಗ (Yoga Day) ದಿನಕ್ಕೆ ವಿಶ್ವದ ಹಲವೆಡೆಗಳಲ್ಲಿ ಸಿದ್ಧತೆ ನಡೆದಿದೆ. ಜೂನ್ 21ರ ಬೆಳಗ್ಗೆ ನೂರೆಂಟು, ಸಾವಿರದೆಂಟು… ಹೀಗೆ ತಂತಮ್ಮ ಶಕ್ತ್ಯಾನುಸಾರ ಸೂರ್ಯನಮಸ್ಕಾರ ಮತ್ತು ಇತರ ಆಸನಗಳನ್ನು ಮಾಡಿ ಸಾಮಾಜಿಕ ಮಾಧ್ಯಮಗಳಲ್ಲಿ ಹಾಕಿಕೊಳ್ಳುವವರು ಬಹಳ ಮಂದಿ ಇದ್ದಾರೆ. ಇವೆಲ್ಲ ಸರಿ, ಆದರೆ ಯೋಗವೆಂದರೆ ಕೇವಲ ಒಂದಿಷ್ಟು ಆಸನಗಳಲ್ಲ; ಮನಸ್ಸು ಮತ್ತು ದೇಹವನ್ನು ಒಂದಾಗಿಸುವ ಅದ್ಭುತ ಕ್ರಮ. ಧ್ಯಾನವೂ ಇದರ ಒಂದು ಪ್ರಮುಖ ಅಂಗ. ಈಗ ಧ್ಯಾನ ಎನ್ನುತ್ತಿದ್ದಂತೆ ನಾನಾ ಬಗೆಯ ಚಿತ್ರಗಳು ಮನಸ್ಸಿಗೆ ಬರುತ್ತವೆ. ಯಾರೋ ತಪಸ್ಸು ಮಾಡು ವುದು, ಗಡ್ಡ ಬಿಟ್ಟುಕೊಂಡು ವೃಕ್ಷಾಸನದಲ್ಲಿ ನಿಂತಿರುವುದು, ಚಿನ್ಮುದ್ರೆ ಹಿಡಿದು ಕಣ್ಣು ಮುಚ್ಚಿ ಕೂತಿರುವುದು… ಅವರವರ ಭಾವಕ್ಕೆ ತಕ್ಕಂತೆ ಭಿತ್ತಿಗಳು ಮೂಡುತ್ತವೆ.
ಧ್ಯಾನ ಅಥವಾ ಮೆಡಿಟೇಶನ್ ಮಾಡುವುದೆಂದರೆ ಕಣ್ಣು ಮುಚ್ಚಿಕೊಂಡು, ಒಳ ಮನದಲ್ಲಿ ಲೋಕದ ಚಿಂತೆಯನ್ನೆಲ್ಲ ಮಾಡು ವುದು ಹೆಚ್ಚಿನವರ ಕ್ರಮ! ಆದರೆ ಬದುಕಿನ ಸ್ವಾಸ್ಥ್ಯ ವೃದ್ಧಿಗೆ ಹಾಗೂ ಒತ್ತಡ ನಿವಾರಣೆಗೆ ವ್ಯಾಪಕವಾಗಿ ವಿಶ್ವದೆಲ್ಲೆಡೆ ಚಿಕಿ ತ್ಸೆಯ ರೂಪದಲ್ಲಿ ಬಳಕೆಯಾಗುತ್ತಿರುವ ಕ್ರಮವಿದು. ಕಣ್ಣು ಮುಚ್ಚಿ ಒಳ ಹೋಗುವ ಈ ಕ್ರಿಯೆಗೆ ಹೊರಗಿನಿಂದ ವಿಮುಖ ರಾಗುವುದು ಅಗತ್ಯವೇ? ಇಂದಿನ ದಿನಗಳಲ್ಲಿ ಇದಕ್ಕೆ ಏಕಿಷ್ಟು ಮಹತ್ವ ದೊರೆತಿದೆ- ಇತ್ಯಾದಿ ಪ್ರಶ್ನೆಗಳಿಗೆ ಸಮಾಧಾನವನ್ನು ಶೋಧಿಸುವ ಪ್ರಯತ್ನವಿದು.
ಧ್ಯಾನವೆಂದರೆ ಏನು?: ಹಾಗೆಂದರೆ ಆಳವಾದ ವಿಶ್ರಾಂತಿ ಮತ್ತು ಜಾಗೃತ ಸ್ಥಿತಿ- ಈ ಎರಡನ್ನೂ ಒಂದೇ ಸಮಯಕ್ಕೆ ಏಕತ್ರಗೊಳಿಸಿದ ಸ್ಥಿತಿ! ಇದು ಋಷಿ-ಮುನಿಗಳಿಗೆ ಮಾತ್ರವೇ ಹೊಂದುವಂಥದ್ದು ಎಂಬ ತೀರ್ಮಾನಕ್ಕೆ ಈಗಲೇ ಬರಬೇಡಿ. ಸರಳವಾಗಿ ಹೇಳುವುದಾದರೆ, ಕುದಿಯುತ್ತಿರುವ ಮೈ-ಮನಗಳನ್ನು ಶಾಂತಗೊಳಿಸಿ, ನಮ್ಮೊಳಗಿನ ಉಲ್ಲಾಸವನ್ನು ಎಚ್ಚ ರಿಸುವ ಕ್ರಿಯೆಯಿದು. ಏನನ್ನೂ ಮಾಡದೆ, ಅಂದರೆ ಮೆದುಳಿಗೂ ಕೆಲಸ ನೀಡದೆ, ಎಲ್ಲವನ್ನೂ ಬಿಟ್ಟು ಆಳವಾದ ವಿಶ್ರಾಂತಿಗೆ ಜಾರುವುದು, ಆದರೆ ನಿದ್ದೆ ಮಾಡದೆ ಜಾಗೃತ ಅವಸ್ಥೆಯಲ್ಲೇ ಇರುವುದು ಈ ಕ್ರಮದ ಮುಖ್ಯವಾದ ಅಂಗ. ದೇಹಕ್ಕೆ ಆಹಾರ ನೀಡಿದಂತೆ ಮನಸ್ಸಿಗೂ ಗ್ರಾಸ ಬೇಡವೇ?
ಏಕೆ ಮಾಡಬೇಕು?: ಬದುಕಿನ ಇನ್ನೊಂದು ಹೆಸರೇ ಒತ್ತಡ ಎನ್ನುವಂತಿರುವಾಗ, ಈ ಚಕ್ರವ್ಯೂಹದಿಂದ ಹೊರಬರುವುದು ಹೇಗೆ? ಹೊರಗಿನ ಗದ್ದಲದಲ್ಲಿ ಆಂತರ್ಯದ ದನಿಯನ್ನು ಕೇಳುವುದು ಹೇಗೆ? ನೂರೆಂಟು ಗೋಜಲುಗಳ ನಡುವೆ ನಮಗೆ ಬೇಕಾದ್ದಕ್ಕೆ ಗಮನ ಕೊಡುವುದು ಸಾಧ್ಯವೇ? ಯಶಸ್ಸಿನ ಹಿಂದೆ ಓಡುವಾಗ ನಮ್ಮ ಕೈಗೆ ದೊರೆಯುತ್ತಿರುವುದೇನು ಎಂಬ ಗಮನವಾದರೂ ಇದೆಯೇ ನಮಗೆ? ಹಾಳಾಗುತ್ತಿರುವ ಆರೋಗ್ಯವನ್ನು ಮಾತ್ರೆಗಳು ಮಾತ್ರವೇ ಸರಿ ಮಾಡಿಯಾವೇ? ಇವಕ್ಕೆಲ್ಲ ಉತ್ತರ ಹುಡುಕಬೇಕೆಂದರೆ ಮೊದಲು ಮನಸ್ಸು ಶಾಂತವಾಗಬೇಕು. ಉದ್ರಿಕ್ತ ಮನದಿಂದ ಉತ್ತರ ಹುಡುಕಲು ಸಾಧ್ಯವಿಲ್ಲ. ಮೊದಲು ಮನಸ್ಸಿಗೆ ಸಮಾಧಾನ ದೊರೆತ ಮೇಲಷ್ಟೇ ಪ್ರಶ್ನೆಗಳಿಗೆ ಸಮಾಧಾನ ದೊರೆಯುವುದಕ್ಕೆ ಸಾಧ್ಯ. ಈಗ ನೀವೆ ಹೇಳಿ, ಧ್ಯಾನವನ್ನು ಏಕೆ ಮಾಡಬೇಕು?
ಲಾಭಗಳೇನು?:
- ಎಲ್ಲಕ್ಕಿಂತ ಮೊದಲು ನಮಗೆ ಅರಿವಿಗೆ ಬರುವ ಪ್ರಯೋಜನವೆಂದರೆ ಶರೀರದ ಚೈತನ್ಯ ಹೆಚ್ಚುವುದು. ನಮ್ಮ ಆಲೋಚನೆ, ಕ್ರಿಯೆ ಮತ್ತು ಉಸಿರಾಟಕ್ಕೂ ನಮ್ಮಲ್ಲಿ ಪ್ರವಹಿಸುವ ಚೈತನ್ಯಕ್ಕೂ ಗಾಢವಾದ ನಂಟಿದೆ. ಈ ಚೈತನ್ಯವೇ ನಮ್ಮಲ್ಲಿ ಧನಾತ್ಮಕ ಆಲೋಚನೆಗಳನ್ನು ಉಂಟು ಮಾಡುವುದು.
- ಎರಡನೆಯ ಪ್ರಯೋಜನವೆಂದರೆ ನಮ್ಮ ಆರೋಗ್ಯದಲ್ಲಿನ ಸುಧಾರಣೆ. ಅಂದರೆ ರಕ್ತದೊತ್ತಡ, ಮಧುಮೇಹ, ಹೃದಯದ ತೊಂದರೆಗಳು, ಜೀರ್ಣಾಂಗದ ಸಮಸ್ಯೆಗಳು, ಚರ್ಮದ ತೊಂದರೆಗಳು ಮುಂತಾದ ಹಲವಾರು ಸಮಸ್ಯೆಗಳಿಗೆ ಮನಸ್ಸನ್ನು ಶಾಂತವಾಗಿ ಇರಿಸಿಕೊಳ್ಳುವುದು ಪ್ರಬಲ ಔಷಧಿಯಾಗಿ ಕೆಲಸ ಮಾಡುತ್ತದೆ.
- ಮೂರನೆಯದಾಗಿ, ದೇಹ ಮತ್ತು ಮನಸ್ಸುಗಳ ವಿಕಾರಗಳನ್ನು ಮಟ್ಟ ಹಾಕಲು ಇದು ಅಗತ್ಯ. ಬೇಡದ ಆಲೋಚನೆಗಳನ್ನು ತಡೆಯುತ್ತಿದ್ದಂತೆ ನಿದ್ದೆ ಸುಲಲಿತವಾಗಿ ಬರುತ್ತದೆ. ನಿದ್ರಾಹೀನತೆಯಿಂದ ದಾಂಗುಡಿ ಇಡುವ ಲೆಕ್ಕವಿಲ್ಲದಷ್ಟು ಸಮಸ್ಯೆಗಳನ್ನು ದೂರ ಇರಿಸಬಹುದು.
- ಇವೆಲ್ಲ ಕಣ್ಣಮುಂದೆ ಕಾಣುವಂಥ ಪ್ರಯೋಜನಗಳು. ಅದಲ್ಲದೆ, ಮಾನಸಿಕ ಏಕಾಗ್ರತೆ, ನೆನಪಿನ ಶಕ್ತಿ ಹೆಚ್ಚಳ, ವಿವೇಕ ಜಾಗೃತವಾಗುವುದು, ಯೋಚನೆಯಲ್ಲಿ ಸ್ಪಷ್ಟತೆ, ಗೊಂದಲ ದೂರವಾಗುವುದು, ಒತ್ತಡ ನಿವಾರಣೆ, ಸಂವಹನದಲ್ಲಿ ಸ್ಪಷ್ಟತೆ, ಹೊಸ ಆಲೋಚನೆಗಳು ಹುಟ್ಟುವುದು, ಕಲಿಯುವಲ್ಲಿನ ಚುರುಕುತನ, ಆತ್ಮವಿಶ್ವಾಸ ವೃದ್ಧಿ, ನಿರುಮ್ಮಳತೆ- ಇವೆಲ್ಲ ನಮ್ಮ ಮಾನಸಿಕ ಸ್ಥಿತಿ ಸುಧಾರಿಸಿದ್ದರಿಂದ ಆಗುವ ನೇರ ಪ್ರಯೋಜನಗಳು. ಧ್ಯಾನಸ್ಥರಾಗಿ ಕೂರುವುದಕ್ಕೆ ಇದಕ್ಕಿಂತ ಹೆಚ್ಚಿನ ಕಾರಣಗಳು ಬೇಕೆ?
ಒತ್ತಡದಿಂದ ಬಿಡುಗಡೆಗೆ ದೀರ್ಘವಾಗಿ ಉಸಿರಾಡಿ:
ಎತ್ತಣವೂ ಇರುವುದು ಒತ್ತಡವೊಂದೇ ಈ ಲೋಕದಲ್ಲಿ. ಹಾಗೆಂದು ಉಬ್ಬೆ ಹಾಕಿದಂಥ ಬದುಕನ್ನು ಅಂತೆಯೇ ಬದುಕ ಲಾದೀತೆ? ಈ ಒತ್ತಡದಿಂದ ಬಿಡುಗಡೆಯ ನಿಟ್ಟುಸಿರೊಂದು ಬರಬೇಡವೇ? ಅದಕ್ಕಾಗಿ ಉಸಿರನ್ನೇ ನೆಚ್ಚಿಕೊಳ್ಳಿ ಎನ್ನುತ್ತಾರೆ ಯೋಗಾಸಕ್ತರು. ಉಸಿರನ್ನು ನಾನಾ ಅವಧಿಗಳು, ಆವರ್ತನಗಳು ಮತ್ತು ಪ್ರಮಾಣಗಳಲ್ಲಿ ಹಿಡಿಯುವ ಮತ್ತು ಬಿಡುವ ಮೂಲಕ ಮನಸ್ಸು ಮತ್ತು ದೇಹವನ್ನು ಏಕತ್ರಗೊಳಿಸುವ ಕ್ರಮವೆಂದೇ ಪ್ರಾಣಾಯಾಮ ಪ್ರಖ್ಯಾತವಾಗಿದೆ. ಬೇಡದ ವಸ್ತು ಮತ್ತು ಶಕ್ತಿಗಳಿಂದ ದೇಹ-ಮನಸ್ಸುಗಳನ್ನು ಮುಕ್ತಗೊಳಿಸುವುದರ ಜೊತೆಗೆ, ದೇಹಕ್ಕೆ ಆಮ್ಲಜನಕದ ಹರಿವನ್ನು ಹೆಚ್ಚಿಸಿ, ಒತ್ತಡ ನಿವಾರಿಸುವ ಗುಣವನ್ನಿದು ಹೊಂದಿದೆ. ಹೌದು, ಕೆಲವು ಉಸಿರಾಟದ ತಂತ್ರಗಳಿಂದ ಒತ್ತಡ ನಿವಾರಣೆ ಮಾಡಿ, ಮನಸಿಗೆ ನೆಮ್ಮದಿಯನ್ನೂ ದೇಹಕ್ಕೆ ಆರೋಗ್ಯವನ್ನೂ ತಂದುಕೊಳ್ಳಬಹುದು. ಏನು ತಂತ್ರಗಳವು? ಸ್ವಾಸ್ಥ್ಯ ಹೆಚ್ಚಳಕ್ಕೆ ಹೇಗೆ ಉಸಿರಾಡಬೇಕು- ಎಂಬೆಲ್ಲ ಮಾಹಿತಿಗಳು ಇಲ್ಲಿವೆ.
ಭ್ರಾಮರಿ: ಹೊರಗಿನ ಶಬ್ದಗಳು ಅತಿಯಾದಾಗ ಒಳಗಿನ ಧ್ವನಿ ಕೇಳುವುದಿಲ್ಲ. ಆಗ ಹೊರಗದ್ದಲವನ್ನು ಲಯ ಮಾಡುವ ಇನ್ನೊಂದು ಧ್ವನಿ ಒಳಗಿನಿಂದ ಬೇಕಾಗುತ್ತದೆ. ಇದಕ್ಕೆ ಭ್ರಾಮರಿ ಪ್ರಾಣಾಯಾಮವನ್ನು ಉದಾಹರಿಸಬಹುದು. ಅಂದರೆ, ದುಂಬಿ ಝೇಂಕಾರದಂಥ ದನಿಯನ್ನು ಮಾಡುವ ಉಸಿರಾಟದ ಕ್ರಮವಿದು. ಹೊರಗಿನ ಗಲಾಟೆಯನ್ನು ಕೇಳದಂತೆ ಮಾಡಿ, ನಮ್ಮ ಆಂತರ್ಯದ ದನಿಗೆ ಕಿವಿಯಾಗಿಸುವ ತಂತ್ರವಿದು.
4-4ರ ಉಸಿರಾಟ: ಉಸಿರಾಟ ಕ್ರಮ ಯಾವುದೇ ಆದರೂ, ನಮ್ಮ ಗಮನ ಸಂಪೂರ್ಣವಾಗಿ ಇರಬೇಕಾದ್ದು ಉಸಿರಿನ ಮೇಲೆಯೇ. ನಮ್ಮ ಗಮನ ಕೇಂದ್ರೀಕರಿಸಲು ಸೂಕ್ತವಾದಂಥ ಈ ೪-೪ರ ಕ್ರಮಕ್ಕೆ ಬಾಕ್ಸ್ ಕ್ರಮ ಎಂದೂ ಕರೆಯ ಲಾಗುತ್ತದೆ. ಅಂದರೆ, 4 ಸೆಕೆಂಡ್ ಉಸಿರು ಒಳಗೆ ತೆಗೆದುಕೊಳ್ಳಿ (ಪೂರಕ), 4 ಸೆಕೆಂಡ್ ಉಸಿರು ನಿಲ್ಲಿಸಿ (ಕುಂಭಕ), 4 ಸೆಕೆಂಡ್ ಉಸಿರು ಹೊರಗೆ ಬಿಡಿ (ರೇಚಕ), 4 ಸೆಕೆಂಡ್ ನಿಲ್ಲಿಸಿ (ಕುಂಭಕ)- ಇದನ್ನೇ ಪುನರಾವರ್ತಿಸಿ. ಮಂಗನಂತಾಡುವ ಮನಸ್ಸನ್ನು ಒಂದೆಡೆ ನಿಲ್ಲಿಸಲು ಇದು ಸೂಕ್ತ.
ಕಪಾಲಭಾತಿ: ಶಬ್ದದ ಅರ್ಥ ತಲೆಬುರುಡೆಯ ಬೆಳಕು ಎಂಬುದಾಗಿ! ಆದರೆ ಸಶಕ್ತವಾಗಿ ಉಸಿರನ್ನು ಒಳಗೆಳೆದುಕೊಳ್ಳುವ ಈ ತಂತ್ರದಿಂದ ದೇಹದ ಯಾವುದೇ ನಾಡಿ ಮತ್ತು ಚಕ್ರಗಳಲ್ಲಿ ಇರಬಹುದಾದ ತಡೆಯನ್ನು ನಿವಾರಿಸುವ ವಿಧಾನವಾಗಿ ಇದು ಬಳಕೆಯಾಗುತ್ತದೆ. ಮಾತ್ರವಲ್ಲ, ಶರೀರವನ್ನು ಡಿಟಾಕ್ಸ್ ಮಾಡಿ, ನರ, ಪರಿಚಲನೆ, ಎದೆ ಮತ್ತು ಕಿಬ್ಬೊಟ್ಟೆಗಳನ್ನು ಸಶಕ್ತ ಮಾಡುವಂಥ ಕ್ಲಿಷ್ಟ ಎನ್ನಬಹುದಾದ ಉಸಿರಾಟವಿದು. ಇದನ್ನು ಷಟ್ಕ್ರಿಯೆಗಳಲ್ಲಿ ಒಂದು ಎಂದೂ ಹೇಳಲಾಗುತ್ತದೆ.
4-7-8ರ ಉಸಿರಾಟ: ಒತ್ತಡ ನಿವಾರಣೆಗೆ ಈ ಉಸಿರಾಟದ ತಂತ್ರ ಅತ್ಯಂತ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಈ ಕ್ರಮದಲ್ಲಿ, 4 ಸೆಕೆಂಡ್ ಉಸಿರು ಒಳಗೆಳೆದುಕೊಳ್ಳಿ, 7ಸೆಕೆಂಡ್ ನಿಲ್ಲಿಸಿ, 9ಸೆಕೆಂಡ್ಗೆ ಉಸಿರನ್ನು ಬಾಯಿಯಿಂದ ನಿಧಾನಕ್ಕೆ ಹೊರಗೆ ಬಿಡಿ. ಅಂದರೆ 4 ಸೆಕೆಂಡ್ ಪೂರಕ, ,7 ಸೆಕೆಂಡ್ ಕುಂಭಕ, 8 ಸೆಕೆಂಡ್ಗಳ ರೇಚಕವನ್ನು ಹಲವಾರು ನಿಮಿಷಗಳ ಕಾಲ ಪುನರಾವರ್ತಿಸುವುದು ಕ್ರಮ.
ಭಸ್ತ್ರಿಕಾ: ಕಿಡಿಗೆ ತಿದಿಯೂದಿದಂತೆ ಉಸಿರಾಡುವ ಕ್ರಮವೆಂದು ಇದನ್ನು ಬಣ್ಣಿಸಬಹುದು. ಏಕೋ ಬೆಳಗ್ಗೆ ಎದ್ದಾಗಿನಿಂದ ಸುಸ್ತು, ಶಕ್ತಿಯೇ ಇಲ್ಲ ಎಂಬಂಥ ಸಮಯದಲ್ಲಿ ಮೂರು ಆವರ್ತ ಭಸ್ತ್ರಿಕಾ ಮಾಡುವುದು ನೆರವಾಗಬಹುದು. ದೀರ್ಘವಾಗಿ ಮತ್ತು ಸಶಕ್ತವಾಗಿ ಉಸಿರನ್ನು ಎಳೆದುಕೊಳ್ಳುವುದು ಮತ್ತು ಬಿಡುವುದು ಇದರ ವೈಶಿಷ್ಟ್ಯ. ದೇಹ ಮತ್ತು ಮನಸ್ಸುಗಳ ಅಗ್ನಿಯನ್ನು ಪ್ರಖರವಾಗಿ ಜ್ವಲಿಸುವಂತೆ ಮಾಡಿ, ಅಜೀರ್ಣದಂಥ ತೊಂದರೆಯನ್ನು ನಿವಾರಣೆ ಮಾಡುತ್ತದೆ.
ಇದನ್ನು ಓದಿ: Health Tips: ಫಲವಂತಿಕೆ ಹೆಚ್ಚಿಸಲು ಯೋಗ ನೆರವಾಗಬಲ್ಲದು; ಗೊತ್ತೇ?
ನಾಡಿಶೋಧನ: ನಿಮ್ಮ ಕೆಲಸದಲ್ಲಿ ಶ್ರದ್ಧೆ, ಗಮನವನ್ನು ಕೇಂದ್ರೀಕರಿಸಲಾಗುತ್ತಿಲ್ಲವೇ? ಒಂಬತ್ತು ಸುತ್ತುಗಳ ನಾಡಿಶೋಧನ ಪ್ರಾಣಾಯಾಮ ಇದಕ್ಕೆ ಉಪಶಮನ ನೀಡಬಲ್ಲದು. ನಾಡಿಗಳಲ್ಲಿರುವ ತಡೆಗಳನ್ನು ನಿವಾರಿಸಿ, ಪ್ರಾಣಶಕ್ತಿಯ ಸಂಚಾರವನ್ನು ಸುಸೂತ್ರ ಮಾಡುವ ಅರ್ಥದಲ್ಲೇ ಈ ಪ್ರಾಣಾಯಾಮಕ್ಕೆ ಹೆಸರಿಡಲಾಗಿದೆ. ಮೂಗಿನ ಹೊಳ್ಳೆಗಳಲ್ಲಿ ಒಂದನ್ನು ಮುಚ್ಚಿಕೊಂಡು ಇನ್ನೊಂದರಲ್ಲಿ ಉಸಿರೆಳೆದುಕೊಂಡು, ಉಸಿರು ಬಿಡುವಾಗ ಮುಚ್ಚಿದ ಹೊಳ್ಳೆಯನ್ನು ತೆರೆದು, ತೆರೆದಿದ್ದನ್ನು ಮುಚ್ಚಿಕೊಳ್ಳುವುದು. ದೇಹದ ತ್ರಿದೋಷಗಳನ್ನು ಸಮತೋಲನಕ್ಕೆ ತರುವ ಸಾಧ್ಯತೆ ಈ ರೀತಿಯ ಉಸಿರಾಟಕ್ಕಿದೆ.
ಶೀತಲಿ: ಬೇಡದ ಯೋಚನೆಗಳಿಂದ ತಲೆ ಕೆಟ್ಟು ಗೊಬ್ಬರವಾಗಿದೆಯೇ? ಮೈಮನಸ್ಸುಗಳನ್ನು ಶೀತಲಗೊಳಿಸುವ ಉಸಿರಾಟದ ತಂತ್ರವಿದು. ನಾಲಿಗೆಯನ್ನು ಹೊರಗೆ ಚಾಚಿ, ಸುರುಳಿ ಸುತ್ತಿ. ಇದರ ಮೂಲಕ ಉಸಿರನ್ನು ದೀರ್ಘವಾಗಿ ಒಳಗೆಳೆದುಕೊಳ್ಳಿ. ನಂತರ ಮೂಗಿನಿಂದ ಉಸಿರನ್ನು ಹೊರಗೆ ಬಿಡಿ. ಇದನ್ನೇ ಪುನರಾವರ್ತಿಸಿ. ಯೋಚನೆಗಳಿಂದ ಕಾದ ದೇಹ-ಮನಸ್ಸಿಗೆ ಈ ಮೂಲಕ ತಂಪೆರೆಯಬಹುದು.