Kittur News: ಪಟ್ಟಣ ಪಂಚಾಯಿತಿ ವಿರುದ್ಧ ಸುಳ್ಳು ಆರೋಪ; ವೈಯಕ್ತಿಕ ಲಾಭಕ್ಕಾಗಿ ದಯಾಮರಣದ ನಾಟಕವಾಡಿದ ದಂಪತಿ!
ಕಿತ್ತೂರು ಪಟ್ಟಣದ ಪಟ್ಟಣದ ನಿವಾಸಿಗಳಾದ ಮಂಜುನಾಥ ರುದ್ರಪ್ಪ ಸವದಿ ಮತ್ತು ಶೃತಿ ಮಂಜುನಾಥ ಸವದಿ ದಂಪತಿ, ನಮಗೆ ಉದ್ದೇಶಪೂರ್ವಕವಾಗಿ ಪಟ್ಟಣ ಪಂಚಾಯತಿ ಅಧಿಕಾರಿಗಳು ಕುಡಿಯುವ ನೀರಿನ ಸಂಪರ್ಕ ಕಡಿತಗೊಳಿಸಿದ್ದಾರೆ ಎಂಬ ಗಂಭೀರ ಆರೋಪ ಮಾಡಿ ತಹಸೀಲ್ದಾರರಿಗೆ ಮನವಿ ಸಲ್ಲಿಸಿದ್ದರು. ಆದರೆ, ಇದು ಸುಳ್ಳು ಆರೋಪ ಎಂದು ತಿಳಿದುಬಂದಿದೆ.
-
ಬೆಳಗಾವಿ: ಕುಡಿಯುವ ನೀರಿನ ಸಂಪರ್ಕವನ್ನು ಉದ್ದೇಶಪೂರ್ವಕವಾಗಿ ಸ್ಥಗಿತಗೊಳಿಸಿದ್ದಾರೆ ಎಂದು ಚೆನ್ನಮ್ಮನ ಕಿತ್ತೂರು ಪಟ್ಟಣ ಪಂಚಾಯಿತಿ ವಿರುದ್ಧ ಗಂಭೀರ ಆರೋಪ ಮಾಡಿದ್ದ ಕುಟುಂಬದ ಅಸಲಿಯತ್ತು ಬಯಲಾಗಿದ್ದು, ವೈಯಕ್ತಿಕ ಲಾಭಕ್ಕಾಗಿ ದಯಾಮರಣ ನಾಟಕ ಮಾಡಿದ್ದು ಕಂಡುಬಂದಿದೆ.
ಕಿತ್ತೂರು ಪಟ್ಟಣದ ಪಟ್ಟಣದ ನಿವಾಸಿಗಳಾದ ಮಂಜುನಾಥ ರುದ್ರಪ್ಪ ಸವದಿ ಹಾಗೂ ಶೃತಿ ಮಂಜುನಾಥ ಸವದಿ ಎಂಬುವವರು ನಮಗೆ ಉದ್ದೇಶಪೂರ್ವಕವಾಗಿ ಪಟ್ಟಣ ಪಂಚಾಯತಿ ಅಧಿಕಾರಿಗಳು ಕುಡಿಯುವ ನೀರಿನ ಸಂಪರ್ಕ ಕಡಿತಗೊಳಿಸಿದ್ದಾರೆ ಎಂಬ ಗಂಭೀರ ಆರೋಪ ಮಾಡಿ ತಹಸೀಲ್ದಾರರಿಗೆ ಮನವಿ ಸಲ್ಲಿಸಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಬಂಧಪಟ್ಟ ಅಧಿಕಾರಿಗಳನ್ನು ವಿಶ್ವವಾಣಿ ಸಂಪರ್ಕಿಸಿದಾಗ ಮಂಜುನಾಥ ದಂಪತಿ ಸುಳ್ಳು ಆರೋಪ ಮಾಡಿರುವುದು ತಿಳಿದುಬಂದಿದೆ. ಸವದಿ ಕುಟುಂಬ ಈಗಾಗಲೇ ವಾಸವಿರುವ ಮನೆಯನ್ನು ಮಾರಾಟ ಮಾಡಲು ನಿರ್ಧರಿಸಿದ್ದಲ್ಲದೆ ವ್ಯಕ್ತಿಯೊಬ್ಬರಿಗೆ ಮನೆಯವರು ಸೇರಿಕೊಂಡು ಮಾರಾಟ ಮಾಡಿದ್ದಾರೆ.
ಈಗಾಗಲೇ ಮನೆಯ ಸಂಬಂಧಿಸಿದ ಮೂರು ಕುಟುಂಬಗಳು ಮಾರಾಟವಾದ ಆಸ್ತಿ ತೊರೆದಿದ್ದು ಮಂಜುನಾಥ ದಂಪತಿ ವೈಯಕ್ತಿಕ ಲಾಭಕ್ಕಾಗಿ ನೀರಿನ ವಿಷಯ ಇಟ್ಟುಕೊಂಡು ಸುಳ್ಳು ಆರೋಪ ಮಾಡಿದ್ದಲ್ಲದೆ, ವೈಯಕ್ತಿಕ ಲಾಭ ಪಡೆಯಲು ಯತ್ನಿಸಿದ್ದಾರೆ. ಜೊತೆಗೆ ಮನೆಯ ಮೂಲ ಮಾಲೀಕರು ಮನೆಯ ನೀರಿನ ಸಂಪರ್ಕವನ್ನು ಸ್ಥಗಿತಗೊಳಿಸುವಂತೆ ಕೆಲ ತಿಂಗಳ ಹಿಂದೆಯೇ ಪಟ್ಟಣ ಪಂಚಾಯತಿಗೆ ಮನವಿ ಪತ್ರವನ್ನೂ ಸಲ್ಲಿಸಿರುವುದು ಬೆಳಕಿಗೆ ಬಂದಿದೆ.
ನೀರಿನ ಸಂಪರ್ಕ ಕಡಿತಗೊಳಿಸುವಂತೆ ಮನವಿ ಪತ್ರ:
ಕಿತ್ತೂರು ಪಟ್ಟಣದ ಗುರುವಾರ ಪೇಟೆಯ ನಿವಾಸಿ ರಾಜು ಸವದಿ ಎಂಬುವವರು ತಮ್ಮ ಮನೆಯನ್ನು ಮಾರಾಟ ಮಾಡಿರುವ ಹಿನ್ನೆಲೆಯಲ್ಲಿ ಕುಡಿಯುವ ನೀರಿನ ಸಂಪರ್ಕ ಕಡಿತಗೊಳಿಸುವಂತೆ ಪಟ್ಟಣ ಪಂಚಾಯತಿಗೆ ಜೂನ್ 19 ರಂದು ಪತ್ರ ಬರೆದು ಮನವಿ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ನೀರಿನ ಸಂಪರ್ಕ ಕಡಿತ ಮಾಡಿದ್ದಾರೆ. ಆದರೆ ಮಂಜುನಾಥ ದಂಪತಿಗಳು ಕುಟುಂಬದ ವ್ಯಾಜ್ಯವನ್ನು ಭಾವನಾತ್ಮಕವಾಗಿ ಬಿಂಬಿಸುವ ಉದ್ದೇಶದಿಂದ ದಯಾಮರಣದ ನಾಟಕ ಮಾಡಿದ್ದಾರೆ ಎಂಬುದು ತಿಳಿದುಬಂದಿದೆ.