ನಾಳೆಯೇ ವಿಧಾನಸಭೆ ಚುನಾವಣೆ ನಡೆದರೂ ಬಿಜೆಪಿಗೆ ಬಹುಮತ ಬರುತ್ತೆ: ಬಿ.ವೈ.ವಿಜಯೇಂದ್ರ
Atal Bihari Vajpayee's birthday: ಅಟಲ್ ಜೀ, ಲಾಲ್ ಕೃಷ್ಣ ಅಡ್ವಾಣಿ ಜೀ ಅವರಂಥ ಶ್ರೇಷ್ಠರ ನಾಯಕತ್ವ ನಮಗೆ ಸಿಕ್ಕಿದೆ. ಮೋದೀಜಿ, ಅಮಿತ್ ಶಾ ಜೀ, ನಡ್ಡಾ ಜೀ ಅವರ ನೇತೃತ್ವದಲ್ಲಿ ಬಿಜೆಪಿ ದಾಪುಗಾಲು ಹಾಕುತ್ತಿದೆ. ಪಶ್ಚಿಮ ಬಂಗಾಲದಲ್ಲೂ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಮಾಜಿ ಪ್ರಧಾನಿ ವಾಜಪೇಯಿ ಜನ್ಮದಿನ ಆಚರಣೆ. -
ಬೆಂಗಳೂರು: ಅಟಲ್ಜೀ ಹೆಸರಿನ ಉಚ್ಚಾರಣೆಯೇ ನಮಗೆ ರೋಮಾಂಚನವನ್ನುಂಟು ಮಾಡುತ್ತದೆ. ಆ ಹೆಸರು ಪ್ರೇರಣೆ, ಉತ್ಸಾಹ ತುಂಬುತ್ತದೆ. ಅಂಥ ಶ್ರೇಷ್ಠ ವ್ಯಕ್ತಿತ್ವ ಅವರದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ತಿಳಿಸಿದ್ದಾರೆ. ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ನಡೆದ ಮಾಜಿ ಪ್ರಧಾನಿ, ಭಾರತರತ್ನ ದಿ. ಅಟಲ್ ಬಿಹಾರಿ ವಾಜಪೇಯಿ ಅವರ 101ನೇ ಜನ್ಮದಿನ (Atal Bihari Vajpayee's birthday) ಕಾರ್ಯಕ್ರಮದಲ್ಲಿ ಅವರು ಮಾತನಾಡಿದ್ದಾರೆ.
ವಾಜಪೇಯಿ ಅವರು ಹಲವಾರು ಬಾರಿ ಕರ್ನಾಟಕದಲ್ಲಿ ಪ್ರವಾಸ ಮಾಡಿದ್ದರು. ರಾಜ್ಯದಲ್ಲಿ ಬಿಜೆಪಿ ಸಂಘಟನೆಗೆ ಯಡಿಯೂರಪ್ಪ, ಶಂಕರಮೂರ್ತಿ, ರಾಮಚಂದ್ರೇಗೌಡ, ಜಗದೀಶ ಶೆಟ್ಟರ್, ಪಕ್ಷದ ಹಿರಿಯರಿಗೆ ಪ್ರೇರಣೆ ನೀಡಿದ ಮಹಾನ್ ನಾಯಕರು. ಕರ್ನಾಟಕವು ಮುಂದೊಂದು ದಿನ ದಕ್ಷಿಣ ಭಾರತದಲ್ಲಿ ಬಿಜೆಪಿಯ ಭದ್ರ ಕೋಟೆ ಆಗಲಿದೆ ಎಂಬ ದೂರದೃಷ್ಟಿತ್ವ ಅವರಲ್ಲಿತ್ತು. ಕಾರ್ಯಕರ್ತರ ಕುರಿತು ಅದಮ್ಯ ವಿಶ್ವಾಸ ಅವರದಾಗಿತ್ತು ಎಂದು ವಿವರಿಸಿದರು.
ಜವಾಹರಲಾಲ್ ನೆಹರು ಅವರು ಹಿಂದೆ ಪ್ರಧಾನಮಂತ್ರಿಯಾಗಿದ್ದಾಗ ಅಟಲ್ ಜೀ ಅವರ ಮಾತು, ಭಾಷಣವನ್ನು ಸಂಸತ್ತಿನಲ್ಲಿ ಕೇಳಿದಾಗ ಮುಂದೊಂದು ದಿನ ಅಟಲ್ ಅವರು ಪ್ರಧಾನಿ ಆಗಲಿದ್ದಾರೆ ಎಂದು ತಿಳಿಸಿದ್ದನ್ನು ನೆನಪಿಸಿದರು. ಸೋಲಿನಿಂದ ಅಂಜುವಂಥ ಪ್ರಶ್ನೆಯೇ ಇಲ್ಲ ಎಂದು ಅಟಲ್ ಜೀ ಅವರು ಹಿಂದೆ ಹೇಳಿದ್ದರು. ಬಿಜೆಪಿ ದೃಢವಾಗಿ ಕಟ್ಟುವ ಆತ್ಮವಿಶ್ವಾಸವನ್ನು ಕಾರ್ಯಕರ್ತರಲ್ಲಿ ಅವರು ತುಂಬಿದ್ದರು ಎಂದು ತಿಳಿಸಿದರು.

ಕಾಂಗ್ರೆಸ್ಸಿನ ಹಣೆಬರಹ ಬದಲಾಗಲು ಸಾಧ್ಯವಿಲ್ಲ
ವಾಜಪೇಯಿ ಅವರ ದೇಶಭಕ್ತಿ ನಮಗೆ ಪ್ರೇರಣೆ ಆಗಬೇಕು. ಅವರ ದೂರದೃಷ್ಟಿತ್ವವನ್ನು ಅರ್ಥ ಮಾಡಿಕೊಳ್ಳಿ. ಮೋದೀಜಿ ಅವರ ಸಬ್ ಕಾ ವಿಕಾಸ್ ಧ್ಯೇಯದೊಂದಿಗೆ ನಾವು ಮುನ್ನಡೆಯಬೇಕು. ಕಾಂಗ್ರೆಸ್ ಪಕ್ಷದ ಅಪಪ್ರಚಾರಗಳ ನಡುವೆಯೂ ಬಿಜೆಪಿ ನೇತೃತ್ವದ ಕೇಂದ್ರದ ಎನ್ಡಿಎ ಸರಕಾರವು ಭ್ರಷ್ಟಾಚಾರರಹಿತ ಆಡಳಿತವನ್ನು ನರೇಂದ್ರ ಮೋದಿಯವರು ನೀಡುತ್ತಿದ್ದಾರೆ. ಅಸ್ತಿತ್ವ ಕಳೆದುಕೊಳ್ಳುತ್ತಿರುವ ಕಾಂಗ್ರೆಸ್ಸಿನ ಸ್ಥಿತಿಯನ್ನು ರಾಜ್ಯದ ಪಟ್ಟಣ ಪಂಚಾಯಿತಿ ಚುನಾವಣೆ ತೋರಿಸಿಕೊಟ್ಟಿದೆ ಎಂದರು. ಇವಿಎಂ ಇರಲಿ; ಬ್ಯಾಲೆಟ್ ಇರಲಿ ಕಾಂಗ್ರೆಸ್ಸಿನ ಹಣೆಬರಹ ಬದಲಾಗಲು ಸಾಧ್ಯವಿಲ್ಲ ಎಂದು ವಿಜಯೇಂದ್ರ ಅವರು ನುಡಿದರು.
ಅಟಲ್ ಜೀ, ಲಾಲ್ ಕೃಷ್ಣ ಅಡ್ವಾಣಿ ಜೀ ಅವರಂಥ ಶ್ರೇಷ್ಠರ ನಾಯಕತ್ವ ನಮಗೆ ಸಿಕ್ಕಿದೆ. ಮೋದೀಜಿ, ಅಮಿತ್ ಶಾ ಜೀ, ನಡ್ಡಾ ಜೀ ಅವರ ನೇತೃತ್ವದಲ್ಲಿ ಬಿಜೆಪಿ ದಾಪುಗಾಲು ಹಾಕುತ್ತಿದೆ. ಪಶ್ಚಿಮ ಬಂಗಾಲದಲ್ಲೂ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಮ್ಮ ಸ್ವಯಂಕೃತ ಅಪರಾಧದಿಂದ ವಿಪಕ್ಷದಲ್ಲಿದ್ದೇವೆ. ನಾವ್ಯಾರೂ ಆತಂಕ ಪಡಬೇಕಿಲ್ಲ. ರಾಜ್ಯದ ಜನವಿರೋಧಿ, ಬಡವರ ವಿರೋಧಿ ಕಾಂಗ್ರೆಸ್ ಸರಕಾರದ ವಿರುದ್ಧ ಜನಕ್ರೋಶ ಹೆಚ್ಚಾಗಿದೆ. ಜನರು ಆಕ್ರೋಶ ಹೊರಹಾಕುತ್ತಿದ್ದಾರೆ. 2028ರಲ್ಲಿ ಅಥವಾ ನಾಳೆ ಚುನಾವಣೆ ನಡೆದರೂ ಕರ್ನಾಟಕದಲ್ಲಿ ಬಿಜೆಪಿ ಸ್ವಂತ ಶಕ್ತಿಯ ಮೇಲೆ 130-140 ಶಾಸಕರೊಂದಿಗೆ ಸ್ಪಷ್ಟ ಬಹುಮತ ಪಡೆದು ಅಧಿಕಾರಕ್ಕೆ ಬರಲಿದೆ. ನಾವೆಲ್ಲರೂ ಇದಕ್ಕಾಗಿ ಪಕ್ಷವನ್ನು ಬಲಪಡಿಸಬೇಕು ಎಂದು ಮನವಿ ಮಾಡಿದರು.
ಕಾಂಗ್ರೆಸ್ಸಿನವರು ಬಿಜೆಪಿ ಅಲ್ಪಸಂಖ್ಯಾತರ ವಿರೋಧಿ ಎನ್ನುತ್ತಾರೆ. ವಾಜಪೇಯಿ, ಮೋದೀಜಿ ಅಥವಾ ಬಿಜೆಪಿ ಅಲ್ಪಸಂಖ್ಯಾತರ ವಿರೋಧಿಯಲ್ಲ. ಯಾರು ಪಾಕಿಸ್ತಾನ್ ಜಿಂದಾಬಾದ್ ಎನ್ನುತ್ತಾರೋ ಅಂಥ ದೇಶದ್ರೋಹಿಗಳನ್ನು ಬಿಜೆಪಿ ವಿರೋಧಿಸುತ್ತದೆ ಎಂದು ತಿಳಿಸಿದರು.
ಹಿಂದುಳಿದ ವರ್ಗ, ದಲಿತರ ಒಳಿತಿಗೆ ಹೆಚ್ಚಿನ ಒತ್ತು - ಜಗದೀಶ್ ಶೆಟ್ಟರ್
ಅಟಲ್ ಜೀ ಅವರ ಕುರಿತಾದ ಸಾಹಿತ್ಯ ಕಿರು ಹೊತ್ತಗೆಯನ್ನು ಇದೇ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಮತ್ತು ಸಂಸದ ಜಗದೀಶ್ ಶೆಟ್ಟರ್ ಅವರು ಬಿಡುಗಡೆ ಮಾಡಿದರು. ಅಟಲ್ ಜೀ ಅವರ ಜತೆಗಿನ ಒಡನಾಟವನ್ನು ನೆನಪಿಸಿದರು. ಪೋಖ್ರಾನ್ ಅಣು ಪರೀಕ್ಷೆ ದೇಶಕ್ಕೆ ಹೆಮ್ಮೆ. ಇದಕ್ಕೆ ಅಟಲ್ ಬಿಹಾರಿ ವಾಜಪೇಯಿ ಅವರು ಕಾರಣ ಎಂದು ನುಡಿದರು. ವಾಜಪೇಯಿ ಅವರು ಇವತ್ತಿಗೂ ನಮ್ಮ ಮನಸ್ಸಿನಲ್ಲಿ ಇದ್ದಾರೆ ಎಂದು ತಿಳಿಸಿದರು. ಹಿಂದುಳಿದ ವರ್ಗ, ದಲಿತರ ಒಳಿತಿಗೆ ಹೆಚ್ಚಿನ ಒತ್ತು ಕೊಡುವಂಥ ಕೆಲಸ ಮಾಡಿದ್ದಾರೆ ಎಂದರು.
ಬಿಜೆಪಿ ದಿಲ್ ಚೋರಿ ಪಕ್ಷ- ಛಲವಾದಿ ನಾರಾಯಣಸ್ವಾಮಿ
ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಮಾತನಾಡಿ, ಅಟಲ್ ಜೀ ಅವರದು ನಿಷ್ಕಳಂಕ ನಾಯಕತ್ವ. ಅದರ ಮೂಲಕ ಅವರು ಉತ್ತಮ ನಾಯಕರಾಗಿ ಹೊರಹೊಮ್ಮಿದ್ದಾರೆ ಎಂದು ವಿವರಿಸಿದರು. ಬ್ಯಾಲೆಟ್ ಪೇಪರ್ನಲ್ಲಿ ನಮ್ಮ ಪರವಾಗಿ ನಿನ್ನೆ ಫಲಿತಾಂಶ ಬಂದಿದೆ. ಇದಕ್ಕಾಗಿ ರಾಜ್ಯಾಧ್ಯಕ್ಷ ವಿಜಯೇಂದ್ರರಿಗೆ ಸಿಹಿ ತಿನ್ನಿಸಲು ಮನವಿ ಮಾಡಿದರು. ಹಾಗಿದ್ದರೆ ಮತಗಳ್ಳತನ ಮಾಡಿದ್ದು ಯಾರು ಎಂದೂ ಅವರು ಪ್ರಶ್ನಿಸಿದರು. ಕಾಂಗ್ರೆಸ್ ಮತಗಳ್ಳರ ಪಕ್ಷ; ನಮ್ಮದು ದಿಲ್ ಚೋರಿ ಪಕ್ಷ ಎಂದು ವಿಶ್ಲೇಷಣೆ ಮಾಡಿದರು. ಬಿಜೆಪಿ ರಾಜ್ಯದಲ್ಲಿ ಗೆಲುವು ಸಾಧಿಸುವ ವಿಶ್ವಾಸ ವ್ಯಕ್ತಪಡಿಸಿದರು.
4 ಪಟ್ಟಣ ಪಂಚಾಯತ್ಗಳಲ್ಲಿ ಬಿಜೆಪಿಗೆ ಜಯಭೇರಿ; ವಿಜಯೇಂದ್ರ ಅಭಿನಂದನೆ
ವಿಧಾನಪರಿಷತ್ ಮುಖ್ಯ ಸಚೇತಕ ಎನ್. ರವಿಕುಮಾರ್, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್, ರಾಜ್ಯ ಉಪಾಧ್ಯಕ್ಷ ಎನ್. ಮಹೇಶ್, ರಾಜ್ಯ ಮುಖ್ಯ ವಕ್ತಾರ ಅಶ್ವತ್ಥನಾರಾಯಣ್, ರಾಜ್ಯ ಕಾರ್ಯಕಾರಿಣಿ ವಿಶೇಷ ಆಹ್ವಾನಿತರಾದ ಪೂರ್ಣಿಮಾ ಶ್ರೀನಿವಾಸ್, ಮಾಜಿ ಶಾಸಕ ಎಂ.ಡಿ. ಲಕ್ಷ್ಮೀನಾರಾಯಣ್, ವಿಧಾನಪರಿಷತ್ ಮಾಜಿ ಸದಸ್ಯ ವೈ.ಎ.ನಾರಾಯಣಸ್ವಾಮಿ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಅಟಲ್ ಶತಮಾನೋತ್ಸವ ಕಾರ್ಯಕ್ರಮದ ರಾಜ್ಯ ಸಂಚಾಲಕ ಜಗದೀಶ್ ಹಿರೇಮನಿ ಮತ್ತು ಪಕ್ಷದ ಮುಖಂಡರು ಉಪಸ್ಥಿತರಿದ್ದರು.