ಕೊರಟಗೆರೆಯ ನೇಗಿಲ ಸಿದ್ದ ಎಫ್ಪಿಓಗೆ ʼಸಿಐಐ ಎಫ್ಪಿಓ ಉತ್ಕೃಷ್ಟತಾ ಪ್ರಶಸ್ತಿ-2025ʼ
ಈಶ ಔಟ್ರೀಚ್ನ ಬೆಂಬಲದೊಂದಿಗೆ ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ತೋವಿನಕೆರೆಯ ನೇಗಿಲ ಸಿದ್ದ ರೈತ ಉತ್ಪಾದಕ ಸಂಸ್ಥೆಯು ಕೊರಟಗೆರೆಯ ಮೊದಲ ಹುಣಸೆಹಣ್ಣು ಸಂಸ್ಕರಣಾ ಘಟಕವನ್ನು ಪರಿಚಯಿಸಿದ್ದಕ್ಕಾಗಿ ಫಾರ್ಮರ್ ಪ್ರೊಡ್ಯೂಸರ್ ಕಂಪನಿ ಲಿಮಿಟೆಡ್ (ಎಫ್ಪಿಸಿಎಲ್) ಪ್ರತಿಷ್ಠಿತ ಸಿಐಐ ಎಫ್ಪಿಓ ಉತ್ಕೃಷ್ಟತಾ ಪ್ರಶಸ್ತಿಗಳು 2025 ರಲ್ಲಿ ಮೌಲ್ಯವರ್ಧನೆ ಮತ್ತು ಬ್ರ್ಯಾಂಡಿಂಗ್ ವಿಭಾಗದಲ್ಲಿ ರನ್ನರ್-ಅಪ್ ಪ್ರಶಸ್ತಿ ಪಡೆದಿದೆ. ಈ ಕುರಿತ ವಿವರ ಇಲ್ಲಿದೆ.
ನೇಗಿಲ ಸಿದ್ಧ ಎಫ್ಪಿಓ ಪ್ರತಿನಿಧಿಗಳಿಗೆ ಸಿಐಐ ಎಫ್ಪಿಓ ಉತ್ಕೃಷ್ಟತಾ ರನ್ನರ್ ಅಪ್ ಪ್ರಶಸ್ತಿ ವಿತರಣೆ. -
ಬೆಂಗಳೂರು, ಡಿ.13: ತುಮಕೂರು ಜಿಲ್ಲೆಯ ಕೊರಟಗೆರೆಯಲ್ಲಿ ಮೊದಲ ಹುಣಸೆಹಣ್ಣು ಸಂಸ್ಕರಣಾ ಘಟಕವನ್ನು ಸ್ಥಾಪಿಸಿದ್ದಕ್ಕಾಗಿ ನೇಗಿಲ ಸಿದ್ಧ ರೈತ ಉತ್ಪಾದಕ ಸಂಸ್ಥೆಗೆ (Negila Siddha FPO) ಫಾರ್ಮರ್ ಪ್ರೊಡ್ಯೂಸರ್ ಕಂಪನಿ ಲಿಮಿಟೆಡ್ನ (ಎಫ್ಪಿಸಿಎಲ್) ಪ್ರತಿಷ್ಠಿತ ಸಿಐಐ ಎಫ್ಪಿಓ ಉತ್ಕೃಷ್ಟತಾ ಪ್ರಶಸ್ತಿಗಳು 2025ರಲ್ಲಿ (CII FPO Excellence Awards 2025) ಮೌಲ್ಯವರ್ಧನೆ ಮತ್ತು ಬ್ರ್ಯಾಂಡಿಂಗ್ ವಿಭಾಗದಲ್ಲಿ ರನ್ನರ್ ಅಪ್ ಪ್ರಶಸ್ತಿ ದೊರೆತಿದೆ.
ಈಶ ಔಟ್ರೀಚ್ನ ಬೆಂಬಲದೊಂದಿಗೆ ನೇಗಿಲ ಸಿದ್ಧ ರೈತ ಉತ್ಪಾದಕ ಸಂಸ್ಥೆಯು ಕೊರಟಗೆರೆಯಲ್ಲಿ ಹುಣಸೆಹಣ್ಣು ಸಂಸ್ಕರಣಾ ಘಟಕ ಪರಿಚಯಿಸಿದೆ. ಇದು ಏಕರೂಪದ ಶುದ್ಧೀಕರಣ ಮತ್ತು ಶ್ರೇಣೀಕರಣದ ಮೂಲಕ ಉತ್ಪನ್ನದ ಗುಣಮಟ್ಟವನ್ನು ಹೆಚ್ಚಿಸಿದೆ. ಅಲ್ಲದೇ ಯಾಂತ್ರೀಕರಣದ ಮೂಲಕ ಕಾರ್ಮಿಕ ವೆಚ್ಚವನ್ನು ಕಡಿಮೆ ಮಾಡಿದ್ದು, ಸಂಸ್ಕರಣೆ ಹಾಗೂ ಪ್ಯಾಕೇಜಿಂಗ್ನಲ್ಲಿ ಉದ್ಯೋಗಗಳನ್ನು ಸೃಷ್ಟಿಸುವ ಮೂಲಕ ಮಹಿಳೆಯರು ಮತ್ತು ಯುವಕರಿಗೆ ಹೊಸ ಜೀವನೋಪಾಯದ ಅವಕಾಶಗಳನ್ನು ತೆರೆದಿದೆ. ಸಂಸ್ಥೆಯ ಅಧ್ಯಕ್ಷ ದೊಡ್ಡಯ್ಯ, ನಿರ್ದೇಶಕ ರಮೇಶ್ ಎಂ.ಎನ್ ಮತ್ತು ಈಶ ಔಟ್ರೀಚ್ನ ಸ್ವಾಮಿ ಕೇದಾರ ಅವರು ಸಂಸ್ಥೆಯ ಪರವಾಗಿ ಪ್ರಶಸ್ತಿಯನ್ನು ಸ್ವೀಕರಿಸಿದರು.
ರೈತ ಉತ್ಪಾದಕ ಸಂಸ್ಥೆ (ಎಫ್ಪಿಓ) ಎಂಬುದು, ಮಾರುಕಟ್ಟೆ ಪ್ರವೇಶವನ್ನು ಉತ್ತಮಗೊಳಿಸಲು, ಸಂಪನ್ಮೂಲಗಳನ್ನು ಹಂಚಿಕೊಳ್ಳಲು ಮತ್ತು ಸಹಕಾರಿ, ವ್ಯವಹಾರದಂತಹ ಕಾರ್ಯಾಚರಣೆಗಳ ಮೂಲಕ ಆದಾಯವನ್ನು ಹೆಚ್ಚಿಸಲು ಒಟ್ಟಾಗಿ ಸೇರುವ ರೈತರ ಒಂದು ಸಮುದಾಯ. ದೊಡ್ಡ ಸಂಖ್ಯೆಯ ಸದಸ್ಯರ ಭಾಗವಹಿಸುವಿಕೆಯೊಂದಿಗೆ, ನೇಗಿಲ ಸಿದ್ಧ ಎಫ್ಪಿಸಿಎಲ್ ವೈಜ್ಞಾನಿಕ ಕೃಷಿಯನ್ನು ಉತ್ತೇಜಿಸುವ, ಗುಣಮಟ್ಟದ ಕಚ್ಚಾ ವಸ್ತುಗಳನ್ನು ಒದಗಿಸುವ ಮತ್ತು ಉತ್ತಮ ಮಾರುಕಟ್ಟೆ ಪ್ರವೇಶವನ್ನು ಖಚಿತಪಡಿಸುವ ವಿಶ್ವಾಸಾರ್ಹ ವೇದಿಕೆಯನ್ನು ನಿರ್ಮಿಸಿದೆ.

ಎಫ್ಪಿಓ ₹1.47 ಕೋಟಿ ವಹಿವಾಟು ಸಾಧಿಸಿದ್ದು, ಇದು ಬೆಳೆ ಸಂಗ್ರಹಣೆ (ರೈತರು ತಮ್ಮ ಫಸಲನ್ನು ಒಟ್ಟುಗೂಡಿಸಿ ದೊಡ್ಡ ಪ್ರಮಾಣದಲ್ಲಿ ಮಾರಾಟ ಮಾಡುವುದು), ಕಚ್ಚಾ ವಸ್ತುಗಳ ಪೂರೈಕೆ (ರೈತರಿಗೆ ಬೆಳೆಗಳನ್ನು ಬೆಳೆಯಲು ಅಗತ್ಯವಿರುವ ವಸ್ತುಗಳನ್ನು ನ್ಯಾಯಯುತ ಬೆಲೆಯಲ್ಲಿ ಮತ್ತು ಸಮಯಕ್ಕೆ ಸರಿಯಾಗಿ ಒದಗಿಸುವುದು), ಮೌಲ್ಯವರ್ಧಿತ ರಿಟೇಲ್ ಮಾರಾಟ (ರೈತರು ಕಚ್ಚಾ ಉತ್ಪನ್ನಗಳನ್ನು ಸಂಸ್ಕರಿಸಿ ಅಥವಾ ಪ್ಯಾಕೇಜಿಂಗ್ ಮಾಡುವ ಮೂಲಕ ಅವುಗಳ ಮೌಲ್ಯವನ್ನು ಹೆಚ್ಚಿಸುವುದು) ಮತ್ತು ಮಣ್ಣಿನ ಆರೋಗ್ಯ ಪರೀಕ್ಷೆಯ ಸೇವೆಗಳನ್ನು ಒಳಗೊಂಡಿದೆ.
ನಿರಂತರ ತರಬೇತಿ ಕಾರ್ಯಕ್ರಮಗಳು ಮತ್ತು ಮಣ್ಣು ಪರೀಕ್ಷೆಯ ಬೆಂಬಲವು ಅದರ ಪ್ರಭಾವವನ್ನು ಮತ್ತಷ್ಟು ಬಲಪಡಿಸಿದ್ದು, ಕರ್ನಾಟಕದಲ್ಲಿ ರೈತ ನೇತೃತ್ವದ ಮೌಲ್ಯವರ್ಧನೆಗೆ ನೇಗಿಲ ಸಿದ್ಧ ಎಫ್ಪಿಸಿಎಲ್ ಅನ್ನು ಮಾದರಿಯಾಗಿ ಇರಿಸಿದೆ.
ಈ ಕುರಿತು ಈಶ ಔಟ್ರೀಚ್ನ ಎಫ್ಪಿಓಗಳ ಯೋಜನಾ ನಿರ್ದೇಶಕ ಆರ್. ವೆಂಕಟ್ ರಸ ಮಾತನಾಡಿ, ʼಈಶ ಔಟ್ರೀಚ್ ನೇಗಿಲ ಸಿದ್ಧ ಎಫ್ಪಿಓ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದೆ. ಅದರ ಮಾರುಕಟ್ಟೆ ಮತ್ತು ಕೃಷಿ ಸಲಹಾ ತಂಡವು ನವೀನ ಉತ್ಪನ್ನಗಳನ್ನು ರೂಪಿಸಲು, ಮೌಲ್ಯೀಕರಿಸಲು ಮತ್ತು ಪ್ರಾಯೋಗಿಕವಾಗಿ ಪರೀಕ್ಷಿಸಲು ಸಹಾಯ ಮಾಡಿದೆ, ಜತೆಗೆ ಹೊಸ ಖರೀದಿದಾರರ ಸಂಪರ್ಕಗಳನ್ನು ಸಹ ಸುಗಮಗೊಳಿಸಿದೆ," ಎಂದು ಹೇಳಿದರು.
ಬೆಂಗಳೂರಿನಲ್ಲಿ 2ನೇ ವಿಮಾನ ನಿಲ್ದಾಣ; ಕಾರ್ಯಸಾಧ್ಯತಾ ವರದಿಗೆ ಟೆಂಡರ್ ಆಹ್ವಾನ
ಒಟ್ಟಾರೆ 25 ಎಫ್ಪಿಓಗಳಲ್ಲಿ, ಈಶ ಔಟ್ರೀಚ್ ₹281 ಕೋಟಿಗಳ ಸಂಚಿತ ವಹಿವಾಟು ಸಾಧಿಸಲು ಸಹಕರಿಸಿದ್ದು, 12,000ಕ್ಕೂ ಹೆಚ್ಚು ರೈತರನ್ನು ಒಳಗೊಂಡಿದೆ. ಇಲ್ಲಿಯವರೆಗೆ, ಈಶ ಔಟ್ರೀಚ್ ಬೆಂಬಲಿತ ಎಫ್ಪಿಓಗಳು 23 ರಾಷ್ಟ್ರೀಯ ಮತ್ತು ರಾಜ್ಯ ಪ್ರಶಸ್ತಿಗಳನ್ನು ಗೆದ್ದಿವೆ. ಈ ಪ್ರಶಸ್ತಿಗಳ ಮೂಲಕ ದೊರೆತ ಮನ್ನಣೆಯು ಒಂದು ಪ್ರಮುಖ ಮೈಲಿಗಲ್ಲಾಗಿದ್ದು, ಇದು ರೈತ ಉತ್ಪಾದಕ ಸಂಸ್ಥೆಗಳು ಲಾಭದಾಯಕ ಉದ್ಯಮಗಳಾಗಲು, ರೈತರ ಒಟ್ಟಾರೆ ಯೋಗಕ್ಷೇಮವನ್ನು ತರಲು, ಕೃಷಿಯನ್ನು ಆಹ್ಲಾದಕರ ಅನುಭವವನ್ನಾಗಿ ಮಾಡಲು ಮತ್ತು ಮುಂದಿನ ಪೀಳಿಗೆಯನ್ನು ಕೃಷಿಯಲ್ಲಿ ಮುಂದುವರಿಸುವಂತೆ ಪ್ರೇರೇಪಿಸಲು ಈಶ ಔಟ್ರೀಚ್ನ ಬದ್ಧತೆಯನ್ನು ಎತ್ತಿ ಹಿಡಿಯುತ್ತದೆ ಎಂದು ಅವರು ತಿಳಿಸಿದರು.