ಬೆಂಗಳೂರಿನಲ್ಲಿ ಸ್ಕೂಟರ್ ಗುಂಡಿಗೆ ಬಿದ್ದು ಮಹಿಳೆಗೆ ಗಂಭೀರ ಗಾಯ; ಚಿಕಿತ್ಸೆಗೆ 2 ಲಕ್ಷ ರೂಪಾಯಿ ಖರ್ಚು
ಸ್ಕೂಟರ್ ಗುಂಡಿಗೆ ಬಿದ್ದು ಗಂಭೀರವಾಗಿ ಗಾಯಗೊಂಡ ಮಹಿಳೆಯೊಬ್ಬರು ರಸ್ತೆ ಸರಿಪಡಿಸುವಂತೆ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಬೆಂಗಳೂರಿನ ವೈಟ್ಫೀಲ್ಡ್-ವರ್ತೂರ್ ರಸ್ತೆಯಲ್ಲಿ ನೆಕ್ಸಸ್ ಮಾಲ್ ಬಳಿಯ ಗುಂಡಿ ಬಳಿ ತನ್ನ ಸ್ಕೂಟರ್ ಬಿದ್ದು ಹಿಮ್ಮಡಿ ಪುಡಿಯಾಗಿದೆ. ಇದರಿಂದ ಚಿಕಿತ್ಸೆಗೆ ಬರೋಬ್ಬರಿ 2 ಲಕ್ಷ ರೂ. ಖರ್ಚಾಗಿದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಅಧಿಕಾರಿಗಳ ಗಮನ ಸೆಳೆದಿದ್ದಾರೆ.
ಸಂಗ್ರಹ ಚಿತ್ರ -
ಬೆಂಗಳೂರು: ರಸ್ತೆ ಅಪಘಾತದಿಂದ (Road accident) ಹಿಮ್ಮಡಿ ಚಿಕಿತ್ಸೆಗೆ ಒಳಗಾದ ಮಹಿಳೆಯೊಬ್ಬರು ರಸ್ತೆಯನ್ನು ಸರಿಪಡಿಸುವಂತೆ ಸಾಮಾಜಿಕ ಮಾಧ್ಯಮದ (Social Media) ಮೂಲಕ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಐಟಿ ಕೇಂದ್ರವಾದ ಬೆಂಗಳೂರಿನ (Bengaluru) ವೈಟ್ಫೀಲ್ಡ್- ವರ್ತೂರ್ ರಸ್ತೆಯಲ್ಲಿ (Whitefield-Varthur road) ನೆಕ್ಸಸ್ ಮಾಲ್ ಬಳಿ ಸ್ಕೂಟರ್ ಗುಂಡಿಗೆ ಬಿದ್ದು ಗಂಭೀರವಾಗಿ ಗಾಯಗೊಂಡ ಮಹಿಳೆ ಪ್ಲಾಸ್ಟಿಕ್ ಸರ್ಜರಿ ಸೇರಿದಂತೆ ಸಂಪೂರ್ಣ ಚಿಕಿತ್ಸೆಗಾಗಿ ಬರೋಬ್ಬರಿ 2 ಲಕ್ಷ ರೂ. ಖರ್ಚಾಗಿದೆ ಎಂದು ತಮ್ಮ ಎಕ್ಸ್ ಖಾತೆಯಲ್ಲಿ ತಿಳಿಸಿದ್ದಾರೆ.
ಬೆಂಗಳೂರಿನ ರಸ್ತೆಗಳಲ್ಲಿರುವ ಗುಂಡಿ ಅಪಾಯಕಾರಿಯಾಗಿದೆ. ಇದರಿಂದ ಭೀಕರ ಅಪಘಾತ ಸಂಭವಿಸಿ ತನ್ನ ಪಾದದ ಮೂಳೆ ಮುರಿದಿತ್ತು. ತುರ್ತು ಶಸ್ತ್ರಚಿಕಿತ್ಸೆ ನಡೆಸಲೇ ಬೇಕಾಯಿತು. ಇದರಿಂದ ಸುಮಾರು 2 ಲಕ್ಷ ರೂ. ಆಸ್ಪತ್ರೆ ಬಿಲ್ ಬಂದಿದೆ ಎಂದು ಅವರು ಹೇಳಿಕೊಂಡಿದ್ದಾರೆ.
ಬೆಂಗಳೂರಿಗೆ ತೆರಳುತ್ತಿದ್ದ ಬಳಿ ಕೆಎಸ್ಆರ್ಟಿಸಿ ಬಸ್ಗೆ ಬೆಂಕಿ: ಚಾಲಕನ ಸಮಯಪ್ರಜ್ಞೆಯಿಂದ ಪ್ರಯಾಣಿಕರು ಪಾರು
ಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿರುವ ಐಶಾನಿ ಖನ್ನಾ ಕಳೆದ ತಿಂಗಳು ತಾವು ಕಚೇರಿಗೆ ಹೋಗುತ್ತಿದ್ದಾಗ ಸ್ಕೂಟರ್ ಗುಂಡಿಗೆ ಬಿದ್ದು ಗಂಭೀರ ಗಾಯವಾಗಿತ್ತು ಎಂದು ತಮ್ಮ ಸಾಮಾಜಿಕ ಮಾಧ್ಯಮದ ಎಕ್ಸ್ ಖಾತೆಯಲ್ಲಿ ತಿಳಿಸಿದ್ದಾರೆ.
hidden pothole on Varthur road cost me a crushed ankle, emergency plastic surgery, 5 days in hospital, and₹1.97L.This could happen to ANY of us tomorrow.Fix the roads now!@BBMPCOMM @GBA_office @krishnabgowda @BangaloreMirror @BangaloreTimes1 @BangaloreBuzz #bloreroads @gkcs_ pic.twitter.com/b5z4X2akmr
— Aishani Khanna (@Aishani_Khanna) September 4, 2026
ತನ್ನ ಕಷ್ಟದ ನಡುವೆಯೂ ಅವರು ರಸ್ತೆಗಳನ್ನು ಸರಿಪಡಿಸುವಂತೆ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ವರ್ತೂರ್ ರಸ್ತೆಯಲ್ಲಿ ಕಾಣದಂತಿರುವ ಗುಂಡಿಯಿಂದಾಗಿ ನನಗೆ ಪಾದದ ಮೂಳೆ, ತುರ್ತು ಪ್ಲಾಸ್ಟಿಕ್ ಸರ್ಜರಿಯೊಂದಿಗೆ 5 ದಿನಗಳು ಆಸ್ಪತ್ರೆ ವಾಸ ಮಾಡಬೇಕಾಯಿತು. ಇಂತಹ ಪರಿಸ್ಥಿತಿ ನಾಳೆ ಯಾರಿಗೆ ಬೇಕಾದರೂ ಬರಬಹುದು. ಕೂಡಲೇ ರಸ್ತೆಗಳನ್ನು ಸರಿಪಡಿಸಿ ಎಂದು ಹೇಳಿದ್ದಾರೆ.
ಈಗ ತಾವು ಚೇತರಿಸಿಕೊಳ್ಳುತ್ತಿರುವುದಾಗಿ ತಿಳಿಸಿದ ಅವರು, ಆಗಸ್ಟ್ 20 ರಂದು ಈ ಘಟನೆ ನಡೆದಿದೆ. ರಸ್ತೆಯ ಸ್ಥಿತಿಯ ಬಗ್ಗೆ ಚೆನ್ನಾಗಿ ಗೊತ್ತಿತ್ತು. ಆ ದಿನ ಜೋರಾಗಿ ಮಳೆ ಬರುತ್ತಿತ್ತು. ಯಾವುದೇ ಗುಂಡಿ ಸರಿಯಾಗಿ ಕಾಣುತ್ತಿರಲಿಲ್ಲ. ಒಂದು ಗುಂಡಿ ತಪ್ಪಿಸಲು ಹೋಗಿ ಇನ್ನೊಂದು ಗುಂಡಿಯಲ್ಲಿ ಬಿದ್ದಿರುವುದಾಗಿ ಅವರು ಹೇಳಿದ್ದಾರೆ.
ಎಡ ಪಾದದ ಮೇಲೆ ಏಳೆಂಟು ಆಳವಾದ ಗಾಯಗಳಾಗಿವೆ. ಅದನ್ನು ಪ್ಲಾಸ್ಟಿಕ್ ಶಸ್ತ್ರಚಿಕಿತ್ಸಕರು ಮಾತ್ರ ಸರಿಪಡಿಸುತ್ತಾರೆ ಎಂದು ಪರೀಕ್ಷಿಸಿದ ವೈದ್ಯರು ಹೇಳಿದರು. ಬಳಿಕ ಐದು ದಿನಗಳು ಆಸ್ಪತ್ರೆಯಲ್ಲಿ ಕಳೆಯಬೇಕಾಯಿತು. ಕೊನೆಯಲ್ಲಿ 1.97 ಲಕ್ಷ ರೂಪಾಯಿ ಭಾರಿ ಬಿಲ್ ನೋಡಿ ಆಘಾತವಾಯಿತು. ಇದು ಕೊನೆಯಾಗಿಲ್ಲ. ಮುಂದೆ ಎರಡನೇ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಗಲೂಬಹುದು. ಇದು ಕೇವಲ ದೈಹಿಕ ಆಘಾತವಾಗಿರಲಿಲ್ಲ. ಆರ್ಥಿಕ ಹೊರೆಯಿಂದ ಅನಗತ್ಯವಾಗಿ ಮಾನಸಿಕವಾಗಿಯೂ ತುಂಬಾ ಹೋರಾಟ ಮಾಡಬೇಕಾಯಿತು ಎಂದು ಅವರು ಹೇಳಿಕೊಂಡಿದ್ದಾರೆ.
ಕಳೆದ 30 ವರ್ಷಗಳಿಂದ ಬೆಂಗಳೂರಿನಲ್ಲಿ ವಾಸಿಸುತ್ತಿದ್ದೇನೆ. ಇಲ್ಲಿನ ಪರಿಸ್ಥಿತಿ ದಿನೇ ದಿನೇ ಹದಗೆಡುತ್ತಿದೆ. ರಸ್ತೆ ಇಲ್ಲ, ಗುಂಡಿಗಳು ಮಾತ್ರ ಎಂಬಂತಾಗಿದೆ. ಅಧಿಕಾರಿಗಳು ರಸ್ತೆಗಳು ಉತ್ತಮವಾಗಿರುವಂತೆ ಖಚಿತಪಡಿಸಿಕೊಳ್ಳಬೇಕು ಎಂದು ಅವರು ಹೇಳಿದ್ದಾರೆ.