ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Tobacco free 30 Villages: 30 ಗ್ರಾಮಗಳನ್ನು ತಂಬಾಕು ಮುಕ್ತ ಮಾಡಲು ಗುರಿ: ಜಿಲ್ಲಾಧಿಕಾರಿ ಪಿ.ಎನ್ ರವೀಂದ್ರ

ತಂಬಾಕಿನ ಸೇವನೆಯ ಹಾನಿಕಾರಕ ದುಷ್ಪರಿಣಾಮಗಳ ಬಗ್ಗೆ ಸಾರ್ವಜನಿಕರಿಗೆ ತಿಳಿಸಿಕೊಟ್ಟು ಜಾಗೃತಿ ಮೂಡಿಸಲು “ತಂಬಾಕು ಮುಕ್ತ ಯುವ ಅಭಿಯಾನ (3.0)” ವನ್ನು ಜಿಲ್ಲೆಯಲ್ಲಿ ಡಿಸೆಂಬರ್ 9 ರವರೆಗೆ ಹಮ್ಮಿಕೊಳ್ಳಲಾಗಿದೆ. ಈ ಅಭಿಯಾನದಡಿ ಹಲವು ಕಾರ್ಯಕ್ರಮಗಳನ್ನು ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದು, ಸುಮಾರು 400 ಶಾಲಾ ಕಾಲೇಜುಗಳನ್ನು ತಂಬಾಕು ಮುಕ್ತ ಶೈಕ್ಷಣಿಕ ಸಂಸ್ಥೆಗಳನ್ನಾಗಿಸಲು ಯೋಜಿಸಲಾಗಿದೆ.

30 ಗ್ರಾಮಗಳನ್ನು ತಂಬಾಕು ಮುಕ್ತ ಮಾಡಲು ಗುರಿ

-

Ashok Nayak Ashok Nayak Oct 15, 2025 12:41 AM

ಚಿಕ್ಕಬಳ್ಳಾಪುರ : ತಂಬಾಕು ಮುಕ್ತ ಯುವ ಅಭಿಯಾನದಡಿ 30 ಗ್ರಾಮಗಳನ್ನು ತಂಬಾಕು ಮುಕ್ತ ಮಾಡಲು ಗುರಿ ಹೊಂದಲಾಗಿದೆ ಎಂದು ಜಿಲ್ಲಾಧಿಕಾರಿ ಪಿ.ಎನ್ ರವೀಂದ್ರ  ತಿಳಿಸಿದರು.

ನಗರ ಹೊರವಲಯ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ “ತಂಬಾಕು ಮುಕ್ತ ಯುವ ಅಭಿಯಾನ, ರಾಷ್ಟ್ರೀಯ ರೇಬೀಸ್ ಮತ್ತು ಹಾವು ಕಡಿತ ನಿಯಂತ್ರಣ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ತಂಬಾಕಿನ ಸೇವನೆಯ ಹಾನಿಕಾರಕ ದುಷ್ಪರಿಣಾಮಗಳ ಬಗ್ಗೆ ಸಾರ್ವಜನಿಕರಿಗೆ ತಿಳಿಸಿಕೊಟ್ಟು ಜಾಗೃತಿ ಮೂಡಿಸಲು “ತಂಬಾಕು ಮುಕ್ತ ಯುವ ಅಭಿಯಾನ (3.0)” ವನ್ನು ಜಿಲ್ಲೆಯಲ್ಲಿ ಡಿಸೆಂಬರ್ 9 ರವರೆಗೆ ಹಮ್ಮಿಕೊಳ್ಳಲಾಗಿದೆ. ಈ ಅಭಿಯಾನದಡಿ ಹಲವು ಕಾರ್ಯಕ್ರಮಗಳನ್ನು ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದು, ಸುಮಾರು 400 ಶಾಲಾ ಕಾಲೇಜುಗಳನ್ನು ತಂಬಾಕು ಮುಕ್ತ ಶೈಕ್ಷಣಿಕ ಸಂಸ್ಥೆಗಳನ್ನಾಗಿಸಲು ಯೋಜಿಸಲಾಗಿದೆ.

ಅಭಿಯಾನದ ಅವಧಿಯಲ್ಲಿ 16 ಕೋಟ್ಪಾ ದಾಳಿಗಳನ್ನು ಹಮ್ಮಿಕೊಂಡು ಕೋಟ್ಪಾ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರುವ ಮೂಲಕ ತಂಬಾಕು ಸೇವನೆಯನ್ನು ನಿಯಂತ್ರಿಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ: Chikkaballapur News: ಬೆಂಬಲ ಬೆಲೆಯಡಿ ರಾಗಿ,ಭತ್ತ,ಬಿಳಿಜೋಳ ಖರೀದಿಗೆ  ನೋಂದಣಿ ಮಾಡಿಕೊಳ್ಳಿ: ಜಿಲ್ಲಾಧಿಕಾರಿ ಪಿ. ಎನ್ ರವೀಂದ್ರ  ರೈತರಲ್ಲಿ ಮನವಿ

2025 ರಲ್ಲಿ 9,478 ಜನರಿಗೆ ನಾಯಿ ಕಡಿತ 

ನಾಯಿ ಕಚ್ಚುವಿಕೆಯು ರೇಬೀಸ್ ಸೋಂಕನ್ನು ಹರಡಬಹುದು, ಇದು ಮಾರಣಾಂತಿಕ ಕಾಯಿಲೆ ಯಾಗಿದ್ದು.ಯಾವುದೇ ವ್ಯಕ್ತಿ ನಾಯಿ ಕಡಿತಕ್ಕೆ ಒಳಗಾದ ತಕ್ಷಣ ವೈದ್ಯಕೀಯ ಸಹಾಯ ಪಡೆಯು ವುದು ಅತ್ಯಗತ್ಯ, ವಿಶೇಷವಾಗಿ ಸಾಕು ಪ್ರಾಣಿಗಳಿಗೆ ವ್ಯಾಕ್ಸಿನೇಷನ್ ಮಾಡಿಸಬೇಕು ಎಂದು ಜಿಲ್ಲಾಧಿ ಕಾರಿಗಳು ಸಾರ್ವಜನಿಕರಲ್ಲಿ ಮನವಿ ಮಾಡಿದರು. 

ಜಿಲ್ಲೆಯಲ್ಲಿ 2025 ನೇ ವರ್ಷದಲ್ಲಿ ಈ ವರೆಗೆ 9,478 ಜನರಿಗೆ ನಾಯಿ ಕಚ್ಚಿರುವುದು ದಾಖಲಾಗಿದೆ ಮತ್ತು 739 ಹಾವು ಕಡಿತದ ಪ್ರಕರಣಗಳು ಈ ವರೆಗೆ ದಾಖಲಾಗಿದ್ದು ಅದರ ಪೈಕಿ ಐವರು ನಿಧನರಾಗಿದ್ದಾರೆ. 

ಮುಂದಿನ ದಿನಗಳಲ್ಲಿ ನಾಯಿ ಮತ್ತು ಹಾವಿನ ಕಡಿತದಿಂದ ಸಾವು ಉಂಟಾಗದಂತೆ ಏನೆಲ್ಲ ಕ್ರಮಗಳನ್ನು ಕೈಗೊಳ್ಳಬೇಕು ಆ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಿದರು. 

ಹಾವುಗಳು ವಿಷಕಾರಿ ಮತ್ತು ವಿಷರಹಿತ ಎರಡೂ ಆಗಿರುತ್ತವೆ. ಹಾವು ಕಚ್ಚಿದ ಸಂದರ್ಭಗಳಲ್ಲಿ ಹಾವು ಕಡಿತಕ್ಕೆ ಒಳಗಾದ ವ್ಯಕ್ತಿಯನ್ನು ಎಡಭಾಗಕ್ಕೆ ಮಲಗಿಸಿ ಕಚ್ಚಿದ ಭಾಗವನ್ನು ಅಲುಗಾಡ ದಂತೆ ನೋಡಿಕೊಳ್ಳಬೇಕು ಹಾವು ಕಚ್ಚಿದ ದೇಹದ ಭಾಗದಲ್ಲಿರುವ ಪಾದರಕ್ಷೆ, ಕಾಲುಂಗುರ, ಬೆಲ್ಡ್ ಆಭರಣಗಳು, ವಾಚ್, ಬಿಗಿಯಾದ ಬಟ್ಟೆಯನ್ನು ಕಳಚಿ ಅಂಬ್ಯುಲೆನ್ಸ್ ಅಥವಾ ಇನ್ನಿತರ ವಾಹನ ದಲ್ಲಿ ಹಾವು ಕಡಿತಕ್ಕೆ ಒಳಗಾದ ವ್ಯಕ್ತಿಯನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ಯಬೇಕು. ಈ ಸೋಂಕಿನ ಬಗ್ಗೆ ಶಾಲಾ, ಕಾಲೇಜು, ಗ್ರಾಮ ಪಂಚಾಯತಿ, ನಗರಸಭೆ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಅರಿವು ಮೂಡಿಸಬೇಕು ನಾಯಿ ಮತ್ತು ಹಾವು ಕಡಿತ ಕಡಿಮೆ ಮಾಡಲು ಕ್ರಮ ವಹಿಸಿ ಅರಿವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಈ ವೇಳೆ ರಾಷ್ಟ್ರೀಯ ರೇಬೀಸ್ ನಿಯಂತ್ರಣ ಕುರಿತು ಜಾಗೃತಿ ಮೂಡಿಸಲು ಕರಪತ್ರ ಹಾಗೂ ಬಿತ್ತಿ ಪತ್ರಗಳನ್ನು ಅಧಿಕಾರಿಗಳೊಂದಿಗೆ ಜಿಲ್ಲಾಧಿಕಾರಿಗಳು ಬಿಡುಗಡೆ ಮಾಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಸ್.ಎಸ್. ಮಹೇಶ್ ಕುಮಾರ್, ಆರ್.ಸಿ.ಎಚ್.ಓ ಅಧಿಕಾರಿ ಡಾ. ಜಿ.ವಿ. ಸಂತೋಷ್ ಬಾಬು, ಪಶುಪಾಲನಾ ಇಲಾಖೆಯ ಉಪನಿರ್ದೇಶಕ ಡಾ. ಎಚ್.ಎನ್. ರಂಗಪ್ಪ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಂಜುನಾಥ್ ಹಾಗೂ ವಿವಿಧ ಇಲಾಖೆಯ ತಾಲೂಕು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.