ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Gauribidanur News: ರೈತರ ಸಮಸ್ಯೆಗಳಿಗೆ ಅಧಿಕಾರಿಗಳ ಸ್ಪಂದನೆ ಇಲ್ಲ: ರೈತ ಸಂಘಟನೆಗಳ ಆರೋಪ

ಅಖಿಲ ಕರ್ನಾಟಕ ರೈತ ಸಂಘದ ಜಿಲ್ಲಾ ಸಂಚಾಲಕ ಎನ್.ಆರ್.ರವಿಚಂದ್ರರೆಡ್ಡಿ ಮಾತನಾಡಿ, ರೈತರ ಸಮಸ್ಯೆ ಆಲಿಸಲು ಸಭೆ ಕರೆದ ಅಧಿಕಾರಿಗಳೇ ಸಮರ್ಪಕವಾಗಿ ಸ್ಪಂದಿಸದೆ, ಸರ್ಕಾರಿ ವಿಡಿಯೋ ಕಾನ್ಫರೆನ್ಸ್ ಇದೆ ಎಂಬ ಕಾರಣ ನೀಡಿ ಸಭೆಯಿಂದ ಹೊರನಡೆದಿರುವುದು ಖಂಡನೀಯ. ನಮ್ಮ ಸಮಸ್ಯೆಗಳನ್ನು ಯಾರ ಬಳಿ ಹೇಳಿಕೊಳ್ಳಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಭೆಯಿಂದ ಅಧಿಕಾರಿಗಳ ನಿರ್ಗಮನಕ್ಕೆ ರೈತರ ಆಕ್ರೋಶ

-

Profile
Ashok Nayak Sep 18, 2026 5:03 PM

ಗೌರಿಬಿದನೂರು: ಕುರಿ ಮತ್ತು ಮೇಕೆ ಸಾಕಾಣಿಕೆದಾರರ ಸಮಸ್ಯೆಗಳನ್ನು ಆಲಿಸಿ ಪರಿಹರಿಸುವ ಉದ್ದೇಶದಿಂದ ತಹಸೀಲ್ದಾರ್ ಅಧ್ಯಕ್ಷತೆಯಲ್ಲಿ ನಗರದ ಎಪಿಎಂಸಿ ಸಭಾಂಗಣದಲ್ಲಿ ನಡೆದ ಸಭೆ ಅಧಿಕಾರಿಗಳ ಸ್ಪಂದನೆಯ ಕೊರತೆಯಿಂದ ಗೊಂದಲದ ಗೂಡಾಗಿ ಮುಕ್ತಾಯಗೊಂಡಿತು ಎಂದು ರೈತ ಸಂಘಟನೆಗಳು ಆರೋಪಿಸಿವೆ.

ತಾಲೂಕಿನಲ್ಲಿ ಹೊರ ಜಿಲ್ಲೆ ಹಾಗೂ ರಾಜ್ಯಗಳಿಂದ ಬರುವ ಕುರಿ ವ್ಯಾಪಾರಿಗಳಿಗೆ ಸ್ಥಳೀಯ ವ್ಯಾಪಾರಿಗಳು ವಿರೋಧ ವ್ಯಕ್ತಪಡಿಸುತ್ತಿರುವ ಹಿನ್ನೆಲೆಯಲ್ಲಿ ರೈತ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಈ ಹಿನ್ನೆಲೆಯಲ್ಲಿ ಸಮಸ್ಯೆ ಪರಿಹರಿಸಲು ಸಭೆ ಕರೆಯಲಾಗಿತ್ತು.

ರೈತ ಸಂಘದ ಅಧ್ಯಕ್ಷ ಲೋಕೇಶ್ ಗೌಡ ಮಾತನಾಡಿ, ಕೃಷಿ ಪ್ರಾಂಗಣಕ್ಕೆ ಕುರಿಗಳನ್ನು ಮಾರಾಟಕ್ಕೆ ತರುವ ರೈತರಿಂದ ನಿಗದಿತ ಸುಂಕ ವಸೂಲಿ ಮಾಡಲಾಗುತ್ತಿದೆ. ಆದರೆ ರೈತರು ಹಾಗೂ ಕುರಿಗಳಿಗೆ ಅಗತ್ಯ ಮೂಲಸೌಕರ್ಯ ಕಲ್ಪಿಸಿಲ್ಲ ಎಂದು ಆರೋಪಿಸಿದರು.

ಇದನ್ನೂ ಓದಿ: Gauribidanur News: ಗೌರಿಬಿದನೂರಿನಲ್ಲಿ ತಾರಕಕ್ಕೇರಿದ ಹಾಲಿ-ಮಾಜಿ ಶಾಸಕರ ವಾಕ್ಸಮರ

ಅಖಿಲ ಕರ್ನಾಟಕ ರೈತ ಸಂಘದ ಜಿಲ್ಲಾ ಸಂಚಾಲಕ ಎನ್.ಆರ್.ರವಿಚಂದ್ರರೆಡ್ಡಿ ಮಾತನಾಡಿ, ರೈತರ ಸಮಸ್ಯೆ ಆಲಿಸಲು ಸಭೆ ಕರೆದ ಅಧಿಕಾರಿಗಳೇ ಸಮರ್ಪಕವಾಗಿ ಸ್ಪಂದಿಸದೆ, ಸರ್ಕಾರಿ ವಿಡಿಯೋ ಕಾನ್ಫರೆನ್ಸ್ ಇದೆ ಎಂಬ ಕಾರಣ ನೀಡಿ ಸಭೆಯಿಂದ ಹೊರನಡೆದಿರುವುದು ಖಂಡನೀಯ. ನಮ್ಮ ಸಮಸ್ಯೆಗಳನ್ನು ಯಾರ ಬಳಿ ಹೇಳಿಕೊಳ್ಳಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮುಖಂಡ ಎನ್.ಎಂ.ರವಿನಾರಾಯಣರೆಡ್ಡಿ ಮಾತನಾಡಿ, ಕುರಿ ವ್ಯಾಪಾರಕ್ಕೆ ಸ್ಥಳೀಯರೇ ಬರಬೇಕು ಎಂಬ ನಿರ್ಬಂಧ ಸರಿಯಲ್ಲ. ಯಾವುದೇ ಜಿಲ್ಲೆ ಅಥವಾ ರಾಜ್ಯದ ವ್ಯಾಪಾರಿಗಳು ಬಂದು ವಹಿವಾಟು ನಡೆಸಲು ಅವಕಾಶ ನೀಡಬೇಕು ಎಂದರು.

ಇನ್ನೆರಡು ದಿನಗಳಲ್ಲಿ ರೈತರೊಂದಿಗೆ ಸಭೆ ನಡೆಸಿ ಮುಂದಿನ ಹೋರಾಟದ ಬಗ್ಗೆ ತೀರ್ಮಾನ ಕೈಗೊಳ್ಳುವುದಾಗಿ ಸಂಘಟನೆಗಳು ತಿಳಿಸಿವೆ.

ಸಭೆಯಲ್ಲಿ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮುನಿಲಕ್ಷ್ಮಮ್ಮ, ತಹಸೀಲ್ದಾರ್ ಕೆ.ಎಂ.ಅರವಿಂದ್, ಎಪಿಎಂಸಿ ಕಾರ್ಯದರ್ಶಿ ಮಾಲಿನಿ, ನಗರ ಠಾಣೆ ಎಸ್ಸೈ ವಿ.ವರಲಕ್ಷ್ಮಿ ಹಾಗೂ ರೈತರು ಉಪಸ್ಥಿತರಿದ್ದರು.