Sri Sathya Sai University: ಮೌಲ್ಯಾಧಾರಿತ ಶಿಕ್ಷಣ; ಕರ್ನಾಟಕ ಸಂಸ್ಕೃತ ವಿವಿ ಜತೆ ಸತ್ಯ ಸಾಯಿ ವಿವಿ ಒಡಂಬಡಿಕೆ
Sadguru Sri Madhusudan Sai: ಮುದ್ದೇನಹಳ್ಳಿಯ ಸತ್ಯ ಸಾಯಿ ಗ್ರಾಮದಲ್ಲಿ ನಡೆಯುತ್ತಿರುವ 'ಒಂದು ಜಗತ್ತು ಒಂದು ಕುಟುಂಬ ಜಾಗತಿಕ ಸಾಂಸ್ಕೃತಿಕ ಉತ್ಸವ'ದ 81ನೇ ದಿನವಾದ ಮಂಗಳವಾರ ಶ್ರೀ ಸತ್ಯ ಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾಲಯ ಮತ್ತು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ ಒಡಂಬಡಿಕೆ ಮಾಡಿಕೊಂಡವು. ಸದ್ಗುರು ಶ್ರೀ ಮಧುಸೂದನ ಸಾಯಿ ಅವರ ಸಮ್ಮುಖದಲ್ಲಿ ಶ್ರೀ ಸತ್ಯ ಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾಲಯ ಕುಲಪತಿ ಶ್ರೀಕಂಠ ಮೂರ್ತಿ ಹಾಗೂ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಅಹಲ್ಯಾ ಅವರು ಒಡಂಬಡಿಕೆ ಪತ್ರ ವಿನಿಮಯ ಮಾಡಿಕೊಂಡರು.
-
ಚಿಕ್ಕಬಳ್ಳಾಪುರ, ನ. 4: ಮುದ್ದೇನಹಳ್ಳಿಯ ಸತ್ಯ ಸಾಯಿ ಗ್ರಾಮದಲ್ಲಿ (Sathya sai grama) ನಡೆಯುತ್ತಿರುವ 'ಒಂದು ಜಗತ್ತು ಒಂದು ಕುಟುಂಬ ಜಾಗತಿಕ ಸಾಂಸ್ಕೃತಿಕ ಉತ್ಸವ'ದ 81ನೇ ದಿನವಾದ ಮಂಗಳವಾರ ಶ್ರೀ ಸತ್ಯ ಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾಲಯ ಮತ್ತು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ ಒಡಂಬಡಿಕೆ ಮಾಡಿಕೊಂಡವು. ಸದ್ಗುರು ಶ್ರೀ ಮಧುಸೂದನ ಸಾಯಿ (Sadguru Sri Madhusudan Sai) ಅವರ ಸಮ್ಮುಖದಲ್ಲಿ ಶ್ರೀ ಸತ್ಯ ಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾಲಯ ಕುಲಪತಿ ಶ್ರೀಕಂಠ ಮೂರ್ತಿ ಹಾಗೂ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಅಹಲ್ಯಾ ಅವರು ಒಡಂಬಡಿಕೆ ಪತ್ರ ವಿನಿಮಯ ಮಾಡಿಕೊಂಡರು. ಮೌಲ್ಯಾಧಾರಿತ ಶಿಕ್ಷಣ, ಸಿಬ್ಬಂದಿ ತರಬೇತಿ, ಮಾನವ ಅಭ್ಯುದಯಕ್ಕೆ ಚಿನ್ನದ ಪದಕ, ಮಾನವ ಅಭ್ಯುದಯ ತರಬೇತಿ ಉಪಕರಣಗಳು, ಸಂಶೋಧನೆ, ಪ್ರಕಾಶನ ಮತ್ತು ವಿನಿಮಯ ಒಡಂಬಡಿಕೆಯ ಉದ್ದೇಶವಾಗಿದೆ.
ಸದ್ಗುರು ಶ್ರೀ ಮಧುಸೂದನ ಸಾಯಿ ಅವರು ಆಶೀರ್ವಚನ ನೀಡಿ, ಸತ್ಯ ಸಾಯಿ ಗ್ರಾಮ ಮುಂಬರುವ ದಿನಗಳಲ್ಲಿ ಜಾಗತಿಕ ಹಳ್ಳಿಯಾಗಲಿದೆ. ಇದರ ಭಾಗವಾಗಿ ಈಗಾಗಲೇ ಹಂತ ಹಂತವಾಗಿ ಕೆಲಸಗಳು ನಡೆಯುತ್ತಿವೆ. ಮುಂದಿನ 10 ವರ್ಷಗಳಲ್ಲಿ ಭಾರತ ಆಧ್ಯಾತ್ಮಿಕ ಮತ್ತು ಮಾನವಕುಲಕ್ಕೆ ಸೇವೆ ಸಲ್ಲಿಸುವ ಕಲ್ಪನೆಯ ಬಗ್ಗೆ ಕಲಿಯಲು ಇಡೀ ಜಗತ್ತು ಪರಿವರ್ತನೆಗೊಳ್ಳುವ ಸ್ಥಳವಾಗಲಿದೆ ಎಂದು ನನಗೆ ಖಚಿತವಾಗಿದೆ. ಇದು ಸತ್ಯ ಸಾಯಿ ಬಾಬಾ ಅವರ ಸಂದೇಶವೂ ಆಗಿದೆ ಎಂದು ಹೇಳಿದರು.
ಕೊಡಗಿನಲ್ಲಿ ಬಾಲಕಿಯರ ಶಿಕ್ಷಣಕ್ಕಾಗಿ ಏನಾದರೂ ಮಾಡಲು ನಾವು ಬದ್ಧರಾಗಿದ್ದೇವೆ. ಅವಕಾಶ ಸಿಕ್ಕಿದಾಗೆಲ್ಲಾ ವಿರಾಜಪೇಟೆಯ ಅರಮೇರಿ ಕಳಂಚೇರಿ ಮಠದೊಂದಿಗೆ ಕೆಲಸ ಮಾಡುತ್ತೇವೆ. ಕಾವೇರಿ ದೇವಿಗೆ ಸಾಧ್ಯವಾದಷ್ಟು ನಮ್ಮಿಂದ ಉತ್ತಮವಾದದ್ದನ್ನು ಮಾಡುತ್ತೇವೆ ಎಂದರು.
ಅರಮೇರಿ ಕಳಂಚೇರಿ ಮಠ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ಸತ್ಯ ಸಾಯಿ ಬಾಬಾ ಅವರ ಚೈತನ್ಯ ಎಲ್ಲರ ಹೃದಯ, ಅಂತರಾಳದಲ್ಲಿ ತನ್ನದೇ ಆದ ಜನ ಜಾಗೃತಿಯನ್ನು ಮೂಡಿಸುತ್ತಿದೆ. ಆಧ್ಯಾತ್ಮಿಕ ಕ್ರಾಂತಿಯ ಜತೆಗೆ ಇಲ್ಲಿ ಸಂಸ್ಕಾರವನ್ನು ಕಲಿಸಲಾಗುತ್ತಿದೆ. ಶಿಕ್ಷಣವನ್ನು ಸಂಸ್ಥೆಗಳು ಕೊಡಬಹುದು. ಸಂಸ್ಕಾರ ಸಹಿತ ಶಿಕ್ಷಣವನ್ನು ಕೊಡುವುದು ಬಹಳ ಪ್ರಮುಖವಾಗಿದೆ. ಸತ್ಯ ಸಾಯಿ ಸಂಸ್ಥೆಗಳಲ್ಲಿ ಸಂಸ್ಕಾರ ಸಹಿತ ಶಿಕ್ಷಣದೊಂದಿಗೆ ಇಡೀ ಮನುಕುಲವನ್ನು ಅತ್ಯಂತ ಉತ್ತಮವಾದ ಒಳ್ಳೆಯ ಸ್ಥಿತಿಯಲ್ಲಿ ಇರಿಸಲು ಪ್ರೇರೇಪಣೆ, ಶಕ್ತಿಯನ್ನು ತುಂಬುವ ಕೆಲಸ ಮಾಡುತ್ತಿರುವುದು ನಮ್ಮೆಲ್ಲರ ಭಾಗ್ಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಎಂಎಲ್ಸಿ ಡಾ.ಕೆ. ಗೋವಿಂದರಾಜು ಮಾತನಾಡಿ, ಸಾಯಿ ಬಾಬಾ ಸಂಸ್ಥೆ ಯಾವುದೇ ಶುಲ್ಕವನ್ನು ಪಡೆಯದೆ ಎಲ್ಲರಿಗೂ ಉಚಿತ ವೈದ್ಯಕೀಯ ಸೇವೆಯನ್ನು ಒದಗಿಸಲಾಗುತ್ತಿದೆ. ಪ್ರಸ್ತುತ ಕಠಿಣ ದಿನಗಳಲ್ಲಿ ಒಂದು ಸಣ್ಣ ಕಲ್ಯಾಣ ಮಂಟಪವನ್ನು ನಿರ್ವಹಿಸಲು ಸಾಧ್ಯವಾಗುವುದಿಲ್ಲ, ಆದರೆ ದೈವಿಕ ಆಶೀರ್ವಾದ ಮತ್ತು ಸದ್ಗುರು ಶ್ರೀ ಮಧುಸೂದನ ಸಾಯಿ ಅವರ ತಂಡದ ಕಠಿಣ ಪರಿಶ್ರಮದಿಂದ ಇದೆಲ್ಲವೂ ಸಾಧ್ಯವಾಗುತ್ತಿದೆ. ಈ ಸಂಸ್ಥೆ ಅತ್ಯುನ್ನತ ಮಟ್ಟಕ್ಕೇರಲು ಪ್ರತಿಯೊಬ್ಬರು ಪರಿಶ್ರಮ ಹಾಕುತ್ತಿದ್ದಾರೆ ಎಂದರು.
ಬೊಲ್ಲಾಂಟ್ ಇಂಡಸ್ಟ್ರೀಸ್ ಪ್ರೈವೇಟ್ ಲಿಮಿಟೆಡ್ನ ಸಂಸ್ಥಾಪಕರು, ಅಧ್ಯಕ್ಷರು ಹಾಗೂ ಸಿಇಒ ಶ್ರೀಕಾಂತ್ ಬೊಲ್ಲಾ ಅವರಿಗೆ 'ಒಂದು ಜಗತ್ತು ಒಂದು ಕುಟುಂಬ ಜಾಗತಿಕ ನಾಯಕತ್ವ ಪುರಸ್ಕಾರ' ನೀಡಿ ಗೌರವಿಸಲಾಯಿತು. ಮಲೇಷ್ಯಾ ದೇಶದಲ್ಲಿ ಶಿಕ್ಷಣಕ್ಕಾಗಿ ಶ್ರಮಿಸುತ್ತಿರುವ ಪಶುಪತಿ ಸೀತಾಂಪರಂ ಅವರಿಗೆ ಒಂದು ಜಗತ್ತು ಒಂದು ಕುಟುಂಬ ಜಾಗತಿಕ ಮಾನವೀಯ ಪುರಸ್ಕಾರ ನೀಡಿ ಗೌರವಿಸಲಾಯಿತು.
ಈ ಸುದ್ದಿಯನ್ನೂ ಓದಿ | Sadguru Sri Madhusudan Sai: ರೈತರಿಗೆ ಸತ್ಯ ಸಾಯಿ ವಿವಿ ಕೌಶಲ್ಯ ಪ್ರಮಾಣ ಪತ್ರ: ಸದ್ಗುರು ಶ್ರೀ ಮಧುಸೂದನ ಸಾಯಿ ಘೋಷಣೆ
ಮಲೇಷ್ಯಾದ ಪ್ರತಿನಿಧಿ ಮುಕೇಶ್ ಕುಮಾರ್ ಮುನ್ಯಾಡಿ ತಮ್ಮ ದೇಶದ ಕಲೆ, ಸಂಸ್ಕೃತಿ, ಸಂಗೀತ, ಪ್ರಸಿದ್ಧ ತಾಣಗಳು, ಖಾದ್ಯಗಳು, ಅಧ್ಯಾತ್ಮ, ತತ್ತ್ವಸಿದ್ದಾಂತಗಳು, ಸಾಂಪ್ರದಾಯಿಕ ಉಡುಪು ಸೇರಿದಂತೆ ಹಲವು ವಿಚಾರಗಳ ಬಗ್ಗೆ ಮಾಹಿತಿ ನೀಡಿದರೆ, ಮತ್ತೊಬ್ಬ ಪ್ರತಿನಿಧಿ ಆಂಥೋನಿ ಬಾಂಗ್ ತಮ್ಮ ಜೀವನದಲ್ಲಿನ ಆಧ್ಯಾತ್ಮಿಕ ಬದಲಾವಣೆಯ ಅನುಭವವನ್ನು ಹಂಚಿಕೊಂಡರು.