Shidlaghatta News: ಕನಸಾಗಿಯೇ ಉಳಿದ ಸೀಕಲ್ ರಾಮಚಂದ್ರಗೌಡರ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಭರವಸೆ
ತಾಲೂಕಿನಲ್ಲಿ ಸಮರ್ಪಕ ಆರೋಗ್ಯ ಸೌಲಭ್ಯಗಳ ಕೊರತೆ ಇದ್ದ ಹಿನ್ನೆಲೆ ಈ ಭರವಸೆ ಜನರಲ್ಲಿ ಸಾಕಷ್ಟು ನಿರೀಕ್ಷೆ ಹುಟ್ಟಿಸಿತ್ತು. ಆದರೆ ಮೂರುವರೆ ನಾಲ್ಕು ವರ್ಷಗಳು ಕಳೆದರೂ ಆಸ್ಪತ್ರೆ ನಿರ್ಮಾಣದ ಕೆಲಸ ಆರಂಭವಾಗದೇ ಇರುವುದು ಇವರ ಬದ್ಧತೆಯನ್ನು ಜನತೆ ಅನುಮಾನ ದಿಂದ ನೋಡುವಂತೆ ಮಾಡಿದೆ.
ಕನಸಾಗಿಯೇ ಉಳಿದ ಸೀಕಲ್ ರಾಮಚಂದ್ರಗೌಡರ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಭರವಸೆ -
ಶಿಡ್ಲಘಟ್ಟ: ಚುನಾವಣೆ ಸಮಯದಲ್ಲಿ ಜನರ ಸಮಸ್ಯೆಗಳ ಪರಿಹಾರಕ್ಕೆ ಭರವಸೆಗಳ ಮಹಾ ಪೂರವೇ ಹರಿಯುತ್ತದೆ. ಆದರೆ ಮತದಾನ ಮುಗಿದ ಬಳಿಕ ಆ ಮಾತುಗಳು ಕೇವಲ ರಾಜಕೀಯ ಭಾಷಣಗಳಾಗಿ ಉಳಿಯುತ್ತಿರುವುದು ಸಾರ್ವಜನಿಕರಲ್ಲಿ ಸಮಾಜಸೇವಕರ ಮಾತುಗಳ ಮೇಲೆ ಬೇಸರ ಮೂಡಿಸಿದೆ ಎನ್ನಬಹುದು.
ಹೌದು. 2023ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಸೀಕಲ್ ರಾಮ ಚಂದ್ರಗೌಡ ನಗರದ ಸೇವಾಸೌಧ ಕಚೇರಿ ಪಕ್ಕದಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸಿ ಜನತೆ ಆರೋಗ್ಯಭಾಗ್ಯ ನೀಡುವುದಾಗಿ ಘೋಷಣೆ ಮಾಡಿದ್ದರು.ಈ ಸಂಗತಿ ಕ್ಷೇತ್ರದಲ್ಲಿ ಹೈವೋಲ್ಟೇಜ್ ಸುದ್ದಿಯಾಗಿತ್ತಲ್ಲದೆ, ಇಂತಹ ಜನಪ್ರತಿನಿಧಿಗಳು ಬೇಕು ಎಂಬ ಆಶಾಭಾವ ಮೂಡಿಸುವಲ್ಲಿ ಸಫಲವೂ ಆಗಿತ್ತು.
ಇದೇ ಕಾರಣಕ್ಕೆ ಇವರಿಗಿಂತಲೂ ಹಿಂದಿನ ಬಿಜೆಪಿ ಅಭ್ಯರ್ಥಿಗಳಿಗೆ ಠೇವಣಿ ವಾಪಸ್ಸು ಬರುತ್ತಿರಲಿಲ್ಲ. ಮೊದಲ ಪ್ರಯತ್ನದಲ್ಲಿಯೇ ರಾಮಚಂದ್ರಗೌಡರು ಜನಗಮನಿಸುವಷ್ಟು ಮತಗಳನ್ನು ಪಡೆಯುವಲ್ಲಿ ಸಫಲರಾಗಿದ್ದರು.
ತಾಲೂಕಿನಲ್ಲಿ ಸಮರ್ಪಕ ಆರೋಗ್ಯ ಸೌಲಭ್ಯಗಳ ಕೊರತೆ ಇದ್ದ ಹಿನ್ನೆಲೆ ಈ ಭರವಸೆ ಜನರಲ್ಲಿ ಸಾಕಷ್ಟು ನಿರೀಕ್ಷೆ ಹುಟ್ಟಿಸಿತ್ತು. ಆದರೆ ಮೂರುವರೆ ನಾಲ್ಕು ವರ್ಷಗಳು ಕಳೆದರೂ ಆಸ್ಪತ್ರೆ ನಿರ್ಮಾಣದ ಕೆಲಸ ಆರಂಭವಾಗದೇ ಇರುವುದು ಇವರ ಬದ್ಧತೆಯನ್ನು ಜನತೆ ಅನುಮಾನದಿಂದ ನೋಡುವಂತೆ ಮಾಡಿದೆ. ಏಕೆಂದರೆ ಇಂದಿಗೂ ತುರ್ತು ಚಿಕಿತ್ಸೆಗೆ ಜನರು ಬೆಂಗಳೂರು ಹಾಗೂ ಕೋಲಾರಕ್ಕೆ ತೆರಳಬೇಕಾದ ಪರಿಸ್ಥಿತಿ ಮುಂದುವರಿದಿದೆ.
ಇನ್ನು ಸರ್ಕಾರಿ ಆಸ್ಪತ್ರೆಗಳಲ್ಲಿ ತಜ್ಞ ವೈದ್ಯರ ಕೊರತೆ, ಸೂಕ್ತ ಚಿಕಿತ್ಸಾ ವ್ಯವಸ್ಥೆಯ ಅಭಾವ ಮತ್ತು ಮೂಲಭೂತ ಸೌಲಭ್ಯಗಳ ಸಮಸ್ಯೆಯಿಂದ ಬಡ ಹಾಗೂ ಮಧ್ಯಮ ವರ್ಗದ ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ.
ಈ ಎಲ್ಲ ಸಮಸ್ಯೆಗಳಿಗೆ ಪರಿಹಾರವಾಗಿ ಘೋಷಿಸಲಾಗಿದ್ದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಇದೀಗ ಕೇವಲ ಚುನಾವಣಾ ಭರವಸೆಯಾಗಿ ಉಳಿದಿದೆಯೇ ಎಂಬ ಪ್ರಶ್ನೆ ಕೇಳಿಬರುತ್ತಿದೆ. ಮತಕ್ಕೆ ಮಾತ್ರ ಆಶ್ವಾಸನೆ ಕಾರ್ಯರೂಪಕ್ಕೆ ಅಲ್ಲ ಎಂಬ ಟೀಕೆಗಳು ಕೂಡ ಸಾರ್ವಜನಿಕ ವಲಯದಲ್ಲಿ ಜೋರಾಗಿವೆ.
ಅಭಿವೃದ್ಧಿಯ ಹೆಸರಿನಲ್ಲಿ ಜನರ ಮುಂದೆ ಕನಸುಗಳನ್ನು ಇಡುವ ರಾಜಕೀಯ ನಾಯಕ ರು, ನಂತರ ಜನರ ಮೂಲಭೂತ ಸಮಸ್ಯೆಗಳ ಕಡೆ ಗಮನ ಹರಿಸದಿರುವುದು ಬೇಸರ ಮೂಡಿಸಿದೆ. ಇದೀಗ 2028ರ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆ ಮತ್ತೆ ಹೊಸ ಭರವಸೆಗಳ ರಾಜಕೀಯ ಆರಂಭವಾಗುವ ಸಾಧ್ಯತೆ ಇದೆ.
ಆದರೆ 2018ರ ಮಾತೇ ಈಡೇರದಿರುವಾಗ ಹೊಸ ಭರವಸೆಗಳನ್ನು ಜನರು ಎಷ್ಟು ನಂಬು ತ್ತಾರೆ ಎಂಬ ಪ್ರಶ್ನೆ ಸಹಜವಾಗಿದೆ. ಜನರ ಆರೋಗ್ಯದಂತಹ ಗಂಭೀರ ವಿಷಯಗಳು ರಾಜಕೀಯ ಭಾಷಣಗಳಿಗೆ ಸೀಮಿತವಾಗದೇ ನಿಜವಾದ ಅಭಿವೃದ್ಧಿಯಾಗಿ ರೂಪುಗೊಳ್ಳ ಬೇಕಿದೆ. ರಾಮಚಂದ್ರಗೌಡರು ರಾಮನಾಗುವರೋ ಇಲ್ಲವೋ ಎಂಬುದನ್ನು ಕಾಲವೇ ಉತ್ತರಿಸಬೇಕಿದೆ.