ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Pravasi Prapancha: ಕರಾವಳಿಯ ಕಿರೀಟ – ಮೂಲ್ಕಿ ಅರಮನೆ: ಪ್ರತಿ ಪ್ರವಾಸಿಯೂ ಭೇಟಿ ನೀಡಲೇಬೇಕಾದ ಐತಿಹಾಸಿಕ ತಾಣ

Mulki Aramane: ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಮೂಲ್ಕಿ ಪ್ರದೇಶವು ಸಮುದ್ರ ತೀರದ ಸೌಂದರ್ಯಕ್ಕೆ ಮಾತ್ರವಲ್ಲ, ಶತಮಾನಗಳ ಇತಿಹಾಸವನ್ನು ಹೊತ್ತಿರುವ ರಾಜಪರಂಪರೆಗಾಗಿ ಸಹ ಪ್ರಸಿದ್ಧವಾಗಿದೆ. ಈ ಪ್ರದೇಶದ ಪ್ರಮುಖ ಐತಿಹಾಸಿಕ ಸ್ಮಾರಕಗಳಲ್ಲಿ ಒಂದು, ಮೂಲ್ಕಿ ಅರಮನೆ. ತುಳುನಾಡಿನ ಸಾಂಸ್ಕೃತಿಕ ಪರಂಪರೆಯನ್ನು ಪ್ರತಿಬಿಂಬಿಸುವ ಈ ಅರಮನೆ, ಸ್ಥಳೀಯ ಆಡಳಿತ, ಜೈನ ಧರ್ಮದ ಪ್ರಭಾವ, ಕಂಬಳ ಸಂಪ್ರದಾಯ ಇವೆಲ್ಲದರಿಂದ ಸಮೃದ್ಧಗೊಂಡಿರುವ ಒಂದು ತಾಣ.

ಕರಾವಳಿಯ ಕಿರೀಟ – ಮೂಲ್ಕಿ ಅರಮನೆ

ಮೂಲ್ಕಿ ಅರಮನೆ -

Ramesh Ballamoole
Ramesh Ballamoole Mar 14, 2026 3:46 PM

ಕರ್ನಾಟಕದಲ್ಲಿ ಅರಮನೆ ಅಂದಾಕ್ಷಣ ಕಣ್ಣೆದುರು ನಿಲ್ಲುವುದು ಮೈಸೂರು ಅರಮನೆ ಮಾತ್ರವೇ. ಆನಂತರದಲ್ಲಿ ಬೆಂಗಳೂರು ಪ್ಯಾಲೇಸ್ ಮತ್ತು ಟಿಪ್ಪು ಬೇಸಗೆ ಅರಮನೆಗಳು ಪ್ರಚಲಿತದಲ್ಲಿವೆ. ಆದರೆ ಸ್ವಾತಂತ್ರ್ಯಪೂರ್ವ ಹಾಗೂ ವಿದೇಶಿ ಆಡಳಿತಕ್ಕೆ ಒಳಪಡುವ ಮುನ್ನ ಇಡೀ ಭಾರತದಲ್ಲಿ ಹಲವು ರಾಜ್ಯಗಳು, ಸಂಸ್ಥಾನಗಳು ಮತ್ತು ವಂಶಗಳು ತಮ್ಮದೇ ಆಳ್ವಿಕೆಯನ್ನು ನಡೆಸುತ್ತಿದ್ದವು. ನಮಗೆ ರಾಜಮನೆತನದ, ರಾಜರ ಇತಿಹಾಸ ಮತ್ತು ಕೋಟೆಗಳ ವಿವರವೇನೋ ಸಿಗುತ್ತವೆ. ರಾಜ ಅಂದಮೇಲೆ ಅರಮನೆ ಇರಲೇಬೇಕಲ್ಲವೇ? ನಮಗೆ ಅರಮನೆಗಳು ಮಾತ್ರ ಬಹಳ ವಿರಳವಾಗಿ ಸಿಗುತ್ತವೆ. ಅಂಥ ಅಪರೂಪದ ಒಂದು ಅರಮನೆ ’ಮೂಲ್ಕಿ ಅರಮನೆ’

ಇಂಥದ್ದೊಂದು ಅರಮನೆ ಬೇರೆ ದೇಶದಲ್ಲಿದ್ದಿದ್ದರೆ ಅದು ಆ ದೇಶದ ಪ್ರಸಿದ್ಧ ಮತ್ತು ಜನನಿಬಿಡ ಪ್ರವಾಸಿ ತಾಣವಾಗಿರುತ್ತಿತ್ತು. ಆದರೆ ಇಂಥ ಅಪರೂಪದ ಅರಮನೆಗೆ ರಾಜ್ಯದಲ್ಲಿ ಸಿಗಬೇಕಾದ ಮಾನ್ಯತೆ ಸಿಕ್ಕಿಲ್ಲ ಮತ್ತು ಪ್ರವಾಸಿಗರ ಸಂಪರ್ಕಕ್ಕೆ ಬಂದಿಲ್ಲವೆಂಬುದು ವಿಪರ್ಯಾಸ ಹಾಗೂ ಅಚ್ಚರಿ.

Mulki Aramane Family

ಹಲವು ಶತಮಾನಗಳ ಇತಿಹಾಸ

ಮೂಲ್ಕಿಯ ಅರಸ ಕುಟುಂಬವನ್ನು “ಸಾವಂತರು” ಅಥವಾ “ಸಾವಂತ ಅರಸು” ಎಂದು ಕರೆಯಲಾಗುತ್ತದೆ. ಈ ವಂಶದ ಆಡಳಿತ ಹಲವು ಶತಮಾನಗಳ ಇತಿಹಾಸ ಹೊಂದಿದೆ. ಚನ್ನರಾಯ ಸಾವಂತರು ಮತ್ತು ದುಗ್ಗಣ್ಣ ಸಾವಂತರು ಈ ಎರಡು ಹೆಸರಿನ ರಾಜರುಗಳು ಒಬ್ಬರಾದ ನಂತರ ಒಬ್ಬರು ಪಟ್ಟಕ್ಕೆ ಬರುವುದು ಈ ರಾಜವಂಶದ ವಿಶೇಷ. ವಿಜಯನಗರ ಸಾಮ್ರಾಜ್ಯದ ಕಾಲದಿಂದಲೇ ಇವರ ಪ್ರಭಾವ ಈ ಪ್ರದೇಶದಲ್ಲಿ ಕಂಡುಬಂದಿತ್ತು.

ಮೂಲ್ಕಿ ಸಾವಂತ ಅರಸರ ಇತಿಹಾಸ

ಮೂಲ್ಕಿಯ ರಾಜವಂಶವನ್ನು ಸಾವಂತರು ಎಂದು ಕರೆಯಲಾಗುತ್ತಿತ್ತು. ಇವರು ಮೊದಲಿಗೆ ವಿಜಯನಗರ ಸಾಮ್ರಾಜ್ಯದ ಅಧೀನದಲ್ಲಿದ್ದ ಪ್ರಾದೇಶಿಕ ಆಡಳಿತಗಾರರಾಗಿದ್ದರು. ಇವರ ಆಡಳಿತ ಪ್ರದೇಶವು ಮೂಲ್ಕಿ ನದಿ ಮತ್ತು ಪಾವಂಜೆ ನದಿಯ ನಡುವೆ ಹರಡಿಕೊಂಡಿತ್ತು. ಇವರ ರಾಜ್ಯ ಅರಬ್ಬಿ ಸಮುದ್ರದಿಂದ ಪೂರ್ವದ ಚೌಟಾ ರಾಜ್ಯದವರೆಗೆ ವ್ಯಾಪಿಸಿಕೊಂಡಿತ್ತು. ಆಗ ಈ ರಾಜ್ಯದಲ್ಲಿ ಸುಮಾರು 37 ಗ್ರಾಮಗಳು ಸೇರಿದ್ದವು. ಐದುನೂರು ಎಕರೆಗೂ ಹೆಚ್ಚು ವಿಸ್ತಾರ ಹೊಂದಿದ್ದ ಈ ರಾಜವಂಶದ ಆಸ್ತಿಯು ಬ್ರಿಟಿಷ್ ದಾಳಿಯ ನಂತರ ಮತ್ತು ಸ್ವಾತಂತ್ರ್ಯಾನಂತರ ಸುಮಾರು ಐವತ್ತು ಎಕರೆಗೆ ಮಾತ್ರ ಸೀಮಿತವಾಗಿದೆ.

ರಾಜಧಾನಿ ಸ್ಥಳಾಂತರ

ಮೂಲ್ಕಿ ಸಾವಂತ ಅರಸರ ರಾಜಧಾನಿ ಹಲವು ಬಾರಿ ಸ್ಥಳಾಂತರಗೊಂಡಿತ್ತು. ಮೊದಲಿಗೆ ಇವರ ಆಡಳಿತ ಕೇಂದ್ರ ಶಿಮಂತೂರು ಪ್ರದೇಶದಲ್ಲಿತ್ತು. ನಂತರ ರಾಜಧಾನಿಯನ್ನು ಮೂಲ್ಕಿ ಕೋಟೇಕೇರಿ ಪ್ರದೇಶಕ್ಕೆ ಸ್ಥಳಾಂತರಿಸಲಾಯಿತು. ಆ ಸ್ಥಳದಲ್ಲಿ ಕೋಟೆಯ ಅವಶೇಷಗಳು ಮತ್ತು ಹನುಮಂತ ದೇವಾಲಯ ಇನ್ನೂ ಕಾಣಬಹುದು. ನಂತರ ಕೊನೆಗೆ ರಾಜಧಾನಿಯನ್ನು ಪಡುಪಣಂಬೂರು ಪ್ರದೇಶಕ್ಕೆ ಸ್ಥಳಾಂತರಿಸಲಾಯಿತು. ಪ್ರಸ್ತುತ ಅರಮನೆ ಇರುವುದು ಪಡುಪಣಂಬೂರಿನಲ್ಲೇ.

Mulki Arasu

ಆಡಂಬರವಿಲ್ಲದ ಮೂಲ್ಕಿ ಅರಮನೆ

ಮೂಲ್ಕಿ ಅರಸರ ಪ್ರಮುಖ ಅರಮನೆ ಇದ್ದದ್ದು ಪಡುಪಣಂಬೂರು ಗ್ರಾಮದಲ್ಲಿ. ಈ ಅರಮನೆ ಲ್ಯಾಟರೈಟ್ ಕಲ್ಲು, ಮಣ್ಣು ಮತ್ತು ಮರದ ಮೂಲಕ ಕಟ್ಟಲ್ಪಟ್ಟಿತ್ತು. ಅರಮನೆಯ ಸುತ್ತಮುತ್ತ ಹಲವು ಜೈನ ಬಸದಿ,,ಸಣ್ಣ ಕೆರೆ, ಕೆಲವು ದೇವಸ್ಥಾನಗಳು, ಕೋಟೆಯ ಗೋಡೆಗಳು, ಸೈನಿಕರ ಬ್ಯಾರಕ್‌ಗಳು ಎಲ್ಲವೂ ಇದ್ದವು. ಇಂದಿಗೂ ಇವೆ. ಈ ಕಟ್ಟಡಗಳು ಆ ಕಾಲದ ಆಡಳಿತ ವ್ಯವಸ್ಥೆಯ ಕೇಂದ್ರವಾಗಿದ್ದವು.

ವಿಂಟೇಜ್ ಕಾರುಗಳ 'ಪಯಣ'; ಜಗತ್ತನ್ನೇ ಆಕರ್ಷಿಸುತ್ತಿದೆ ಈ ಮಾದರಿ ಮ್ಯೂಸಿಯಂ

ಜೈನ ಧರ್ಮದ ಪ್ರಭಾವ

ದಾಖಲೆಗಳ ಪ್ರಕಾರ ಮೂಲ್ಕಿ ಸಾವಂತ ಅರಸರು ಜೈನ ಧರ್ಮವನ್ನು ಅನುಸರಿಸಿದವರು. ಪಡುಪಣಂಬೂರಿನ ಬಳಿ ಇರುವ ಬಸದಿಗಳು ಈ ಪರಂಪರೆಗೆ ಸಾಕ್ಷಿ. ಈ ಬಸದಿ ಕಟ್ಟಡಗಳು ಗ್ರಾನೈಟ್ ಮತ್ತು ಲೇಟರೈಟ್ ಕಲ್ಲುಗಳಿಂದ ನಿರ್ಮಾಣಗೊಂಡಿದ್ದು, ಮಳೆಗಾಲದ ಪರಿಸ್ಥಿತಿಗಳ ನಡುವೆಯೂ ಇಂದಿಗೂ ಉತ್ತಮ ಸ್ಥಿತಿಯಲ್ಲಿ ಉಳಿದಿವೆ. ಜೈನ ಧರ್ಮದ ಪ್ರಭಾವದಿಂದ ಈ ಪ್ರದೇಶದಲ್ಲಿ ಶಾಂತಿ, ಕೃಷಿ ಮತ್ತು ವ್ಯಾಪಾರ ಅಭಿವೃದ್ಧಿ ಯಾಗಿದ್ದವು.

ಕಂಬಳ ಮತ್ತು ಮೂಲ್ಕಿ ಅರಸು

ತುಳುನಾಡಿನ ಪ್ರಸಿದ್ಧ ಕ್ರೀಡೆ ಕಂಬಳ ಮೂಲ್ಕಿ ಅರಸ ಕುಟುಂಬದೊಂದಿಗೆ ಆಳವಾದ ಸಂಬಂಧ ಹೊಂದಿದೆ. ಪ್ರತಿವರ್ಷ ನಡೆಯುವ ಕಂಬಳ ಸ್ಪರ್ಧೆಯಲ್ಲಿ ಅರಸು ಕುಟುಂಬ ಪ್ರಮುಖ ಪಾತ್ರ ವಹಿಸುತ್ತಿತ್ತು. ಇಂದಿಗೂ ಕಂಬಳ ಕಾರ್ಯಕ್ರಮದಲ್ಲಿ ಅರಸು ಕುಟುಂಬದ ಸದಸ್ಯರು ಗೌರವ ಸ್ಥಾನದಲ್ಲಿ ಕುಳಿತು ಸ್ಪರ್ಧೆಯನ್ನು ವೀಕ್ಷಿಸುವ ಸಂಪ್ರದಾಯ ಮುಂದುವರಿದಿದೆ. ಈ ಕಂಬಳ ಕೇವಲ ಕ್ರೀಡೆ ಮಾತ್ರವಲ್ಲ, ಇದು ಕೃಷಿ ಸಂಸ್ಕೃತಿ ಮತ್ತು ಸಮುದಾಯದ ಏಕತೆಯನ್ನು ಪ್ರತಿಬಿಂಬಿಸುವ ಮಹೋತ್ಸವವಾಗಿದೆ.

Mulki Arasu Family

ಇಂದಿನ ಮೂಲ್ಕಿ ಅರಸು ಕುಟುಂಬ

ಇಂದಿನ ಕಾಲದಲ್ಲಿ ಮೂಲ್ಕಿ ಅರಸು ಕುಟುಂಬದ ಸದಸ್ಯರು ರಾಜಕೀಯ ಆಡಳಿತದಲ್ಲಿಲ್ಲ. ಆದರೆ ಅವರು ಸಾಂಸ್ಕೃತಿಕ ಮತ್ತು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಗೌರವಾನ್ವಿತ ಸ್ಥಾನವನ್ನು ಹೊಂದಿದ್ದಾರೆ. ಮೂಲ್ಕಿ ಅರಸ ಕುಟುಂಬದ ಪ್ರತಿನಿಧಿಗಳು ಕಂಬಳ, ಯಕ್ಷಗಾನ ಮತ್ತು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಮುಂದಾಳುಗಳಾಗಿ ಭಾಗವಹಿಸುತ್ತಾರೆ.

ಪ್ರವಾಸಿಗಳಿಗೆ ಆಕರ್ಷಣೆ

ಮೂಲ್ಕಿ ಅರಮನೆ ಮತ್ತು ಅದರ ಸುತ್ತಲಿನ ಪ್ರದೇಶ ಪ್ರವಾಸಿಗರಿಗೆ ಐತಿಹಾಸಿಕ ಅನುಭವ ನೀಡುವ ಸ್ಥಳ. ಪ್ರವಾಸಿಗರು ಇಲ್ಲಿ ಬಂದಲ್ಲಿ ಮೂಲ್ಕಿ ಅರಮನೆ ಅವಶೇಷಗಳು, ಜೈನ ಬಸದಿ, ಕಂಬಳ ಮೈದಾನ, ಪುರಾತನ ಕೆರೆಗಳು, ಕೋಟೆಗೋಡೆಗಳ ಅವಶೇಷಗಳು-ಇವುಗಳ ಮೂಲಕ ತುಳುನಾಡಿನ ರಾಜಕೀಯ ಮತ್ತು ಸಾಂಸ್ಕೃತಿಕ ಇತಿಹಾಸವನ್ನು ಪರಿಚಯಿಸುತ್ತವೆ.

ಅರಮನೆಯ ನಿರ್ಮಾಣ ಶೈಲಿ

ಮೂಲ್ಕಿ ಅರಮನೆ ಕರಾವಳಿ ಕರ್ನಾಟಕದ ಪಾರಂಪರಿಕ ಕಟ್ಟಡಶೈಲಿಯ ಒಂದು ಸುಂದರ ಉದಾಹರಣೆ. ಅರಮನೆಯ ನಿರ್ಮಾಣದಲ್ಲಿ ಮರ, ಮಣ್ಣು, ಕಲ್ಲು ಮತ್ತು ಲಾಟರೈಟ್ ಕಲ್ಲುಗಳನ್ನು ಬಳಸಲಾಗಿದೆ.

Arasu Family

ಈ ಕಟ್ಟಡದಲ್ಲಿ ಕಾಣುವ ಕೆಲವು ವಿಶೇಷ ಲಕ್ಷಣಗಳು

  • ವಿಶಾಲವಾದ ಆವರಣ
  • ದೊಡ್ಡ ಪ್ರವೇಶ ದ್ವಾರ
  • ಮರದ ಅಚ್ಚುಕಟ್ಟಾದ ಕೆಲಸ
  • ಅಂಗಳ ವ್ಯವಸ್ಥೆ
  • ಉದ್ದವಾದ ಪಡಸಾಲೆ ಮತ್ತು ಪ್ರಾಂಗಣಗಳು

ಈ ಶೈಲಿ ಕರಾವಳಿ ಹವಾಮಾನಕ್ಕೆ ತಕ್ಕಂತೆ ವಿನ್ಯಾಸಗೊಳಿಸಲಾಗಿದೆ. ಗಾಳಿ ಮತ್ತು ಬೆಳಕು ಒಳಗೆ ಸುಲಭವಾಗಿ ಹರಿಯುವಂತೆ ಕಟ್ಟಡ ವಿನ್ಯಾಸ ಮಾಡಲಾಗಿದೆ.

ರಾಜಮನೆತನದ ಜೀವನ

ಒಂದು ಕಾಲದಲ್ಲಿ ಈ ಅರಮನೆ ರಾಜಮನೆತನದ ಚಟುವಟಿಕೆಗಳಿಂದ ತುಂಬಿಕೊಂಡಿತ್ತು. ಇಲ್ಲಿ ರಾಜರು, ರಾಣಿಗಳು, ಕುಟುಂಬ ಸದಸ್ಯರು, ಸೇವಕರು ಮತ್ತು ಅತಿಥಿಗಳು ವಾಸಿಸುತ್ತಿದ್ದರು.

ಅರಮನೆಯಲ್ಲಿದ್ದ ಕೆಲವು ವಿಭಾಗಗಳು

  • ರಾಜರ ಸಭಾಂಗಣ
  • ಕುಟುಂಬದ ವಾಸಸ್ಥಳ
  • ಅತಿಥಿ ಕೊಠಡಿಗಳು
  • ಶಸ್ತ್ರಾಗಾರ
  • ಕುದುರೆ ಕೊಠಡಿಗಳು

ಹಳೆಯ ಕಾಲದಲ್ಲಿ ರಾಜಮನೆತನದ ಕುದುರೆಗಳು ಮತ್ತು ಎತ್ತುಗಳು ವಿಶೇಷ ಸ್ಥಾನ ಹೊಂದಿದ್ದವು. ಅವುಗಳಿಗೆ ವಿಶೇಷವಾಗಿ ತರಬೇತಿ ನೀಡಲಾಗುತ್ತಿತ್ತು.

ಇಂದಿಗೂ ಇಲ್ಲಿ ರಾಜವಂಶ ಸಾಕಿಕೊಂಡು ಬಂದಿರುವ ಕುದುರೆಗಳಿವೆ. ಗೋಶಾಲೆಯಿದೆ. ಅರಸು ಹಾಲು ಎಂದೇ ಗೋಶಾಲೆಯ ಹಾಲು ಪಾಕೀಟುಗಳು ಸಿದ್ಧಗೊಳ್ಳುತ್ತಿವೆ. ರಾಜರ ಅರಮನೆಯ ಹಲವು ಅವಶೇಷಗಳನ್ನು ಸಂರಕ್ಷಿಸಿ ಪ್ರವಾಸಿಗರಿಗಾಗಿ ಮತ್ತು ಇತಿಹಾಸ ಅಧ್ಯಯನಕಾರರಿಗಾಗಿ ಇಡಲಾಗಿದೆ. ಅರಮನೆಯನ್ನು ನವೀಕರಿಸಿ ಏಳೆಂಟು ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ.

ಸುತ್ತಲಿನ ಪ್ರವಾಸಿ ಆಕರ್ಷಣೆಗಳು

ಮೂಲ್ಕಿ ಅರಮನೆಗೆ ಭೇಟಿ ನೀಡುವವರು ಸುತ್ತಲಿನ ಹಲವು ಪ್ರವಾಸಿ ತಾಣಗಳನ್ನು ಕೂಡ ನೋಡಬಹುದು. ಇವುಗಳಲ್ಲಿ ಪ್ರಮುಖವಾದವು ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಾಲಯ, ಶಾಂಭವಿ ನದಿ, ಮೂಲ್ಕಿ ಬೀಚ್. ಮೂಲ್ಕಿಯ ಜೀವನಾಡಿ ಶಾಂಭವಿ ನದಿ. ಬೀಚ್‌ಗಳಲ್ಲಿ ಸಾಕಷ್ಟು ಸಾಹಸಕ್ರೀಡೆಗಳಿಗೆ ಅವಕಾಶ ಕಲ್ಪಿಸಲಾಗಿದೆ.

ಇಂದಿನ ಮೂಲ್ಕಿ ಅರಮನೆ

ಇಂದಿಗೂ ಮೂಲ್ಕಿ ಅರಮನೆ ಸ್ಥಳೀಯ ಇತಿಹಾಸದ ಒಂದು ಪ್ರಮುಖ ಗುರುತಾಗಿ ಉಳಿದಿದೆ. ಈ ಅರಮನೆ ಇಂದಿಗೆ ಪುರಾತನ ವೈಭವವನ್ನು ನೆನಪಿಸುವ ಒಂದು ಪರಂಪರೆ ಕಟ್ಟಡವಾಗಿದೆ. ಇದನ್ನು ಹಿಡನ್ ಹೇರಿಟೇಜ್ ಎಂದು ಕರೆದರೂ ತಪ್ಪಾಗುವುದಿಲ್ಲ. ಕರಾವಳಿ ಪ್ರವಾಸೋದ್ಯಮ ಬೆಳವಣಿಗೆಯಾಗುತ್ತಿರುವ ಹಿನ್ನೆಲೆಯಲ್ಲಿ ಈ ತಾಣಕ್ಕೆ ಹೆಚ್ಚು ಪ್ರವಾಸಿಗರು ಲಗ್ಗೆ ಇಡುವ ಸಾಧ್ಯತೆ ಜಾಸ್ತಿ.

ಮೂಲ್ಕಿ ಅರಮನೆಯ ಬಹುಮುಖ್ಯ ವಿಶೇಷತೆಗಳು

  • ಕರಾವಳಿ ಕರ್ನಾಟಕದ ಪುರಾತನ ರಾಜಮನೆತನದ ಅರಮನೆ
  • ಜೈನ ಬಂಟ ರಾಜವಂಶದ ಇತಿಹಾಸದ ಸಾಕ್ಷಿ
  • ಕಂಬಳ ಕ್ರೀಡೆಯೊಂದಿಗೆ ಆಳವಾದ ಸಂಬಂಧ
  • ಪಾರಂಪರಿಕ ಕರಾವಳಿ ಕಟ್ಟಡ ಶೈಲಿ
  • ದೊಡ್ಡ ಅಂಗಳ ಮತ್ತು ಮರದ ಕಲಾತ್ಮಕ ಕೆಲಸ
  • ಮೂಲ್ಕಿ ಪಟ್ಟಣದ ಐತಿಹಾಸಿಕ ಗುರುತು
  • ಹಳೆಯ ಕಾಲದ ಆಡಳಿತ ಕೇಂದ್ರ
  • ಕರಾವಳಿ ಸಂಸ್ಕೃತಿ ಮತ್ತು ಜನಪದ ಪರಂಪರೆಯ ಪ್ರತಿಬಿಂಬ
  • ಸಮೀಪದಲ್ಲೇ ಪ್ರಸಿದ್ಧ ದೇವಾಲಯಗಳು ಮತ್ತು ನದಿ ತೀರಗಳು
  • ಕರ್ನಾಟಕದ ಕಡಿಮೆ ಪರಿಚಿತ ಆದರೆ ಮಹತ್ವದ ಹೆರಿಟೇಜ್ ತಾಣ

ಪ್ರವಾಸಿಗರಿಗೆ ಸಲಹೆಗಳು

ಮೂಲ್ಕಿ ಅರಮನೆಗೆ ಭೇಟಿ ನೀಡುವವರು, ಮಂಗಳೂರು ನಗರದಿಂದ ರಸ್ತೆ ಮೂಲಕ ಸುಲಭವಾಗಿ ತಲುಪಬಹುದು. ಬೆಳಗ್ಗೆ ಅಥವಾ ಸಂಜೆ ಸಮಯ ಭೇಟಿ ನೀಡಲು ಸೂಕ್ತವಾಗಿದ್ದು ಸಮೀಪದಲ್ಲಿರುವ ಸಮುದ್ರ ತೀರ ಮತ್ತು ದೇವಸ್ಥಾನಗಳನ್ನು ಕೂಡ ನೋಡಬಹುದು. ವಿಶೇಷವೆಂದರೆ ಸ್ಥಳೀಯ ಮಾರ್ಗದರ್ಶಕರಿಂದ ಮಾತ್ರವಲ್ಲ, ರಾಜವಂಶದವರಿಂದಲೇ ಅರಮನೆಯ ಇತಿಹಾಸ ತಿಳಿದುಕೊಳ್ಳಬಹುದು.

ಕುಂದಾಪುರ ಎಜುಕೇಷನ್ ಸೊಸೈಟಿಗೆ ಬಂಗಾರದ ಸಿಂಗಾರ

ಕರಾವಳಿಯ ಮರೆಮಾಚಿದ ಮುತ್ತು

ಮೂಲ್ಕಿ ಅರಮನೆ ಇನ್ನೂ ಬಹುತೇಕ ಪ್ರವಾಸಿಗರಿಗೆ ಪರಿಚಿತವಾಗಿಲ್ಲ. ಇದು ಕರಾವಳಿ ಕರ್ನಾಟಕದ ಒಂದು ಮರೆಮಾಚಿದ ಹೇರಿಟೇಜ್. ಇತಿಹಾಸ, ಸಂಸ್ಕೃತಿ, ಕಂಬಳ ಕ್ರೀಡೆ ಮತ್ತು ಜೈನ ಪರಂಪರೆ ಎಲ್ಲದರ ಸಮಾಗಮ ಈ ಅರಮನೆ. ಮೂಲ್ಕಿ ಅರಮನೆ ಕೇವಲ ಒಂದು ಕಟ್ಟಡವಲ್ಲ; ಅದು ಕರಾವಳಿ ಕರ್ನಾಟಕದ ಒಂದು ಜೀವಂತ ಕಥೆ.

ಕಂಬಳದ ಯಶಸ್ಸಿನ ರೂವಾರಿ ಗೌತಮ್ ಜೈನ್

ಒಂದು ರಾಜ ಕುಟುಂಬ ಎಂಟು ಶತಮಾನಗಳ ಕಾಲ ಕಂಬಳ ಸಂಪ್ರದಾಯವನ್ನು ಮುಂದುವರಿಸಿಕೊಂಡು ಪಾರಂಪರಿಕ ವೈಭವ ತರುವ ಮೂಲಕ ಇಡೀ ಕರಾವಳಿಗೆ ಹಾಗೂ ರಾಜ್ಯಕ್ಕೊಂದು ಸಂಭ್ರಮದ ಹಬ್ಬ ಕೊಡಮಾಡಿದೆ. ಆ ರಾಜವಂಶವೇ ಮೂಲ್ಕಿಯ ಸಾವಂತ ಅರಸು ವಂಶ. ದುಗ್ಗಣ್ಣ ಸಾವಂತ ಅರಸರ ಹಾದಿಯಲ್ಲೇ ಇಂದು ಕಂಬಳವನ್ನು ಯಶಸ್ವಿಯಾಗಿ ಮತ್ತು ಅದ್ದೂರಿಯಾಗಿ ಅದೇ ರೀತಿ ಸಂಪ್ರದಾಯಕ್ಕೆ ಚ್ಯುತಿ ಬಾರದಂತೆ ಆಯೋಜಿಸುತ್ತಿರುವುದು ರಾಜವಂಶದ ಹೆಮ್ಮೆಯ ಕುಡಿ ಗೌತಮ್ ಜೈನ್.

ಕರಾವಳಿ ಕರ್ನಾಟಕದ ಮಣ್ಣಿನಲ್ಲಿ ಕೇವಲ ಪ್ರಕೃತಿ ಸೌಂದರ್ಯವಷ್ಟೇ ಅಲ್ಲ, ಶತಮಾನಗಳ ಇತಿಹಾಸ ಮತ್ತು ಸಂಪ್ರದಾಯಗಳೂ ಬೆರೆತುಹೋಗಿವೆ. ಈ ಪ್ರದೇಶದ ಸಾಂಸ್ಕೃತಿಕ ಗುರುತನ್ನು ವಿಶ್ವದ ಗಮನಕ್ಕೆ ತಂದಿರುವ ಅತ್ಯಂತ ವಿಶಿಷ್ಟ ಆಚರಣೆಗಳಲ್ಲಿ ಒಂದು ಕಂಬಳ.

ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಮತ್ತು ಉಡುಪಿ ಭಾಗಗಳಲ್ಲಿ ನಡೆಯುವ ಈ ಜಲದ ಓಟದ ಹಬ್ಬವು ಕೇವಲ ಕ್ರೀಡೆ ಮಾತ್ರವಲ್ಲ; ಇದು ಒಂದು ಸಂಸ್ಕೃತಿ, ಒಂದು ಆಚರಣೆ, ಒಂದು ಜೀವನಶೈಲಿ. 800 ವರ್ಷಗಳ ಹಿಂದೆಯೇ ಆರಂಭವಾದ ಪರಂಪರೆಯನ್ನು ನಡೆಸಿಕೊಂಡು ಬಂದಿರುವುದು ಒಂದೇ ರಾಜ ಕುಟುಂಬ. ಅದು ಮೂಲ್ಕಿ ಅರಸರ ಕುಟುಂಬ.

ಕರಾವಳಿ ಮಣ್ಣಿನ ಆತ್ಮ – ಕಂಬಳ

ಸಾಮಾನ್ಯವಾಗಿ ನವೆಂಬರ್‌ನಿಂದ ಮಾರ್ಚ್ ವರೆಗೆ ನಡೆಯುವ ಕಂಬಳ ಹಬ್ಬ, ಕರಾವಳಿ ಪ್ರದೇಶದ ಹೆಗ್ಗುರುತು. ಸಂಭ್ರಮದ ಹಬ್ಬ. ಎಮ್ಮೆಗಳು ಓಡುವಾಗ ಅವುಗಳ ಕಾಲುಗಳಿಂದ ನೀರು ಚಿಮ್ಮುವ ದೃಶ್ಯವೇ ಮನಮೋಹಕ. ಅವುಗಳ ಓಟ ರೋಮಾಂಚಕ. ಇದು ಕೇವಲ ಸ್ಪರ್ಧೆಯಲ್ಲ, ಗ್ರಾಮದ ಹಬ್ಬ, ರೈತರ ಗೌರವ, ಸಂಪ್ರದಾಯದ ಪ್ರದರ್ಶನ.

ಮೂಲ್ಕಿಯ ರಾಜಕುಟುಂಬದ ಪೂರ್ವಜರು ಕಂಬಳವನ್ನು ಕೇವಲ ಕ್ರೀಡೆಯಾಗಿ ನೋಡಲಿಲ್ಲ; ಅದು ಗ್ರಾಮ ಸಮುದಾಯದ ಏಕತೆಯ ಪ್ರತೀಕವಾಗಿತ್ತು. ಆದ್ದರಿಂದ ಅವರು ಪ್ರತಿ ವರ್ಷವೂ ಈ ಹಬ್ಬವನ್ನು ಆಯೋಜಿಸುವ ಮೂಲಕ ತಮ್ಮ ಪರಂಪರೆಯನ್ನು ಹಾಗೂ ಕರಾವಳಿಯ ಪರಂಪರೆಯನ್ನು ಉಳಿಸಿದ್ದಾರೆ. ಅರಮನೆಯ ಆಶ್ರಯದಲ್ಲಿ ನಡೆದ ಕಂಬಳಗಳಲ್ಲಿ ಭಾಗವಹಿಸುವುದು ಒಂದು ಗೌರವದ ವಿಷಯ. ಕಂಬಳ ಇದೀಗ ಪ್ರವಾಸಿ ಆಕರ್ಷಣೆಯೂ ಆಗಿದ್ದು, ಕಂಬಳ ನೋಡಲೆಂದೇ ರಾಜ್ಯದ ನಾನಾ ಭಾಗದಿಂದ ಮೂಲ್ಕಿಗೆ ಹೋಗುವ ಸಂಪ್ರದಾಯ ಶುರುವಾಗಿದೆ.

ಕಾಲದ ಪರೀಕ್ಷೆಯನ್ನು ಗೆದ್ದ ಸಂಪ್ರದಾಯ

ಆಧುನಿಕ ಯುಗದಲ್ಲಿ ಕಂಬಳವು ಹಲವು ವಿವಾದಗಳನ್ನೂ ಎದುರಿಸಿದೆ. ಪ್ರಾಣಿಗಳ ಮೇಲಿನ ಹಿಂಸೆ ಆರೋಪದ ಹಿನ್ನೆಲೆಯಲ್ಲಿ ಕೆಲ ವರ್ಷಗಳ ಕಾಲ ಈ ಕ್ರೀಡೆ ಮೇಲೆ ನಿಷೇಧವೂ ವಿಧಿಸಲಾಯಿತು. ಆದರೆ ಕರ್ನಾಟಕ ಸರ್ಕಾರವು 2017ರಲ್ಲಿ ಕಾನೂನು ತಿದ್ದುಪಡಿ ಮಾಡಿ ಕಂಬಳವನ್ನು ಪರಂಪರೆಯ ಕ್ರೀಡೆಯಾಗಿ ಮಾನ್ಯತೆ ನೀಡಿತು. ನಂತರ ನ್ಯಾಯಾಲಯವೂ ಈ ಪರಂಪರೆಯನ್ನು ಮುಂದುವರಿಸಲು ಅವಕಾಶ ನೀಡಿತು. ಇದರೊಂದಿಗೆ ಕಂಬಳವು ಮತ್ತೆ ಕರಾವಳಿ ಕರ್ನಾಟಕದ ಸಂಸ್ಕೃತಿಯ ಪ್ರಮುಖ ಭಾಗವಾಗಿ ಮುಂದುವರಿಯಿತು.

Kambala

ಪ್ರವಾಸೋದ್ಯಮಕ್ಕೆ ಹೊಸ ಆಯಾಮ

ಇತ್ತೀಚಿನ ವರ್ಷಗಳಲ್ಲಿ ಕಂಬಳವು ಕೇವಲ ಗ್ರಾಮೀಣ ಹಬ್ಬವಲ್ಲ; ಅದು ಪ್ರವಾಸೋದ್ಯಮದ ಆಕರ್ಷಣೆಯಾಗಿ ಪರಿಣಮಿಸಿದೆ. ಕಂಬಳ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಕರಾವಳಿ ಸಂಸ್ಕೃತಿಯನ್ನು ಜನರಿಗೆ ಪರಿಚಯಿಸಲಾಗುತ್ತಿದೆ. ಸಂಗೀತ, ಹುಲಿ ವೇಷ, ಕರಾವಳಿ ಆಹಾರ ಮತ್ತು ಜನಪದ ಕಲಾ ಕಾರ್ಯಕ್ರಮಗಳು—ಇವೆಲ್ಲವೂ ಕಂಬಳದ ಹಬ್ಬವನ್ನು ಒಂದು ದೊಡ್ಡ ಸಾಂಸ್ಕೃತಿಕ ಉತ್ಸವವನ್ನಾಗಿ ಮಾಡಿವೆ.

800 ವರ್ಷಗಳ ಕಾಲ ಕಾಲದ ಹೊಡೆತವನ್ನು ಎದುರಿಸಿ ಇನ್ನೂ ಜೀವಂತವಾಗಿರುವ ಈ ಸಂಪ್ರದಾಯ—ಕರ್ನಾಟಕದ ಸಾಂಸ್ಕೃತಿಕ ಐಶ್ವರ್ಯದ ಅತ್ಯಂತ ಅದ್ಭುತ ಉದಾಹರಣೆ. ಈ ಬಾರಿಯ ಕಂಬಳ ಇನ್ನೂ ಅದ್ದೂರಿಯಾಗಿ ನಡೆಯಲಿದ್ದು ಇನ್ನೂರಕ್ಕೂ ಹೆಚ್ಚು ಸ್ಪರ್ಧಿಗಳು ಹಾಗೂ ಅವರ ಸಾಹಸ ನೋಡಲು ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸುವ ನಿರೀಕ್ಷೆ ಇದೆ.

ಗಿಳಿಯ ಬೆಲೆ ಎರಡು ಲಕ್ಷ ರುಪಾಯಿ!

ಗೋವುಗಳನ್ನು, ಕಂಬಳದ ಕೋಣಗಳನ್ನು ಸಾಕಿರುವ ಅರಮನೆಯ ರಾಜವಂಶಸ್ಥರು ವಿಶಿಷ್ಟವಾದ ಪಕ್ಷಿಗಳನ್ನೂ ಸಾಕಿದ್ದಾರೆ. ಅವುಗಳಲ್ಲಿ ಪ್ರಮುಖ ಆಕರ್ಷಣೆ ಅಂದರೆ ಮಕಾಯ್ ತಳಿಯ ಬಣ್ಣಬಣ್ಣದ ಗಿಳಿ. ವೀರ್ ಎಂದು ಈ ಗಿಳಿಗೆ ನಾಮಕರಣ ಮಾಡಿದ್ದು, ಇದರ ಬೆಲೆ ಸುಮಾರು ಎರಡು ಲಕ್ಷಕ್ಕಿಂತ ಅಧಿಕ. ವಿಶೇಷವೇನೆಂದರೆ ವೀರ್ ಎಂಬ ಗಿಳಿಗೆ ಬಹಳ ಮುದ್ದಾಗಿ ಮಾತನಾಡುವುದನ್ನು ಕಲಿಸಲಾಗಿದೆ. ಹಾಯ್ ಹಲೋ ಥ್ಯಾಂಕ್ಯೂ ಹೀಗೆ ಬಹಳಷ್ಟು ಪದಗಳನ್ನು ಕಲಿತುಕೊಂಡಿದೆ.

32ರ ಸಂಭ್ರಮದಲ್ಲಿ ಅಡಿಗಾಸ್ ಯಾತ್ರಾ

ಅರಸರ ಅಶ್ವದಲ್ಲಿ ಸವಾರಿ!

ಅರಮನೆ ನೋಡಲು ಬರುವ ಪ್ರವಾಸಿಗರಿಗೆ ರಾಜರು ಓಡಾಡಿದ, ರಾಜಕುಟುಂಬ ಸಾಕಿದ ಕುದುರೆಯನ್ನು ನೋಡುವ ಅವಕಾಶ ಮಾತ್ರವಲ್ಲ, ಆ ಕುದುರೆಯ ಮೇಲೆ ಸುಮಾರು ಎರಡು ಕಿಲೋಮೀಟರ್ ಸವಾರಿ ಮಾಡುವ ಸೌಭಾಗ್ಯವೂ ದೊರೆಯುತ್ತದೆ. ಆರೋಗ್ಯಕರವಾಗಿ ಬೆಳೆದ ಎತ್ತರದ ಕುದುರೆ ಇಲ್ಲಿಯ ಆಕರ್ಷಣೆಗಳಲ್ಲಿ ಒಂದು. ಗತವೈಭವವನ್ನು ಸಾರುವ ಹಲವಾರು ವಸ್ತುಗಳು, ಪಲ್ಲಕ್ಕಿಗಳು, ವಾಹನ ಚಕ್ರಗಳು, ಹಳೆಯ ಫೋನ್ ಉಪಕರಣಗಳು ಎಲ್ಲವನ್ನೂ ಇಂದಿಗೂ ಜೋಪಾನವಾಗಿ ಉಳಿಸಿಕೊಂಡಿರುವ ರಾಜಕುಟುಂಬದ ಉತ್ತರಾಧಿಕಾರಿ ಗೌತಮ್ ಜೈನ್ ಇವೆಲ್ಲವನ್ನೂ ಪ್ರವಾಸಿಗರಿಗೆ ಹೆಮ್ಮೆಯಿಂದ ವಿವರಿಸುತ್ತಾರೆ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.