ಸ್ಯಾಂಡಲ್ವುಡ್ನಿಂದ ಬ್ಯಾನ್ ಆಗ್ತಾರ ಮಡೆನೂರು ಮನು? ನಾಳೆಯ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸಭೆಯಲ್ಲಿ ಭವಿಷ್ಯ ನಿರ್ಧಾರ
Madenuru Manu: ಅತ್ಯಾಚಾರ ಆರೋಪದಲ್ಲಿ ಪೊಲೀಸ್ ವಶದಲ್ಲಿರುವ ಮಡೆನೂರು ಮನು ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಸ್ಯಾಂಡಲ್ವುಡ್ ನಟರ ಬಗ್ಗೆ ಅವರು ಆಡಿದ ಮಾತಿಗೆ ಸಾರ್ವತ್ರಿಕ ಖಂಡನೆ ವ್ಯಕ್ತವಾಗುತ್ತಿದೆ. ಅವರನ್ನು ಸ್ಯಾಂಡಲ್ವುಡ್ನಿಂದ ಬ್ಯಾನ್ ಮಾಡುವ ಬಗ್ಗೆ ಸುದ್ದಿ ಕೇಳಿ ಬಂದಿದೆ.

ಮಡೆನೂರು ಮನು.

ಬೆಂಗಳೂರು: ನಾವು ಇಡುವ ಒಂದು ತಪ್ಪು ಹೆಜ್ಜೆ ಎಷ್ಟೆಲ್ಲ ಅನಾಹುತ ಸೃಷ್ಟಿಸಬಲ್ಲದು ಎನ್ನುವುದಕ್ಕೆ ಸ್ಪಷ್ಟ ಉದಾಹರಣೆಯಾಗಿ ಹಾಸ್ಯ ನಟ ಮಡೆನೂರು ಮನು (Madenuru Manu) ನಮ್ಮ ಕಣ್ಣ ಮುಂದಿದ್ದಾರೆ. ʼಕಾಮಿಡಿ ಕಿಲಾಡಿಗಳುʼ ರಿಲಾಯಿಟಿ ಶೋ ಮೂಲಕ ಮಿಂಚಿ ಸ್ಯಾಂಡಲ್ವುಡ್ಗೆ ಕಾಲಿಟ್ಟು ಇನ್ನೇನು ಪ್ರವರ್ಧಮಾನಕ್ಕೆ ಬರಬೇಕು ಎನ್ನುವಷ್ಟರಲ್ಲೇ ಮನು ಭವಿಷ್ಯ ಇದೀಗ ಡೋಲಾಯಮಾನವಾಗಿದೆ. ಮಾಡಬಾರದ್ದನ್ನು ಮಾಡಿದರೆ ಆಗಬಾರದ್ದೇ ಆಗುತ್ತದೆ ಎನ್ನುವುದಕ್ಕೆ ಮನು ಜ್ವಲಂತ ಸಾಕ್ಷಿ. ಅತ್ಯಾಚಾರ ಆರೋಪದ ಮೇಲೆ ಪೊಲೀಸ್ ವಶದಲ್ಲಿರುವ ಮನು ಸ್ಯಾಂಡಲ್ವುಡ್ ನಟರ ವಿರುದ್ಧ ಆಡಿದ್ದಾರೆ ಎನ್ನಲಾದ ಮಾತು ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದೇ ಕಾರಣಕ್ಕೆ ಇದೀಗ ಅವರನ್ನು ಸ್ಯಾಂಡಲ್ವುಡ್ ಮತ್ತು ಕಿರುತೆರೆಯಿಂದ ಬ್ಯಾನ್ ಮಾಡುವ ಸಾಧ್ಯತೆ ಇದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಂಗಳವಾರ (ಮೇ 27) ಈ ಬಗ್ಗೆ ತುರ್ತು ಸಭೆ ಕರೆದಿದ್ದು, ಇದರಲ್ಲಿ ಮನು ಬ್ಯಾನ್ ಬಗ್ಗೆ ತೀರ್ಮಾನ ಕೈಗೊಳ್ಳಲಾಗುತ್ತದೆ. ಒಂದುವೇಳೆ ಇದು ನಿಜವಾದರೆ ಮನುವಿನ ಸ್ಯಾಂಡಲ್ವುಡ್ ಸಿನಿ ಜರ್ನಿ ಒಂದೇ ಚಿತ್ರಕ್ಕೆ ಕೊನೆಯಾಗಲಿದೆ. ಏನಿದು ವಿವಾದ? ಇಲ್ಲಿದೆ ಸಂಪೂರ್ಣ ವಿವರ.
ಈಗಾಗಲೇ ಅತ್ಯಾಚಾರ ಪ್ರಕರಣದಲ್ಲಿ ಮಡೆನೂರು ಮನು ಬಂಧನವಾಗಿದೆ. ಅವರಿಗೆ ಕೋರ್ಟ್ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ. ಎರಡು ದಿನಗಳ ತನಿಖೆ, ಮಹಜರು, ಹೇಳಿಕೆ ದಾಖಲು ಬಳಿಕ ಪೊಲೀಸರು ಮಡೆನೂರು ಮನುವನ್ನು 3ನೇ ಎಸಿಜೆಎಂ ನ್ಯಾಯಾಲಯಕ್ಕೆ ಸೋಮವಾರ ಹಾಜರುಪಡಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿರುವ ಕೋರ್ಟ್ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ.
ಏನಿದು ಪ್ರಕರಣ?
ಸಹನಟಿಯಾಗಿದ್ದ ಯುವತಿ ಮಡೆನೂರು ಮನು ವಿರುದ್ಧ ಅತ್ಯಾಚಾರ ಆರೋಪ ಮಾಡಿ ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಠಾಣೆಗೆ ದೂರು ನೀಡಿದ್ದರು. ಹೀಗಾಗಿ ಪೊಲೀಸರು ಕೇಸ್ ದಾಖಲಿಸಿಕೊಂಡು, ಮಡೆನೂರು ಮನುವನ್ನು ಬಂಧಿಸಿದ್ದರು. ಮಡೆನೂರು ಮನು ನಟನೆಯ ಮೊದಲ ಸಿನಿಮಾ ‘ಕುಲದಲ್ಲಿ ಕೀಳ್ಯಾವುದೊ’ ಬಿಡುಗಡೆ ಮುನ್ನವೇ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಸ್ವಯಂಕೃತ ಅಪರಾಧದಿಂದಾಗಿ ತಮ್ಮ ಮೊದಲ ಚಿತ್ರವನ್ನು ಥಿಯೇಟರ್ನಲ್ಲಿ ಕಣ್ತುಂಬಿಕೊಳ್ಳುವ ಅವಕಾಶದಿಂದ ಅವರು ವಂಚಿತರಾಗಿದ್ದಾರೆ.
ಸ್ಯಾಂಡಲ್ವುಡ್ ನಟರ ಬಗ್ಗೆ ನಾಲಗೆ ಹರಿಯಬಿಟ್ಟಿದ್ದ ಮನು
ಇದಲ್ಲದೆ ಮನು ಸ್ಯಾಂಡಲ್ವುಡ್ ನಟರ ಬಗ್ಗೆ ಕೀಳಾಗಿ ಮಾತನಾಡಿರುವ ಹಳೆಯ ಆಡಿಯೊ ಕೂಡ ಈಗ ವೈರಲ್ ಆಗಿದೆ. ಅದರಲ್ಲಿ ಅವರು, ʼʼಶಿವ ರಾಜ್ಕುಮಾರ್ ಇನ್ನೊಂದು ಆರು ವರ್ಷ ಬದುಕಿದ್ರೆ ಹೆಚ್ಚು, ಸತ್ತು ಹೋಗ್ತಾರೆ ನನಗೆ ಗೊತ್ತು. ಧ್ರುವ ಸರ್ಜಾ ಇನ್ನೊಂದು ಎಂಟು ವರ್ಷ ಮಾರ್ಕೆಟ್ನಲ್ಲಿರಬಹುದು. ನಟ ದರ್ಶನ್ ಈಗಾಗಲೇ ಸತ್ತೇ ಹೋದ. ದರ್ಶನ್ ಸರ್ಗೆ ಇನ್ನೊಂದು ಆರು ವರ್ಷ ಕ್ರೇಜ್ ಇರುತ್ತೆ, ಆದ್ರೆ ಸಿನಿಮಾ ಮಾಡಲ್ಲ. ಈ ಮೂವರ ವಿರುದ್ಧ ಕಾಂಪಿಟೇಶನ್ ಕೊಡೋಕೆ ಬಂದಿರೋ ಗಂಡುಗಲಿ ನಾನುʼʼ ಎಂದು ಹೇಳಿದ್ದಾರೆ.
ಈ ಧ್ವನಿ ಮಡೆನೂರು ಮನು ಅವರದ್ದೇ ಎಂದು ಹೇಳಲಾಗುತ್ತಿದೆ. ಮನು ಗೆಳೆಯರೊಂದಿಗೆ ಮದ್ಯ ಸೇವಿಸಿದಾಗ ಈ ರೀತಿ ಮಾತನಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಈ ವೇಳೆ ಅಲ್ಲಿದ್ದವರು ಯಾರೋ ಇದನ್ನು ತಮ್ಮ ಮೊಬೈಲ್ನಲ್ಲಿ ರೆಕಾರ್ಡ್ ಮಾಡಿಕೊಂಡು ಇದೀಗ ವೈರಲ್ ಮಾಡಿರಬಹುದು ಎಂದು ಸಂಶಯ ವ್ಯಕ್ತವಾಗುತ್ತಿದೆ.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ
ಸ್ಯಾಂಡಲ್ವುಡ್ ನಟರ ವಿರುದ್ಧ ಈ ರೀತಿ ನಾಲಗೆ ಹರಿಯಬಿಟ್ಟಿರುವ ಮನು ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಜತೆಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೂ ದೂರು ನೀಡಲಾಗಿದೆ. ಶಿವ ರಾಜ್ಕುಮಾರ್ ಅವರ ಅಭಿಮಾನಿಗಳು ಮನು ವಿರುದ್ಧ ಸೋಮವಾರ ದೂರು ದಾಖಲಿಸಿ, ಸ್ಯಾಂಡಲ್ವುಡ್ನಿಂದ ಬ್ಯಾನ್ ಮಾಡಬೇಕೆಂದು ಆಗ್ರಹಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮಂಗಳವಾರ ಸಭೆ ಕರೆಯಲಾಗಿದ್ದು, ಇದರಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಅಧಿಕೃತರು ತಿಳಿಸಿದ್ದಾರೆ.
ಕಿರುತೆರೆಯಿಂದಲೂ ಬ್ಯಾನ್?
ಈ ಬಗ್ಗೆ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಂ.ನರಸಿಂಹಲು ವಿಶ್ವವಾಣಿ ಜತೆ ಮಾತನಾಡಿ, ʼʼಮನು ಅವರನ್ನು ಬ್ಯಾನ್ ಮಾಡುವಂತೆ ಹಲವರು ಆಗ್ರಹಿಸುತ್ತಿದ್ದಾರೆ. ಈಗಲೇ ಯಾವ ತೀರ್ಮಾನಕ್ಕೆ ಬರಲು ಸಾಧ್ಯವಿಲ್ಲ. ಹೀಗಾಗಿ ನಾಳೆ ಸಭೆ ನಡೆಸಿ ಅದರ ತೀರ್ಮಾನದಂತೆ ಕ್ರಮ ಕೈಗೊಳ್ಳುತ್ತೇವೆ. ಮನು ತಪ್ಪು ಮಾಡಿದ್ದಾನೆ. ಅವನು ಹಾಗೆ ಮಾತನಾಡಬಾರದಿತ್ತು. ಸ್ಯಾಂಡಲ್ವುಡ್ ನಟರ ಬಗ್ಗೆ ಮಾತನಾಡಿದ್ದು ಅಕ್ಷಮ್ಯ ಅಪರಾಧ. ನಟರು ಸತ್ತು ಹೋಗುತ್ತಾರೆ ಎಂದು ಮಾತನಾಡಿದ್ದನ್ನು ಕ್ಷಮಿಸಲು ಸಾಧ್ಯವಿಲ್ಲ. ಅವನ ಮನಸ್ಸಿನಲ್ಲಿರುವ ಮಾತು ಹೊರ ಬಂದಿದೆ. ಮಾಜಿ ಅಧ್ಯಕ್ಷರನ್ನೂ ಮಂಗಳವಾರದ ಸಭೆಗೆ ಕರೆದಿದ್ದೇವೆ. ಎಲ್ಲರೂ ಸೇರಿ ಒಮ್ಮತದ ತೀರ್ಮಾನಕ್ಕೆ ಬರುತ್ತೇವೆ. ಕಿರುತೆರೆಯಿಂದಲೂ ಅವರನ್ನು ಬ್ಯಾನ್ಮಾಡಬೇಕು ಎನ್ನುವ ಮಾತು ಕೇಳಿ ಬಂದಿದೆʼʼ ಎಂದಿದ್ದಾರೆ.
ಈ ಸುದ್ದಿಯನ್ನೂ ಓದಿ: Madenuru Manu: ಅತ್ಯಾಚಾರ ಪ್ರಕರಣ; ನಟ ಮಡೆನೂರು ಮನುಗೆ 14 ದಿನ ನ್ಯಾಯಾಂಗ ಬಂಧನ
ಮನು ವಿರುದ್ಧ ಸಹನಟಿ ಹೇಳಿದ್ದೇನು?
‘ಕಾಮಿಡಿ ಕಿಲಾಡಿಗಳು’ ಶೋ ಮೂಲಕ ಖ್ಯಾತಿ ಪಡೆದ ನಟ ಮಡೆನೂರು ಮನು ವಿರುದ್ಧ ಕಿರುತೆರೆ ನಟಿಯೊಬ್ಬರು ಅತ್ಯಾಚಾರ, ಬಲವಂತದ ಗರ್ಭಪಾತ, ಹಲ್ಲೆ ಹಾಗೂ ಕೊಲೆ ಬೆದರಿಕೆಯ ದೂರು ಹೊರಿಸುವ ಮೂಲಕ ವಾರದ ಹಿಂದೆ ವಿವಾದ ಭುಗಿಲೆದ್ದಿತ್ತು.
"ನಾವು ʼಕಾಮಿಡಿ ಕಿಲಾಡಿಗಳುʼ ಕಾರ್ಯಕ್ರಮದಲ್ಲಿ ಜೊತೆಯಾಗಿ ಕೆಲಸ ಮಾಡಿದ್ದೆವು. ಮೊದಲಿಗೆ ಪರಿಚಯ ಆಗಿ ಸ್ನೇಹ ಬೆಳೆದಿತ್ತು. 2022ರ ನವೆಂಬರ್ 29ರಂದು ಶಿವಮೊಗ್ಗದ ಶಿಕಾರಿಪುರದ ಕಾರ್ಯಕ್ರಮಕ್ಕೆ ಹೋಗಿದ್ದೆವು. ಅಲ್ಲಿ ಒಂದು ಹಾಸ್ಯ ಕಾರ್ಯಕ್ರಮ ಮಾಡಿದ್ದರು. ಕಾರ್ಯಕ್ರಮದ ಬಳಿಕ ಸಂಭಾವನೆ ನೀಡುವ ನೆಪದಲ್ಲಿ ರೂಂಗೆ ಕರೆಸಿಕೊಂಡಿದ್ದರು. ಬಳಿಕ ನನ್ನ ಮೇಲೆ ಅತ್ಯಾಚಾರ ಮಾಡಿದ್ದಾರೆ. ಇದಾದ ಬಳಿಕ 2022ರ ಡಿಸೆಂಬರ್ 3ರಂದು ಮನೆಗೆ ಬಂದು ಬಲವಂತವಾಗಿ ತಾಳಿ ಕಟ್ಟಿರುತ್ತಾರೆ. ಬಳಿಕ ಹಲವು ಬಾರಿ ನನ್ನನ್ನು ಅತ್ಯಾಚಾರ ಮಾಡಿದ್ದಾರೆ. ಬಳಿಕ ನಾನು ಗರ್ಭಿಣಿ ಆಗಿದ್ದೇನೆ. ಮನು ಗರ್ಭಪಾತ ಆಗುವ ಮಾತ್ರೆ ನೀಡಿದ್ದರು. ಇದಾದ ಬಳಿಕವೂ ಮತ್ತೊಮ್ಮೆ ಗರ್ಭಿಣಿ ಆಗಿದ್ದೆ. ಎರಡನೇ ಬಾರಿಯೂ ಗರ್ಭಪಾತ ಮಾಡಿಸಿದ್ದರು" ಎಂದು ಸಹನಟಿ ದೂರು ನೀಡಿದ್ದರು.
"ಬಾಡಿಗೆ ಮನೆಯಲ್ಲಿ ಹಲವು ಬಾರಿ ಲೈಂಗಿಕವಾಗಿ ನನ್ನನ್ನು ಬಳಸಿಕೊಂಡಿದ್ದಾರೆ. ಫೋನ್ನಲ್ಲಿ ಅದರ ವೀಡಿಯೊ ರೆಕಾರ್ಡ್ ಕೂಡ ಮಾಡಿಕೊಂಡಿದ್ದರು. ಈ ವಿಚಾರ ಯಾರಿಗಾದ್ರೂ ಹೇಳಿದ್ರೆ ಕೊಲೆ ಮಾಡ್ತೀನಿ ಅಂತ ಬೆದರಿಕೆ ಹಾಕಿದ್ದಾರೆ. ಜೊತೆಗೆ ನಾನು ಲಕ್ಷಾಂತರ ರೂಪಾಯಿ ಹಣ ಕೂಡ ಅವರಿಗೆ ಕೊಟ್ಟಿದ್ದೇನೆ. ಈತನ ವಿರುದ್ಧ ಕಾನೂನು ಕ್ರಮ ಜರುಗಿಸಿ" ಎಂದು ದೂರಿನಲ್ಲಿ ನಟಿ ಉಲ್ಲೇಖಿಸಿದ್ದರು. ಈ ಘಟನೆಯ ಆಘಾತದಿಂದ ಸ್ಯಾಂಡಲ್ವುಡ್ ಚೇತರಿಸಿಕೊಳ್ಳುವ ಮುನ್ನವೇ ಮನು ಆಡಿದ್ದಾರೆ ಎನ್ನಲಾದ ಮಾತಿನ ಆಡಿಯೊ ಕೂಡ ಹೊರ ಬಿದ್ದಿದೆ. ಸದ್ಯ ಮಂಗಳವಾರ ಸಭೆಯ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.