ನೇಪಾಳ ಜಲಸ್ಫೋಟ; ಕರ್ನಾಟಕದ ಇಬ್ಬರು ನಿವಾಸಿಗಳ ರಕ್ಷಣೆ
Nepal Flood Live: ಭೀಕರ ಪ್ರವಾಹದಲ್ಲಿ ಕನಿಷ್ಠ 300 ಭಾರತೀಯ ಪ್ರಜೆಗಳು ನಾಪತ್ತೆಯಾಗಿದ್ದಾರೆ ಎಂದು ನೇಪಾಳದ ವಿದೇಶಾಂಗ ಸಚಿವ ಶಿಶಿರ್ ಖನಾಲ್ ಗುರುವಾರ ಮಾಹಿತಿ ನೀಡಿದ್ದಾರೆ. ಕಾಠ್ಮಂಡುವಿನಲ್ಲಿ ಮಾತನಾಡಿದ ಖನಾಲ್, ನೇಪಾಳದಲ್ಲಿ ಸಂಭವಿಸಿದ ದಿಢೀರ್ ಪ್ರವಾಹದಿಂದಾಗಿ ಕ್ಷಣಾರ್ಧದಲ್ಲಿ ಸಾಲು ಸಾಲು ನಗರಗಳೇ ಕೊಚ್ಚಿಹೋಗಿವೆ ಎಂದರು.
Nepal Flood -
ಕಾಠ್ಮಂಡು, ಆ.27: ನೇಪಾಳದ ರುಸುವಾ ಜಿಲ್ಲೆಯಲ್ಲಿ ಬುಧವಾರ ಸಂಭವಿಸಿದ ಭೀಕರ ಜಳ ಪ್ರವಾಹದಲ್ಲಿ ನಾಪತ್ತೆಯಾದವರ ಪತ್ತೆಗೆ ನಡೆಯುತ್ತಿರುವ ರಕ್ಷಣಾ ಕಾರ್ಯಗಳ ಮಧ್ಯೆ, ಪೀಡಿತ ಪ್ರದೇಶದಲ್ಲಿ ಸಿಲುಕಿಕೊಂಡಿದ್ದ ಕರ್ನಾಟಕದ ಕಲಬುರಗಿ ಜಿಲ್ಲೆಯ ಇಬ್ಬರನ್ನು ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಒಟ್ಟಾರೆಯಾಗಿ ಈವರೆಗೆ 21 ಭಾರತೀಯರುನ್ನು ರಕ್ಷಣೆ ಮಾಡಲಾಗಿದೆ.
ಕರ್ನಾಟಕ ವಿಪತ್ತು ನಿರ್ವಹಣಾ ಪ್ರಾಧಿಕಾರವು ಇಬ್ಬರು ವ್ಯಕ್ತಿಗಳನ್ನು ಸಂಪರ್ಕಿಸಿ ಅವರನ್ನು ರಕ್ಷಿಸುವ ಮೊದಲು ಅವರ ಪರಿಸ್ಥಿತಿಯ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಿತು. ನೇಪಾಳದಿಂದ ದೆಹಲಿಗೆ ಅವರನ್ನು ಕರೆತರಲು ಈಗ ವ್ಯವಸ್ಥೆ ಮಾಡಲಾಗುತ್ತಿದೆ. ಅವರು ಬಂದ ನಂತರ, ಅವರಿಗೆ ರಾಷ್ಟ್ರ ರಾಜಧಾನಿಯಲ್ಲಿರುವ ಕರ್ನಾಟಕ ಭವನದಲ್ಲಿ ವಸತಿ ಒದಗಿಸಲಾಗುವುದು ಎಂದು ತಿಳಿದುಬಂದಿದೆ.
ಕನ್ನಡಿಗರ ರಕ್ಷಣೆಗಾಗಿ ರಾಜ್ಯ ಸರ್ಕಾರ ತಕ್ಷಣದ ಕ್ರಮಕ್ಕೆ ಮುಂದಾಗಿದ್ದು, ಸಂಕಷ್ಟಕ್ಕೆ ಸಿಲುಕಿರುವ ರಾಜ್ಯದ ನಾಗರಿಕರ ಸಂಪೂರ್ಣ ಮಾಹಿತಿಯನ್ನು ಕ್ರೋಢೀಕರಿಸಲು ಸರ್ಕಾರವು ಅಧಿಕೃತ ಗೂಗಲ್ ಫಾರ್ಮ್ ಲಿಂಕ್ ಬಿಡುಗಡೆ ಮಾಡಿದೆ.
ಕೈಲಾಶ ಮಾನಸಸರೋವರ ಯಾತ್ರೆಗೆ ತೆರಳಿದವರು ಅಥವಾ ಪ್ರವಾಸಕ್ಕಾಗಿ ನೇಪಾಳ ಹಾಗೂ ಟಿಬೆಟ್ ಗಡಿ ಭಾಗಗಳಿಗೆ ತೆರಳಿ ಪ್ರವಾಹದ ಸಿಲುಕಿಕೊಂಡಿರುವ ಪ್ರವಾಸಿಗರು, ಅವರ ಸಂಬಂಧಿಕರು ಹಾಗೂ ಪ್ರವಾಸ ಆಯೋಜಿಸಿದವರು ಈ ಫಾರ್ಮ್ ಮೂಲಕ ತಕ್ಷಣವೇ ವಿವರಗಳನ್ನು ಹಂಚಿಕೊಳ್ಳುವಂತೆ ಕೋರಲಾಗಿದೆ. ಸಂತ್ರಸ್ತರ ಹೆಸರು, ಸಂಪರ್ಕ ಸಂಖ್ಯೆ, ಪ್ರಸ್ತುತ ಇರುವ ಸ್ಥಳ, ಪಾಸ್ಪೋರ್ಟ್ ವಿವರಗಳು ಮತ್ತು ತುರ್ತು ಸಂಪರ್ಕ ಸಂಖ್ಯೆಗಳನ್ನು ಈ ಫಾರ್ಮ್ನಲ್ಲಿ ಭರ್ತಿ ಮಾಡಬಹುದಾಗಿದೆ.
Stranded persons, relatives and tour operators are requested to provide details through the Google Form to facilitate coordination of rescue, evacuation and other necessary assistance with the Ministry of External Affairs, Embassy of India in Nepal, Embassy of India in Beijing.
— Revenue Department (DM,S&R and S&S) (@SEOC_Karnataka) August 27, 2026
ಸಂಗ್ರಹಿಸಲಾಗುವ ಮಾಹಿತಿಯನ್ನು ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA), ನೇಪಾಳದಲ್ಲಿರುವ ಭಾರತೀಯ ರಾಯಭಾರ ಕಚೇರಿ ಹಾಗೂ ಬೀಜಿಂಗ್ನಲ್ಲಿರುವ (ಚೀನಾ) ಭಾರತೀಯ ರಾಯಭಾರ ಕಚೇರಿಗಳೊಂದಿಗೆ ಹಂಚಿಕೊಳ್ಳಲಾಗುತ್ತದೆ. ಇದರ ಮೂಲಕ ಸಂಕಷ್ಟದಲ್ಲಿರುವ ಕನ್ನಡಿಗರನ್ನು ಪತ್ತೆ ಹಚ್ಚಿ, ಸೂಕ್ತ ರಕ್ಷಣೆ, ವೈದ್ಯಕೀಯ ನೆರವು ಹಾಗೂ ಸುರಕ್ಷಿತವಾಗಿ ಸ್ವದೇಶಕ್ಕೆ ಕರೆತರುವ ಕಾರ್ಯಾಚರಣೆಯನ್ನು ತೀವ್ರಗೊಳಿಸಲು ರಾಜ್ಯ ಸರ್ಕಾರದ ವಿಪತ್ತು ನಿರ್ವಹಣಾ ಕೋಶ ಯೋಜಿಸಿದೆ.
ತುರ್ತು ಸಹಾಯವಾಣಿ ಸಹಾಯವಾಣಿ ಸಂಖ್ಯೆಗಳು: 1070 / 080-22253707
ಇ-ಮೇಲ್ ವಿಳಾಸ: [email protected]
ಕನಿಷ್ಠ 300 ಭಾರತೀಯರು ನಾಪತ್ತೆ
ಭೀಕರ ಪ್ರವಾಹದಲ್ಲಿ ಕನಿಷ್ಠ 300 ಭಾರತೀಯ ಪ್ರಜೆಗಳು ನಾಪತ್ತೆಯಾಗಿದ್ದಾರೆ ಎಂದು ನೇಪಾಳದ ವಿದೇಶಾಂಗ ಸಚಿವ ಶಿಶಿರ್ ಖನಾಲ್ ಗುರುವಾರ ಮಾಹಿತಿ ನೀಡಿದ್ದಾರೆ. ಕಾಠ್ಮಂಡುವಿನಲ್ಲಿ ಮಾತನಾಡಿದ ಖನಾಲ್, ನೇಪಾಳದಲ್ಲಿ ಸಂಭವಿಸಿದ ದಿಢೀರ್ ಪ್ರವಾಹದಿಂದಾಗಿ ಕ್ಷಣಾರ್ಧದಲ್ಲಿ ಸಾಲು ಸಾಲು ನಗರಗಳೇ ಕೊಚ್ಚಿಹೋಗಿವೆ. ರಸುವಾ ಪ್ರದೇಶದಲ್ಲಿ ಸಂಭವಿಸಿದ ದುರಂತದಲ್ಲಿ ಈವರೆಗೆ 160ಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿದ್ದು, ಸಾವಿರಾರು ಜನ ನಾಪತ್ತೆಯಾಗಿದ್ದಾರೆ ಎಂದು ತಿಳಿಸಿದರು.