Suriya: 'ಇಸೈಜ್ಞಾನಿ' ಇಳಯರಾಜಾಗೆ ಬಹಿರಂಗವಾಗಿ ಕ್ಷಮೆ ಕೇಳಿದ ʻಕರುಪ್ಪುʼ ಟೀಮ್; ಅಷ್ಟಕ್ಕೂ ಚಿತ್ರತಂಡ ಮಾಡಿದ ಎಡವಟ್ಟೇನು?
ಬಾಕ್ಸ್ ಆಫೀಸ್ನಲ್ಲಿ ಮೂರೇ ದಿನಕ್ಕೆ 147 ಕೋಟಿ ರೂ. ಗಳಿಸಿ ಮುನ್ನುಗ್ಗುತ್ತಿರುವ ನಟ ಸೂರ್ಯ ಅಭಿನಯದ ‘ಕರುಪ್ಪು’ ಚಿತ್ರತಂಡವು ಸಂಗೀತ ಮಾಂತ್ರಿಕ ಇಳಯರಾಜಾ ಅವರಿಗೆ ಬಹಿರಂಗವಾಗಿ ಕ್ಷಮೆಯಾಚಿಸಿದೆ. ಚಿತ್ರದಲ್ಲಿ ಇಳಯರಾಜಾ ಅವರ ಕಾಪಿರೈಟ್ಸ್ ಕಾನೂನು ವಿಚಾರವನ್ನು ವ್ಯಂಗ್ಯ ಮಾಡಿದ್ದ ಸಂಭಾಷಣೆಗೆ ಅಭಿಮಾನಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.
-
ತಮಿಳು ನಟ ಸೂರ್ಯ ಅಭಿನಯದ ‘ಕರುಪ್ಪು’ ಸಿನಿಮಾ ಚಿತ್ರಮಂದಿರಗಳಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದ್ದು, ಜಾಗತಿಕವಾಗಿ ಮೂರೇ ದಿನಕ್ಕೆ 147 ಕೋಟಿ ರೂಪಾಯಿ ಗಳಿಸಿದೆ. ಆದರೆ, ಈ ನಡುವೆ ಸಂಗೀತ ಮಾಂತ್ರಿಕ 'ಇಸೈಜ್ಞಾನಿ' ಇಳಯರಾಜಾ ಅವರಿಗೆ ಚಿತ್ರತಂಡ ಬಹಿರಂಗವಾಗಿ ಕ್ಷಮೆ ಕೇಳಿದೆ. ಸಿನಿಮಾ ಸಕ್ಸಸ್ ಅನ್ನು ಎಂಜಾಯ್ ಮಾಡುವ ಸಮಯದಲ್ಲಿ ಇದ್ಯಾಕೆ ಚಿತ್ರತಂಡ ಇಳಯರಾಜಾ ಅವರಿಗೆ ಕ್ಷಮೆ ಕೇಳಿತು? ಮುಂದೆ ಓದಿ.
ಕರುಪ್ಪು ಸಿನಿಮಾದಲ್ಲಿ ಇಳಯರಾಜಾ ಅವರ ಕಾಪಿರೈಟ್ಸ್ ವಿವಾದವನ್ನು ಹಾಸ್ಯ ಮಾಡಿದ್ದ ಒಂದು ಸಂಭಾಷಣೆ ಸೋಶಿಯಲ್ ಮೀಡಿಯಾದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ಇದೀಗ ಚಿತ್ರತಂಡ ಅಧಿಕೃತವಾಗಿ ಕ್ಷಮೆಯಾಚಿಸಿದ್ದು, ಆ ದೃಶ್ಯವನ್ನು ಚಿತ್ರದಿಂದ ತೆಗೆದುಹಾಕುವುದಾಗಿ ಘೋಷಿಸಿದೆ. ಹೌದು, ‘ಕರುಪ್ಪು’ ಸಿನಿಮಾದ ಒಂದು ದೃಶ್ಯದಲ್ಲಿ 1985ರ ‘ಅಲೈ ಓಸೈ’ ಚಿತ್ರದ ‘ಪೋರಾಡಾಡಾ’ ಎಂಬ ಪ್ರಸಿದ್ಧ ಹಾಡನ್ನು ಬಳಸಿಕೊಳ್ಳಲಾಗಿದೆ. ಈ ಹಾಡು ಮುಗಿದ ತಕ್ಷಣ ಇಳಯರಾಜಾ ಅವರ ಹೆಸರನ್ನು ಪ್ರಸ್ತಾಪಿಸಿ ಒಂದು ಸಂಭಾಷಣೆ ಬರುತ್ತದೆ.
Karuppu Box Office: ಮೂರೇ ದಿನಕ್ಕೆ 100 ಕೋಟಿ ಕ್ಲಬ್ ಸೇರಿದ ‘ಕರುಪ್ಪು’!
ತಮಿಳು ಚಿತ್ರರಂಗದಲ್ಲಿ ತಮ್ಮ ಹಾಡುಗಳನ್ನು ಅನುಮತಿಯಿಲ್ಲದೆ ಬಳಸಿಕೊಳ್ಳುವವರ ವಿರುದ್ಧ ಇಳಯರಾಜಾ ಅವರು ಕಾನೂನು ಸಮರ ಸಾರುತ್ತಿರುವುದನ್ನು ವ್ಯಂಗ್ಯ ಮಾಡುವ ಉದ್ದೇಶದಿಂದ ಈ ಡೈಲಾಗ್ ಇಡಲಾಗಿತ್ತು. ಆದರೆ, ಇಳಯರಾಜಾ ಅವರ ಅಭಿಮಾನಿಗಳು ಹಾಗೂ ಸಿನಿಮಾ ಪ್ರೇಕ್ಷಕರು ಸಾಮಾಜಿಕ ಜಾಲತಾಣಗಳಲ್ಲಿ ಇದರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ತಕ್ಷಣ ಎಚ್ಚೆತ್ತುಕೊಂಡ ಚಿತ್ರ ನಿರ್ಮಾಣ ಸಂಸ್ಥೆ, ತನ್ನ ತಪ್ಪಿಗೆ ವಿಷಾದ ವ್ಯಕ್ತಪಡಿಸಿ ಸ್ಪಷ್ಟನೆ ನೀಡಿದೆ.
ಇಳಯರಾಜಾಗೆ ಕ್ಷಮೆ ಕೇಳಿದ ಕರುಪ್ಪು ಟೀಮ್
"ಕರುಪ್ಪು ಚಿತ್ರದಲ್ಲಿ ಇಳಯರಾಜಾ ಅವರ ಹೆಸರನ್ನು ಬಳಸಿರುವುದು ಕೇವಲ ಆ ಸಂದರ್ಭದ ಕಥೆಯನ್ನು ದಾಟಿಸುವ ಉದ್ದೇಶದಿಂದ ವಿನಃ ಬೇರೇನೂ ಅಲ್ಲ. ಕಳೆದ 50 ವರ್ಷಗಳಿಗೂ ಅಧಿಕ ಕಾಲ ಸಂಗೀತ ಸಾಮ್ರಾಜ್ಯವನ್ನು ಆಳುತ್ತಿರುವ ಇಳಯರಾಜಾ ಅವರ ಇಮೇಜ್ಗೆ ಧಕ್ಕೆ ತರುವ ಅಥವಾ ಅವರನ್ನು ಅವಮಾನಿಸುವ ಯಾವುದೇ ಉದ್ದೇಶ ನಮ್ಮ ತಂಡಕ್ಕೆ ಇರಲಿಲ್ಲ" ಎಂದು ಕರುಪ್ಪು ಟೀಮ್ ಹೇಳಿಕೊಂಡಿದೆ.
Actor Suriya: ಸೂರ್ಯ-ತ್ರಿಶಾ ಕೃಷ್ಣನ್ 'ಕರುಪ್ಪು' ಸಿನಿಮಾ ಬಗ್ಗೆ ಬಂದೇ ಬಿಡ್ತು ಬಿಗ್ ಅಪ್ಡೇಟ್!
ಚಿತ್ರದಿಂದ ಆ ಡೈಲಾಗ್ ಕಟ್
"ಯಾವುದೇ ದುರುದ್ದೇಶವಿಲ್ಲದೆ ಇಟ್ಟಿದ್ದ ಈ ದೃಶ್ಯದಿಂದ ಇಳಯರಾಜಾ ಅವರಿಗೆ, ಅವರ ಆಪ್ತರಿಗೆ ಅಥವಾ ಅವರ ಕೋಟ್ಯಂತರ ಅಭಿಮಾನಿಗಳಿಗೆ ನೋವಾಗಿದ್ದರೆ, ನಮ್ಮ ಚಿತ್ರತಂಡ ವಿನಮ್ರವಾಗಿ ಕ್ಷಮೆಯಾಚಿಸುತ್ತದೆ. ಈ ಸಂಭಾಷಣೆಯು ಕೇವಲ ಒಂದು ವ್ಯಂಗ್ಯ ಸನ್ನಿವೇಶದ ಭಾಗವಾಗಿತ್ತೇ ಹೊರತು, ವೈಯಕ್ತಿಕವಾಗಿ ಅವರನ್ನು ನಿಂದಿಸಲು ಮಾಡಿದ್ದಲ್ಲ"
ಕ್ಷಮೆ ಕೇಳಿದ ಕರುಪ್ಪು ಟೀಮ್
#Pressrelease #PublicAnnouncement #Karuppu #MaestroIlayaraaja pic.twitter.com/hdgP3wZhBL
— DreamWarriorPictures (@DreamWarriorpic) May 19, 2026
"ನಾವು ಇಳಯರಾಜಾ ಅವರ ಭಾವನೆಗಳನ್ನು ಗೌರವಿಸುತ್ತೇವೆ. ಆ ಗೌರವದ ಸಂಕೇತವಾಗಿ, ಮುಂಬರುವ ದಿನಗಳಲ್ಲಿ ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಳ್ಳುವ ಹಾಗೂ ಒಟಿಟಿ ಸೇರಿದಂತೆ ಇತರ ವೇದಿಕೆಗಳಲ್ಲಿ ಬಿಡುಗಡೆಯಾಗುವ ಸಿನಿಮಾದ ಮುಂದಿನ ಆವೃತ್ತಿಗಳಿಂದ ಆ ನಿರ್ದಿಷ್ಟ ಸಂಭಾಷಣೆಯನ್ನು ಸಂಪೂರ್ಣವಾಗಿ ತೆಗೆದುಹಾಕಲು ನಿರ್ಧರಿಸಿದ್ದೇವೆ" ಎಂದು ಕರುಪ್ಪು ನಿರ್ಮಾಪಕರು ಹೇಳಿಕೊಂಡಿದ್ದಾರೆ.
ಆರ್ಜೆ ಬಾಲಾಜಿ ನಿರ್ದೇಶನದ ‘ಕರುಪ್ಪು’ ಸಿನಿಮಾ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದ್ದು, ಸೂರ್ಯ ಜೊತೆಗೆ ತ್ರಿಷಾ, ಇಂದ್ರನ್, ಅನಘಾ ಮಾಯಾ ರವಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದು, ಈ ಸಿನಿಮಾಕ್ಕೆ ಸಾಯಿ ಅಭ್ಯಂಕರ್ ಸಂಗೀತ ನಿರ್ದೇಶನ ಮಾಡಿದ್ದಾರೆ.