ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Operation Sindhu: ಇರಾನ್‌ನಿಂದ ದಿಲ್ಲಿಗೆ ಬಂದಿಳಿದ 310 ಭಾರತೀಯರು; ಒಟ್ಟು 827 ಮಂದಿ ತಾಯ್ನಾಡಿಗೆ ವಾಪಸ್‌

Israel-Iran Conflict: ಇಸ್ರೇಲ್‌-ಇರಾನ್‌ ನಡುವೆ ಸಂಘರ್ಷ ಮುಂದುವರಿದಿದ್ದು, ಶನಿವಾರ (ಜೂ. 21) ಕೇಂದ್ರ ಸರ್ಕಾರ ಆಪರೇಷನ್‌ ಸಿಂಧು ಮೂಲಕ ಇರಾನ್‌ನಲ್ಲಿ ಸಿಲುಕಿದ್ದ 310 ಭಾರತೀಯ ಪ್ರಜೆಗಳನ್ನು ಸುರಕ್ಷಿತವಾಗಿ ಕರೆ ತಂದಿದೆ. ಈ ಕಾರ್ಯಾಚರಣೆ ಭಾಗವಾಗಿ ಈಗಾಗಲೇ 827 ಭಾರತೀಯ ನಾಗರಿಕರು ತಾಯ್ನಾಡಿಗೆ ಬಂದಿದ್ದಾರೆ.

ಇರಾನ್‌ನಿಂದ ದಿಲ್ಲಿಗೆ ಬಂದಿಳಿದ 310 ಭಾರತೀಯರು

Profile Ramesh B Jun 21, 2025 10:56 PM

ಹೊಸದಿಲ್ಲಿ: ಇಸ್ರೇಲ್‌-ಇರಾನ್‌ ನಡುವೆ ಸಂಘರ್ಷ (Israel-Iran Conflict) ಮುಂದುವರಿದಿದ್ದು, ಶನಿವಾರ (ಜೂ. 21) ಕೇಂದ್ರ ಸರ್ಕಾರ ಆಪರೇಷನ್‌ ಸಿಂಧು (Operation Sindhu) ಮೂಲಕ ಇರಾನ್‌ನಲ್ಲಿ ಸಿಲುಕಿದ್ದ 310 ಭಾರತೀಯ ಪ್ರಜೆಗಳನ್ನು ಸುರಕ್ಷಿತವಾಗಿ ಕರೆ ತಂದಿದೆ. ಇರಾನ್‌ನ ಟೆಹ್ರಾನ್‌ನಿಂದ 310 ಭಾರತೀಯರನ್ನು ಹೊತ್ತುಕೊಂಡು ಬಂದ ವಿಶೇಷ ವಿಮಾನವು ದಿಲ್ಲಿಯಲ್ಲಿ ಬಂದಿಳಿಯಿತು. ಸಂಘರ್ಷದ ಹಿನ್ನೆಲೆಯಲ್ಲಿ ಇರಾನ್‌ನಲ್ಲಿ ಸಿಲುಕಿರುವ ಭಾರತೀಯ ನಾಗರಿಕರನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಕರೆತರಲು ಭಾರತ ಸರ್ಕಾರವು ಆರಂಭಿಸಿರುವ ಬೃಹತ್‌ ಕಾರ್ಯಾಚರಣೆಯೇ ಆಪರೇಷನ್ ಸಿಂಧು. ಈ ಕಾರ್ಯಾಚರಣೆ ಭಾಗವಾಗಿ ಈಗಾಗಲೇ 827 ಭಾರತೀಯ ನಾಗರಿಕರು ತಾಯ್ನಾಡಿಗೆ ಬಂದಿದ್ದಾರೆ.

ಒಂದು ಕೈಯಲ್ಲಿ ಭಾರತದ ಧ್ವಜವನ್ನು ಬಿಗಿಯಾಗಿ ಹಿಡಿದುಕೊಂಡು, ವಿಮಾನ ನಿಲ್ದಾಣದಿಂದ ಹೊರ ಬಂದ ಜಮ್ಮು ಕಾಶ್ಮೀರ ಮಲದ ವಿದ್ಯಾರ್ಥಿನಿ ಮಿಜ್ಬನ್ ಇರಾನ್‌ನಲ್ಲಿನ ಭಯಾನಕ ಅನುಭವ ತೆರೆದಿಟ್ಟರು. "ನಾವು ಮೃತದೇಹಗಳನ್ನು ಸಮೀಪದಲ್ಲಿಯೇ ನೋಡಿದ್ದೇವೆ. ಸ್ಫೋಟಗಳ ಶಬ್ದ ಕೇಳಿದ್ದೇವೆ. ವೈಮಾನಿಕ ದಾಳಿಗಳನ್ನು ನೋಡಿದ್ದೇವೆ" ಎಂದು ಹೇಳಿದ್ದಾರೆ. "ಟೆಹ್ರಾನ್‌ನಿಂದ ಕೋಮ್‌, ಅಲ್ಲಿಂದ ಮಶಾದ್‌ ಹೀಗೆ...ಇರಾನ್-ಇಸ್ರೇಲ್ ಸಂಘರ್ಷ ಉಲ್ಬಣಗೊಂಡಾಗಿನಿಂದ ನಾವು ಓಡಾಡುತ್ತಲೇ ಇದ್ದೆವು. ಕೊನೆಗೂ ಸುರಕ್ಷಿತವಾಗಿ ಬಂದಿಳಿದಿದ್ದೇವೆ. ಕರೆ ತಂದುದಕ್ಕೆ ಕೇಂದ್ರ ಸರ್ಕಾರಕ್ಕೆ ಕೃತಜ್ಞತೆಗಳು. ವಿಶ್ವವಿದ್ಯಾಲಯವು ಮತ್ತೆ ಕರೆದರೆ ಎಚ್ಚರಿಕೆಯಿಂದ ಮುಂದಿನ ಹೆಜ್ಜೆ ನಿರ್ಧರಿಸುತ್ತೇವೆʼʼ ಎಂದು ತಿಳಿಸಿದ್ದಾರೆ.



ಈ ಸುದ್ದಿಯನ್ನೂ ಓದಿ: Israel-Iran Conflict: ಇರಾನ್‌ ಕ್ಷಿಪಣಿಗಳ ದಾಳಿಗೆ ಇಸ್ರೇಲ್‌ ಐರನ್‌ ಡೋಮ್‌ ಶಕ್ತಿ ಕುಂದಿತಾ? ಅಖಾಡಕ್ಕೆ ರಷ್ಯಾ- ಅಮೆರಿಕ ಎಂಟ್ರಿ!

ಇಸ್ರೇಲ್‌ ಪ್ರಧಾನಿ ಬೆಂಜಮಿನ್ ನೆತನ್ಯಾಹು ಆಪರೇಷನ್‌ ರೈಸಿಂಗ್‌ ಲಯನ್‌ ಕಾರ್ಯಾಚರಣೆ ಮೂಲಕ ಇರಾನ್‌ ಮೇಲೆ ದಾಳಿ ನಡೆಸಿದ ಬಳಿಕ ಎರಡೂ ದೇಶಗಳ ನಡುವೆ ಸಂಘರ್ಷ ಮುಂದುವರಿಸಿದೆ. ಹೀಗಾಗಿ ಆಪರೇಷನ್‌ ಸಿಂಧು ಮೂಲಕ ಅಲ್ಲಿ ಸಿಲುಕಿರುವ ಭಾರತೀಯರನ್ನು ಕರೆ ತರಲಾಗುತ್ತಿದೆ. ಈಗಾಗಲೇ 3 ವಿಮಾನಗಳ ಮೂಲಕ ಭಾರತೀಯರು ತವರು ನಾಡಿಗೆ ಮರಳಿದ್ದಾರೆ.

ʼʼಆಪರೇಷನ್ ಸಿಂಧು ಭಾಗವಾಗಿ, ಒಟ್ಟು 3 ಚಾರ್ಟರ್ ವಿಮಾನಗಳು - ಇರಾನ್‌ನ ಮಶಾದ್‌ನಿಂದ 2 ಮತ್ತು ತುರ್ಕಮೆನಿಸ್ತಾನದಿಂದ 1 - ಇಲ್ಲಿಯವರೆಗೆ 827 ಭಾರತೀಯ ಪ್ರಜೆಗಳನ್ನು ಯಶಸ್ವಿಯಾಗಿ ಮರಳಿ ಕರೆತಂದಿವೆ. ಇದರಲ್ಲಿ 300ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದಾರೆ. 4ನೇ ವಿಮಾನವು ಶನಿವಾರ ರಾತ್ರಿ 11:30ಕ್ಕೆ ದಿಲ್ಲಿಗೆ ಆಗಮಿಸಲಿದೆ. ಈ ಮೂಲಕ ಮರಳಿದ ಭಾರತೀಯರ ಒಟ್ಟು ಸಂಖ್ಯೆ 1,000 ಗಡಿ ದಾಟಲಿದೆʼʼ ಎಂದು ಮೂಲಗಳು ತಿಳಿಸಿವೆ.



ಜೂ. 18ರಂದು ಆಪರೇಷನ್‌ ಸಿಂಧು ಕಾರ್ಯಾಚರಣೆಗೆ ಅಧಿಕೃತವಾಗಿ ಚಾಲನೆ ನೀಡಲಾಗಿದೆ. ಕ್ಷಿಪಣಿ ದಾಳಿಗಳಿಂದ ಉಂಟಾಗುತ್ತಿರುವ ಗಂಭೀರ ಅಪಾಯಗಳಿಂದ ಭಾರತೀಯರನ್ನು ರಕ್ಷಿಸುವುದೇ ಇದರ ಪ್ರಮುಖ ಗುರಿ ಎಂದು ಕೇಂದ್ರ ಸರ್ಕಾರ ಹೇಳಿದೆ. ಭಾರತೀಯರು ಹೆಚ್ಚಿನ ಸಂಖ್ಯೆಯಲ್ಲಿ ಇರಾನ್‌ನಲ್ಲಿ ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದಾರೆ. ಕೈಗೆಟಕುವ ದರದಲ್ಲಿ ವೈದ್ಯಕೀಯ ಶಿಕ್ಷಣ ಪಡೆಯಲು ಹೆಚ್ಚಿನ ವಿದ್ಯಾರ್ಥಿಗಳು ಇರಾನ್‌ಗೆ ತೆರಳುತ್ತಿದ್ದಾರೆ. ದಿಲ್ಲಿ ವಿಮಾನ ನಿಲ್ದಾಣಕ್ಕೆ ಆಗಮಿಸುವ ಭಾರತೀಯರನ್ನು ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಕೀರ್ತಿ ವರ್ಧನ್ ಸಿಂಗ್ ಸ್ವಾಗತಿಸಿದ್ದಾರೆ.