“ಜಾಗತಿಕ ದಕ್ಷಿಣವು ನಿರ್ಧಾರ ತೆಗೆದುಕೊಳ್ಳುವಂತಾಗಬೇಕು”: ವಿಶ್ವ ನಾಯಕರನ್ನುದ್ದೇಶಿಸಿ ಬ್ರಿಕ್ಸ್ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಖಡಕ್ ಮಾತು
PM Narendra Modi speech: ಜಾಗತಿಕ ದಕ್ಷಿಣವು ನಿರ್ಧಾರ ತೆಗೆದುಕೊಳ್ಳುವ ರಾಷ್ಟ್ರವಾಗಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದು, ಪ್ರತಿಯೊಂದು ಸದಸ್ಯ ರಾಷ್ಟ್ರವೂ ಧ್ವನಿ ಎತ್ತುವ ಅಗತ್ಯವನ್ನು ಒತ್ತಿ ಹೇಳಿದ್ದಾರೆ. ಪ್ರತಿಯೊಂದು ಸದಸ್ಯ ರಾಷ್ಟ್ರವೂ ತನ್ನದೇ ಆದ ಧ್ವನಿಯನ್ನು ಹೊಂದಿರಬೇಕಾದ ಅಗತ್ಯದ ಬಗ್ಗೆ ಅವರು ಬ್ರಿಕ್ಸ್ ಶೃಂಗಸಭೆಯಲ್ಲಿ ಮಾತನಾಡಿದರು.
ಬ್ರಿಕ್ಸ್ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಷಣ -
ನವದೆಹಲಿ, ಸೆ. 12: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆಯುತ್ತಿರುವ ಬ್ರಿಕ್ಸ್ ಶೃಂಗಸಭೆಯಲ್ಲಿ ವಿಶ್ವ ನಾಯಕರನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ (PM Narendra Modi), ಜಾಗತಿಕ ದಕ್ಷಿಣವು (Global South) ನಿರ್ಧಾರ ತೆಗೆದುಕೊಳ್ಳುವ ರಾಷ್ಟ್ರವಾಗಬೇಕೆಂಬ ಆಶಯ ವ್ಯಕ್ತಪಡಿಸಿದರು. ಪ್ರತಿಯೊಂದು ಸದಸ್ಯ ರಾಷ್ಟ್ರವೂ ಧ್ವನಿ ಎತ್ತುವ ಅಗತ್ಯವನ್ನು ಅವರು ಒತ್ತಿ ಹೇಳಿದರು. ಜಾಗತಿಕ ದಕ್ಷಿಣ ವಲಯವು ಕೇವಲ ವೀಕ್ಷಕನಾಗಿರದೆ ಜಾಗತಿಕ ನಿರ್ಧಾರಗಳನ್ನು ತೆಗೆದುಕೊಳ್ಳುವ ಪ್ರಮುಖ ನಿರ್ಣಾಯಕ ಶಕ್ತಿಯಾಗಬೇಕು. ಅಲ್ಲದೆ, ಪ್ರತಿಯೊಂದು ಸದಸ್ಯ ರಾಷ್ಟ್ರವೂ ತನ್ನದೇ ಆದ ಧ್ವನಿಯನ್ನು ಹೊಂದಿರಬೇಕಾದ ಅಗತ್ಯವನ್ನು ಒತ್ತಿ ಹೇಳಿದರು. ಬ್ರಿಕ್ಸ್ (BRICS) ರಾಷ್ಟ್ರಗಳು ಯಾರ ವಿರುದ್ಧವೂ ಅಲ್ಲ, ಒಮ್ಮತದಿಂದ ಮುಂದುವರಿಯುತ್ತದೆ ಎಂದು ತಿಳಿಸಿದರು.
ಜಾಗತಿಕ ದಕ್ಷಿಣದ ದೇಶಗಳು ಜಾಗತಿಕ ಸಂಸ್ಥೆಗಳ ಮುಂಚೂಣಿಯ ಸಾಲಿನಲ್ಲಿ ಕುಳಿತಿದ್ದರೂ, ನಿರ್ಧಾರಗಳನ್ನು ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ಇನ್ನೂ ಕೊನೆಯ ಸಾಲಿನಲ್ಲಿಯೇ ಉಳಿದಿವೆ. ನಾವು ಈ ಸವಲತ್ತುಗಳ ಪಿರಮಿಡ್ ಅನ್ನು ಸಹಭಾಗಿತ್ವದ ವೇದಿಕೆಯಾಗಿ ಪರಿವರ್ತಿಸಬೇಕು. ಅಲ್ಲಿ ಪ್ರತಿಯೊಂದು ರಾಷ್ಟ್ರಕ್ಕೂ ತನ್ನದೇ ಆದ ಧ್ವನಿ ಇರುತ್ತದೆ. ಪ್ರತಿಯೊಬ್ಬ ಸದಸ್ಯನಿಗೂ ಅದರಲ್ಲಿ ಪಾಲು ಇರಬೇಕು. ಮಾನವೀಯತೆಯ ಪ್ರಗತಿಯೇ ಪ್ರತಿಯೊಂದು ಪ್ರಯತ್ನದ ಪ್ರಮುಖ ಕೇಂದ್ರಬಿಂದುವಾಗಿರಬೇಕು ಎಂದು ಮೋದಿ ಹೇಳಿದರು.
ದೆಹಲಿಯಲ್ಲಿ ನಡೆಯುತ್ತಿರುವ ಬ್ರಿಕ್ಸ್ ಶೃಂಗಸಭೆ:
Sharing my opening remarks during the BRICS Session on ‘Inclusive Global Governance and Strengthening Multilateralism.’
— Narendra Modi (@narendramodi) September 12, 2026
https://t.co/g31TharSOc
ಮುಂದಿನ ಪ್ರಾದೇಶಿಕ ಶೃಂಗಸಭೆಯ ಒಳಗಾಗಿ 10 ಅಂಶಗಳ ಸುಧಾರಣಾ ಮಾರ್ಗಸೂಚಿಯನ್ನು ಸಿದ್ಧಪಡಿಸುವಂತೆ ಅವರು ಪ್ರಸ್ತಾಪಿಸಿದರು. ಈ ಮಾರ್ಗಸೂಚಿಯು ಪ್ರಾತಿನಿಧ್ಯ, ಸ್ಪಂದನಾಶೀಲತೆ ಮತ್ತು ನಿಯಮ ರಚನೆ ಎಂಬ ಮೂರು ಪ್ರಮುಖ ಸ್ತಂಭಗಳ ಮೇಲೆ ಕೇಂದ್ರೀಕೃತವಾಗಿರಬೇಕು ಎಂದು ಅವರು ಹೇಳಿದರು.
ಪ್ರಾತಿನಿಧ್ಯ ವಿಚಾರಕ್ಕೆ ಸಂಬಂಧಿಸಿದಂತೆ, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸುಧಾರಣೆಗಳನ್ನು ಇನ್ನು ಮುಂದೆ ವಿಳಂಬ ಮಾಡಲು ಸಾಧ್ಯವಿಲ್ಲ. ವಿವಿಧ ದೇಶಗಳ ನಡುವೆ ನಡೆಯುವ ಲಿಖಿತ ಮಾತುಕತೆಗಳನ್ನು ಒಂದು ನಿರ್ದಿಷ್ಟ ಕಾಲಮಿತಿಗೆ ಮತ್ತು ಸ್ಪಷ್ಟವಾದ, ಪ್ರಾಯೋಗಿಕ ಫಲಿತಾಂಶಗಳಿಗೆ ಜೋಡಿಸಬೇಕು ಎಂದು ಪ್ರಧಾನಿ ಮೋದಿ ಇದೇ ವೇಳೆ ಉಲ್ಲೇಖಿಸಿದರು.
ಏಳು ವರ್ಷಗಳ ಬಳಿಕ ಭಾರತಕ್ಕೆ ಬಂದ ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್
ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗವಹಿಸಲು ಚೀನಾದ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಶನಿವಾರ (ಸೆ. 12) ರಾಷ್ಟ್ರ ರಾಜಧಾನಿಗೆ ದೆಹಲಿಗೆ ಆಗಮಿಸಿದ್ದಾರೆ. ಏಳು ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಭಾರತಕ್ಕೆ ಆಗಮಿಸಿರುವ ಅವರಿಗೆ ಬಹು ಹಂತದ ಭದ್ರತೆಯನ್ನು ಒದಗಿಸಲು ಸುಮಾರು 15,000 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಗಡಿ ಭದ್ರತೆ ಸೇರಿದಂತೆ ಎರಡು ರಾಷ್ಟ್ರಗಳ ನಡುವಿನ ಸಂಬಂಧ ಸುಧಾರಣೆಯತ್ತ ಇತ್ತೀಚೆಗೆ ನಡೆದ ಸರಣಿ ಉನ್ನತ ಮಟ್ಟದ ಮಾತುಕತೆಗಳ ನಡುವೆ ಚೀನಾ ಅಧ್ಯಕ್ಷರು ಭಾರತಕ್ಕೆ ಆಗಮಿಸಿದ್ದಾರೆ.
ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಅವರೊಂದಿಗೆ ಚೀನಾದ ಹಿರಿಯ ಸರ್ಕಾರಿ ಅಧಿಕಾರಿಗಳು ಮತ್ತು ಉದ್ಯಮ ಪ್ರಮುಖರನ್ನು ಒಳಗೊಂಡ ಉನ್ನತ ಮಟ್ಟದ ನಿಯೋಗವು ದೆಹಲಿಗೆ ಆಗಮಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ (ಸೆ.12) ಸಂಜೆ ಕ್ಸಿ ಜಿನ್ಪಿಂಗ್ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಈ ಸಂದರ್ಭದಲ್ಲಿ ಇವರ ನಡುವೆ ವ್ಯಾಪಾರ ಮತ್ತು ಹೂಡಿಕೆಗೆ ಸಂಬಂಧಪಟ್ಟ ವಿಷಯಗಳು ಚರ್ಚೆಯಾಗುವ ಸಾಧ್ಯತೆ ಇದೆ.