ನಾಲ್ಕಂತಸ್ತಿನ ಕಟ್ಟಡ ಕುಸಿತ, 9 ಮಂದಿ ಸಾವು: ಅವಶೇಷಗಳಡಿಯಲ್ಲಿ ಹಲವರು ಸಿಲುಕಿರುವ ಶಂಕೆ
Building Collapses: ನಾಲ್ಕು ಅಂತಸ್ತಿನ ಕಟ್ಟಡದ ಒಂದು ಭಾಗ ಕುಸಿದು ಬಿದ್ದಿರುವ ಘಟನೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಭಿವಂಡಿಯಲ್ಲಿ ನಡೆದಿದೆ. ಸುಮಾರು 11 ಜನರು ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿದ್ದು, 8 ಮೃತದೇಹಗಳನ್ನು ಈಗಾಗಲೇ ಹೊರತೆಗೆಯಲಾಗಿದೆ. ಎನ್ಡಿಆರ್ಎಫ್ ಮತ್ತು ಭಿವಂಡಿ ಅಗ್ನಿಶಾಮಕ ದಳದಿಂದ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.
ಮುಂಬೈ ಬಳಿ ಕಟ್ಟಡ ಕುಸಿತ, 9 ಮಂದಿ ಸಾವು -
ಮುಂಬೈ, ಜು.31: ನಾಲ್ಕು ಅಂತಸ್ತಿನ ಕಟ್ಟಡದ ಒಂದು ಭಾಗ ಕುಸಿದು ಬಿದ್ದಿರುವ (Building Collapses) ಘಟನೆ ಮಹಾರಾಷ್ಟ್ರದ (Maharashtra) ಥಾಣೆ ಜಿಲ್ಲೆಯ ಭಿವಂಡಿಯಲ್ಲಿ ನಡೆದಿದೆ. ಗುರುವಾರ (ಜು.30) ತಡರಾತ್ರಿ ಕುಸಿದು ಬಿದ್ದಿದ್ದು, ಸುಮಾರು 11 ಜನರು ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿದ್ದಾರೆ. ಶುಕ್ರವಾರ (ಜು.31) ಬೆಳಗ್ಗೆ 9 ಗಂಟೆಯ ಹೊತ್ತಿಗೆ, ಕನಿಷ್ಠ ಎಂಟು ಮೃತದೇಹಗಳನ್ನು ರಕ್ಷಣಾ ತಂಡಗಳು ಹೊರತೆಗೆದಿದ್ದಾರೆ. ಇನ್ನೂ ಹಲವರು ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ.
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್ಡಿಆರ್ಎಫ್) ಮತ್ತು ಭಿವಂಡಿ ಅಗ್ನಿಶಾಮಕ ದಳದಿಂದ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಸ್ಥಳೀಯ ನಿವಾಸಿಗಳ ಪ್ರಕಾರ, ಕಟ್ಟಡದಲ್ಲಿ ಆರು ಜನರು ಮತ್ತು ದುರಸ್ತಿ ಕಾರ್ಯ ನಡೆಸುತ್ತಿದ್ದ ಐದು ಕಾರ್ಮಿಕರು ನಾಪತ್ತೆಯಾಗಿದ್ದಾರೆ. ಇಲ್ಲಿಯವರೆಗೆ, ನಾವು ಎಂಟು ಮೃತದೇಹಗಳನ್ನು ಅವಶೇಷಗಳಿಂದ ಹೊರತೆಗೆದಿದ್ದೇವೆ. ಇನ್ನೂ ಹೆಚ್ಚಿನ ಮೃತದೇಹಗಳು ಕೆಳಗೆ ಸಿಲುಕಿರುವ ಸಾಧ್ಯತೆಯಿದೆ. ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ. ಮೃತದೇಹಗಳನ್ನು ಐಜಿಎಂ ಆಸ್ಪತ್ರೆಗೆ ಕಳುಹಿಸಲಾಗಿದ್ದು, ಕಾರ್ಮಿಕರ ಗುರುತನ್ನು ಇನ್ನೂ ಪತ್ತೆ ಮಾಡಲು ಸಾಧ್ಯವಾಗಿಲ್ಲ ಎಂದು ಭಿವಂಡಿ ಅಗ್ನಿಶಾಮಕ ದಳದ ಅಗ್ನಿಶಾಮಕ ಅಧಿಕಾರಿ ನಿತಿನ್ ಚವ್ಹಾಣ್ ತಿಳಿಸಿದ್ದಾರೆ.
ಇಲ್ಲಿದೆ ವಿಡಿಯೊ:
VIDEO | Bhiwandi, Maharashtra: Operations continue to rescue people feared trapped in debris of the building that collapsed late on Thursday. A portion of the Kohinoor Building in Balaji Nagar area of the powerloom town collapsed around 11.30 pm on Thursday, officials said. At… pic.twitter.com/6jxXzf9Jk9
— Press Trust of India (@PTI_News) July 31, 2026
ಭಿವಂಡಿಯ ಗಂಗಾರಾಮ್ ವಾಡಾದ ಬಾಲಾಜಿ ನಗರದಲ್ಲಿರುವ ನಾಲ್ಕು ಅಂತಸ್ತಿನ ಕೊಹಿನೂರ್ ಕಟ್ಟಡವನ್ನು ಭಿವಂಡಿ-ನಿಜಾಂಪುರ ಮುನ್ಸಿಪಲ್ ಕಾರ್ಪೊರೇಷನ್ (ಬಿಎನ್ಎಂಸಿ) ಈ ಹಿಂದೆ ಅಪಾಯಕಾರಿ ಎಂದು ಘೋಷಿಸಿತ್ತು ಎಂದು ಅಗ್ನಿಶಾಮಕ ಅಧಿಕಾರಿಗಳು ತಿಳಿಸಿದ್ದಾರೆ. ಅಸುರಕ್ಷಿತ ಎಂದು ವರ್ಗೀಕರಿಸಲ್ಪಟ್ಟಿದ್ದರೂ, ಘಟನೆ ಸಂಭವಿಸಿದಾಗ ದುರಸ್ತಿ ಕಾರ್ಯ ನಡೆಯುತ್ತಿತ್ತು.
Maharashtra Rains: ಪುಣೆಯಲ್ಲಿ ಕಸದ ದಿಬ್ಬ ಕುಸಿದು ಕಟ್ಟಡ ನೆಲಸಮ; ಅವಶೇಷಗಳಡಿ 15 ಮಂದಿ ಸಿಲುಕಿರುವ ಶಂಕೆ
ರಾತ್ರಿ 8 ರಿಂದ 9 ಗಂಟೆಯ ನಡುವೆ ಕಟ್ಟಡದಿಂದ ದೊಡ್ಡ ಬಿರುಕು ಬಿಡುವ ಶಬ್ಧಗಳು ನಿವಾಸಿಗಳಿಗೆ ಕೇಳಿಬಂದವು. ಅಪಾಯವನ್ನು ಗ್ರಹಿಸಿದ ಸ್ಥಳೀಯ ನಿವಾಸಿಗಳು ಹಲವಾರು ಕುಟುಂಬಗಳನ್ನು ಆವರಣದಿಂದ ಸ್ಥಳಾಂತರಿಸಲು ಸಹಾಯ ಮಾಡಿದರು. ಆದರೆ ರಾತ್ರಿ 11 ರಿಂದ 11:30 ರ ನಡುವೆ, ಕೆಲವು ನಿವಾಸಿಗಳು ಮತ್ತು ಕಾರ್ಮಿಕರು ಇನ್ನೂ ಒಳಗೆ ಇದ್ದರು. ಇತರರು ಸ್ಥಳಾಂತರಿಸಲು ಪ್ರಯತ್ನಿಸುತ್ತಿರುವಾಗ, ಕಟ್ಟಡದ ಬಿ ವಿಂಗ್ನ ಒಂದು ಭಾಗವು ಇದ್ದಕ್ಕಿದ್ದಂತೆ ಕುಸಿದು ಬಿತ್ತು.
ಆ ಕಟ್ಟಡವು 48 ಕೊಠಡಿಗಳನ್ನು ಒಳಗೊಂಡಿದ್ದು, ಪ್ರತಿ ಮಹಡಿಯಲ್ಲಿ 12 ಕೊಠಡಿಗಳಿವೆ. ಅವಶೇಷಗಳ ಅಡಿಯಲ್ಲಿ ಇನ್ನೂ ಹಲವಾರು ಜನರು ಸಿಲುಕಿರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ. ಆರಂಭದಲ್ಲಿ ಕಾಣೆಯಾದವರಲ್ಲಿ ಶಮ್ಜಿ ಪಾಲ್ (46), ಸಂತೋಷ್ ಪಾಂಡೆ ಅಲಿಯಾಸ್ ಮುನ್ನಾ (42), ಮೀರಜ್ ಶೇಖ್ (35) ಮತ್ತು ಗುರುತುಗಳನ್ನು ಇನ್ನೂ ದೃಢಪಡಿಸದ ಹಲವಾರು ಕಾರ್ಮಿಕರು ಸೇರಿದ್ದಾರೆ.
ಭಿವಂಡಿ ಅಗ್ನಿಶಾಮಕ ದಳ, ಎನ್ಡಿಆರ್ಎಫ್ ಮತ್ತು ಭೋಯಿವಾಡಾ ಪೊಲೀಸ್ ಠಾಣೆಯ ಸಿಬ್ಬಂದಿ ಸೇರಿದಂತೆ ತುರ್ತು ತಂಡಗಳು ಕುಸಿತದ ನಂತರ ತಕ್ಷಣ ಸ್ಥಳಕ್ಕೆ ಧಾವಿಸಿವೆ. ತರಬೇತಿ ಪಡೆದ ಸ್ನಿಫರ್ ನಾಯಿಗಳ ಸಹಾಯದಿಂದ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಳನ್ನು ನಡೆಸಲಾಗುತ್ತಿದೆ. ಎರಡು ಆಂಬ್ಯುಲೆನ್ಸ್ಗಳು ಮತ್ತು ಒಂದು ಜೆಸಿಬಿ ಅಗೆಯುವ ಯಂತ್ರವನ್ನು ಸ್ಥಳದಲ್ಲಿ ನಿಯೋಜಿಸಲಾಗಿದ್ದು, ಅವಶೇಷಗಳ ಅಡಿಯಲ್ಲಿ ಸಿಲುಕಿರುವವರನ್ನು ಪತ್ತೆಹಚ್ಚಲು ಮತ್ತು ರಕ್ಷಿಸಲು ಅಧಿಕಾರಿಗಳು ಪ್ರಯತ್ನಗಳನ್ನು ಮುಂದುವರಿಸಿದ್ದಾರೆ.