ಆಪರೇಷನ್ ಸಿಂದೂರ್ ಬಗ್ಗೆ ಯುಟರ್ನ್ ಹೊಡೆದ ಕೊಲಂಬಿಯಾ; ಪಾಕ್ ಪರ ಹೇಳಿಕೆ ವಾಪಸ್
ಭಾರತವು ಆಪರೇಷನ್ ಸಿಂದೂರ್ ಆರಂಭಿಸಿದ ಬಳಿಕ ಪಾಕಿಸ್ತಾನದಲ್ಲಿ ನಡೆದ ಸಾವುಗಳಿಗೆ ಸಂತಾಪ ಸೂಚಿಸಿದ್ದ ಕೊಲಂಬಿಯಾ ಈಗ ಭಾರತದ ಭಯೋತ್ಪಾದನಾ ವಿರೋಧಿ ನಿಲುವಿಗೆ ಬೆಂಬಲ ಸೂಚಿಸಿದೆ. ಈ ಕುರಿತಾದ ಹೇಳಿಕೆಯನ್ನು ಶೀಘ್ರದಲ್ಲೇ ಹೊರಡಿಸಲಿದೆ. ಕಾಂಗ್ರೆಸ್ ಸಂಸದ ಶಶಿ ತರೂರ್ ನೇತೃತ್ವದ ಸರ್ವಪಕ್ಷೀಯ ತಂಡದ ಕೊಲಂಬಿಯಾ ಭೇಟಿಯ ನಂತರ ಈ ಬದಲಾವಣೆ ಕಂಡುಬಂದಿದೆ.


ನವದೆಹಲಿ: ಭಾರತವು ಆಪರೇಷನ್ ಸಿಂದೂರ್ (Operation Sindoor) ಆರಂಭಿಸಿದ ಬಳಿಕ ಪಾಕಿಸ್ತಾನದಲ್ಲಿ (Pakistan) ನಡೆದ ಸಾವುಗಳಿಗೆ ಸಂತಾಪ ಸೂಚಿಸಿದ್ದ ಕೊಲಂಬಿಯಾ (Colombia) ಈಗ ಭಾರತದ ಭಯೋತ್ಪಾದನಾ ವಿರೋಧಿ ನಿಲುವಿಗೆ ಬೆಂಬಲ ಸೂಚಿಸಿದೆ. ಈ ಕುರಿತಾದ ಹೇಳಿಕೆಯನ್ನು ಶೀಘ್ರದಲ್ಲೇ ಹೊರಡಿಸಲಿದೆ. ಕಾಂಗ್ರೆಸ್ ಸಂಸದ ಶಶಿ ತರೂರ್ (Shashi Tharoor) ನೇತೃತ್ವದ ಸರ್ವಪಕ್ಷೀಯ ತಂಡದ ಕೊಲಂಬಿಯಾ ಭೇಟಿಯ ನಂತರ ಈ ಬದಲಾವಣೆ ಕಂಡುಬಂದಿದೆ.
ಕೊಲಂಬಿಯಾದ ಹಿಂದಿನ ಹೇಳಿಕೆಯಿಂದ ಭಾರತಕ್ಕೆ ನಿರಾಸೆಯಾಗಿತ್ತು ಎಂದು ತರೂರ್ ಶುಕ್ರವಾರ ಆಕ್ಷೇಪ ವ್ಯಕ್ತಪಡಿಸಿದ್ದರು. “ಅವರು ತಮ್ಮ ಹಿಂದಿನ ಹೇಳಿಕೆಯನ್ನು ಹಿಂಪಡೆದಿದ್ದಾರೆ ಮತ್ತು ಭಾರತದ ನಿಲುವಿಗೆ ಬಲವಾದ ಬೆಂಬಲದ ಹೇಳಿಕೆಯನ್ನು ಶೀಘ್ರದಲ್ಲಿ ಹೊರಡಿಸಲಿದ್ದಾರೆ” ಎಂದು ತರೂರ್ ತಿಳಿಸಿದ್ದಾರೆ. ಭಯೋತ್ಪಾದಕರನ್ನು ಕಳುಹಿಸುವವರಿಗೂ ತಮ್ಮ ರಕ್ಷಣೆಗಾಗಿ ಕಾರ್ಯಾಚರಿಸುವವರಿಗೂ ಸಮಾನತೆ ಇರಲಾರದು ಎಂದು ಅವರು ಒತ್ತಿ ಹೇಳಿದರು.
Colombia makes a U-turn, set to issue a strong statement supporting India on terror after withdrawing condolences over Pak deaths in Operation Sindoor🔥
— Satyaagrah (@satyaagrahindia) May 31, 2025
Shashi Tharoor, leading India’s delegation, confirmed the shift a day after expressing disappointment over Colombia’s earlier… pic.twitter.com/b4xVaNw5Tn
ಈ ಸುದ್ದಿಯನ್ನೂ ಓದಿ: Prakash Raj: ಒನ್ ನೇಷನ್, ಒನ್ ಹಸ್ಬಂಡ್; ಆಪರೇಷನ್ ಸಿಂದೂರ್ ಕುರಿತು ನಾಲಿಗೆ ಹರಿಬಿಟ್ಟ ಪ್ರಕಾಶ್ ರಾಜ್
ಮಾಜಿ ರಾಯಭಾರಿ ಮತ್ತು ಬಿಜೆಪಿ ನಾಯಕ ತರಂಜಿತ್ ಸಿಂಗ್ ಸಂಧು, “ಕೊಲಂಬಿಯಾದ ಕಾರ್ಯಕಾರಿ ವಿದೇಶಾಂಗ ಸಚಿವರೊಂದಿಗೆ ನಡೆದ ಚರ್ಚೆಯಲ್ಲಿ, ನಮ್ಮ ತಂಡವು ಘಟನೆಯ ಕಾಲಗಣನೆ ಮತ್ತು ಕಾಶ್ಮೀರದ ವಾಸ್ತವ ಸ್ಥಿತಿಯನ್ನು ವಿವರಿಸಿತು. ಕೊಲಂಬಿಯಾ ಶೀಘ್ರದಲ್ಲೇ ಭದ್ರತಾ ಮಂಡಳಿಯ ಸದಸ್ಯವಾಗಲಿದ್ದು, ಈ ಬದಲಾವಣೆ ಮಹತ್ವದ್ದಾಗಿದೆ” ಎಂದು ಅವರು ಹೇಳಿದ್ದಾರೆ. ಕೊಲಂಬಿಯಾದ ಉಪ ವಿದೇಶಾಂಗ ಸಚಿವೆ ರೋಸಾ ಯೋಲಾಂಡಾ ವಿಲಾವಿಸೆನ್ಸಿಯೊ, “ಇಂದಿನ ವಿವರಣೆಯಿಂದ ಕಾಶ್ಮೀರದ ಸಂಘರ್ಷದ ನೈಜ ಸ್ಥಿತಿಯನ್ನು ಅರಿತಿದ್ದೇವೆ. ಈ ಸಂವಾದವನ್ನು ಮುಂದುವರಿಸಲಿದ್ದೇವೆ” ಎಂದರು.
ತರೂರ್ ನೇತೃತ್ವದ ತಂಡವು ಪನಾಮ ಮತ್ತು ಗಯಾನಾದ ನಂತರ ಗುರುವಾರ ಕೊಲಂಬಿಯಾಕ್ಕೆ ಆಗಮಿಸಿತು. ಬೊಗೋಟಾದಲ್ಲಿ ಸಂಸದರು, ಸಚಿವರು, ಥಿಂಕ್ ಟ್ಯಾಂಕ್ಗಳು ಮತ್ತು ಮಾಧ್ಯಮಗಳೊಂದಿಗೆ ಚರ್ಚೆ ನಡೆಸಲಿದೆ. ತಂಡದಲ್ಲಿ ಸರ್ಫರಾಜ್ ಅಹ್ಮದ್ (ಜಾರ್ಖಂಡ್ ಮುಕ್ತಿ ಮೋರ್ಚಾ), ಜಿ.ಎಂ. ಹರೀಶ್ ಬಾಲಯೋಗಿ (ತೆಲುಗು ದೇಶಂ ಪಕ್ಷ), ಶಶಾಂಕ್ ಮಣಿ ತ್ರಿಪಾಠಿ (ಬಿಜೆಪಿ), ಭುವನೇಶ್ವರ ಕಾಲಿತಾ (ಬಿಜೆಪಿ), ಮಿಲಿಂದ್ ದೇವರಾ (ಶಿವಸೇನಾ), ತೇಜಸ್ವಿ ಸೂರ್ಯ (ಬಿಜೆಪಿ) ಮತ್ತು ತರಂಜಿತ್ ಸಿಂಗ್ ಸಂಧು ಇದ್ದಾರೆ. ಭಾರತವು 33 ಜಾಗತಿಕ ರಾಜಧಾನಿಗಳಿಗೆ ಏಳು ಸರ್ವಪಕ್ಷೀಯ ತಂಡಗಳನ್ನು ಕಳುಹಿಸಿ, ಪಹಲ್ಗಾಮ್ ದಾಳಿಯ ಬಗ್ಗೆ ಅಂತಾರಾಷ್ಟ್ರೀಯ ಸಮುದಾಯವನ್ನು ಸಂಪರ್ಕಿಸುತ್ತಿದೆ.