ಅರುಣಾಚಲ ಪ್ರದೇಶ, ಅಸ್ಸಾಂನಲ್ಲಿ ವರುಣಾರ್ಭಟಕ್ಕೆ ಜನ ತತ್ತರ; ಹಲವು ಹಳ್ಳಿಗಳ ಸಂಪರ್ಕ ಕಡಿತ, ಕೊಚ್ಚಿ ಹೋದ ಸೇತುವೆ
Heavy Rain in Arunachal Pradesh: ಅರುಣಾಚಲ ಪ್ರದೇಶ ಮತ್ತು ಅಸ್ಸಾಂನಾದ್ಯಂತ ನಿರಂತರವಾಗಿ ಸುರಿಯುತ್ತಿರುವ ಮಾನ್ಸೂನ್ ಮಳೆಯು ಭೀಕರ ಪ್ರವಾಹ, ಭೂಕುಸಿತ ಮತ್ತು ರಸ್ತೆಗಳು, ಸೇತುವೆಗಳು ಮತ್ತು ಸಾರ್ವಜನಿಕ ಮೂಲಸೌಕರ್ಯಗಳ ವ್ಯಾಪಕ ನಾಶಕ್ಕೆ ಕಾರಣವಾಗಿದೆ. ಪ್ರಮುಖ ರಸ್ತೆಗಳು ಕೊಚ್ಚಿ ಹೋಗಿದ್ದು, ಹಲವು ಭೂಕುಸಿತದಲ್ಲಿ ಹೂತು ಹೋಗಿವೆ.
ಅರುಣಾಚಲ ಪ್ರದೇಶ, ಅಸ್ಸಾಂನಲ್ಲಿ ವರುಣಾರ್ಭಟಕ್ಕೆ ಜನ ತತ್ತರ -
ಇಟಾನಗರ, ಜೂ. 30: ಅರುಣಾಚಲ ಪ್ರದೇಶ (Arunachal Pradesh) ಮತ್ತು ಅಸ್ಸಾಂನಾದ್ಯಂತ ನಿರಂತರವಾಗಿ ಸುರಿಯುತ್ತಿರುವ ಮಾನ್ಸೂನ್ ಮಳೆಯು ಭೀಕರ ಪ್ರವಾಹ, ಭೂಕುಸಿತ ಮತ್ತು ರಸ್ತೆಗಳು, ಸೇತುವೆಗಳು ಹಾಗೂ ಸಾರ್ವಜನಿಕ ಮೂಲಸೌಕರ್ಯಗಳ ವ್ಯಾಪಕ ನಾಶಕ್ಕೆ ಕಾರಣವಾಗಿದೆ. ಕಳೆದ ವಾರದಲ್ಲಿ ಅರುಣಾಚಲ ಪ್ರದೇಶದಲ್ಲಿ ಕನಿಷ್ಠ ನಾಲ್ಕು ಜನರು ಪ್ರಾಣ ಕಳೆದುಕೊಂಡಿದ್ದರೆ, ಅಸ್ಸಾಂನಲ್ಲಿ ಪ್ರವಾಹವು (Assam flood) 45,500ಕ್ಕೂ ಹೆಚ್ಚು ಜನರ ಮೇಲೆ ಪರಿಣಾಮ ಬೀರಿದೆ.
ಅರುಣಾಚಲ ಪ್ರದೇಶದಲ್ಲಿ ಪರಿಸ್ಥಿತಿ ಇನ್ನೂ ಗಂಭೀರವಾಗಿದ್ದು, 12 ಜಿಲ್ಲೆಗಳಲ್ಲಿ ವ್ಯಾಪಕ ಹಾನಿಯುಂಟಾಗಿದೆ. ಪ್ರಮುಖ ರಸ್ತೆಗಳು ಕೊಚ್ಚಿಹೋಗಿದ್ದು, ಹಲವು ಭೂಕುಸಿತದಲ್ಲಿ ಹೂತು ಹೋಗಿವೆ. ಇದರಿಂದಾಗಿ ಸಾರಿಗೆ ಮತ್ತು ಪರಿಹಾರ ಕಾರ್ಯಾಚರಣೆಗಳಿಗೆ ಅಡ್ಡಿಯಾಗಿದೆ.
ಅರುಣಾಚಲ ಪ್ರದೇಶದಲ್ಲಿ ಭೀಕರ ಪ್ರವಾಹ:
East Siang district of Arunachal Pradesh witnessed widespread flooding on Sunday following incessant rainfall and cloudburst-triggered flash floods across the region. Several roads, bridges, residential properties, agricultural land, and public infrastructure have reportedly been… pic.twitter.com/zGvvLjC7gF
— Samshum Changmi (@SamsumChangmi) June 28, 2026
ಲೋವರ್ ದಿಬಾಂಗ್ ವ್ಯಾಲಿ ಜಿಲ್ಲೆಯಲ್ಲಿ ಪ್ರಮುಖ ರಕ್ಷಣಾ ಕಾರ್ಯಾಚರಣೆಯನ್ನು ನಡೆಸಲಾಯಿತು. ಅಲ್ಲಿ ಭಾರತೀಯ ವಾಯುಪಡೆಯ ಹೆಲಿಕಾಪ್ಟರ್ ದಂಬುಕ್ನ ಸಿಸಿರಿ ನದಿಯಲ್ಲಿರುವ ದ್ವೀಪದಲ್ಲಿ ಸಿಲುಕಿಕೊಂಡಿದ್ದ ನಾಲ್ವರನ್ನು ಸ್ಥಳಾಂತರಿಸಿತು. ನಿರಂತರ ಮಳೆಯಿಂದಾಗಿ ರೋಯಿಂಗ್-ಅನಿನಿ ರಸ್ತೆಗೆ ತೀವ್ರ ಹಾನಿಯಾಗಿದ್ದು, ಹಠಾತ್ ಪ್ರವಾಹದಿಂದ ಹಲವು ಭಾಗಗಳು ಮತ್ತು ಸೇತುವೆಗಳು ಕೊಚ್ಚಿಹೋಗಿವೆ.
ಕರಾವಳಿ- ಮಲೆನಾಡು ಜಿಲ್ಲೆಗಳಲ್ಲಿ ಭಾರಿ ಮಳೆ ಎಚ್ಚರಿಕೆ; ಆರೆಂಜ್ ಅಲರ್ಟ್ ಘೋಷಣೆ
ಅಂಜಾವ್ ಜಿಲ್ಲೆಯಲ್ಲಿ ಭಾನುವಾರ (ಜೂ. 28) ರಾತ್ರಿ ಸರ್ತಿ ಗ್ರಾಮದ ಬಳಿ ಹೆದ್ದಾರಿ ನಿರ್ಮಾಣ ಕಾರ್ಯದ ಸಮಯದಲ್ಲಿ ಬೃಹತ್ ಬಂಡೆಯೊಂದು ಯಂತ್ರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಅಗೆಯುವ ಯಂತ್ರ ನಿರ್ವಾಹಕರೊಬ್ಬರು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಈ ಪ್ರದೇಶದಲ್ಲಿ ರಕ್ಷಣಾ ತಂಡಗಳು ಪ್ರಯತ್ನಗಳನ್ನು ಮುಂದುವರಿಸಿವೆ.
ಪೂರ್ವ ಸಿಯಾಂಗ್ ಜಿಲ್ಲೆಯಲ್ಲಿ ವ್ಯಾಪಕ ಸಂಚಾರ ಅಸ್ತವ್ಯಸ್ತವಾಗಿದ್ದು, ಹಲವು ಪ್ರಮುಖ ರಸ್ತೆಗಳು ದುಸ್ತರವಾಗಿವೆ. ರಸ್ತೆ ಬ್ಲಾಕ್ ಆಗಿದ್ದರಿಂದ ಪಾಸಿಘಾಟ್ನಲ್ಲಿರುವ ಜಿಲ್ಲಾ ಕೇಂದ್ರದಿಂದ ಯಗ್ರಂಗ್, ಟೆಕಾಂಗ್ ಮತ್ತು ಸಿಬುಟ್ ಗ್ರಾಮಗಳು ಸಂಪರ್ಕ ಕಳೆದುಕೊಂಡಿವೆ.
ದಿಢೀರ್ ಪ್ರವಾಹ
ರುಕ್ಸಿನ್ ಉಪವಿಭಾಗದಲ್ಲಿ ಸಂಭವಿಸಿದ ಮೇಘಸ್ಫೋಟದಿಂದಾಗಿ ಲೆಡಮ್ ಮತ್ತು ಕೊರಾಂಗ್ ಗ್ರಾಮಗಳಲ್ಲಿ ದಿಢೀರ್ ಪ್ರವಾಹ ಉಂಟಾಗಿದೆ. ಇದರಿಂದ ಹಲವು ಮನೆಗಳಿಗೆ ಹಾನಿಯಾಗಿದೆ. ಪ್ರಮುಖ ಮೂಲಸೌಕರ್ಯಗಳು ನಾಶವಾಗಿವೆ. ರೆಮಾ ಸೇತುವೆ ಕುಸಿದಿದ್ದು, ಬೊಕ್ರಾಂಗ್ ಸೇತುವೆಗೂ ಗಮನಾರ್ಹ ಹಾನಿಯಾಗಿದೆ. ರಾಜ್ಯ ವಿಪತ್ತು ಪ್ರತಿಕ್ರಿಯೆ ಪಡೆ (SDRF), ಜಿಲ್ಲಾಡಳಿತ ಮತ್ತು ಸ್ಥಳೀಯ ಸ್ವಯಂಸೇವಕರ ರಕ್ಷಣಾ ಸಿಬ್ಬಂದಿ ಸುಮಾರು 40 ನಿವಾಸಿಗಳನ್ನು ಪೀಡಿತ ಪ್ರದೇಶಗಳಿಂದ ಸ್ಥಳಾಂತರಿಸಿ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿದರು.
ದುರಸ್ತಿ ಕಾರ್ಯ ನಡೆಯುತ್ತಿದ್ದರೂ, ಹಾನಿಗೊಳಗಾದ ಕೆಲವು ರಸ್ತೆಗಳನ್ನು ಮಾತ್ರ ಮತ್ತೆ ತೆರೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಪೂರ್ವ ಸಿಯಾಂಗ್ನಾದ್ಯಂತ ಹಲವಾರು ಪ್ರಮುಖ ಮಾರ್ಗಗಳು ಸಂಚಾರಕ್ಕೆ ಅಸುರಕ್ಷಿತವಾಗಿವೆ.
ಅರುಣಾಚಲ ಪ್ರದೇಶದಲ್ಲಿ ಮೇಘಸ್ಫೋಟ, ಭೀಕರ ಪ್ರವಾಹ; ಮಣ್ಣಿನ ರಾಶಿಯೊಂದಿಗೆ ಕೊಚ್ಚಿ ಹೋದ ಬೈಕ್ ಸವಾರ
ಲೋವರ್ ಸಿಯಾಂಗ್ ಜಿಲ್ಲೆಯ ಸಿಜಿ ಬಳಿ ಸಂಭವಿಸಿದ ಭೀಕರ ಭೂಕುಸಿತದಿಂದಾಗಿ ಸಿಜಿ ನದಿಯ ಹರಿವು ಸಂಪೂರ್ಣವಾಗಿ ಸ್ಥಗಿತಗೊಂಡಿದ್ದು ನದಿಯ ಮೇಲ್ಭಾಗದಲ್ಲಿ ಭಾರಿ ಪ್ರಮಾಣದ ನೀರು ಸಂಗ್ರಹವಾಗಿ ಮುಂಬರುವ ದಿನಗಳಲ್ಲಿ ಪ್ರವಾಹ ಉಂಟಾಗುವ ಭೀತಿ ಎದುರಾಗಿದೆ. ಬೈಕ್ ಸವಾರನೊಬ್ಬ ತನ್ನ ವಾಹನದೊಂದಿಗೆ ಗುಡ್ಡದಿಂದ ಕೆಳಕ್ಕೆ ಕೊಚ್ಚಿಹೋದರೂ, ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಲೆಪರಾಡಾ ಜಿಲ್ಲೆಯು ಉಕ್ಕಿ ಹರಿಯುತ್ತಿರುವ ನದಿಗಳು, ಹಠಾತ್ ಪ್ರವಾಹ ಮತ್ತು ಭೂಕುಸಿತಗಳಿಂದ ಹಲವು ಪ್ರದೇಶಗಳ ಮೇಲೆ ವ್ಯಾಪಕ ಹಾನಿ ಸಂಭವಿಸಿದೆ. ಕೇಯಿ ಪನ್ಯೋರ್ ಜಿಲ್ಲೆಯಲ್ಲಿ ಭೀಕರ ಪ್ರವಾಹ ಉಂಟಾಗಿದ್ದು, ಒಂದು ವಾರಕ್ಕೂ ಹೆಚ್ಚು ಕಾಲ ನಾಪತ್ತೆಯಾಗಿರುವ ಇಬ್ಬರಿಗಾಗಿ ರಕ್ಷಣಾ ತಂಡಗಳು ಹುಡುಕಾಟ ಮುಂದುವರಿಸಿವೆ.
ಅಸ್ಸಾಂನಲ್ಲೂ ಇದೇ ಪರಿಸ್ಥಿತಿ
ನೆರೆಯ ಅಸ್ಸಾಂನಲ್ಲೂ ಪ್ರವಾಹ ಪರಿಸ್ಥಿತಿ ಹದಗೆಟ್ಟಿದೆ. ಐದು ಜಿಲ್ಲೆಗಳಲ್ಲಿ 45,500ಕ್ಕೂ ಹೆಚ್ಚು ಜನರು ಬಾಧಿತರಾಗಿದ್ದು, ಒಬ್ಬರು ಕಾಣೆಯಾಗಿದ್ದಾರೆ. ಚಿರಾಂಗ್, ಧೇಮಾಜಿ, ದಿಬ್ರುಗಢ, ಲಖಿಂಪುರ ಮತ್ತು ನಲ್ಬರಿ ಜಿಲ್ಲೆಗಳು ಪ್ರವಾಹದಿಂದ ಹೆಚ್ಚು ಹಾನಿಗೊಳಗಾಗಿವೆ. ನದಿ ಮಟ್ಟ ಏರಿಕೆಯಿಂದಾಗಿ ಧೇಮಾಜಿ ಹಳ್ಳಿ ಜಲಾವೃತವಾಗಿ, ಕೃಷಿ ಭೂಮಿಗೆ ಹಾನಿಯಾಗಿ, ಸಾವಿರಾರು ಜನರು ಸುರಕ್ಷಿತ ಸ್ಥಳ ಅರಸಿಕೊಂಡು ತೆರಳಿದ್ದಾರೆ. 41,000ಕ್ಕೂ ಹೆಚ್ಚು ನಿವಾಸಿಗಳು ಪ್ರವಾಹದಿಂದ ಬಳಲುತ್ತಿದ್ದಾರೆ.
ಪ್ರದೇಶದಾದ್ಯಂತ ಭಾರಿ ಮಳೆಯಾಗುತ್ತಿರುವುದರಿಂದ ಎರಡೂ ರಾಜ್ಯಗಳ ಅಧಿಕಾರಿಗಳು, ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳನ್ನು ತೀವ್ರಗೊಳಿಸಿದ್ದಾರೆ. ವಿಪತ್ತು ನಿರ್ವಹಣಾ ಸಂಸ್ಥೆಗಳು ಜಾಗರೂಕತೆಯಿಂದ ಇದ್ದು, ಹಾನಿಗೊಳಗಾದ ರಸ್ತೆಗಳು ಮತ್ತು ಅಗತ್ಯ ಸೇವೆಗಳ ಪುನಃಸ್ಥಾಪನೆ ಕಾರ್ಯ ಪ್ರಗತಿಯಲ್ಲಿದೆ.