ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಬಂಡಾಯ: ‘ʼನಾವು ಪಾಕಿಸ್ತಾನದ ಭಾಗವಲ್ಲʼ’ ಎಂದ ಸ್ಥಳೀಯರು
ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ರಾವಲಕೋಟ್ನಲ್ಲಿ ಇಸ್ಲಾಮಾಬಾದ್ ಆಡಳಿತದ ವಿರುದ್ಧ ನಡೆಯುತ್ತಿರುವ ಪ್ರತಿಭಟನೆ 22ನೇ ದಿನಕ್ಕೆ ಕಾಲಿಟ್ಟಿದೆ. ಆಡಳಿತ ವೈಫಲ್ಯ, ಬೆಲೆ ಏರಿಕೆ, ಆಹಾರ ಸರಬರಾಜಿನ ನಿರ್ಬಂಧ ಹಾಗೂ ದಮನಕಾರಿ ನೀತಿಗಳ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರತಿಭಟನಾಕಾರರು ಪಾಕ್ ಆಕ್ರಮಿತ ಕಾಶ್ಮೀರವು ಪಾಕಿಸ್ತಾನದ ಭಾಗವಲ್ಲ ಎಂದು ಹೇಳಿದ್ದು, ಅಗತ್ಯವಿದ್ದರೆ ಭಾರತದ ನೆರವು ಕೋರುವ ಎಚ್ಚರಿಕೆಯನ್ನೂ ನೀಡಿದ್ದಾರೆ.
ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ನಡೆಯುತ್ತಿರುವ ಪ್ರತಿಭಟನೆ -
ರಾವಲಕೋಟ್, ಜೂ. 30: ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ (PoK) ಇಸ್ಲಾಮಾಬಾದ್ ಆಡಳಿತದ ವಿರುದ್ಧ ಜನರ ಆಕ್ರೋಶ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ರಾವಲಕೋಟ್ನ ಈದ್ಗಾ ಮೈದಾನದಲ್ಲಿ ನಡೆಯುತ್ತಿರುವ ಪ್ರತಿಭಟನೆ ಮಂಗಳವಾರ 22ನೇ ದಿನಕ್ಕೆ ಕಾಲಿಟ್ಟಿದ್ದು, ಸಾವಿರಾರು ಜನರು ಭಾಗವಹಿಸಿ ಪಾಕಿಸ್ತಾನದ ಆಡಳಿತವನ್ನು ತೀವ್ರವಾಗಿ ವಿರೋಧಿಸಿದರು. ಪ್ರತಿಭಟನಾಕಾರರು, ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು ಪಾಕಿಸ್ತಾನದ ಭಾಗವೆಂದು ಪರಿಗಣಿಸಬಾರದು ಎಂದು ಹೇಳಿದ್ದು, ಅಗತ್ಯವಿದ್ದರೆ ಭಾರತದೊಂದಿಗೆ ಹೆಚ್ಚಿನ ಸಂಪರ್ಕ ಸಾಧಿಸುವುದಾಗಿ ಎಚ್ಚರಿಕೆ ನೀಡಿದರು.
ಈ ಪ್ರತಿಭಟನೆ ಆಡಳಿತ ವೈಫಲ್ಯ, ಆರ್ಥಿಕ ಸಂಕಷ್ಟ, ಬೆಲೆ ಏರಿಕೆ, ಸರ್ಕಾರಿ ದಮನ ನೀತಿ ಹಾಗೂ ಆಡಳಿತದ ನಿರ್ಲಕ್ಷ್ಯ ವಿರುದ್ಧ ಆರಂಭವಾಗಿತ್ತು. ಜೂನ್ 5ರಂದು ಅಧಿಕಾರಿಗಳು ಈ ಪ್ರದೇಶದಲ್ಲಿ ಇಂಟರ್ನೆಟ್ ಸೇವೆಯನ್ನು ಸ್ಥಗಿತಗೊಳಿಸಿದ್ದು, ಪ್ರತಿಭಟನೆ ಕುರಿತ ಮಾಹಿತಿ ಹೊರಬರದಂತೆ ಕ್ರಮ ಕೈಗೊಂಡಿದ್ದಾರೆ ಎನ್ನಲಾಗಿದೆ.
ಪಿಒಕೆಯಲ್ಲಿ ನಡೆಯುತ್ತಿರುವ ಪ್ರತಿಭಟನೆ:
"Islamabad will find itself begging the people of PoJK to stay."
— manju 🇮🇳 (@justtweettz) June 30, 2026
Protests intensify in #Rawalakot as demonstrators declare #PoJK is NOT part of #Pakistan.
Local leaders warn that if the establishment’s blockade continues, they may open remaining borders toward #India.
🇮🇳… pic.twitter.com/tGbMnO2tOi
ಪ್ರತಿಭಟನೆಯ ನೇತೃತ್ವವನ್ನು ನಾಗರಿಕ ಹಕ್ಕುಗಳ ಹೋರಾಟಗಾರ ಸರ್ದಾರ್ ಅಮನ್ ಖಾನ್ ವಹಿಸಿಕೊಂಡಿದ್ದಾರೆ. ಪಾಕಿಸ್ತಾನ ಸರ್ಕಾರ ಎರಡು ವಾರಗಳ ಕಾಲ ಆಹಾರ ಹಾಗೂ ಅಗತ್ಯ ವಸ್ತುಗಳ ಸರಬರಾಜನ್ನು ತಡೆಹಿಡಿದ ಬಳಿಕ ಪ್ರತಿಭಟನೆ ಮತ್ತಷ್ಟು ತೀವ್ರಗೊಂಡಿದೆ.
ಸಭೆಯನ್ನುದ್ದೇಶಿಸಿ ಮಾತನಾಡಿದ ಅಮನ್ ಖಾನ್, "ಪಾಕಿಸ್ತಾನ ಆಕ್ರಮಿತ ಕಾಶ್ಮೀರವು ಪಾಕಿಸ್ತಾನದ ಭಾಗವಲ್ಲ. ನಮಗಿಂತ ಪಾಕಿಸ್ತಾನಕ್ಕೇ ಈ ಪ್ರದೇಶದ ಅವಶ್ಯಕತೆ ಹೆಚ್ಚು" ಎಂದು ಹೇಳಿದ್ದಾರೆ.
ಅಫ್ಘಾನಿಸ್ತಾನದ ಮೇಲೆ ಪಾಕಿಸ್ತಾನದಿಂದ ಆಕ್ರಮಣಕಾರಿ ಕೃತ್ಯ: ಭಾರತ ಖಂಡನೆ
ಜೂನ್ 9ರಿಂದ ನಿಯಂತ್ರಣ ರೇಖೆ (LoC) ಸಮೀಪ ಮತ್ತೊಂದು ಧರಣಿ ನಡೆಯುತ್ತಿದೆ. ಆಹಾರ ಮತ್ತು ಅಗತ್ಯ ವಸ್ತುಗಳ ಮೇಲಿನ ನಿರ್ಬಂಧ ಮುಂದುವರಿದರೆ, ಜನರು ನೆರವಿಗಾಗಿ ಭಾರತದತ್ತ ಮುಖ ಮಾಡಬಹುದು. ಇದರಿಂದ ಪ್ರದೇಶದ ರಾಜಕೀಯ ಪರಿಸ್ಥಿತಿ ಬದಲಾಗುವ ಸಾಧ್ಯತೆಯಿದ್ದು, ಇಸ್ಲಾಮಾಬಾದ್ ಮೇಲೆ ಒತ್ತಡ ಹೆಚ್ಚಲಿದೆ ಎಂದು ಅಮನ್ ಖಾನ್ ಎಚ್ಚರಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಕೆಲವು ವಿಡಿಯೊಗಳಲ್ಲಿ, ಪ್ರತಿಭಟನಾಕಾರರು "ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಪಾಕಿಸ್ತಾನದ ಭಾಗವಲ್ಲ" ಎಂದು ಘೋಷಣೆ ಕೂಗುತ್ತಿರುವುದು ಕಂಡುಬಂದಿದೆ. ಅಲ್ಲದೆ, ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸೀಂ ಮುನೀರ್ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿ, "ಸರ್ವಾಧಿಕಾರಿಯನ್ನು ನಾವು ಒಪ್ಪುವುದಿಲ್ಲ" ಎಂದು ಘೋಷಿಸಿದ್ದಾರೆ.
ಈ ಪ್ರತಿಭಟನೆಗಳು ಕೇವಲ ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕೆ ಸೀಮಿತವಾಗಿಲ್ಲ. ವಿದೇಶಗಳಲ್ಲಿ ನೆಲೆಸಿರುವ ಬೆಂಬಲಿಗರು ಸಹ ಹಲವು ದೇಶಗಳಲ್ಲಿನ ಪಾಕಿಸ್ತಾನ ರಾಯಭಾರ ಕಚೇರಿಗಳ ಎದುರು ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ. ಪ್ರತಿಭಟನೆಯ ನಾಯಕರು, ಮುಜಫ್ಫರಾಬಾದ್ ಸೇರಿ ಇಡೀ ಪ್ರದೇಶಕ್ಕೆ ಸಂಬಂಧಿಸಿದ ತಮ್ಮ ರಾಜಕೀಯ ಬೇಡಿಕೆಗಳು ಈಡೇರುವವರೆಗೆ ಹೋರಾಟ ಮುಂದುವರಿಸುವುದಾಗಿ ಘೋಷಿಸಿದ್ದಾರೆ.