ʼಡೆಲುಲುʼ ಪದ ಬಳಸಿ ಪ್ರತಿಪಕ್ಷಕ್ಕೆ ಟಾಂಗ್ ಕೊಟ್ಟ ಸಂಸದ ತೇಜಸ್ವಿ ಸೂರ್ಯ; ಲೋಕಸಭೆಯಲ್ಲಿ ನಡೆಸಿದ ವಾಗ್ದಾಳಿ ಹೀಗಿತ್ತು
Tejasvi Surya: ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಗಳಿಗೆ ಶಾಶ್ವತ ಪರಿಹಾರ ನೀಡುವ ಉದ್ದೇಶದಿಂದ ಕೇಂದ್ರ ಸರ್ಕಾರ ತಂದಿರುವ ಸಾರ್ವಜನಿಕ ಪರೀಕ್ಷೆಗಳ (ಅನ್ಯಾಯ ವಿಧಾನಗಳ ತಡೆ) ತಿದ್ದುಪಡಿ ಮಸೂದೆ ಕುರಿತು ಲೋಕಸಭೆಯಲ್ಲಿ ಚರ್ಚೆ ನಡೆಯಿತು. ಬಿಜೆಪಿ ಸಂಸದ ತೇಜಸ್ವಿ ಸೂರ್ಯ, ವಿದ್ಯಾರ್ಥಿಗಳಿಗೆ ಹಿಂದಿನ ರಾಜಕೀಯ ಆರೋಪಗಳಿಗಿಂತ ಭವಿಷ್ಯದ ವ್ಯವಸ್ಥೆ ಸುಧಾರಣೆ ಮುಖ್ಯವಾಗಿದ್ದು, ಮೋದಿ ಸರ್ಕಾರ ಇದಕ್ಕೆ ಪರಿಹಾರ ನೀಡಲಿದೆ ಎಂದು ಹೇಳಿದ್ದಾರೆ. ಮಸೂದೆಯಲ್ಲಿ 10 ವರ್ಷಗಳವರೆಗೆ ಜೈಲು ಶಿಕ್ಷೆ 10 ಕೋಟಿ ರುಪಾಯಿವರೆಗೆ ದಂಡ ಸೇರಿ ಕಠಿಣ ಕ್ರಮಗಳನ್ನು ಪ್ರಸ್ತಾಪಿಸಲಾಗಿದೆ.
ತೇಜಸ್ವಿ ಸೂರ್ಯ (ಸಂಗ್ರಹ ಚಿತ್ರ) -
ನವದೆಹಲಿ, ಜು. 28: ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಯುವ ಜನತೆ ಸರ್ಕಾರದತ್ತ ನಿರೀಕ್ಷೆ ಇಟ್ಟಿದ್ದು, ಪ್ರಧಾನಿ ನರೇಂದ್ರ ಮೋದಿ (PM Modi) ನೇತೃತ್ವದ ಸರ್ಕಾರ ಈ ವ್ಯವಸ್ಥೆಯನ್ನು ಸರಿಪಡಿಸಲಿದೆ ಎಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ (Tejasvi Surya) ಲೋಕಸಭೆಯಲ್ಲಿ (Lok Sabha) ಹೇಳಿದ್ದಾರೆ. ಲೋಕಸಭೆಯಲ್ಲಿ ಮಂಡನೆಯಾದ ಸಾರ್ವಜನಿಕ ಪರೀಕ್ಷೆಗಳ (ಅನ್ಯಾಯ ವಿಧಾನಗಳ ತಡೆ) ತಿದ್ದುಪಡಿ ಮಸೂದೆ 2026 ಕುರಿತ ಚರ್ಚೆಯಲ್ಲಿ ಮಾತನಾಡಿದ ಅವರು, ಪರೀಕ್ಷೆಗೆ ಸಿದ್ಧವಾಗುತ್ತಿರುವ ವಿದ್ಯಾರ್ಥಿಗಳಿಗೆ ಹಿಂದಿನ ಸರ್ಕಾರಗಳ ತಪ್ಪುಗಳ ಬಗ್ಗೆ ಆಸಕ್ತಿ ಇಲ್ಲ. ಭವಿಷ್ಯದಲ್ಲಿ ವ್ಯವಸ್ಥೆಯನ್ನು ಯಾರು ಸರಿಪಡಿಸುತ್ತಾರೆ ಎಂಬುದರ ಬಗ್ಗೆ ಮಾತ್ರ ಅವರು ಚಿಂತಿಸುತ್ತಿದ್ದಾರೆ ಎಂದು ಹೇಳಿದರು.
"ಈ ಸರ್ಕಾರ ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ವ್ಯವಸ್ಥೆಯನ್ನು ಶಾಶ್ವತವಾಗಿ ಸುಧಾರಿಸಲು ಪ್ರಯತ್ನಿಸುತ್ತಿದೆ ಎಂಬ ವಿಶ್ವಾಸ ಯುವಜನರಿಗಿದೆ" ಎಂದು ತೇಜಸ್ವಿ ಸೂರ್ಯ ಹೇಳಿದರು.
ತೇಜಸ್ವಿ ಸೂರ್ಯ ಭಾಷಣ:
The Opposition thinks because of this issue, they have the youth on their side. There can be no bigger Delulu than that.
— Tejasvi Surya (@Tejasvi_Surya) July 28, 2026
Today’s youth are aware, informed and quick to recognise who is genuinely working for them.
They know that if someone is working in their interest, it is PM… pic.twitter.com/AuWC3ZR0fh
ವಿರೋಧ ಪಕ್ಷಗಳನ್ನು ಟೀಕಿಸಿದ ಅವರು, ಯುವಜನತೆ ಪ್ರತಿಪಕ್ಷಗಳ ಜತೆಗಿದೆ ಎಂದು ಭಾವಿಸುವುದಕ್ಕಿಂತ ದೊಡ್ಡ ʼಡೆಲುಲುʼ (Gen Z ಪದ ಬಳಕೆ) ಮತ್ತೊಂದಿಲ್ಲ ಎಂದು ಹೇಳಿದರು.
ನೀಟ್ ಹೋರಾಟಕ್ಕೆ ಸಂಬಂಧಿಸಿದ ವಿವಾದಾತ್ಮಕ ಹೇಳಿಕೆ ನೀಡಿದ ಬಿಜೆಪಿ ನಾಯಕ ಸಿ.ಟಿ. ರವಿಗೆ ರಿಲೀಫ್
ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ತೇಜಸ್ವಿ ಸೂರ್ಯ, ಯುಪಿಎ ಸರ್ಕಾರ 2010ರಲ್ಲಿ ಇಂತಹ ಕಾನೂನು ತರದ ಕಾರಣ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಗಳಲ್ಲಿ ಯಾವುದೇ ಶಿಕ್ಷೆ ಆಗಿಲ್ಲ ಎಂದು ಆರೋಪಿಸಿದರು. "ವಿದ್ಯಾರ್ಥಿಗಳಿಗೆ ಘೋಷಣೆಗಳು ಬೇಡ, ಪರಿಹಾರ ಬೇಕು. ಈ ಮಸೂದೆ ಅದನ್ನು ಒದಗಿಸುತ್ತದೆ. ಇದು 30 ವರ್ಷ ತಡವಾಗಿದ್ದರೂ ದೇಶದ ಇತಿಹಾಸದಲ್ಲಿ ಮೊದಲ ಬಾರಿಗೆ ಇಂತಹ ಕಾನೂನು ಜಾರಿಯಾಗುತ್ತಿದೆ" ಎಂದರು.
ಸಂಸದ ಬಾನ್ಸುರಿ ಸ್ವರಾಜ್ ಕೂಡ Gen Z ಪದ ಬಳಸಿ, ಪ್ರಧಾನಿ ಮೋದಿ ಶಾಸನಾತ್ಮಕ ಪರಿಹಾರದ ಮೂಲಕ ಸಮಸ್ಯೆಯನ್ನು ಗುರುತಿಸಿದ್ದಾರೆ ಎಂದು ಹೇಳಿದರು.
ಇತ್ತೀಚೆಗೆ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧ ನಡೆದ ವಿದ್ಯಾರ್ಥಿ ಪ್ರತಿಭಟನೆಗಳ ಬೆನ್ನಲ್ಲೇ ಈ ಮಸೂದೆ ತರಲಾಗಿದೆ. ಮಸೂದೆಯ ಪ್ರಮುಖ ಅಂಶಗಳಲ್ಲಿ ತಪ್ಪಿತಸ್ಥರಿಗೆ 10 ವರ್ಷಗಳವರೆಗೆ ಜೈಲು ಶಿಕ್ಷೆ, 10 ಕೋಟಿ ರುಪಾಯಿವರೆಗೆ ದಂಡ, ಆಸ್ತಿ ಜಪ್ತಿ ಹಾಗೂ ಮೂರು ತಿಂಗಳೊಳಗೆ ತೀರ್ಪು ನೀಡುವ ವ್ಯವಸ್ಥೆ ಸೇರಿವೆ.
"ಶಿಕ್ಷಣ ಮತ್ತು ಪರೀಕ್ಷಾ ವ್ಯವಸ್ಥೆಯಲ್ಲಿ ನಿಮ್ಮ ಜಾತಿ, ಕುಟುಂಬದ ಆದಾಯ, ಹಿನ್ನೆಲೆ ಯಾವುದನ್ನೂ ಕೇಳುವುದಿಲ್ಲ. ಕೇವಲ ಪರಿಶ್ರಮದ ಆಧಾರದ ಮೇಲೆ ನ್ಯಾಯಯುತ ಅವಕಾಶ ಸಿಗುತ್ತದೆ ಎಂಬ ನಂಬಿಕೆ ಇದೆ. ಹೀಗಾಗಿ ಪ್ರಶ್ನೆ ಪತ್ರಿಕೆ ಸೋರಿಕೆ ಕೇವಲ ಆಡಳಿತ ವೈಫಲ್ಯವಲ್ಲ, ಅದು ವಿದ್ಯಾರ್ಥಿಗಳ ವಿಶ್ವಾಸಕ್ಕೆ ಧಕ್ಕೆ" ಎಂದು ತೇಜಸ್ವಿ ಸೂರ್ಯ ಹೇಳಿದರು.