"ಬಾಂಗ್ಲಾದವರನ್ನು ಪತ್ತೆ ಮಾಡುವ ಯಂತ್ರ ನಮ್ಮಲ್ಲಿದೆ"; ಸ್ಲಂ ನಿವಾಸಿಗಳಿಗೆ ಬೆದರಿಸಿದ ಪೊಲೀಸ್! ವಿಡಿಯೋ ನೋಡಿ
Slum residents: ಗಾಜಿಯಾಬಾದ್ನ ಸ್ಲಂ ನಿವಾಸಿಗಳನ್ನು ಬಾಂಗ್ಲಾದೇಶಿಯವರೆಂದು ಪೊಲೀಸ್ ಅಧಿಕಾರಿಗಳು ಬೆದರಿಸಿರುವ ವಿಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಭಾರಿ ವಿವಾದಕ್ಕೆ ಕಾರಣವಾಗಿದೆ. ಇದಕ್ಕೆ ಭಾರಿ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ, ಪೊಲೀಸರು ಈ ಸಂಬಂಧ ತನಿಖೆಗೆ ಆದೇಶಿಸಿದ್ದಾರೆ.
ಸಾಂದರ್ಭಿಕ ಚಿತ್ರ -
ಘಾಜಿಯಾಬಾದ್: ಸಾಮಾಜಿಕ ಜಾಲತಾಣಗಳಲ್ಲಿ (social media) ಹರಿದಾಡಿದ ವಿಡಿಯೊವೊಂದರಲ್ಲಿ, ಸ್ಲಂ ಪ್ರದೇಶದ ನಿವಾಸಿಗಳನ್ನು (slum residents) ಪೊಲೀಸ್ ಅಧಿಕಾರಿಯೊಬ್ಬರು ಬೆದರಿಸುವಂತೆ ಕಾಣಿಸಿಕೊಂಡ ದೃಶ್ಯ ವೈರಲ್ ಆದ ಹಿನ್ನೆಲೆಯಲ್ಲಿ ಘಾಜಿಯಾಬಾದ್ ಪೊಲೀಸರು (Ghaziabad police) ತನಿಖೆಗೆ ಆದೇಶಿಸಿದ್ದಾರೆ. ಸ್ಲಂ ನಿವಾಸಿಗಳ ಬಳಿ, ಅಕ್ರಮ ವಲಸಿಗರೇ ಅಲ್ಲವೇ ಎಂಬುದನ್ನು ಪತ್ತೆಹಚ್ಚುವ ಸಾಧನವೊಂದು ತಮ್ಮ ಬಳಿ ಇದೆ ಎಂದು ಅಧಿಕಾರಿ ಹೇಳಿರುವುದು ವಿವಾದಕ್ಕೆ ಕಾರಣವಾಗಿದೆ. ಪೊಲೀಸರು ಇದನ್ನು ಸಾಮಾನ್ಯ ಪ್ರದೇಶ ನಿಯಂತ್ರಣ ಕಾರ್ಯಾಚರಣೆ ಎಂದು ವಿವರಣೆ ನೀಡಿದರೂ, ಈ ಘಟನೆ ಭಾರಿ ಚರ್ಚೆಗೆ ಕಾರಣವಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೆಯಾಗಿರುವ ವಿಡಿಯೊದಲ್ಲಿ, ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ವ್ಯಕ್ತಿಯ ಬೆನ್ನಿನ ಮೇಲೆ ಸ್ಮಾರ್ಟ್ಫೋನ್ನಂತೆ ಕಾಣುವ ಸಾಧನವೊಂದನ್ನು ಇಟ್ಟು, ಆ ವ್ಯಕ್ತಿಯು ಬಾಂಗ್ಲಾದೇಶದಿಂದ ಬಂದವನು ಎಂದು ಹೇಳುತ್ತಿರುವುದು ಕಾಣಿಸುತ್ತದೆ.
ವ್ಯಕ್ತಿ ಹಾಗೂ ಆತನ ಪಕ್ಕದಲ್ಲಿ ನಿಂತಿದ್ದ ಮಹಿಳೆಯ ಬಳಿ ಸುಳ್ಳು ಹೇಳಬೇಡಿ, ನಮ್ಮಲ್ಲಿ ಸುಳ್ಳನ್ನು ಪತ್ತೆ ಮಾಡುವ ಯಂತ್ರವಿದೆ ಎಂದು ಹೇಳಿದ್ದಾರೆ. ಈ ವೇಳೆ ಆಕೆಯ ಪಕ್ಕದಲ್ಲಿ ನಿಂತಿದ್ದ ಮಹಿಳೆ ಮತ್ತು ಅಪ್ರಾಪ್ತ ಬಾಲಕಿ ತಾವು ಬಿಹಾರದವರು ಎಂದು ಹೇಳುತ್ತಾ ಮೊಬೈಲ್ ಫೋನ್ನಲ್ಲಿ ದಾಖಲೆಗಳನ್ನು ತೋರಿಸಿದ್ದಾರೆ. ಆದರೆ, ಅಲ್ಲಿದ್ದ ಪೊಲೀಸ್ ಸಿಬ್ಬಂದಿ ಇದಕ್ಕೆ ಒಪ್ಪಿದ್ದಂತೆ ಕಂಡುಬಂದಿಲ್ಲ.
ಡಿಸೆಂಬರ್ 23 ರಂದು ಬಿಹಾರಿ ಮಾರುಕಟ್ಟೆ ಪ್ರದೇಶದ ಕೊಳೆಗೇರಿ ಪ್ರದೇಶದಲ್ಲಿ ಕೌಶಂಬಿ ಪೊಲೀಸ್ ಠಾಣೆ ಅಧಿಕಾರಿಗಳು, ಕ್ಷಿಪ್ರ ಕಾರ್ಯ ಪಡೆ (RAF) ಸಿಬ್ಬಂದಿಯೊಂದಿಗೆ ನಡೆಸಿದ ಕಾರ್ಯಾಚರಣೆಯಲ್ಲಿ ಸಮಯದಲ್ಲಿ ಈ ವಿಡಿಯೊವನ್ನು ರೆಕಾರ್ಡ್ ಮಾಡಲಾಗಿದೆ ಎಂದು ಡಿಸಿಪಿ (ಟ್ರಾನ್ಸ್-ಹಿಂಡನ್) ನಿಮಿಷ್ ಪಾಟೀಲ್ ದೃಢಪಡಿಸಿದರು.
ವಿಡಿಯೊ ಇಲ್ಲಿದೆ:
यूपी | ये गाजियाबाद के SHO अजय शर्मा हैं। इनके पास ऐसी मशीन है, जो इंसान की नागरिकता बता देती है। इन्होंने अपना मोबाइल एक व्यक्ति की पीठ पर लगाया और कहा कि मशीन बांग्लादेश बता रही है। जबकि ये लोग खुद को बिहार में अररिया जिले का बताते रहे।
— Sachin Gupta (@SachinGuptaUP) January 1, 2026
के.चु.आ. जी...SIR फॉर्म भरवाने की बजाय,… pic.twitter.com/Tk2Xh41L4W
ವಿಡಿಯೊಗೆ ಪ್ರತಿಕ್ರಿಯಿಸಿದ ಪೊಲೀಸರು, ಕ್ರಿಸ್ಮಸ್ ಮತ್ತು ಹೊಸ ವರ್ಷಕ್ಕೆ ಮುನ್ನ ನಿಯಮಿತ ಭದ್ರತಾ ಕ್ರಮಗಳ ಭಾಗವಾಗಿ ಈ ಕಾರ್ಯಾಚರಣೆ ನಡೆಸಲಾಗಿದೆ ಎಂದು ಹೇಳಿದರು. ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದಂತೆ, ತನಿಖೆಗೆ ಆದೇಶಿಸಲಾಗಿದೆ. ಇದರ ನೇತೃತ್ವವನ್ನು ಇಂದಿರಾಪುರಂ ವೃತ್ತದ ಎಸಿಪಿಗೆ ವಹಿಸಲಾಗಿದೆ ಎಂದು ಡಿಸಿಪಿ ಪಾಟೀಲ್ ಹೇಳಿದರು.
ಪ್ರದೇಶ ನಿಯಂತ್ರಣ (area domination) ಕಾರ್ಯಾಚರಣೆ ಎಂದರೆ ಸಾಮಾನ್ಯವಾಗಿ ಅಪರಾಧವನ್ನು ತಡೆಯಲು, ಸಾರ್ವಜನಿಕ ಸುವ್ಯವಸ್ಥೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಗುಪ್ತಚರ ಮಾಹಿತಿಯನ್ನು ಸಂಗ್ರಹಿಸಲು ಸೂಕ್ಷ್ಮ ಅಥವಾ ಹೆಚ್ಚಿನ ಜನಸಂಖ್ಯೆಯ ಪ್ರದೇಶಗಳಲ್ಲಿ ಪೊಲೀಸ್ ಹಾಗೂ ಅರೆಸೈನಿಕ ಪಡೆಗಳನ್ನು ನಿಯೋಜಿಸಲಾಗುತ್ತದೆ.
ಪೊಲೀಸ್ ಅಧಿಕಾರಿಗಳು ತಾವು ಬಾಂಗ್ಲಾದೇಶಿಗಳು ಎಂದು ಹೇಳಿಕೊಂಡು ತಮ್ಮನ್ನು ಬೆದರಿಸಲು ಪ್ರಯತ್ನಿಸಿದ್ದಾರೆ ಎಂದು ಜನರು ಆರೋಪಿಸಿದ್ದಾರೆ. ವಿಡಿಯೊದಲ್ಲಿರುವ ವ್ಯಕ್ತಿ 76 ವರ್ಷದ ಮೊಹಮ್ಮದ್ ಸಾದಿಕ್, ಸಾಧನದ ವಿಚಾರವಾಗಿ ತಮ್ಮ 22 ವರ್ಷದ ಮಗಳೊಂದಿಗೆ ಪೊಲೀಸರು ವಾಗ್ವಾದ ನಡೆಸಿದರು ಎಂದು ಹೇಳಿದ್ದಾರೆ. ನಾವು ಬಿಹಾರದ ಮೂಲ ನಿವಾಸಿಗಳೆಂಬುದಕ್ಕೆ ಅಗತ್ಯವಿರುವ ಎಲ್ಲ ದಾಖಲೆಗಳನ್ನು ತೋರಿಸಿದ್ದೇವೆ ಎಂದು ಮೀನು ವ್ಯಾಪಾರ ಮಾಡುವ ಹಾಗೂ 1987ರಿಂದ ಗಾಜಿಯಾಬಾದ್ನಲ್ಲಿ ವಾಸಿಸುತ್ತಿರುವ ಸಾದಿಕ್ ತಿಳಿಸಿದ್ದಾರೆ.