ಪಂಜಾಬ್ನ ಮಾಜಿ ಉಪಮುಖ್ಯಮಂತ್ರಿ ಸುಖ್ಬೀರ್ ಸಿಂಗ್ ಬಾದಲ್ ಮೇಲೆ ಹಲ್ಲೆ, ಆಸ್ಪತ್ರೆಗೆ ದಾಖಲು
Sukhbir Singh Badal Attacked: ಅಕಾಲಿ ದಳದ ಮುಖ್ಯಸ್ಥ ಮತ್ತು ಪಂಜಾಬ್ನ ಮಾಜಿ ಉಪಮುಖ್ಯಮಂತ್ರಿ ಸುಖ್ಬೀರ್ ಸಿಂಗ್ ಬಾದಲ್ ಅವರ ಮೇಲೆ ಹಲ್ಲೆ ನಡೆಸಿರುವ ಘಟನೆ ಮಹಾರಾಷ್ಟ್ರದ ನಾಂದೇಡ್ನಲ್ಲಿ ನಡೆದಿದೆ. ಬಾದಲ್ ಅವರ ಮೇಲೆ ನಿಹಾಂಗ್ ಎಂಬ ಸಿಖ್ ವ್ಯಕ್ತಿಯೊಬ್ಬ ಕಿರ್ಪಾನ್ನಿಂದ ದಾಳಿ ನಡೆಸಿದ್ದಾನೆ ಎನ್ನಲಾಗಿದೆ.
ಸುಖ್ಬೀರ್ ಸಿಂಗ್ ಬಾದಲ್ ಮೇಲೆ ಮಹಾರಾಷ್ಟ್ರದಲ್ಲಿ ಹಲ್ಲೆ ನಡೆಯಿತು -
ಮುಂಬೈ, ಆ. 13: ಅಕಾಲಿ ದಳದ ಮುಖ್ಯಸ್ಥ ಮತ್ತು ಪಂಜಾಬ್ನ ಮಾಜಿ ಉಪಮುಖ್ಯಮಂತ್ರಿ ಸುಖ್ಬೀರ್ ಸಿಂಗ್ ಬಾದಲ್ (Sukhbir Singh Badal) ಅವರ ಮೇಲೆ ಹಲ್ಲೆ ನಡೆಸಿರುವ ಘಟನೆ ಮಹಾರಾಷ್ಟ್ರದ (Maharashtra) ನಾಂದೇಡ್ನಲ್ಲಿ ನಡೆದಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಬಾದಲ್ ಗುರುದ್ವಾರಕ್ಕೆ ಭೇಟಿ ನೀಡಿದ ನಂತರ ನಗರದ ಹೊರವಲಯದಲ್ಲಿ ದಾಳಿ ನಡೆಸಲಾಗಿದೆ. ಬಾದಲ್ ಅವರ ಮೇಲೆ ನಿಹಾಂಗ್ ಎಂಬ ಸಿಖ್ ವ್ಯಕ್ತಿಯೊಬ್ಬ ಕಿರ್ಪಾನ್ನಿಂದ ದಾಳಿ ನಡೆಸಿದ್ದಾನೆ ಎನ್ನಲಾಗಿದೆ. ದಾಳಿಕೋರನನ್ನು ವಶಕ್ಕೆ ಪಡೆಯಲಾಗಿದೆ. ದಾಳಿಯ ನಂತರ ಬಾದಲ್ ಅವರನ್ನು ನಾಂದೇಡ್ನಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಾದಲ್ ಅವರ ಭದ್ರತೆಗೆ ನಿಯೋಜಿಸಲಾದ ಭದ್ರತಾ ಸಿಬ್ಬಂದಿಯೂ ದಾಳಿಯಲ್ಲಿ ಗಾಯಗೊಂಡಿದ್ದಾರೆ.
ಸುಖ್ಬೀರ್ ಸಿಂಗ್ ಬಾದಲ್ ತಮ್ಮ ಕುಟುಂಬದೊಂದಿಗೆ ಗುರುವಾರ (ಆಗಸ್ಟ್ 13) ಬೆಳಗ್ಗೆ ನಾಂದೇಡ್ನಲ್ಲಿರುವ ತಖ್ತ್ ಶ್ರೀ ಹಜೂರ್ ಸಾಹಿಬ್ಗೆ ಭೇಟಿ ನೀಡಿದ್ದರು. ದಾಳಿ ನಡೆದಾಗ ಬಾದಲ್ ಅವರ ಪತ್ನಿ ಮತ್ತು ಅಕಾಲಿ ದಳದ ಸಂಸದೆ ಹರ್ಸಿಮ್ರತ್ ಕೌರ್ ಬಾದಲ್ ಜತೆಗೆ ಇದ್ದರು.
ಸುಖ್ಬೀರ್ ಸಿಂಗ್ ಬಾದಲ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು:
#WATCH | Nanded, Maharashtra | Former Deputy CM of Punjab, Sukhbir Singh Badal rushed to a hospital after being attacked by a Nihang inside Nanded Gurudwara. He has sustained injuries to his hand. pic.twitter.com/PnO2n4wGe9
— ANI (@ANI) August 13, 2026
ದಾಳಿಯ ನಂತರದ ವಿಡಿಯೊದಲ್ಲಿ ಬಾದಲ್ ಬಲಗೈಗೆ ಕೇಸರಿ ಬಟ್ಟೆ ಸುತ್ತಿಕೊಂಡು ನಡೆಯುತ್ತಿರುವುದು ಕಂಡುಬಂದಿದೆ. ಮೂಲಗಳ ಪ್ರಕಾರ, ದಾಳಿಕೋರ ಸುಖ್ಬೀರ್ ಬಾದಲ್ ಅವರ ಹೊಟ್ಟೆಗೆ ಇರಿದು ಕೊಲ್ಲಲು ಪ್ರಯತ್ನಿಸಿದ್ದಾನೆ. ಆದರೆ ಭದ್ರತಾ ಸಿಬ್ಬಂದಿ ಮಧ್ಯ ಪ್ರವೇಶಿಸಿ ತಡೆದಿದ್ದಾರೆ. ಸುಖ್ಬೀರ್ ಬಾದಲ್ ಅವರ ಕೈಗೆ ಗಾಯವಾಗಿದೆ. ಆದರೆ ಜೀವಕ್ಕೇನು ತೊಂದರೆಯಿಲ್ಲ ಎಂದು ಅಕಾಲಿ ದಳದ ಮೂಲಗಳು ತಿಳಿಸಿವೆ. ಅವರು ನಾಂದೇಡ್ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದಾಳಿಯ ನಂತರ ಬಾದಲ್ ಅವರ ಕೈಗೆ ಹೊಲಿಗೆ ಹಾಕಲಾಗಿದೆ.
2ನೇ ದಾಳಿ
ಸುಖ್ಬೀರ್ ಸಿಂಗ್ ಬಾದಲ್ ಅವರ ಮೇಲೆ ದಾಳಿ ನಡೆಯುತ್ತಿರುವುದು ಇದು ಎರಡನೇ ಬಾರಿ. ಈ ಮೊದಲು 2024ರ ಡಿಸೆಂಬರ್ 4ರಂದು ಪಂಜಾಬ್ನ ಅಮೃತಸರದ ಸ್ವರ್ಣ ದೇವಾಲಯದ ಹೊರಗೆ ಅವರ ಹತ್ಯೆ ಯತ್ನ ನಡೆದಿತ್ತು. ಆಗ ಅವರಿಗೆ ಯಾವುದೇ ಹಾನಿಯಾಗಲಿಲ್ಲ. ಬಂದೂಕುಧಾರಿಯನ್ನು ಸ್ಥಳದಲ್ಲೇ ಬಂಧಿಸಲಾಗಿತ್ತು. ಬಾದಲ್ ಗೋಲ್ಡನ್ ಟೆಂಪಲ್ನಲ್ಲಿ ಸೇವಾದಾರ್ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಅವರ ಮೇಲೆ ದಾಳಿ ನಡೆದಿತ್ತು. ಬೆದರಿಕೆಗಳಿಂದಾಗಿ ಸುಖ್ಬೀರ್ ಸಿಂಗ್ ಬಾದಲ್ ಅವರಿಗೆ ಉನ್ನತ ಶ್ರೇಣಿಯ ಝಡ್-ಪ್ಲಸ್ ಭದ್ರತೆ ನೀಡಲಾಗಿದೆ.