ದೆಹಲಿ SIR: ಬಿಜೆಪಿ ಹಿರಿಯ ನಾಯಕ ಎಲ್ಕೆ ಅಡ್ವಾಣಿ, ಜೈಶಂಕರ್, ಚುನಾವಣಾ ಆಯುಕ್ತ ಸಂಧುಗೂ SIR ನೋಟಿಸ್!
Special Intensive Revision: ಚುನಾವಣಾ ಆಯೋಗ ನಡೆಸುತ್ತಿರುವ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆಯ ಭಾಗವಾಗಿ ಬಿಜೆಪಿ ಹಿರಿಯ ನಾಯಕ ಎಲ್. ಕೆ. ಅಡ್ವಾಣಿ, ವಿದೇಶಾಂಗ ಸಚಿವ ಎಸ್. ಜೈಶಂಕರ್ ಮತ್ತು ಚುನಾವಣಾ ಆಯುಕ್ತ ಎಸ್. ಎಸ್. ಸಂಧು ಸೇರಿದಂತೆ ಹಲವು ಪ್ರಮುಖರಿಗೆ ನೋಟಿಸ್ ಜಾರಿ ಮಾಡಲಾಗಿದೆ.
ಸಂಗ್ರಹ ಚಿತ್ರ -
ನವದೆಹಲಿ: ಚುನಾವಣಾ ಆಯೋಗ ನಡೆಸುತ್ತಿರುವ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (Special Intensive Revision – SIR) ಪ್ರಕ್ರಿಯೆಯ ಭಾಗವಾಗಿ ಬಿಜೆಪಿ ಹಿರಿಯ ನಾಯಕ ಎಲ್. ಕೆ. ಅಡ್ವಾಣಿ, ವಿದೇಶಾಂಗ ಸಚಿವ ಎಸ್. ಜೈಶಂಕರ್ ಮತ್ತು ಚುನಾವಣಾ ಆಯುಕ್ತ ಎಸ್. ಎಸ್. ಸಂಧು ಸೇರಿದಂತೆ ಹಲವು ಪ್ರಮುಖರಿಗೆ ನೋಟಿಸ್ ಜಾರಿ ಮಾಡಲಾಗಿದೆ. ಕಾಂಗ್ರೆಸ್ ನಾಯಕ ಮತ್ತು ಹಿರಿಯ ಸಂಸದ ಕಪಿಲ್ ಸಿಬಲ್, ಹಿರಿಯ ಕಾಂಗ್ರೆಸ್ ನಾಯಕ ಅಭಿಷೇಕ್ ಮನು ಸಿಂಘ್ವಿ ಮತ್ತು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಅವರಿಗೂ ಸಹ ನೋಟೀಸ್ ನೀಡಲಾಗಿದೆ ಎಂದು ತಿಳಿದು ಬಂದಿದೆ.
ನೋಟಿಸ್ ಪಟ್ಟಿಯ ಪ್ರಕಾರ, ಚುನಾವಣಾ ದಾಖಲೆಗಳಲ್ಲಿ ಎಸ್.ಎಸ್. ಸಂಧು ಅವರ ಹೆಸರಿನ ಕಾಗುಣಿತದಲ್ಲಿ ಹೊಂದಾಣಿಕೆಯಾಗದ ಕಾರಣ ಅವರಿಗೆ ನೋಟಿಸ್ ನೀಡಲಾಗಿದೆ . ಕಪಿಲ್ ಸಿಬಲ್ ಮತ್ತು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಅವರ ಹೆಸರುಗಳನ್ನು ಹಿಂದಿನ ಎಸ್ಐಆರ್ ದಾಖಲೆಗಳೊಂದಿಗೆ ಮ್ಯಾಪ್ ಮಾಡಲು ಸಾಧ್ಯವಾಗದ ಕಾರಣ ಅವರಿಗೆ ನೋಟಿಸ್ ನೀಡಲಾಗಿದೆ. ನೋಟಿಸ್ ಪಟ್ಟಿಯಲ್ಲಿ ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಅವರ ಕುಟುಂಬ ಸದಸ್ಯರು ಕೂಡ ಸೇರಿದ್ದಾರೆ. ಎಲ್ ಕೆ ಅಡ್ವಾಣಿ ಅವರ ಪುತ್ರಿ ಪ್ರತಿಭಾ ಅಡ್ವಾಣಿ ಕೂಡ ಪಟ್ಟಿಯಲ್ಲಿದ್ದಾರೆ.
ಹಿಂದಿನ SIR ದಾಖಲೆಗಳೊಂದಿಗೆ ಹೆಸರುಗಳನ್ನ ಮ್ಯಾಪ್ ಮಾಡಲು ಸಾಧ್ಯವಾಗದಿರುವುದು ಅಥವಾ ದಾಖಲೆಗಳಲ್ಲಿ ಕಂಡುಬಂದಿರುವ ತಾರ್ಕಿಕ ವ್ಯತ್ಯಾಸಗಳು ಇದಕ್ಕೆ ಕಾರಣಗಳಾಗಿವೆ. ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತ ಅವರಿಗೂ ನೋಟೀಸ್ ಕಳುಹಿಸಲಾಗಿದೆ. . ಶಾಲಿಮಾರ್ ಬಾಗ್ ಕ್ಷೇತ್ರದ ಮತದಾರರಾಗಿರುವ ಮುಖ್ಯಮಂತ್ರಿ ರೇಖಾ ಗುಪ್ತಾ ಅವರ ಫಾರ್ಮ್ನಲ್ಲಿ, ಅವರಿಗೂ ಮತ್ತು ಅವರ ಪೋಷಕರಿಗೂ ಇರುವ ವಯಸ್ಸಿನ ವ್ಯತ್ಯಾಸವು 15 ವರ್ಷಕ್ಕಿಂತ ಕಡಿಮೆ ಎಂದು ದಾಖಲಾಗಿತ್ತು. ಹೀಗಾಗಿ ಇದನ್ನು 'ತಾರ್ಕಿಕ ವ್ಯತ್ಯಾಸ ಎಂದು ಪರಿಗಣಿಸಿ ನೋಟೀಸ್ ನೀಡಲಾಗಿದೆ.
ನೋಟಿಸ್ ಬಂದ ಬೆನ್ನಲ್ಲೇ ಬೂತ್ ಮಟ್ಟದ ಅಧಿಕಾರಿಗಳು (BLO) ಭೌತಿಕ ಪರಿಶೀಲನೆ ನಡೆಸಿದ್ದಾರೆ. ಅಗತ್ಯ ದಾಖಲೆಗಳನ್ನು ಒದಗಿಸಿದ ನಂತರ ಅವರ ವಿವರಗಳನ್ನು ದೃಢೀಕರಿಸಲಾಗಿದ್ದು ನವೆಂಬರ್ 4 ರಂದು ಪ್ರಕಟವಾಗಲಿರುವ ಅಂತಿಮ ಮತದಾರರ ಪಟ್ಟಿಯಲ್ಲಿ ಅವರ ಹೆಸರು ಸೇರ್ಪಡೆಯಾಗಲಿದೆ ಎಂದು ಚುನಾವಣಾ ಅಧಿಕಾರಿಗಳು ತಿಳಿಸಿದ್ದಾರೆ.