ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಚುನಾವಣೆ ನಂತರ ಬಿಕ್ಕಟ್ಟಿನಲ್ಲಿ TMC: ಮಮತಾ ಬ್ಯಾನರ್ಜಿ ವಿರುದ್ಧವೇ ತಿರುಗಿಬಿದ್ದ ಪಕ್ಷದ ನಾಯಕರು, ಮೂವರು ಅಮಾನತು

Trinamool Congress in Crisis After Elections: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಸೋಲಿನ ಬಳಿಕ ಪಕ್ಷ ವಿರೋಧಿ ಹೇಳಿಕೆಗಳನ್ನು ನೀಡಿದ ಆರೋಪದ ಮೇಲೆ ಮೂವರು ವಕ್ತಾರರನ್ನು ಆರು ವರ್ಷಗಳ ಕಾಲ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಅಮಾನತು ಮಾಡಿದೆ. ಟಿಎಂಸಿ ವಕ್ತಾರ ರಿಜು ದತ್ತಾ ನೂತನ ಸಿಎಂ ಬಳಿ ಕ್ಷಮೆಯಾಚಿಸಿದ್ದಾರೆ.

ಮಮತಾ ಬ್ಯಾನರ್ಜಿ ವಿರುದ್ಧವೇ ತಿರುಗಿಬಿದ್ದ ಪಕ್ಷದ ನಾಯಕರು

ಸಾಂದರ್ಭಿಕ ಚಿತ್ರ -

Priyanka P
Priyanka P May 11, 2026 11:16 AM

ಕೋಲ್ಕತ್ತಾ, ಮೇ 10: ಪಶ್ಚಿಮ ಬಂಗಾಳದಲ್ಲಿ (West Bengal) ತೃಣಮೂಲ ಕಾಂಗ್ರೆಸ್ (TMC) ಸೋಲಿನಿಂದಾಗಿ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ಮತ್ತು ಅವರ ಸೋದರಳಿಯ ಅಭಿಷೇಕ್ ಬ್ಯಾನರ್ಜಿ (Abhishek Banerjee) ವಿರುದ್ಧ ಪಕ್ಷದ ನಾಯಕರು ತಿರುಗಿಬಿದ್ದಿದ್ದಾರೆ. ಪಕ್ಷದ ಕೆಲ ಕಾರ್ಯಕರ್ತರು ಮತ್ತು ವಕ್ತಾರರ ಅಸಮಾಧಾನವು ಇದೀಗ ಕೆಲವು ಸ್ಥಾನಗಳ ವಜಾಗಳಿಗೆ ಕಾರಣವಾಗುತ್ತಿದೆ.

ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಸೋಲಿನ ಬಳಿಕ ಪಕ್ಷ ವಿರೋಧಿ ಹೇಳಿಕೆಗಳನ್ನು ನೀಡಿದ ಆರೋಪದ ಮೇಲೆ ಮೂವರು ವಕ್ತಾರರನ್ನು ಆರು ವರ್ಷಗಳ ಕಾಲ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಅಮಾನತು ಮಾಡಿದೆ. ಪಕ್ಷವು ಈಗ ಅಧಿಕಾರದಲ್ಲಿ ಇಲ್ಲದಿರುವುದರಿಂದ, ಅಸಮಾಧಾನಗೊಂಡವರು ಮುಂದೆಯೂ ತಮ್ಮ ಆಕ್ರೋಶವನ್ನು ಹೊರಹಾಕುವ ಸಾಧ್ಯತೆಯಿದೆ. ಅಧಿಕಾರವಿಲ್ಲದ ಸಮಯದಲ್ಲಿ ಇಂತಹ ಆಂತರಿಕ ಅಸಮಾಧಾನಗಳನ್ನು ನಿಯಂತ್ರಿಸುವುದು ಪಕ್ಷಕ್ಕೆ ಸವಾಲಾಗಲಿದೆ. ಇದು ಪಕ್ಷಕ್ಕೆ ದೊಡ್ಡ ಹಿನ್ನಡೆಯನ್ನು ನೀಡಬಹುದು.

ಚರ್ಚಾ ಸಮಿತಿಗಳಲ್ಲಿ ಪಕ್ಷವನ್ನು ಪ್ರತಿನಿಧಿಸುತ್ತಿದ್ದ ಟಿಎಂಸಿ ವಕ್ತಾರ ರಿಜು ದತ್ತಾ, ತಮ್ಮ ಎಕ್ಸ್ ಹ್ಯಾಂಡಲ್‌ನಲ್ಲಿ ವಿಡಿಯೊವನ್ನು ಹಂಚಿಕೊಳ್ಳುವ ಮೂಲಕ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದ್ದಾರೆ. ಮುಖ್ಯಮಂತ್ರಿ ಸುವೇಂದು ಅಧಿಕಾರಿ ಮತ್ತು ಇತರ ಬಿಜೆಪಿ ನಾಯಕರ ವಿರುದ್ಧ ಈ ಹಿಂದೆ ತಾನು ಮಾಡಿದ್ದ ನಿಂದನಾತ್ಮಕ ಹೇಳಿಕೆಗಳಿಗಾಗಿ ಬಹಿರಂಗವಾಗಿ ದತ್ತಾ ಕ್ಷಮೆಯಾಚಿಸಿದ್ದಾರೆ. ಅಧಿಕಾರಿ ವಿರೋಧ ಪಕ್ಷದ ನಾಯಕರಾಗಿದ್ದಾಗ ಆ ಹೇಳಿಕೆಗಳನ್ನು ನೀಡುವಂತೆ ಟಿಎಂಸಿಯೊಳಗಿನಿಂದ ತನಗೆ ತೀವ್ರ ಒತ್ತಡ ಮತ್ತು ಬೆದರಿಕೆಗಳು ಬಂದಿದ್ದವು ಎಂದು ಅವರು ಹೇಳಿದ್ದಾರೆ. ತಮಗೆ ರಕ್ಷಣೆ ಮತ್ತು ಬೆಂಬಲ ನೀಡಿದ್ದಕ್ಕಾಗಿ ದತ್ತಾ ಬಿಜೆಪಿಯನ್ನು ಶ್ಲಾಘಿಸಿದರು.

"ಅವಮಾನ, ಹತಾಶೆ"; ಮಮತಾ ನೆರಳಿನಿಂದ ಹೊರಬಂದು ಬಂಗಾಳದಲ್ಲಿ ಬಿಜೆಪಿ ನಾಯಕನಾಗಿ ಸುವೇಂದು ಅಧಿಕಾರಿ ಬೆಳೆದಿದ್ದು ಹೇಗೆ?

2026 ರ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಪಕ್ಷದ ಟಿಕೆಟ್ ಪಡೆಯಲು ಪ್ರತಿಯೊಬ್ಬ ಅಭ್ಯರ್ಥಿಯಿಂದ 5 ಕೋಟಿ ರೂ.ಗಳ ಬೇಡಿಕೆ ಇಡಲಾಗಿತ್ತು. ಆದರೆ ಅವರು ಅದನ್ನು ನೀಡಲು ನಿರಾಕರಿಸಿದ್ದರು ಎಂದು ಮಾಜಿ ಕ್ರಿಕೆಟಿಗ ಮನೋಜ್ ತಿವಾರಿ ಕೂಡ ಟಿಎಂಸಿ ವಿರುದ್ಧ ವಾಗ್ದಾಳಿ ನಡೆಸಿದರು.

ಮಮತಾ ಬ್ಯಾನರ್ಜಿ ನೇತೃತ್ವದ ಸಂಪುಟದಲ್ಲಿ ಕ್ರೀಡಾ ಮತ್ತು ಯುವ ವ್ಯವಹಾರಗಳ ರಾಜ್ಯ ಸಚಿವರಾಗಿದ್ದ ತಿವಾರಿ, ಹಿರಿಯ ಸಚಿವ ಅರೂಪ್ ಬಿಸ್ವಾಸ್ ಅವರಿಗೆ ಕ್ರೀಡೆಗಳ ಬಗ್ಗೆ ಸರಿಯಾದ ತಿಳುವಳಿಕೆ ಇಲ್ಲ ಎಂದು ಆರೋಪಿಸಿದರು. ಮೈದಾನದಲ್ಲಿ ಅರೂಪ್ ಬಿಸ್ವಾಸ್ ಅವರ ವರ್ತನೆ ಮತ್ತು ವಿಐಪಿಗಳ ಹಸ್ತಕ್ಷೇಪದಿಂದಾಗಿ ಮೆಸ್ಸಿ ಅಸಮಾಧಾನಗೊಂಡು ಕಾರ್ಯಕ್ರಮದಿಂದ ಅರ್ಧದಲ್ಲೇ ನಿರ್ಗಮಿಸಿದ್ದರು. ಈ ಘಟನೆಯು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯಕ್ಕೆ ಮುಜುಗರ ತಂದಿತ್ತು. ಹೀಗಾಗಿ ಬಿಸ್ವಾಸ್ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗಿ ಬಂದಿತ್ತು.

ಅಂದಹಾಗೆ, ಪಕ್ಷದ ಶಿಸ್ತು ಉಲ್ಲಂಘಿಸಿದ ಆರೋಪದ ಮೇಲೆ ವಕ್ತಾರರಾದ ಕೊಹಿನೂರ್ ಮಜುಂದಾರ್ ಮತ್ತು ಕಾರ್ತಿಕ್ ಘೋಷ್ ಅವರನ್ನು ಟಿಎಂಸಿ ಅಮಾನತುಗೊಳಿಸಿದೆ. ಅಭಿಷೇಕ್ ಬ್ಯಾನರ್ಜಿ ಅವರನ್ನು ಭೇಟಿ ಮಾಡಲು ಪಕ್ಷದ ನಾಯಕರು ಗಂಟೆಗಟ್ಟಲೆ ಕಾಯಬೇಕಾಯಿತು ಎಂದು ಕೊಹಿನೂರ್ ಮಜುಂದಾರ್ ಮಾಧ್ಯಮಗಳಿಗೆ ತಿಳಿಸಿದ್ದರು.