ಕ್ರೀಡಾಲೋಕದ ಮೇಲೆ ಯುದ್ಧದ ಕಾರ್ಮೋಡ; ಆಫ್ಘಾನ್-ಲಂಕಾ ಸರಣಿ ಮುಂದೂಡಿಕೆ
AFG vs SL series postponed: ವಿಶ್ವಕಪ್ ಸೋಲಿನ ಬಳಿಕ ರಶೀದ್ ಖಾನ್ ಅವರನ್ನು ಅಫ್ಘಾನಿಸ್ತಾನ ತಂಡದ ನಾಯಕತ್ವದಿಂದ ತೆಗೆದುಹಾಕಲಾಗಿದೆ. ಇಬ್ರಾಹಿಂ ಜದ್ರಾನ್ ಅವರಿಗೆ ನಾಯಕತ್ವ ನೀಡಲಾಗಿದೆ. ಲಂಕಾ ವಿರುದ್ಧ ಮುಂದೂಡಿಕೆಯಾದ ಸರಣಿಯಿಂದಲೇ ಇಬ್ರಾಹಿಂ ಜದ್ರಾನ್ ನಾಯಕತ್ವ ಜವಾಬ್ದಾರಿ ವಹಿಸಿಕೊಂಡಿದ್ದರು.
Afghanistan vs Sri Lanka -
ಕಾಬುಲ್, ಮಾ.11: ಮಧ್ಯಪ್ರಾಚ್ಯದಲ್ಲಿ ಉಂಟಾಗಿರುವ ಉದ್ವಿಗ್ನ(West Asia tensions) ಪರಿಸ್ಥಿತಿಯಿಂದಾಗಿ ಜಾಗತಿಕ ಮಟ್ಟದ ವ್ಯಾಪಾರ ವಹಿವಾಟು, ಜನಜೀವನದ ಮೇಲೆ ಪರಿಣಾಮ ಬೀರಿದ್ದು ಮಾತ್ರವಲ್ಲದೇ, ವಿಶ್ವದ ಹಲವು ಭಾಗಗಳಲ್ಲಿ ಕ್ರೀಡಾಪಟುಗಳು, ಕ್ರೀಡಾ ಚಟುವಟಿಕೆ ಮೇಲೂ ಕಾರ್ಮೋಡ ಕವಿದಿದೆ. ಅಫ್ಘಾನಿಸ್ತಾನ ಮತ್ತು ಶ್ರೀಲಂಕಾ(Afghanistan vs Sri Lanka) ನಡುವಿನ ಕ್ರಿಕೆಟ್ ಸರಣಿಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ.
ಮಾರ್ಚ್ 13 ರಿಂದ 25 ರವರೆಗೆ ಅಫ್ಘಾನಿಸ್ತಾನ ಮತ್ತು ಶ್ರೀಲಂಕಾ ತಂಡಗಳು ಮೂರು ಏಕದಿನ ಮತ್ತು ಮೂರು ಟಿ 20 ಪಂದ್ಯಗಳನ್ನಾಡಬೇಕಿತ್ತು. ಟಿ20 ವಿಶ್ವಕಪ್ ಬಳಿಕ ಉಭಯ ತಂಡಗಳು ಕ್ರಿಕೆಟ್ನಲ್ಲಿ ಮುಖಾಮುಖಿಯಾಗುತ್ತಿದ್ದವು. ವಾಯು ಸಂಚಾರ ಅಡಚಣೆಗಳು, ಭದ್ರತಾ ಕಾಳಜಿಗಳು ಮತ್ತು ಯುದ್ಧದ ಉದ್ವಿಗ್ನತೆಗಳಿಂದಾಗಿ ಎರಡೂ ದೇಶಗಳ ಕ್ರಿಕೆಟ್ ಮಂಡಳಿಗಳು ಜಂಟಿಯಾಗಿ ಸರಣಿಯನ್ನು ಮುಂದೂಡಲು ನಿರ್ಧರಿಸಿವೆ.
ಈ ಕುರಿತು ಮಾಹಿತಿ ನೀಡಿದ ಎಸಿಬಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನಸೀಬ್ ಖಾನ್, "ಲಂಕಾ ವಿರುದ್ಧದ ವೈಟ್-ಬಾಲ್ ಸರಣಿಯನ್ನು ಮುಂದೂಡಲಾಗಿದೆ. ವಿಮಾನಗಳು, ಲಾಜಿಸ್ಟಿಕ್ಸ್ ಮತ್ತು ಪ್ರಾದೇಶಿಕ ಪರಿಸ್ಥಿತಿಯಲ್ಲಿ ಕೆಲವು ಸಮಸ್ಯೆಗಳಿದ್ದವು. ಶ್ರೀಲಂಕಾದಲ್ಲಿ ಈ ಪಂದ್ಯಗಳನ್ನು ಆಯೋಜಿಸಲು ಮುಂದಿನ ದಿನಗಳಲ್ಲಿ ಮಾತುಕತೆ ನಡೆಸಲಾಗುವುದು" ಎಂದು ಅವರು ತಿಳಿಸಿದರು.
ಮಾರ್ಚ್ 13ಕ್ಕೆ ಐಪಿಎಲ್ ವೇಳಾಪಟ್ಟಿ ಪ್ರಕಟ; ಮೊದಲ ಹಂತದಲ್ಲಿ 20 ದಿನಗಳ ಪಂದ್ಯ
ಟಿ20 ವಿಶ್ವಕಪ್ನಲ್ಲಿ ಉಭಯ ತಂಡಗಳು ಸೆಮಿಫೈನಲ್ ತಲುಪವಲ್ಲಿ ವಿಫಲವಾಗಿದ್ದವು. ಗ್ರೂಪ್ ʼಡಿʼ ನಲ್ಲಿ ಅಫ್ಘಾನ್ ತಂಡ ಆಡಿದ 4 ಪಂದ್ಯಗಳಲ್ಲಿ 2 ರಲ್ಲಿ ಗೆದ್ದು 2ರಲ್ಲಿ ಸೋಲನ್ನು ಕಂಡಿತ್ತು. ಇದರಿಂದಾಗಿ ಸೂಪರ್-8ಕ್ಕೆ ತಲುಪವಲ್ಲಿ ವಿಫಲವಾಗಿತ್ತು. ಮತ್ತೊಂದೆಡೆ ಭಾರತದ ಜತೆಗೆ ಜಂಟಿ ಆತಿಥ್ಯವಹಿಸಿದ ಶ್ರೀಲಂಕಾ ಲೀಗ್ ಹಂತದಲ್ಲಿ ಅದ್ಭುತ ಪ್ರದರ್ಶನ ನೀಡಿತ್ತು. ಆಡಿದ 4 ಪಂದ್ಯಗಳಲ್ಲಿ 3 ಪಂದ್ಯಗಳನ್ನು ಗೆದ್ದುಕೊಂಡು ಸೂಪರ್-8 ಅರ್ಹತೆ ಪಡೆದಿತ್ತು. ಆದರೆ ಆ ಬಳಿಕ ಕಳಪೆ ಪ್ರದರ್ಶನದಿಂದಾಗಿ ಆಡಿದ 3 ಪಂದ್ಯಗಳಲ್ಲಿ ಸೋಲು ಕಂಡು ಸೆಮಿಸ್ಗೆ ತಲುಪದೇ ವಿಶ್ವಕಪ್ ಅಭಿಯಾನವನ್ನು ಕೊನೆಗೊಳಿಸಿತು.
ಅಫ್ಘಾನಿಸ್ತಾನ ತಂಡಕ್ಕೆ ಹೊಸ ನಾಯಕ
ವಿಶ್ವಕಪ್ ಸೋಲಿನ ಬಳಿಕ ರಶೀದ್ ಖಾನ್ ಅವರನ್ನು ಅಫ್ಘಾನಿಸ್ತಾನ ತಂಡದ ನಾಯಕತ್ವದಿಂದ ತೆಗೆದುಹಾಕಲಾಗಿದೆ. ಇಬ್ರಾಹಿಂ ಜದ್ರಾನ್ ಅವರಿಗೆ ನಾಯಕತ್ವ ನೀಡಲಾಗಿದೆ. ಲಂಕಾ ವಿರುದ್ಧ ಮುಂದೂಡಿಕೆಯಾದ ಸರಣಿಯಿಂದಲೇ ಇಬ್ರಾಹಿಂ ಜದ್ರಾನ್ ನಾಯಕತ್ವ ಜವಾಬ್ದಾರಿ ವಹಿಸಿಕೊಂಡಿದ್ದರು.