IND vs ENG: ʻನಿಮ್ಮಿಂದ ಭಾರತ ತಂಡ ಹಾಳಾಗುತ್ತಿದೆʼ-ಗೌತಮ್ ಗಂಭೀರ್ ವಿರುದ್ಧ ಅಭಿಷೇಕ್ ಸಿಂಘ್ವಿ ಕಿಡಿ!
IND vs ENG: ಇಂಗ್ಲೆಂಡ್ ವಿರುದ್ಧದ ಎರಡನೇ ಟಿ20ಐ ಪಂದ್ಯದಲ್ಲಿ ಭಾರತ ತಂಡ ಸೋಲು ಅನುಭವಿಸಿತ್ತು. ಈ ಸೋಲಿನ ನಂತರ ಕಾಂಗ್ರೆಸ್ ಹಿರಿಯ ನಾಯಕ ಮತ್ತು ವಕೀಲ ಅಭಿಷೇಕ್ ಮನು ಸಿಂಘ್ವಿ ಟೀಮ್ ಇಂಡಿಯಾ ಹೆಡ್ ಕೋಚ್ ಗೌತಮ್ ಗಂಭೀರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗೌತಮ್ ಗಂಭೀರ್ ವಿರುದ್ಧ ಅಭಿಷೇಕ್ ಸಿಂಘ್ವಿ ಕಿಡಿ. -
ನವದೆಹಲಿ: ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯ ಎರಡನೇ ಪಂದ್ಯದಲ್ಲಿ (IND vs ENG) ಭಾರತ ತಂಡ 4 ವಿಕೆಟ್ಗಳ ಸೋಲು ಅನುಭವಿಸಿತ್ತು. ಇದಕ್ಕೂ ಮುನ್ನ ಐರ್ಲೆಂಡ್ ವಿರುದ್ಧದ ಎರಡು ಪಂದ್ಯಗಳ ಟಿ20ಐ ಸರಣಿಯಲ್ಲಿ ಶ್ರೇಯಸ್ ಅಯ್ಯರ್ ನಾಯಕತ್ವದ ಟೀಮ್ ಇಂಡಿಯಾ 2-0 ಅಂತರದಲ್ಲಿ ಕ್ಲೀನ್ ಸ್ವೀಪ್ ಆಘಾತ ಅನುಭವಿಸಿತ್ತು. ಟಿ20 ವಿಶ್ವಕಪ್ ಗೆದ್ದ ನಂತರ, ಭಾರತ ಈ ಸ್ವರೂಪದಲ್ಲಿ ನಾಲ್ಕು ಪಂದ್ಯಗಳನ್ನು ಆಡಿದ್ದು, ಒಂದೇ ಒಂದು ಗೆಲುವು ಸಾಧಿಸಿಲ್ಲ. ಇಂಗ್ಲೆಂಡ್ ವಿರುದ್ಧದ ಎರಡನೇ ಟಿ20ಯಲ್ಲಿನ ಸೋಲಿನ ನಂತರ, ಕಾಂಗ್ರೆಸ್ ನಾಯಕ ಮತ್ತು ಸುಪ್ರೀಂ ಕೋರ್ಟ್ನ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ (Abhishek Singhvi) ಅವರು ಟೀಮ್ ಇಂಡಿಯಾದ ಮುಖ್ಯ ಕೋಚ್ ಗೌತಮ್ ಗಂಭೀರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಭಿಷೇಕ್ ಮನು ಸಿಂಘ್ವಿ ಕೂಡ ರಾಜ್ಯಸಭಾ ಸಂಸದರಾಗಿದ್ದಾರೆ. ಭಾರತ ತಂಡದ ಸತತ ಸೋಲುಗಳ ನಂತರ ಅವರು ಗೌತಮ್ ಗಂಭೀರ್ ಅವರಿಗೆ ಪ್ರಶ್ನೆಗಳನ್ನು ಕೇಳಿದ್ದಾರೆ. ತಮ್ಮ ಎಕ್ಸ್ ಖಾತೆಯಲ್ಲಿ ಅವರು, "ಗೌತಮ್ ಗಂಭೀರ್ ಅವರ ಮಾರ್ಗದರ್ಶನದಲ್ಲಿ ಭಾರತೀಯ ಕ್ರಿಕೆಟ್ ತಂಡ ಪಂದ್ಯಗಳನ್ನಷ್ಟೇ ಅಲ್ಲ, ತನ್ನ ದಿಕ್ಕನ್ನೂ ಕಳೆದುಕೊಳ್ಳುತ್ತಿರುವಂತೆ ಕಾಣುತ್ತಿದೆ. ಇಂಗ್ಲೆಂಡ್ ವಿರುದ್ಧದ ಸೋಲು, ಕೇವಲ ಹೆಸರು ಮತ್ತು ಖ್ಯಾತಿಯಿಂದ ತಂಡವನ್ನು ಯಶಸ್ಸಿನತ್ತ ಮುನ್ನಡೆಸಲು ಸಾಧ್ಯವಿಲ್ಲ ಎಂಬುದನ್ನು ಮತ್ತೊಮ್ಮೆ ನೆನಪಿಸಿದೆ. ಇದೇ ವೇಳೆ ಒಂದು ಪ್ರಶ್ನೆ ನಿರಂತರವಾಗಿ ಕೇಳಿಬರುತ್ತಿದೆ—ಆಡುವ ಹನ್ನೊಂದರ ಬಳಗದಲ್ಲಿ ಪದೇ-ಪದೆ ಅವಕಾಶ ಪಡೆಯುತ್ತಿರುವ ಹರ್ಷಿತ್ ರಾಣಾ ತಂಡಕ್ಕೆ ನಿಜವಾಗಿ ಯಾವ ರೀತಿಯ ಮೌಲ್ಯವನ್ನು ಸೇರಿಸುತ್ತಿದ್ದಾರೆ? ಪ್ರದರ್ಶನದ ಆಧಾರದ ಮೇಲೆ ಹೊಣೆಗಾರಿಕೆಯನ್ನು ನಿಗದಿಪಡಿಸುವುದು ಅನಿವಾರ್ಯವಾಗಿದೆ," ಎಂದು ಪೋಸ್ಟ್ ಹಾಕಿದ್ದಾರೆ.
ʻನಾವು ಈ ಸಮಸ್ಯೆಯನ್ನು ಬಗೆಹರಿಸಲೇಬೇಕುʼ-ಭಾರತದ ಸೋಲಿಗೆ ಕಾರಣ ತಿಳಿಸಿದ ಇಶಾನ್ ಕಿಶನ್!
ಗೌತಮ್ ಗಂಭೀರ್ ಅವರು ಏಳುಬೀಳುಗಳನ್ನು ಅನುಭವಿಸಿದ್ದಾರೆ. ಗಂಭೀರ್ ಅವರ ತರಬೇತಿಯಲ್ಲಿ, ಭಾರತ ತಂಡ ಎರಡು ಐಸಿಸಿ ಟ್ರೋಫಿಗಳನ್ನು ಗೆದ್ದಿದೆ; ಕಳೆದ ವರ್ಷ ಚಾಂಪಿಯನ್ಸ್ ಟ್ರೋಫಿ ಪ್ರಶಸ್ತಿಯನ್ನು ಗೆದ್ದಿದ್ದ ತಂಡ ಮತ್ತು ಈ ವರ್ಷದ ಆರಂಭದಲ್ಲಿ ಟಿ20 ವಿಶ್ವಕಪ್ ಚಾಂಪಿಯನ್ ಆಯಿತು. ಗಂಭೀರ್ 2024ರಲ್ಲಿ ಟೀಮ್ ಇಂಡಿಯಾದ ಮುಖ್ಯ ಕೋಚ್ ಆಗಿ ಅಧಿಕಾರ ವಹಿಸಿಕೊಂಡರು.
Under Gautam Gambhir, Indian cricket seems to be losing its direction as much as its matches. The defeat against England is another reminder that reputation alone cannot coach a team. And one question refuses to go away: what value is Harshit Rana bringing to the XI that…
— Abhishek Singhvi (@DrAMSinghvi) July 5, 2026
ಆದಾಗ್ಯೂ, ಅವರ ಅವಧಿಯಲ್ಲಿ ಭಾರತ, ನ್ಯೂಜಿಲೆಂಡ್ ಮತ್ತು ದಕ್ಷಿಣ ಆಫ್ರಿಕಾದ ಎದುರು ತವರು ಟೆಸ್ಟ್ ಸರಣಿಗಳಲ್ಲಿ ಕ್ಲೀನ್ ಸ್ವೀಪ್ ಆಘಾತ ಅನುಭವಿಸಿತ್ತು. 2024ಕ್ಕಿಂತ ಮುನ್ನ ಭಾರತ ಕೊನೆಯ ಬಾರಿ ತವರಿನಲ್ಲಿ ಟೆಸ್ಟ್ ಸರಣಿಯನ್ನು ಸೋತಿದ್ದು 2012 ರಲ್ಲಿ. ಆಸ್ಟ್ರೇಲಿಯಾದಲ್ಲಿ ನಡೆದಿದ್ದ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿಯೂ ಭಾರತ ಸೋಲು ಅನುಭವಿಸಿತು.
ʻನಾವು ಈ ಸಮಸ್ಯೆಯನ್ನು ಬಗೆಹರಿಸಲೇಬೇಕುʼ-ಭಾರತದ ಸೋಲಿಗೆ ಕಾರಣ ತಿಳಿಸಿದ ಇಶಾನ್ ಕಿಶನ್!
ಗೌತಮ್ ಗಂಭೀರ್ ಅವರ ತರಬೇತಿಯಲ್ಲಿ, ಟೀಮ್ ಇಂಡಿಯಾ ಮೊದಲ ಬಾರಿಗೆ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ಗೆ ಅರ್ಹತೆ ಪಡೆಯಲು ವಿಫಲವಾಯಿತು. ಐರ್ಲೆಂಡ್ ವಿರುದ್ಧದ ಟಿ20 ಪಂದ್ಯವನ್ನು ಭಾರತ ತಂಡವು ಈ ಹಿಂದೆ ಎಂದಿಗೂ ಸೋತಿರಲಿಲ್ಲ; ಆದಾಗ್ಯೂ, ಕಳೆದ ತಿಂಗಳು, ಎರಡು ಪಂದ್ಯಗಳ ಸರಣಿಯಲ್ಲಿ ತಂಡವು ಕ್ಲೀನ್ ಸ್ವೀಪ್ ಅನುಭವಿಸಿತು.
ಗಂಭೀರ್ರ ನೆಚ್ಚಿನ ಆಟಗಾರರಲ್ಲಿ ಹರ್ಷಿತ್ ಕೂಡ ಒಬ್ಬರು
ಗಂಭೀರ್ ಮುಖ್ಯ ಕೋಚ್ ಆಗಿ ಅಧಿಕಾರ ವಹಿಸಿಕೊಂಡ ನಂತರವೇ ಹರ್ಷಿತ್ ರಾಣಾ ಅವರನ್ನು ಟೀಮ್ ಇಂಡಿಯಾದಲ್ಲಿ ಸೇರಿಸಲಾಯಿತು; ಅವರನ್ನು ಗಂಭೀರ್ ಅವರ ನೆಚ್ಚಿನ ಆಟಗಾರರಲ್ಲಿ ಒಬ್ಬರೆಂದು ಪರಿಗಣಿಸಲಾಗಿದೆ. ಹರ್ಷಿತ್ ಭಾರತದ ಪರ ಎರಡು ಟೆಸ್ಟ್ ಪಂದ್ಯಗಳಲ್ಲಿ 4 ವಿಕೆಟ್ಗಳು, 14 ಏಕದಿನ ಪಂದ್ಯಗಳಲ್ಲಿ 26 ವಿಕೆಟ್ಗಳು ಮತ್ತು 13 ಟಿ20ಐ ಪಂದ್ಯಗಳಲ್ಲಿ 14 ವಿಕೆಟ್ಗಳನ್ನು ಪಡೆದಿದ್ದಾರೆ.
ಏಕದಿನ ಪಂದ್ಯಗಳಲ್ಲಿ ಅವರ ಎಕಾನಮಿ ದರ 6 ಕ್ಕಿಂತ ಹೆಚ್ಚಿದ್ದರೂ, ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಸುಮಾರು 10ರ ಎಕಾನಮಿ ದರದಲ್ಲಿ ರನ್ಗಳನ್ನು ಬಿಟ್ಟುಕೊಟ್ಟಿದ್ದಾರೆ. ಆದಾಗ್ಯೂ, ಅವರು ಕೆಳ ಕ್ರಮಾಂಕದಲ್ಲಿ ಉಪಯುಕ್ತ ಇನಿಂಗ್ಸ್ಗಳನ್ನು ಆಡುವ ಸಾಮರ್ಥ್ಯವನ್ನು ಹೊಂದಿದ್ದಾರೆ ಮತ್ತು ಏಕದಿನ ಪಂದ್ಯಗಳಲ್ಲಿ ಅರ್ಧಶತಕವನ್ನು ಸಹ ಗಳಿಸಿದ್ದಾರೆ.