IND vs ENG: ಲೀಡ್ಸ್ನಲ್ಲಿ ಭಾರತಕ್ಕೆ ಒಲಿಯಲಿ ಗೆಲುವಿನ ಲೀಡ್
ಜೈಸ್ವಾಲ್ ಮತ್ತು ರಾಹುಲ್ ಆರಂಭಿಕರಾಗಿ ಆಡುವುದು ಖಚಿತವಾಗಿದೆ. ಫಿಟ್ನೆಸ್ ಸಮಸ್ಯೆ ಎದುರಿಸುತ್ತಿರುವ ಜಸ್ಪ್ರೀತ್ ಬೂಮ್ರಾ, ರವೀಂದ್ರ ಜಡೇಜ, ರಿಷಭ್ ಪಂತ್, ನಿತೀಶ್ ರೆಡ್ಡಿ, ಸಾಯಿ ಸುದರ್ಶನ್ ಹಾಗೂ ಪ್ರಸಿದ್ಧ ಕೃಷ್ಣ ತಮ್ಮ ಸಾಮರ್ಥ್ಯ ಸಾಬೀತುಪಡಿಸುವ ಸಂದರ್ಭವೂ ಇದಾಗಿದೆ.


ಲೀಡ್ಸ್: ಇಲ್ಲಿಯ ತನಕ ಐಪಿಎಲ್ ಗುಂಗಿನಲ್ಲಿ ತೇಲಾಡುತ್ತಿದ್ದ ಭಾರತೀಯರ ಆಟಗಾರರು ನೈಜ ಕ್ರಿಕೆಟ್, 5 ದಿನಗಳ ಟೆಸ್ಟ್ ಆಡಲು ಸಜ್ಜಾಗಿದ್ದಾರೆ. ಶುಕ್ರವಾರ(ಜೂ.20) ಲೀಡ್ಸ್ನಲ್ಲಿ ಆರಂಭವಾಗುವ ಮೊದಲ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್(IND vs ENG) ತಂಡದ ಸವಾಲು ಎದುರಿಸಲಿದ್ದಾರೆ. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಆರ್. ಅಶ್ವಿನ್ ನಿವೃತ್ತಿ ಘೋಷಿಸಿರುವ ಕಾರಣ ತಂಡದಲ್ಲಿರುವ ಯುವ ಆಟಗಾರರಿಗೆ ಈ ಸರಣಿ ‘ಟೆಸ್ಟ್’ ಆಗಲಿದೆ ಎಂಬುದರಲ್ಲಿ ಅನುಮಾನವೇ ಇಲ್ಲ. ನೂತನ ನಾಯಕ ಶುಭಮನ್ ಗಿಲ್(Shubman Gill) ತಮ್ಮ ಸಾಮರ್ಥ್ಯ ಸಾಬೀತು ಮಾಡುವುದರ ಜತೆಗೆ, 18 ವರ್ಷಗಳ ನಂತರ ಇಂಗ್ಲೆಂಡ್ ನೆಲದಲ್ಲಿ ಟೆಸ್ಟ್ ಸರಣಿ ಜಯದ ಕನಸು ನನಸು ಮಾಡಬೇಕಾದ ಸವಾಲು ಕೂಡ ಅವರ ಮುಂದಿದೆ.
ಟೆಸ್ಟ್ ಕ್ರಿಕೆಟ್ ಅಂದರೆ ನಿಂತು ಆಡುವುದು. ಇದು ವಿಪರೀತ ತಾಳ್ಮೆ, ಏಕಾಗ್ರತೆಯನ್ನು ಬಯಸುತ್ತದೆ. ಆದರೆ ಈಗಿನ ಟಿ20 ಜಮಾನಾದಲ್ಲಿ ಕ್ರಿಕೆಟಿಗರಿಗೆ ಕ್ರೀಸ್ ಆಕ್ರಮಿಸಿ ಕೊಂಡು ಬ್ಯಾಟಿಂಗ್ ಮಾಡುವುದೇ ದೊಡ್ಡ ಸಮಸ್ಯೆ. ಆದರೂ ಇಂಗ್ಲೆಂಡ್, ಭಾರತದಂಥ ತಂಡಗಳಲ್ಲಿ ಟೆಸ್ಟ್ ತಳಿಗಳಿರುವುದು ಸಮಾಧಾನಕರ ಸಂಗತಿ. ಹೀಗಾಗಿ ಟೆಸ್ಟ್ ಕ್ರಿಕೆಟ್ನಲ್ಲೂ ಚುಟುಕು ಕ್ರಿಕೆಟ್ನಷ್ಟೇ ರೋಚಕತೆ, ಕೌತುಕ, ಥ್ರಿಲ್ ಎಲ್ಲವೂ ಇರಬಹುದು ಎಂಬುದು ಕ್ರಿಕೆಟ್ ಪ್ರಿಯರ ನಂಬಿಕೆ.
8 ವರ್ಷದ ಬಳಿಕ ಕರುಣ್ ಕಣಕ್ಕೆ
ದೇಶೀಯ ಕ್ರಿಕೆಟ್ನಲ್ಲಿ ರನ್ ಹೊಳೆ ಹರಿಸಿ, ಎಂಟು ವರ್ಷಗಳ ಬಳಿಕ ಭಾರತ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದಿರುವ ಕರ್ನಾಟಕದ ಕರುಣ್ ನಾಯರ್ ಮತ್ತೊಮ್ಮೆ ಆಂಗ್ಲರ ವಿರುದ್ಧ ತಮ್ಮ ಸಾಮರ್ಥ್ಯ ತೋರಿಸಲು ಸಜ್ಜಾಗಿದ್ದಾರೆ. 2017ರಲ್ಲಿ ಚೆನ್ನೈಯಲ್ಲಿ ಇಂಗ್ಲೆಂಡ್ ವಿರುದ್ಧವೇ ದ್ವಿಶತಕ ಬಾರಿಸಿದ್ದ ಕರುಣ್ ಆ ಬಳಿಕ ಆಡುವ ಅವಕಾಶವನ್ನೇ ಕಳೆದುಕೊಂಡರು. ಇದೀಗ ಮತ್ತೆ ಆಂಗ್ಲರ ವಿರುದ್ಧವೇ ತಮ್ಮ ಎರಡನೇ ಹಂತದ ಕ್ರಿಕೆಟ್ ಜರ್ನಿ ಆರಂಭಿಸಿದ್ದಾರೆ. ಈ ಬಾರಿ ತಂಡದಲ್ಲಿ ಮೂವರು ಕನ್ನಡಿಗರು ಇರುವುದು ಮತ್ತೊಂದು ಹೆಮ್ಮೆಯ ವಿಚಾರ. ಕರುಣ್ ಮಾತ್ರವಲ್ಲದೆ ಪ್ರಸಿದ್ಧ್ ಕೃಷ್ಣ ಮತ್ತು ಕೆ.ಎಲ್ ರಾಹುಲ್ ಕೂಡ ಇದ್ದಾರೆ. ಮೂವರಿಗೂ ಆಡುವ ಬಳಗದಲ್ಲಿ ಸ್ಥಾನ ಖಚಿತ.
ಗಿಲ್ಗೆ ಅಗ್ನಿ ಪರೀಕ್ಷೆ
ಇಂಗ್ಲೆಂಡ್ ನೆಲದಲ್ಲಿ ಭಾರತ ಇದುವರೆಗೆ 3 ಬಾರಿ ಮಾತ್ರ ಸರಣಿ ಗೆಲುವು ಕಂಡಿದೆ. ಕೊನೆಯ ಬಾರಿಗೆ ಭಾರತ ಆಂಗ್ಲರ ನೆಲದಲ್ಲಿ ಸರಣಿ ಜಯಿಸಿದ್ದು 2007ರಲ್ಲಿ. ಕನ್ನಡಿಗ ರಾಹುಲ್ ದ್ರಾವಿಡ್ ನಾಯಕತ್ವದ ಭಾರತ, ಮೂರು ಪಂದ್ಯಗಳ ಸರಣಿಯನ್ನು 1-0 ಅಂತರದಿಂದ ಗೆದ್ದು ಬೀಗಿತ್ತು. ಇದಾದ ಬಳಿಕ ಧೋನಿ, ವಿರಾಟ್, ರೋಹಿತ್ ಹಲವು ಬಾರಿ ಸರಣಿ ಆಡಿದ್ದರೂ ಕೂಡ ಇವರಿಂದ ಸರಣಿ ಗೆಲುವು ಅಸಾಧ್ಯವಾಗಿತ್ತು. ಇದೀಗ ಶುಭಮನ್ ಗಿಲ್ಗೆ ಮೊದಲ ನಾಯಕತ್ವದಲ್ಲೇ ಸರಣಿ ಗೆಲ್ಲುವ ಅಗ್ನಿ ಪರೀಕ್ಷೆ ಎದುರಾಗಿದೆ. ಇಂಗ್ಲೆಂಡ್ನಲ್ಲಿ ಗಿಲ್ ಬ್ಯಾಟಿಂಗ್ ಪ್ರದರ್ಶನ ಕೂಡ ಅಷ್ಟಾಗಿ ಉತ್ತಮವಾಗಿಲ್ಲ. 14.66 ರ ಕಳಪೆ ಸರಾಸರಿಯನ್ನು ಹೊಂದಿರುವ ಅವರು ಇಲ್ಲಿ ಮೂರು ಪಂದ್ಯಗಳಲ್ಲಿ ಆರು ಇನ್ನಿಂಗ್ಸ್ ಆಡಿ ಕೇವಲ 88 ರನ್ಗಳನ್ನಷ್ಟೇ ಬಾರಿಸಿದ್ದಾರೆ. 28 ರನ್ ಅವರ ಗರಿಷ್ಠ ಸ್ಕೋರ್ ಆಗಿದೆ.
ಇದನ್ನೂ ಓದಿ IND vs ENG 1st Test: ಭಾರತ ತಂಡಕ್ಕೆ ಎಚ್ಚರಿಕೆ ನೀಡಿದ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್
ಮೂರನೇ ಕ್ರಮಾಂಕದ ಗೊಂದಲ
ರೋಹಿತ್ ಶರ್ಮ, ವಿರಾಟ್ ಕೊಹ್ಲಿ ನಿವೃತ್ತಿಯಿಂದಾಗಿ ಇಂಗ್ಲೆಂಡ್ನಲ್ಲಿ ಭಾರತ ಟೆಸ್ಟ್ ತಂಡದ ಬ್ಯಾಟಿಂಗ್ ಕ್ರಮಾಂಕದ ಬಗ್ಗೆ ಎದ್ದಿರುವ ಗೊಂದಲಗಳಿಗೆ ಉಪನಾಯಕ ರಿಷಭ್ ಪಂತ್ ಬುಧವಾರ ತೆರೆ ಎಳೆದಿದ್ದರು. ಶುಭಮಾನ್ ಗಿಲ್ 4ನೇ ಮತ್ತು ತಾನು 5ನೇ ಕ್ರಮಾಂಕದಲ್ಲಿ ಆಡಲಿರುವುದನ್ನು ಖಚಿತಪಡಿಸಿದ್ದರು. ಆದರೆ 3ನೇ ಕ್ರಮಾಂಕದಲ್ಲಿ ಯಾರು ಆಡಬೇಕೆಂಬ ಬಗ್ಗೆ ಗೊಂದಲ ಇದೆ ಎಂದಿದ್ದರು. ಸದ್ಯದ ಸ್ಥಿತಿಯಲ್ಲಿ ಸಾಯಿ ಸುದರ್ಶನ್ ಬ್ಯಾಟ್ ಬೀಸುವ ಸಾಧ್ಯತೆ ಅಧಿಕವಾಗಿದೆ. ಆಗ ಬ್ಯಾಟಿಂಗ್ ಕ್ರಮಾಂಕದಲ್ಲಿ ಎಡ-ಬಲ ಬ್ಯಾಟಿಂಗ್ ಕಾಂಬಿನೇಷನ್ ಕೂಡ ಹೊಂದಾಣಿಕೆ ಆಗುತ್ತದೆ.
ಜೈಸ್ವಾಲ್ ಮತ್ತು ರಾಹುಲ್ ಆರಂಭಿಕರಾಗಿ ಆಡುವುದು ಖಚಿತವಾಗಿದೆ. ಫಿಟ್ನೆಸ್ ಸಮಸ್ಯೆ ಎದುರಿಸುತ್ತಿರುವ ಜಸ್ಪ್ರೀತ್ ಬೂಮ್ರಾ, ರವೀಂದ್ರ ಜಡೇಜ, ರಿಷಭ್ ಪಂತ್, ಸಾಯಿ ಸುದರ್ಶನ್ ಹಾಗೂ ಪ್ರಸಿದ್ಧ ಕೃಷ್ಣ ತಮ್ಮ ಸಾಮರ್ಥ್ಯ ಸಾಬೀತುಪಡಿಸುವ ಸಂದರ್ಭವೂ ಇದಾಗಿದೆ. ವೇಗದ ಬೌಲಿಂಗ್ ಆಲ್ರೌಂಡರ್ ಕೋಟದಲ್ಲಿ ಶಾರ್ದೂಲ್ ಠಾಕೂರ್ ಮತ್ತು ನಿತೀಶ್ ರೆಡ್ಡಿ ಮಧ್ಯೆ ತೀವ್ರ ಪೈಪೋಟಿ ಇದೆ.
ಇಂಗ್ಲೆಂಡ್ ಅನುಭವಿಗಳ ತಂಡ
ಇಂಗ್ಲೆಂಡ್ ಪಂದ್ಯಕ್ಕೂ 2 ದಿನ ಮುನ್ನವೇ ತನ್ನ ಆಡುವ ಬಳಗವನ್ನು ಪ್ರಕಟಿಸಿದೆ. ಶೋಯಿಬ್ ಬಶೀರ್ ತಂಡದಲ್ಲಿರುವ ಏಕೈಕ ಸ್ಪಿನ್ನರ್ ಆಗಿದ್ದಾರೆ. ಬ್ಯಾಟಿಂಗ್ನಲ್ಲಿ ನಾಯಕ ಬೆನ್ ಸ್ಟೋಕ್ಸ್, ಬೆನ್ ಡಕೆಟ್, ಒಲಿ ಪೋಪ್, ಜೋ ರೂಟ್, ಹ್ಯಾರಿ ಬ್ರೂಕ್ ಅತ್ಯಂತ ಘಾಟಾನುಘಟಿಯಾಗಿ ಕಾಣಿಸಿಕೊಂಡಿದ್ದಾರೆ. ಕ್ರಿಸ್ ವೋಕ್ಸ್, ಬೆಡನ್ ಕರ್ಸ್, ಜೋಶ್ ಟಂಗ್ ತಂಡದ ವೇಗಿಗಳಾಗಿದ್ದಾರೆ. ಒಟ್ಟಾರೆಯಾಗಿ ತಂಡ ಅನುಭವಿ ಮತ್ತು ಸಮರ್ಥವಾಗಿದೆ.