IND vs ENG 5th Test: ಭಾರತ ಪರ 4 ಬದಲಾವಣೆ ಸಾಧ್ಯತೆ; ಕರುಣ್ಗೆ ಮತ್ತೊಂದು ಅವಕಾಶ
ಇಂಗ್ಲೆಂಡ್ ವಿರುದ್ಧ ಆಡಿದ ಆರೂ ಇನ್ನಿಂಗ್ಸ್ಗಳಲ್ಲಿ ಕರುಣ್ ನಾಯರ್ ಬ್ಯಾಟಿಂಗ್ ಬರಗಾಲ ಅನುಭವಿಸಿದ್ದಾರೆ. ಅವರ ಗಳಿಕೆ 0, 20, 31, 26, 40, 14. ಲಾರ್ಡ್ಸ್ನ ಮೊದಲ ಇನ್ನಿಂಗ್ಸ್ನಲ್ಲಿ ಹೊಡೆದ 40 ರನ್ನೇ ಅನಂತರದ ಹೆಚ್ಚಿನ ಗಳಿಕೆ.


ಲಂಡನ್: ಇಂಗ್ಲೆಂಡ್ ವಿರುದ್ಧ ಇಂದು ಆರಂಭವಾಗಲಿರುವ 5ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯಕ್ಕೆ ಭಾರತ ತನ್ನ ಆಡುವ ಬಳಗದಲ್ಲಿ 4 ಮಹತ್ವದ ಬದಲಾವಣೆ ಮಾಡುವ ಸಾಧ್ಯತೆ ಇದೆ ಎಂಉ ತಿಳಿದುಬಂದಿದೆ. ಇಂಡಿಯನ್ ಎಕ್ಸ್ಪ್ರೆಸ್ನ ವರದಿಯ ಪ್ರಕಾರ, ಮ್ಯಾಂಚೆಸ್ಟರ್ ಟೆಸ್ಟ್ನಿಂದ ಹೊರಗುಳಿದ ನಂತರ ಸರಣಿಯ ಕೊನೆಯ ಪಂದ್ಯಕ್ಕೆ ಕರುಣ್ ನಾಯರ್ ತಂಡಕ್ಕೆ ಮರಳುವ ನಿರೀಕ್ಷೆಯಿದೆ ಎನ್ನಲಾಗಿದೆ.
ಕಳಪೆ ಫಾರ್ಮ್ನಿಂದಾಗಿ 4 ನೇ ಟೆಸ್ಟ್ನಲ್ಲಿ ನಾಯರ್ ಬದಲಿಗೆ ಬಿ ಸಾಯಿ ಸುದರ್ಶನ್ ಅವರನ್ನು ಆಯ್ಕೆ ಮಾಡಲಾಗಿತ್ತು. ಆದರೆ, ತಂಡವು ಮತ್ತೊಮ್ಮೆ ಅನುಭವಿ ಬ್ಯಾಟ್ಸ್ಮನ್ ಮೇಲೆ ನಂಬಿಕೆ ಇಟ್ಟು ಅವಕಾಶ ನೀಡುವ ಸಾಧ್ಯತೆ ಇದೆ.
ಸುಮಾರು 8 ವರ್ಷಗಳ ಬಳಿಕ ಭಾರತದ ಟೆಸ್ಟ್ ತಂಡಕ್ಕೆ ಮರಳಿದ ಕನ್ನಡಿಗ ಕರುಣ್ ನಾಯರ್ ಸಿಕ್ಕ ಅವಕಾಶದಲ್ಲಿ ನಿರೀಕ್ಷಿತ ಪ್ರದರ್ಶನ ತೋರಲು ವಿಫಲರಾಗಿದ್ದರು. ಇಂಗ್ಲೆಂಡ್ ವಿರುದ್ಧ ಆಡಿದ ಆರೂ ಇನ್ನಿಂಗ್ಸ್ಗಳಲ್ಲಿ ಕರುಣ್ ನಾಯರ್ ಬ್ಯಾಟಿಂಗ್ ಬರಗಾಲ ಅನುಭವಿಸಿದ್ದಾರೆ. ಅವರ ಗಳಿಕೆ 0, 20, 31, 26, 40, 14. ಲಾರ್ಡ್ಸ್ನ ಮೊದಲ ಇನ್ನಿಂಗ್ಸ್ನಲ್ಲಿ ಹೊಡೆದ 40 ರನ್ನೇ ಅನಂತರದ ಹೆಚ್ಚಿನ ಗಳಿಕೆ.
2016ರಲ್ಲಿ ಮೊಹಾಲಿಯಲ್ಲಿ ನಡೆದಿದ್ದ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಬೆಂಗಳೂರಿನ ಕರುಣ್ ಪದಾರ್ಪಣೆ ಮಾಡಿದ್ದರು. ಆಡಿದ ಮೂರನೇ ಟೆಸ್ಟ್ನಲ್ಲಿಯೇ (ಚೆನ್ನೈನಲ್ಲಿ ಇಂಗ್ಲೆಂಡ್ ವಿರುದ್ಧ) ತ್ರಿಶತಕ (ಅಜೇಯ 303) ಹೊಡೆದಿದ್ದರು. ಆದರೆ ಅದರ ನಂತರ ಅವರಿಗೆ ಸಿಕ್ಕಿದ್ದು ಕೇವಲ ಮೂರು ಟೆಸ್ಟ್ ಪಂದ್ಯಗಳು ಮಾತ್ರ. ಅದೇಕೋ ಆಯ್ಕೆಗಾರರು ಅವರಿಗೆ ಇದಕ್ಕಿಂತ ಹೆಚ್ಚು ಅವಕಾಶಗಳನ್ನು ಕೊಡುವ ಔದಾರ್ಯ ತೋರಲಿಲ್ಲ. ಇದೀಗ ಅವರಿಗೆ ಮತ್ತೊಂದು ಅವಕಾಶ ನೀಡಲು ಕೋಚ್ ಗಂಭೀರ್ ನಿರ್ಧರಿಸಿದಾರೆ ಎನ್ನಲಾಗಿದೆ. ಒಂದೊಮ್ಮೆ ಅವರು ಈ ಅವಕಾಶದಲ್ಲಿಯೂ ವಿಫಲವಾದರೆ ಮತ್ತೆ ಅವರಿಗೆ ತಂಡದಲ್ಲಿ ಸ್ಥಾನ ಸಿಗುವುದು ಕಷ್ಟ ಸಾಧ್ಯ.
ಜಸ್ಪ್ರೀತ್ ಬುಮ್ರಾ ಮತ್ತು ಅನ್ಶುಲ್ ಕಾಂಬೋಜ್ ಅವರನ್ನು ಕೈಬಿಟ್ಟು ಆಕಾಶ್ ದೀಪ್ ಅರ್ಶ್ದೀಪ್ ಸಿಂಗ್ ಆಡುವ ಬಳಗದಲ್ಲಿ ಕಾಣಿಸಿಕೊಳ್ಳುವುದು ಬಹುತೇಕ ಖಚಿತವಾಗಿದೆ.
ಭಾರತ ಸಂಭಾವ್ಯ ತಂಡ
ಕೆಎಲ್ ರಾಹುಲ್, ಯಶಸ್ವಿ ಜೈಸ್ವಾಲ್, ಬಿ ಸಾಯಿ ಸುದರ್ಶನ್, ಶುಭಮನ್ ಗಿಲ್, ಕರುಣ್ ನಾಯರ್, ಧ್ರುವ ಜುರೆಲ್, ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್, ಆಕಾಶ್ ದೀಪ್, ಅರ್ಶ್ದೀಪ್ ಸಿಂಗ್, ಮೊಹಮ್ಮದ್ ಸಿರಾಜ್.
ಇದನ್ನೂ ಓದಿ IND vs ENG: ಪಿಚ್ ಕ್ಯುರೇಟರ್-ಗಂಭೀರ್ ಜಗಳದ ಬಗ್ಗೆ ಬೆನ್ ಸ್ಟೋಕ್ಸ್ ಹೇಳಿದ್ದಿದು!