ಫೋಟೋ ಗ್ಯಾಲರಿ ಗುಜರಾತ್​ ವಿಮಾನ ಪತನ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ವಿಮಾನ ದುರಂತ: ತಾಯಿಗಾಗಿ ಟಿಫನ್‌ ತಂದಿದ್ದ ಬಾಲಕ ಸಜೀವ ದಹನ; ಮಗನನ್ನು ಉಳಿಸಲು ಯತ್ನಿಸಿದ ತಾಯಿಯ ವಿಡಿಯೊ ವೈರಲ್‌

Ahmedabad Plane Crash: ಗುಜರಾತ್‌ನ ಅಹಮದಾಬಾದ್‌ನಲ್ಲಿ ಜೂ. 12ರಂದು ಏರ್‌ ಇಂಡಿಯಾ ವಿಮಾನ ಪತನವಾಗಿ ಒಟ್ಟು ಸಾವಿನ ಸಂಖ್ಯೆ 265ಕ್ಕೆ ತಲುಪಿದೆ. ಲಂಡನ್‌ಗೆ ಹೊರಟಿದ್ದ ವಿಮಾನ ಟೇಕ್‌ಆಫ್‌ ಆದ ಕೆಲವೇ ನಿಮಿಷಗಳಲ್ಲಿ ತಾಂತ್ರಿಕ ದೋಷದಿಂದ ಮೇಘನಿನಗರದ ಜನವಸತಿ ಪ್ರದೇಶದತ್ತ ನುಗ್ಗಿದ್ದು, ಬಿಜೆ ಮೆಡಿಕಲ್‌ ಕಾಲೇಜಿನ ಹಾಸ್ಟೆಲ್ ಕಟ್ಟಡದ ಮೇಲೆ ಅಪ್ಪಳಿಸಿ ಹೊತ್ತಿ ಉರಿದಿದೆ. ಇದರಿಂದಾಗಿ ಹಾಸ್ಟೆಲ್‌ ಹೊರಗೆ ಟೀ ಅಂಗಡಿ ನಡೆಸುತ್ತಿದ್ದ ಸೀತಾ ಪಟ್ನಿ ಎನ್ನುವವರ ಪುತ್ರ 15 ವರ್ಷದ ಆಕಾಶ್‌ ಪಟ್ನಿ ಕೂಡ ಮೃತಪಟ್ಟಿದ್ದಾನೆ.

ಮಗನನ್ನು ಉಳಿಸಲು ಯತ್ನಿಸಿದ ತಾಯಿಯ ವಿಡಿಯೊ ವೈರಲ್‌

Profile Ramesh B Jun 14, 2025 4:34 PM

ಗಾಂಧಿನಗರ: ಗುಜರಾತ್‌ನ ಅಹಮದಾಬಾದ್‌ನಲ್ಲಿ ಜೂ. 12ರಂದು ಏರ್‌ ಇಂಡಿಯಾ ವಿಮಾನ ಪತನವಾಗಿ ಒಟ್ಟು ಸಾವಿನ ಸಂಖ್ಯೆ 265ಕ್ಕೆ ತಲುಪಿದೆ (Ahmedabad Plane Crash). ಲಂಡನ್‌ಗೆ ಹೊರಟಿದ್ದ ವಿಮಾನ ಟೇಕ್‌ಆಫ್‌ ಆದ ಕೆಲವೇ ನಿಮಿಷಗಳಲ್ಲಿ ತಾಂತ್ರಿಕ ದೋಷದಿಂದ ಮೇಘನಿನಗರದ ಜನವಸತಿ ಪ್ರದೇಶದತ್ತ ನುಗ್ಗಿದ್ದು, ಬಿಜೆ ಮೆಡಿಕಲ್‌ ಕಾಲೇಜಿನ ಹಾಸ್ಟೆಲ್ ಕಟ್ಟಡದ ಮೇಲೆ ಅಪ್ಪಳಿಸಿ ಹೊತ್ತಿ ಉರಿದಿದೆ. ಇದರಿಂದಾಗಿಯೂ ಸಾವು ನೋವಿನ ಸಂಖ್ಯೆ ಹೆಚ್ಚಾಗಿದೆ. ಈ ಮಧ್ಯೆ ಹಾಸ್ಟೆಲ್‌ ಹೊರಗೆ ಟೀ ಅಂಗಡಿ ನಡೆಸುತ್ತಿದ್ದ ಸೀತಾ ಪಟ್ನಿ ಎನ್ನುವವರ ಪುತ್ರ 15 ವರ್ಷದ ಆಕಾಶ್‌ ಪಟ್ನಿ (Akash Patni) ಕೂಡ ಮೃತಪಟ್ಟಿದ್ದಾನೆ. ತಾಯಿಗಾಗಿ ಟಿಫನ್‌ ಬಾಕ್ಸ್‌ ತಂದಿದ್ದ ಆತ ವಿಮಾನ ಅಪ್ಪಳಿಸಿದಾಗ ಅದಕ್ಕೆ ಸಿಕ್ಕಿ ಅಸುನೀಗಿದ್ದಾನೆ. ಸದ್ಯ ಆತನನ್ನು ರಕ್ಷಿಸಲು ಸೀತಾ ಯತ್ನಿಸುತ್ತಿರುವ ವಿಡಿಯೊ ವೈರಲ್‌ ಆಗಿದೆ.

ಬಿಜೆ ಮೆಡಿಕಲ್‌ ಕಾಲೇಜಿನ ಹಾಸ್ಟೆಲ್ ಕಟ್ಟಡಕ್ಕೆ ಅಪ್ಪಳಿಸಿದ ವಿಮಾನ ಬೆಂಕಿ ಉಂಡೆಯಾಗಿ ಬದಲಾಗಿತ್ತು. ಇದರಿಂದ ಇಡೀ ಕಟ್ಟಡವೇ ಹೊತ್ತಿ ಉರಿದಿದೆ. ಬೆಂಕಿಯ ಕೆನ್ನಾಲಗೆ ಹರಡಿ ಹಾಸ್ಟೆಲ್‌ ಕಟ್ಟಡದ ಹೊರಗಡೆಯ ತಮ್ಮ ಟೀ ಸ್ಟಾಲ್‌ನ ಸಮೀಪದ ಮರದ ಅಡಿಯಲ್ಲಿ ಮಲಗಿದ್ದ ಆಕಾಶ್‌ ಸುಟ್ಟು ಕರಕಲಾಗಿದ್ದಾನೆ.

ವೈರಲ್‌ ವಿಡಿಯೊ ಇಲ್ಲಿದೆ:



ಈ ಸುದ್ದಿಯನ್ನೂ ಓದಿ: Ahmedabad Plane Crash: ಅಹಮದಾಬಾದ್ ವಿಮಾನ ದುರಂತ: ಕೇಂದ್ರ ಸರ್ಕಾರದಿಂದ ಉನ್ನತ ಮಟ್ಟದ ತನಿಖಾ ಸಮಿತಿ ರಚನೆ

ಏನಾಗಿತ್ತು?

ಟೀ ಅಂಗಡಿಯಲ್ಲಿದ್ದ ತಾಯಿ ಸೀತಾ ಅವರಿಗಾಗಿ ಟಿಫಿನ್‌ ಬಾಕ್ಸ್‌ ತಂದಿದ್ದ ಆಕಾಶ್‌ ಬಳಿಕ ವಿಶ್ರಾಂತಿ ಪಡೆಯಲು ಅಲ್ಲೇ ಸಮೀಪದಲ್ಲಿದ್ದ ಮರದ ಕೆಳಗೆ ಮಲಗಿದ್ದ. ಈ ವೇಳೆ ಆತನ ಸಮೀಪವೇ ಬೆಂಕಿಯಿಂದ ಕೂಡಿದ್ದ ವಿಮಾನದ ರೆಕ್ಕೆಯ ತುಂಡು ಬಿದ್ದಿದೆ. ಪರಿಣಾಮ ಆತನ ಇಡೀ ಶರೀರಕ್ಕೆ ಬೆಂಕಿ ಆವರಿಸಿಕೊಂಡಿದೆ. ಬೆಂಕಿಯಿಂದ ಆತನನ್ನು ರಕ್ಷಿಸಲು ಸೀತಾ ಇನ್ನಿಲ್ಲದ ಪ್ರಯತ್ನ ನಡೆಸಿದ್ದಾರೆ. ಆದರೆ ಕೊನೆಗೂ ಅವರ ಪ್ರಯತ್ನ ಫಲ ನೀಡಲಿಲ್ಲ. ಆಕಾಶ್‌ನನ್ನು ಉಳಿಸುವ ಪ್ರಯತ್ನದಲ್ಲಿ ಸೀತಾ ಅವರಿಗೂ ಶೇ. 50ರಷ್ಟು ಸುಟ್ಟ ಗಾಯಗಳಾಗಿವೆ.

ಘಟನೆ ಬಗ್ಗೆ ಮಾಹಿತಿ ನೀಡಿದ ಆಕಾಶ್‌ ಸಹೋದರ ಕಲ್ಪೇಶ್‌ ಪಟ್ನಿ, ʼʼಕಳೆದ 30 ವರ್ಷಗಳಿಂದ ಟೀ ಅಂಗಡಿ ನಡೆಸುತ್ತಿದ್ದೇವೆ. ಎಂದಿನಂತೆ ಅಂದು ಕೂಡ ತಾಯಿ ಮತ್ತು ಸಹೋದರ ವ್ಯವಹಾರ ನಡೆಸುತ್ತಿದ್ದರು. ಆದರೆ ಕ್ಷಣದಲ್ಲೇ ಅನಾಹುತ ನಡೆದು ಹೋಯಿತು. ಮಧ್ಯಾಹ್ನ 1.30ರ ವೇಳೆಗೆ ನನಗೆ ಮಾಹಿತಿ ತಿಳಿಯಿತುʼʼ ಎಂದು ತಿಳಿಸಿದ್ದಾರೆ.

ಇವರ ಸಂಬಂಧಿ, ಪ್ರತ್ಯಕ್ಷದರ್ಶಿ ಘಟನೆಯನ್ನು ವಿವರಿಸುವುದು ಹೀಗೆ: ʼʼವಿಮಾನ ನೆಲಕ್ಕೆ ಅಪ್ಪಳಿಸುವ ವೇಳೆ ಆಕಾಶ್‌ ಮತ್ತು ಸೀತಾ ಟೀ ಅಂಗಡಿ ಬಳಿ ಇದ್ದರು. ಊಟದ ಅವಧಿಯಾಗಿದ್ದರಿಂದ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿರಲಿಲ್ಲ. ಭಾರಿ ಸ್ಫೋಟದ ಶಬ್ಧ ಕೇಳಿಸಿದ ತಕ್ಷಣ ಸೀತಾ ಸ್ಥಳದಿಂದ ಹೊರಗೋಡಿ ಬಂದಿದ್ದರು. ಆದರೆ ಆಕಾಶ್‌ಗೆ ತಕ್ಷಣ ಈಚೆ ಬರಲು ಸಾಧ್ಯವಾಗಲಿಲ್ಲ. ಬೆಂಕಿ ಉಂಡೆಯೊಂದು ಆತನ ಮೇಲೆ ಅಪ್ಪಳಿಸಿತ್ತುʼʼ.

ಸುಟ್ಟ ಗಾಯಗಳಾಗಿರುವ ಸೀತಾ ಅವರನ್ನು ಸದ್ಯ ಸಿವಿಲ್‌ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಐಸಿಯು ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.