Viral Video: ಮೊಣಕಾಲುದ್ದ ನೀರಿದ್ದರೂ ಎಣ್ಣೆ ಪಾರ್ಟಿ; ಇಂಗ್ಲೆಂಡ್ ಮಾಜಿ ಕ್ರಿಕೆಟಿಗ ಕಿವಿನ್ ಪೀಟರ್ಸನ್ ಪ್ರತಿಕ್ರಿಯೆ ಹೀಗಿತ್ತು
Kevin Pietersen shared a video: ಮುಂಬೈಯಲ್ಲಿ ಸುರಿದ ಭಾರಿ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಹಲವು ಪ್ರದೇಶಗಳು ಪ್ರವಾಹದಿಂದ ಮುಳುಗಿವೆ. ಈ ನಡುವೆ ಇಬ್ಬರು ಪುರುಷರು ಮೊಣಕಾಲುದ್ದದ ನೀರಿನಲ್ಲಿ ಕುಳಿತು ಮದ್ಯಪಾನ ಮಾಡುತ್ತಾ ಆನಂದಿಸಿರುವ ವಿಡಿಯೊ ವೈರಲ್ ಆಗಿದೆ.


ಮುಂಬೈ: ಮಹಾಮಳೆಗೆ ದೇಶದ ವಾಣಿಜ್ಯ ನಗರಿ ಮುಂಬೈ (Mumbai) ಅಕ್ಷರಶಃ ಮುಳುಗಿದೆ. ಜನಜೀವನ ಸ್ತಬ್ಧಗೊಂಡಿದ್ದು, ಹಲವು ಮನೆಗಳು ನೀರಿನಲ್ಲಿ ಮುಳುಗಿವೆ. ಆದರೆ ಊರಿಗೆ ಊರೇ ಪ್ರವಾಹ ಆಗಿ ಮುಳುಗಿದರೂ, ನಮಗೆ ಚಿಂತೆಯಿಲ್ಲ ಎಂಬಂತೆ ಕುಳಿತಿರುವ ಈ ಇಬ್ಬರು ವ್ಯಕ್ತಿಗಳ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಇಂಗ್ಲೆಂಡ್ನ ಮಾಜಿ ಕ್ರಿಕೆಟಿಗ ಕೆವಿನ್ ಪೀಟರ್ಸನ್ (Kevin Pietersen) ಕೂಡ ಈ ವಿಡಿಯೊಗೆ ಪ್ರತಿಕ್ರಿಯೆ ನೀಡಿದ್ದಾರೆ, ನೆಟ್ಟಿಗರು ವಿಡಿಯೊ ನೋಡಿ (Viral Video) ಬಿದ್ದು ಬಿದ್ದು ನಕ್ಕಿದ್ದಾರೆ.
ಹೌದು, ಅಂಥದ್ದೇನಿದೆ ಈ ವಿಡಿಯೊದಲ್ಲಿ ಎಂದು ನಿಮಗನಿಸಬಹುದು. ಇಬ್ಬರು ಪುರುಷರು ಪ್ರವಾಹದ ಮಧ್ಯೆಯೂ ಮದ್ಯಪಾನ ಮಾಡಿದ್ದಾರೆ. ಅಚ್ಚರಿ ಎಂದರೆ ಮೊಣಕಾಲಿನವರೆಗೆ ನೀರು ಇದ್ದರೂ ಕುರ್ಚಿಯಲ್ಲಿ ಆರಾಮಾಗಿ ಕುಳಿತು ಮದ್ಯಪಾನ ಮಾಡುತ್ತಿರುವ ದೃಶ್ಯದ ವಿಡಿಯೊ ವೈರಲ್ (Viral Video) ಆಗಿದೆ. ವಸತಿ ಕಟ್ಟಡದ ಹೊರಗೆ ಪ್ರವಾಹಕ್ಕೆ ಸಿಲುಕಿದ ರಸ್ತೆಯಲ್ಲಿ ಇಬ್ಬರು ಪುರುಷರು ಟೇಬಲ್, ಕುರ್ಚಿಗಳು ಮತ್ತು ಗ್ಲಾಸ್ಗಳೊಂದಿಗೆ ಮದ್ಯದ ಬಾಟಲಿಗಳನ್ನು ಜೋಡಿಸುತ್ತಿರುವುದನ್ನು ಕಾಣಬಹುದು.
ಈ ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ. ಇಂಗ್ಲೆಂಡ್ನ ಮಾಜಿ ಕ್ರಿಕೆಟಿಗ ಕೆವಿನ್ ಪೀಟರ್ಸನ್ ಇದನ್ನು ರೀಶೇರ್ ಮಾಡಿ, ಲೆಜೆಂಡ್ಸ್ ಎಂದು ನಗುವ ಎಮೋಜಿಗಳೊಂದಿಗೆ ಹಂಚಿಕೊಂಡಿದ್ದಾರೆ. ನೆಟ್ಟಿಗರು ಕೂಡ ಈ ವಿಡಿಯೊಗೆ ಪ್ರತಿಕ್ರಿಯೆಗಳ ಪ್ರವಾಹವನ್ನೇ ಹರಿಸಿದ್ದಾರೆ. ಪುರುಷರು ಯಾವತ್ತಿಗೂ ಪುರುಷರೇ ಎಂದು ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ. ಸಮಸ್ಯೆ ಬಗ್ಗೆ ಏನೂ ತಲೆಕೆಡಿಸಿಕೊಳ್ಳದೆ ಆನಂದಿಸುವುದರಿಂದ ಆ ಸಮಸ್ಯೆಯೇ ನಾಚಿಕೆಪಡಬೇಕು ಎಂದು ಮತ್ತೊಬ್ಬ ಬಳಕೆದಾರರು ತಮಾಷೆಯಾಗಿ ಪ್ರತಿಕ್ರಿಯಿಯಿದ್ದಾರೆ.
ವಿಡಿಯೊ ವೀಕ್ಷಿಸಿ:
ಭಾರತದ ವಾಣಿಜ್ಯ ನಗರಿಯಲ್ಲಿ ಕಳೆದ ಕೆಲವು ದಿನಗಳಿಂದ ಭಾರಿ ಮಳೆಯಾಗಿದ್ದರಿಂದ ಮುಂಬೈ ನಗರವು ಪ್ರವಾಹ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಮುಂಬೈನಲ್ಲಿ ಮಳೆ ಮತ್ತು ನೀರಿನಿಂದ ತುಂಬಿರುವ ವಿಡಿಯೊಗಳನ್ನು ನಾನು ಇದೀಗ ನೋಡಿದ್ದೇನೆ. ದಯವಿಟ್ಟು ಎಲ್ಲರೂ ಸುರಕ್ಷಿತವಾಗಿರಿ ಎಂದು ಪೀಟರ್ಸನ್ ಕೇಳಿಕೊಂಡಿದ್ದಾರೆ.
ಮುಂಬೈ, ಥಾಣೆ, ಪಾಲ್ಘರ್, ರಾಯಗಢ ಮತ್ತು ರತ್ನಗಿರಿ ಜಿಲ್ಲೆಗಳಿಗೆ ರೆಡ್ ನೌಕಾಸ್ಟ್ ಎಚ್ಚರಿಕೆ ನೀಡಲಾಗಿದೆ. ಬಲವಾದ ಗಾಳಿಯೊಂದಿಗೆ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಮಹಾರಾಷ್ಟ್ರ ವಿಪತ್ತು ನಿರ್ವಹಣಾ ಇಲಾಖೆ ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ ಮಳೆ ಮತ್ತು ಪ್ರವಾಹ ಸಂಬಂಧಿತ ಸಮಸ್ಯೆಗಳಲ್ಲಿ ಆರು ಜನರು ಪ್ರಾಣ ಕಳೆದುಕೊಂಡಿದ್ದಾರೆ.
ಇದನ್ನೂ ಓದಿ: Tirupati Temple: ತಿರುಪತಿ ತಿರುಮಲ ದೇಗುಲಕ್ಕೆ ಬರೋಬ್ಬರಿ 121 ಕೆಜಿ ಚಿನ್ನ ದಾನ ಮಾಡಿದ ಉದ್ಯಮಿ